ಗಣೇಶೋತ್ಸವದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ 1 ಕೋಟಿ ಜನರನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆ ! : Mumbai Bomb Threat

  • ಭಾರತದಲ್ಲಿ 14 ಪಾಕಿಸ್ತಾನಿ ಭಯೋತ್ಪಾದಕರು ನುಸುಳಿದ್ದಾರೆ ಎಂಬ ದಾವೆ !

  • 34 ವಾಹನಗಳಲ್ಲಿ ಬಾಂಬ್ ಮತ್ತು 400 ಕೆಜಿ ಆರ್.ಡಿ.ಎಕ್ಸ್. ಇರಿಸಲಾಗಿದೆ ಎಂದು ದಾವೆ !

ಮುಂಬಯಿ – ಗಣೇಶೋತ್ಸವದ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರಿಗೆ ಬಾಂಬ್ ಸ್ಫೋಟದ ದೊಡ್ಡ ಬೆದರಿಕೆ ಬಂದಿದೆ. ವಾಟ್ಸಾಪ್ ಮೂಲಕ ಸಂಚಾರ ಪೊಲೀಸರ ಅಧಿಕೃತ ಸಂಖ್ಯೆಗೆ ಕಳುಹಿಸಿದ ಸಂದೇಶದಲ್ಲಿ ನಗರದಲ್ಲಿ ಭೀಕರ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂದೇಶದಿಂದಾಗಿ ಭದ್ರತಾ ಸಂಸ್ಥೆಗಳು ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿವೆ. ಬೆದರಿಕೆ ಸಂದೇಶದಲ್ಲಿ 34 ವಾಹನಗಳಲ್ಲಿ ಬಾಂಬ್ ಇರಿಸಿರುವ ಬಗ್ಗೆ ಉಲ್ಲೇಖವಿದೆ. ಇದರ ಜೊತೆಗೆ, ಬರೋಬ್ಬರಿ 400 ಕೆಜಿ ಆರ್.ಡಿ.ಎಕ್ಸ್. ತರಲಾಗಿದ್ದು, ಅದರ ಮೂಲಕ 1 ಕೋಟಿ ಜನರನ್ನು ಕೊಲ್ಲುವ ಸಾಮರ್ಥ್ಯವಿದೆ ಎಂದು ಹೇಳಲಾಗಿದೆ, ಮತ್ತು 14 ಪಾಕಿಸ್ತಾನಿ ಭಯೋತ್ಪಾದಕರು ಭಾರತಕ್ಕೆ ನುಸುಳಿದ್ದಾರೆ ಎಂದೂ ಈ ಸಂದೇಶದಲ್ಲಿ ಹೇಳಲಾಗಿದೆ. ಈ ಬೆದರಿಕೆಯನ್ನು ‘ಲಷ್ಕರ್-ಎ-ಜಿಹಾದಿ’ ಎಂಬ ಸಂಘಟನೆ ನೀಡಿರುವುದಾಗಿ ಹೇಳಲಾಗಿದೆ.

ನಾಗರಿಕರು ವದಂತಿಗಳನ್ನು ನಂಬದಂತೆ ಮನವಿ !

ಈ ಘಟನೆಯ ನಂತರ ಮುಂಬಯಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ನಗರದಾದ್ಯಂತ ನಾಕಾಬಂದಿ, ಅನುಮನಾಸ್ಪದ ವಾಹನಗಳ ತಪಾಸಣೆ ಮತ್ತು ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗಣೇಶೋತ್ಸವದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮುಂಬಯಿಗೆ ಬರುವುದರಿಂದ, ಪೊಲೀಸರು ಮಂಟಪದ ಪ್ರದೇಶ, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣ, ಮಾರುಕಟ್ಟೆಗಳು ಮತ್ತು ಜನಸಂದಣಿಯ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ. ಸೈಬರ್ ಸೆಲ್ ಮತ್ತು ಭಯೋತ್ಪಾದನಾ ವಿರೋಧಿ ದಳ (ಎ.ಟಿ.ಎಸ್.) ಸ್ವೀಕರಿಸಿದ ಸಂದೇಶದ ಬಗ್ಗೆ ಆಳವಾದ ತನಿಖೆ ಆರಂಭಿಸಿವೆ. ಈ ಸಂದೇಶ ನಿಜವೇ ಅಥವಾ ಸುಳ್ಳೇ ಎಂಬುದನ್ನು ಪತ್ತೆಹಚ್ಚಲು ತಾಂತ್ರಿಕ ಸಹಾಯವನ್ನು ಬಳಸಲಾಗುತ್ತಿದೆ. ಇಂತಹ ಬೆದರಿಕೆಗಳು ಹಲವು ಬಾರಿ ಸುಳ್ಳು ಎಂದು ಸಾಬೀತಾಗಿದ್ದರೂ, ಪೊಲೀಸರು ಜಾಗರೂಕರಾಗಿದ್ದಾರೆ. ಪೊಲೀಸರು ನಾಗರಿಕರಿಗೆ ವದಂತಿಗಳನ್ನು ನಂಬದಂತೆ, ಮತ್ತು ಯಾವುದೇ ಅನುಮನಾಸ್ಪದ ವಸ್ತು ಅಥವಾ ಚಲನವಲನ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

ಇದು ಒಂದು ಕಿಡಿಗೇಡಿತನ ಎಂದು ಮರಾಠಿ ಸುದ್ದಿ ಜಾಲತಾಣವೊಂದು ಹೇಳಿದೆ. ಇದಕ್ಕೆ ಕಾರಣ, ಬೆದರಿಕೆಯಲ್ಲಿ ತಮಿಳುನಾಡಿನಲ್ಲಿ ಕಾರ್ಮಿಕ ಸಂಘಟನೆ ಸ್ಥಾಪಿಸಲು ಅನುಮತಿ ನೀಡುವಂತೆ ಹೇಳಲಾಗಿದೆ.

ಸಂಪಾದಕೀಯ ನಿಲುವು

ದೇಶದ ಆರ್ಥಿಕ ರಾಜಧಾನಿಯಲ್ಲಿ ಹಿಂದೂಗಳ ಹಬ್ಬದ ಹಿನ್ನೆಲೆಯಲ್ಲಿ ಇಂತಹ ಬೆದರಿಕೆಗಳು ಬರುವುದು, ದೇಶವು ಇನ್ನೂ ಭಯೋತ್ಪಾದನೆಯ ನೆರಳಿನಲ್ಲಿದೆ ಎಂಬುದನ್ನು ತೋರಿಸುತ್ತದೆ !