ಶಬರಿಮಲೈ ದೇವಸ್ಥಾನದ ವಿಗ್ರಹಗಳಿಂದ 4 ಕೆಜಿ ಚಿನ್ನ ಮಾಯ : Sabarimala Temple Heist

ಕೇರಳ ಉಚ್ಚ ನ್ಯಾಯಾಲಯದಿಂದ ತನಿಖೆಗೆ ಆದೇಶ

ತಿರುವನಂತಪುರಂ (ಕೇರಳ) – ಶಬರಿಮಲೈ ದೇವಸ್ಥಾನದ ವಿಗ್ರಹಗಳ ಮೇಲೆ ಚಿನ್ನದ ಕವಚವನ್ನು ಹಾಕುವಾಗ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಕೇರಳ ಉಚ್ಚ ನ್ಯಾಯಾಲಯ ಆದೇಶಿಸಿದೆ. 2019ರಲ್ಲಿ ವಿಗ್ರಹಗಳ ಮೇಲೆ ಚಿನ್ನದ ಕವಚ ಹಾಕಿ, ಅವುಗಳನ್ನು ಮತ್ತೆ ದೇವಸ್ಥಾನಕ್ಕೆ ತಂದಾಗ, ಅವುಗಳ ತೂಕದಲ್ಲಿ 4 ಕೆಜಿ ಚಿನ್ನದ ಕೊರತೆ ಕಂಡುಬಂದಿರುವುದನ್ನು ನ್ಯಾಯಾಲಯ ಗಮನಿಸಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ನ್ಯಾಯಾಲಯವು ದೇವಸ್ಥಾನದ ಮುಖ್ಯ ವಿಜಿಲೆನ್ಸ್ ಮತ್ತು ಭದ್ರತಾ ಅಧಿಕಾರಿ ಹಾಗೂ ‘ತಿರುವಾಂಕೂರು ದೇವಸ್ವಂ ಮಂಡಳಿ’ಯ ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದೆ. ಈ ಚಿನ್ನದ ಕೊರತೆ ದೇವಸ್ಥಾನದ ದ್ವಾರಪಾಲಕ ದೇವರ ವಿಗ್ರಹಗಳಲ್ಲಿ ಕಂಡುಬಂದಿದೆ.

2019ರಲ್ಲಿ ವಿಗ್ರಹಗಳ ಮೇಲಿದ್ದ ಚಿನ್ನದ ಕವಚವನ್ನು ತೆಗೆದಾಗ, ಅವುಗಳ ತೂಕ 42 ಕೆಜಿ 80 ಗ್ರಾಂ ಇತ್ತು. ಆದರೆ, ಚಿನ್ನದ ಕವಚವನ್ನು ಹಾಕುವ ಕೆಲಸ ವಹಿಸಲಾಗಿದ್ದ ಚೆನ್ನೈನಲ್ಲಿ ತೂಕ ಪರೀಕ್ಷಿಸಿದಾಗ, ಸುಮಾರು 4.54 ಕೆಜಿ ತೂಕ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ. 4 ಕೆಜಿ 541 ಗ್ರಾಂ ಚಿನ್ನದ ಸ್ಪಷ್ಟವಾದ ಕೊರತೆ ಕಂಡುಬರುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಇದರ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಯಬೇಕು. ದಾಖಲೆಗಳನ್ನು ಪರಿಶೀಲಿಸಿ 3 ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ವಿಗ್ರಹಗಳನ್ನು ದುರಸ್ತಿ ಮಾಡಲು ನ್ಯಾಯಾಲಯದ ಅನುಮತಿಯನ್ನೇ ಪಡೆದಿರಲಿಲ್ಲ!

1999ರಲ್ಲಿ ಅಧಿಕೃತ ಅನುಮತಿಯೊಂದಿಗೆ ದ್ವಾರಪಾಲಕರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅವುಗಳ ಖಾತರಿ ಅವಧಿ 40 ವರ್ಷ ಇತ್ತು. ಆದರೂ, ಕೇವಲ 6 ವರ್ಷಗಳಲ್ಲಿ ವಿಗ್ರಹಗಳಲ್ಲಿ ದೋಷ ಕಾಣಿಸಿಕೊಂಡು ದುರಸ್ತಿ ಮಾಡಬೇಕಾಯಿತು. ‘ತಿರುವಾಂಕೂರು ದೇವಸ್ವಂ ಮಂಡಳಿ’ಯು 2019ರಲ್ಲಿ ಚಿನ್ನದ ಲೇಪವಿರುವ ತಾಮ್ರದ ಕವಚವನ್ನು ದುರಸ್ತಿ ಮತ್ತು ಮರುಲೇಪನಕ್ಕಾಗಿ ಕಳುಹಿಸಿದಾಗ ವಿವಾದ ಉಂಟಾಯಿತು. ವಿಗ್ರಹಗಳನ್ನು ಹೊರಗೆ ಕಳುಹಿಸುವಾಗ ನ್ಯಾಯಾಲಯ ಅಥವಾ ವಿಶೇಷ ಆಯುಕ್ತರ ಅನುಮತಿಯನ್ನು ಪಡೆದಿರಲಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಸರಕಾರೀಕರಣದ ನಂತರ ಆಗುವ ದುಷ್ಪರಿಣಾಮಗಳು! ಹಿಂದೂಗಳು ಈಗಲಾದರೂ ಒಗ್ಗೂಡಿ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಲು ಕಾನೂನುಬದ್ಧವಾಗಿ ಪ್ರಯತ್ನಿಸಬೇಕು!