ತಮಿಳುನಾಡಿನಲ್ಲಿ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧಗಳನ್ನು ಹೇರಬಾರದು! : Hindu Makkal Katchi

  • ಹಿಂದು ಮಕ್ಕಲ್ ಕಚ್ಚಿ (ಜನತಾ ಪಕ್ಷ) ಪಕ್ಷದಿಂದ ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಮನವಿ

  • ಹಿಂದೂ ಧರ್ಮವನ್ನು ಅವಮಾನ ಮಾಡಿದ ವೈರಮುತ್ತು ವಿರುದ್ಧ ಸಹ ಪ್ರಕರಣ ದಾಖಲಿಸಲು ಬೇಡಿಕೆ!

(ಹಿಂದು ಮಕ್ಕಲ್ ಕಚ್ಚಿ ಅಂದರೆ ಹಿಂದೂ ಜನತಾಪಕ್ಷ)

ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿ ವಿನಾಯಗರ ಚತುರ್ಥಿ (ಗಣೇಶೋತ್ಸವ) ಹಬ್ಬವನ್ನು ಯಾವುದೇ ನಿರ್ಬಂಧಗಳಿಲ್ಲದೆ ಆಧ್ಯಾತ್ಮಿಕ ಹಬ್ಬವಾಗಿ ಆಚರಿಸಲು ತಮಿಳುನಾಡು ಸರಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಹಿಂದು ಮಕ್ಕಲ್ ಕಚ್ಚಿ ಎಂಬ ಪ್ರಖರ ಹಿಂದುತ್ವನಿಷ್ಠ ಸಂಘಟನೆಯು ಒಂದು ಮನವಿಯ ಮೂಲಕ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಬೇಡಿಕೆ ಇಟ್ಟಿದೆ.

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳು ಕವಿ ವೈರಮುತ್ತು ಅವರು ಹಿಂದೂಗಳಿಗೆ ಪೂಜನೀಯರಾದ ಶ್ರೀರಾಮಚಂದ್ರರ ಬಗ್ಗೆ ಉದ್ದೇಶಪೂರ್ವಕವಾಗಿ ಅಪರಾಧಿ ಮತ್ತು ಹುಚ್ಚನಂತಹ ಅಸಭ್ಯ ಪದಗಳನ್ನು ಬಳಸಿದ್ದಾರೆ. ಸೀತಾಮಾತೆ ಮತ್ತು ರಾಮಾಯಣವನ್ನೂ ಸಹ ಅವಮಾನಿಸಿದ್ದಾರೆ. ಇದರಿಂದಾಗಿ ಇಡೀ ತಮಿಳುನಾಡಿನ ಶ್ರೀರಾಮ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ವೈರಮುತ್ತು ವಿರುದ್ಧ ಪ್ರಕರಣ ದಾಖಲಿಸಬೇಕು. ಅವರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು ಎಂದು ಸಹ ಹಿಂದು ಮಕ್ಕಲ್ ಕಚ್ಚಿಯ ಅಧ್ಯಕ್ಷರಾದ ಶ್ರೀ. ಅರ್ಜುನ್ ಸಂಪತ್ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ತಮಿಳು ಕವಿ ವೈರಮುತ್ತು

ತಮಿಳುನಾಡಿನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅನ್ಯಾಯಗಳಿಗೆ ಧ್ವನಿ ಎತ್ತಿ ನ್ಯಾಯ ಒದಗಿಸಲು ಮುಖ್ಯಮಂತ್ರಿಗಳ ಬಳಿ ಮಾಡಿದ ಇತರ ಪ್ರಮುಖ ಬೇಡಿಕೆಗಳು!

1. ತಿರುಪರಂಕುಂದ್ರಂ ಬೆಟ್ಟಗಳ ಪಾವಿತ್ರವನ್ನು ಕಾಪಾಡಬೇಕು! : ಇಸ್ಲಾಮಿಕ್ ಕಟ್ಟರವಾದಿ ಸಂಘಟನೆಗಳು ಮೇಕೆ ಮತ್ತು ಕೋಳಿಗಳ ಬಲಿ ನೀಡಬೇಕೆಂಬ ಒತ್ತಾಯಕ್ಕೆ ಮಣಿದು ಆಡಳಿತಾರೂಢ ಡಿಎಂಕೆ ಸರಕಾರ ತಿರುಪರಂಕುಂದ್ರಂ ಬೆಟ್ಟವನ್ನು ಸಿಕಂದರ್ ಬೆಟ್ಟವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ತಿರುಪರಂಕುಂದ್ರಂ ಬೆಟ್ಟಗಳು ಭಗವಾನ್ ಮುರುಗನ್ ಅವರಿಗೆ ಸೇರಿವೆ ಮತ್ತು ಅವುಗಳ ಪಾವಿತ್ರವನ್ನು ಕಾಪಾಡಬೇಕು.

