ನನಗೆ ಹೆಚ್ಚು ತೊಂದರೆ ಕೊಟ್ಟವರು ಪೊಲೀಸ್ ಅಧಿಕಾರಿ ಹೇಮಂತ ಕರಕರೆ

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ

  • ಮಗಳ ಮೇಲೆ ಅತ್ಯಾಚಾರ ಮಾಡುವ ಬೆದರಿಕೆಗಳು ಬಂದಿದ್ದವು.

  • ಎದೆಯ ಮೇಲೆ ಕುಣಿದು ಬೆಲ್ಟ್‌ ನಿಂದ ಹೊಡೆದ ಆರೋಪ

ಮುಂಬಯಿ – ಮಾಲೆಗಾಂವ್ ನಲ್ಲಿ ಬಾಂಬ್ ಸ್ಫೋಟ ನಡೆದ ದಿನ ನಾನು ಮುಂಬಯಿಯಲ್ಲಿದ್ದೆ; ಆದರೆ ಈ ಪ್ರಕರಣದಲ್ಲಿ ನನ್ನನ್ನು ಬಂಧಿಸಿದ ನಂತರ ನನಗೆ ಹೊಡೆಯಲಾಯಿತು ಮತ್ತು ನಿಂದಿಸಲಾಯಿತು. ಕಳೆದ 17 ವರ್ಷಗಳಲ್ಲಿ ನಮ್ಮ ಕುಟುಂಬವು ಬಹಳಷ್ಟು ತೊಂದರೆಗಳನ್ನು ಸಹಿಸಿಕೊಳ್ಳಬೇಕಾಯಿತು. ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡುವ ಬೆದರಿಕೆಗಳು ಬಂದಿದ್ದವು. (ಭಯೋತ್ಪಾದನಾ ನಿಗ್ರಹ ದಳದ ಅಂದಿನ ಮುಖ್ಯಸ್ಥ) ಹೇಮಂತ್ ಕರಕರೆ ಎಂಬ ಈ ಪೊಲೀಸ್ ಅಧಿಕಾರಿ ನನ್ನನ್ನು ಬೆಲ್ಟ್‌ನಿಂದ ಹೊಡೆದರು. ನನ್ನ ಬಟ್ಟೆಗಳನ್ನು ತೆಗೆದು ನನ್ನ ಎದೆಯ ಮೇಲೆ ಕುಣಿದರು ಮತ್ತು ಹಲ್ಲೆ ಮಾಡಿದರು. ಪೊಲೀಸ್ ಅಧಿಕಾರಿ ಹೇಮಂತ ಕರಕರೆ ಅವರು ನನಗೆ ಅತಿ ಹೆಚ್ಚು ತೊಂದರೆ ಕೊಟ್ಟರು; ಆದರೆ ಭೂಮಿ ದುಂಡಾಗಿರುತ್ತದೆ. ಭಯೋತ್ಪಾದಕರ ದಾಳಿಯಲ್ಲಿ ಕರಕರೆ ಅವರು ಹತ್ಯೆಗೀಡಾದರು, ಈ ಭಯಾನಕ ಸ್ಥಿತಿಯನ್ನು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಿಂದ ನಿರ್ದೋಷಿಯಾಗಿ ಬಿಡುಗಡೆಯಾದ ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಅವರು ಒಂದು ಸುದ್ದಿವಾಹಿನಿಗೆ ತಿಳಿಸಿದರು.

ಉಪಾಧ್ಯಾಯ ಅವರು,…

1. ನಾನು ನನ್ನ ಜೀವನದಲ್ಲಿ ಎಂದಿಗೂ ಮಾಲೆಗಾಂವ್ ಗೆ ಹೋಗಿಲ್ಲ; ಆದರೆ ನನಗೆ ಹೊಡೆದು ಪ.ಪೂ.ಸರಸಂಘಚಾಲಕ ಡಾ. ಮೋಹನಜಿ ಭಾಗವತ್, ಪ್ರವೀಣ್ ತೊಗಾಡಿಯಾ, ಶ್ರೀ ಶ್ರೀ ರವಿಶಂಕರ, ಯೋಗಿ ಆದಿತ್ಯನಾಥ ಅವರ ಹೆಸರುಗಳನ್ನು ಹೇಳುವಂತೆ ಒತ್ತಾಯಿಸಲಾಯಿತು; ಆದರೆ ನಾನು ಕೊನೆಯವರೆಗೂ ಅವರ ಹೆಸರುಗಳನ್ನು ಹೇಳಲಿಲ್ಲ. ನಮಗೆ ಅವರು ದೊಡ್ಡ ವ್ಯಕ್ತಿಗಳಾಗಿದ್ದರು. ‘ಅವರ ಹೆಸರುಗಳನ್ನು ಹೇಳದಿದ್ದರೆ, ನಾವು ನಿಮ್ಮನ್ನು ಆರೋಪಿಯನ್ನಾಗಿ ಮಾಡುತ್ತೇವೆ’ ಎಂದು ಹೇಮಂತ ಕರಕರೆ ನನಗೆ ಯಾವಾಗಲೂ ಹೇಳುತ್ತಿದ್ದರು.

2. ಸುಶೀಲಕುಮಾರ್ ಶಿಂಧೆ ಮತ್ತು ದಿಗ್ವಿಜಯ ಸಿಂಗ್ ಅವರು ನಮ್ಮೆಲ್ಲರನ್ನೂ ಉದ್ದೇಶಪೂರ್ವಕವಾಗಿ ಬಂಧಿಸುವಂತೆ ಮಾಡಿದರು.

3. ನನ್ನನ್ನು ಮೂರು ಬಾರಿ ನಾರ್ಕೋ ಪರೀಕ್ಷೆಗೆ ಒಳಪಡಿಸಲಾಯಿತು. ನಾನು ನಿರ್ದೋಷಿ ಎಂದು ಮೊದಲ ದಿನದಿಂದಲೇ ನ್ಯಾಯಾಲಯಕ್ಕೆ ತಿಳಿದಿತ್ತು; ಆದರೆ ಹಾಗಿದ್ದರೂ ಸಾಮಾಜಿಕ ಮತ್ತು ಆರ್ಥಿಕ ಎರಡೂ ರೀತಿಯಲ್ಲಿ ನಮ್ಮನ್ನು ನಾಶಪಡಿಸಲಾಯಿತು. ನಾನು ಸೇನಾ ಅಧಿಕಾರಿ, ನಾನು ಬಾಂಬ್ ಸ್ಫೋಟ ಏಕೆ ಮಾಡುತ್ತೇನೆ?

4. ‘ನನ್ನ ಮಗನನ್ನು ಭಯೋತ್ಪಾದಕ ಎಂದು ಘೋಷಿಸಲಾಗುವುದು’ ಎಂಬ ಬೆದರಿಕೆಗಳು ಕೂಡ ಬಂದಿದ್ದವು.

5. ಒಂದು ದಿನ ನಮ್ಮ ಮನೆಗೆ ನುಗ್ಗಿ ನಮ್ಮ ಎಲ್ಲಾ ಸಾಮಾನುಗಳನ್ನು ಹೊರಗೆ ಎಸೆಯಲಾಗಿತ್ತು. ಆಗಲೂ ನಮಗೆ ಯಾರೂ ಸಹಾಯ ಮಾಡಲಿಲ್ಲ.

ಸಂಪಾದಕೀಯ ನಿಲುವು

  • ಭಯೋತ್ಪಾದನಾ ನಿಗ್ರಹ ದಳದ ಅಂದಿನ ಮುಖ್ಯಸ್ಥ ಹೇಮಂತ ಕರಕರೆ ಇಂದು ಜೀವಂತವಾಗಿಲ್ಲ; ಆದರೆ ಅವರು ಮಾಲೆಗಾಂವ್ ಬಾಂಬ್ ಸ್ಫೋಟದ ತನಿಖೆಯನ್ನು ಹೇಗೆ ನಡೆಸಿದರು ಎಂಬುದು ಇದರಿಂದ ಗೊತ್ತಾಗುತ್ತದೆ. ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಬಿಂಬಿಸಲು ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳೇ ಇಂತಹ ದುಷ್ಕೃತ್ಯಗಳನ್ನು ಮಾಡಿದ್ದರೆ, ಇದು ಆಕ್ರೋಶಕ್ಕೆ ಕಾರಣವಾಗುವ ಸಂಗತಿಯಾಗಿದೆ.
  • ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ಆರೋಪಿಗಳೆಂದು ಹೇಳಲಾದವರು ನಿರ್ದೋಷಿಯಾಗಿ ಬಿಡುಗಡೆಯಾದರು; ಆದರೆ ಅವರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳು ಇನ್ನೂ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಅವರಿಗೆ ಶಿಕ್ಷೆಯಾಗುವುದು ಅವಶ್ಯಕ.