2. ಕ್ರೈಸ್ತ ಶಾಲೆಯ ಪರ ನಿಲ್ಲಬೇಡಿ, ಹಾಗೂ ಅನ್ಯಾಯವಾಗಿ ಬಂಧಿತರಾದ ಹಿಂದುತ್ವನಿಷ್ಠರನ್ನು ಬಿಡುಗಡೆ ಮಾಡಿ! : ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯಲ್ಲಿನ ಸರಕಾರಿ ಅನುದಾನಿತ ಕ್ರೈಸ್ತ ಶಿಕ್ಷಣ ಸಂಸ್ಥೆಯಾದ ಸವೇಓ (ಝೇವಿಯರ್) ಹೈಸ್ಕೂಲಿನ ವಿದ್ಯಾರ್ಥಿ ಮುಖಿಲನ್ ಶಾಲೆಯ ಆವರಣದಲ್ಲಿನ ಬಾವಿಯಲ್ಲಿ ಶವವಾಗಿ ಪತ್ತೆಯಾದನು. ಶಾಲೆಯು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದ ಕಾರಣ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಬಳಿ ನ್ಯಾಯ ಕೇಳಲು ಹೋದರು. ಆ ಸಮಯದಲ್ಲಿ ಪೊಲೀಸರು ಹಿಂದು ಮಕ್ಕಲ್ ಕಚ್ಚಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ. ವಿ.ಕೆ. ಸೆಲ್ವಂ, ಭಾಜಪ ಮತ್ತು ಅಣ್ಣಾ ದ್ರಮುಕ ಪಕ್ಷದ ಪ್ರತಿನಿಧಿಗಳು ಹಾಗೂ ಪೋಷಕರ ನ್ಯಾಯವಾದಿಗಳು ಸೇರಿದಂತೆ 30 ಜನರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಿ, ಶ್ರೀ. ಸೆಲ್ವಂ ಸೇರಿದಂತೆ ಬಂಧಿತರಾದ ಎಲ್ಲರನ್ನೂ ಬಿಡುಗಡೆ ಮಾಡಬೇಕು.

3. ಅಮೆರಿಕನ್ ಉತ್ಪನ್ನಗಳನ್ನು ಬಹಿಷ್ಕರಿಸಿ! : ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ವಸ್ತುಗಳ ಮೇಲೆ ತೆರಿಗೆ ಹಾಕುವುದಾಗಿ ಭಾರತವನ್ನು ಬೆದರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಮೆರಿಕನ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು.

4. ಚೆನ್ನೈನಲ್ಲಿ ರಸ್ತೆಗೆ ನೀಡಿದ ಹಿಂದೂ-ದ್ವೇಷಿ ಆರ್ಚ ಬಿಷಪ್ ಹೆಸರನ್ನು ತೆಗೆಯಬೇಕು! : ಹಿಂದೂಗಳನ್ನು ದ್ವೇಷಿಸುವ ಮತ್ತು ಅವರ ವಿರುದ್ಧ ಹಿಂಸೆಗೆ ಪ್ರೇರೇಪಿಸುವ ದಿವಂಗತ ಆರ್ಚ ಬಿಷಪ್ ಎಝ್ರಾ ಸರಕುಣಂ ಅವರ ಹೆಸರನ್ನು ರಸ್ತೆಗೆ ನೀಡುವುದು ಸರಿಯಲ್ಲ. ಅವರ ಹೆಸರಿನ ಫಲಕವನ್ನು ತೆಗೆದುಹಾಕಬೇಕು.

5. ಹಿಂದು ಮಕ್ಕಲ್ ಕಚ್ಚಿಯ ‘ಆಧ್ಯಾತ್ಮಿಕ ತಮಿಳುನಾಡಿನ ವಿಜಯ’ ಅಭಿಯಾನಕ್ಕೆ ಅನುಮತಿ ನೀಡಿ! : ಹಿಂದು ಜನತಾ ಪಕ್ಷದ ವತಿಯಿಂದ ‘ಆಧ್ಯಾತ್ಮಿಕ ತಮಿಳುನಾಡಿನ ವಿಜಯ’ ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಸಭೆಗಳು, ಬೀದಿ ನಾಟಕಗಳು ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಪ್ರತಿ ಕಾರ್ಯಕ್ರಮಕ್ಕೂ ನ್ಯಾಯಾಲಯದ ಅನುಮತಿ ಕೇಳುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಪಕ್ಷದ ಕಾರ್ಯನೀತಿ ಪ್ರಚಾರ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು ಮತ್ತು ಈ ಸಂಬಂಧ ದಾಖಲಾದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು.

ಸಂಪಾದಕೀಯ ನಿಲುವು

  • ಸ್ವತಂತ್ರ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳು ತಮ್ಮ ಹಬ್ಬಗಳನ್ನು ನಿರ್ಬಂಧಗಳಿಲ್ಲದೆ ಆಚರಿಸಲು ಮನವಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದು ಭಾರತ ಆಗಿದಯೋ ಅಥವಾ ಬಾಂಗ್ಲಾದೇಶವೇ, ಪಾಕಿಸ್ತಾನವೇ? ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ!
  • ಪ್ರಜಾಪ್ರಭುತ್ವದ ಭಾರತದಲ್ಲಿ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಬಹಿರಂಗವಾಗಿ ನೋವುಂಟು ಮಾಡಲಾಗುತ್ತದೆ. ಅದನ್ನೂ ಮೀರಿ, ಭಾವನೆಗಳಿಗೆ ನೋವುಂಟು ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಹಿಂದುತ್ವನಿಷ್ಠ ಸಂಘಟನೆಗಳು ಅದಕ್ಕಾಗಿ ಬೇಡಿಕೆ ಇಡಬೇಕಾಗಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಇಂತಹ ಕುತಂತ್ರದ ವಿರುದ್ಧ ಎಷ್ಟು ಪ್ರತಿಭಟಿಸಿದರೂ ಕಡಿಮೆಯೇ!