Madras HC Order : ಮದ್ರಾಸ್ ಉಚ್ಚ ನ್ಯಾಯಾಲಯದಿಂದ 5 ಐ.ಎ.ಎಸ್. ಅಧಿಕಾರಿಗಳಿಗೆ ನೋಟಿಸ್

ದೇವಸ್ಥಾನದ ಭೂಮಿಯನ್ನು ಅತಿಕ್ರಮಣ ಮಾಡಿದ್ದ ಸೇಂಟ್ ಜೋಸೆಫ್ ಶಾಲೆ ತೆರವುಗೊಳಿಸುವ ಆದೇಶದ ಉಲ್ಲಂಘನೆ!

(ಐ.ಎ.ಎಸ್. ಎಂದರೆ ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವೀಸ್ – ಭಾರತೀಯ ಆಡಳಿತ ಸೇವೆ)

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ತಮಿಳುನಾಡಿನ 5 ಐ.ಎ.ಎಸ್. ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಈ ನೋಟಿಸನ್ನು ದೇವನಾಥ ಸ್ವಾಮಿ ದೇವಸ್ಥಾನದ ಭೂಮಿಯಲ್ಲಿರುವ ಸೇಂಟ್ ಜೋಸೆಫ್ ಮೆಟ್ರಿಕ್ಯುಲೇಶನ್ ಉಚ್ಚ ಮಾಧ್ಯಮಿಕ ಶಾಲೆಯನ್ನು ತೆರವುಗೊಳಿಸುವ ಆದೇಶವನ್ನು ನೀಡಿದ್ದರೂ, ಅದನ್ನು ಜಾರಿಗೊಳಿಸದ ಕಾರಣ ನೀಡಲಾಗಿದೆ. ಎಸ್. ಮಧುಮತಿ, ಕಾರ್ಯದರ್ಶಿ, ಶಾಲೆ ಮತ್ತು ಶಿಕ್ಷಣ ಇಲಾಖೆ; ಡಾ. ಬಿ. ಚಂದ್ರಮೋಹನ, ಕಾರ್ಯದರ್ಶಿ, ಪ್ರವಾಸೋದ್ಯಮ, ಸಂಸ್ಕೃತಿ, ಮಾನವ ಸಂಪನ್ಮೂಲ ಮತ್ತು ಸಿಇ ವಿಭಾಗ; ಪಿ.ಎನ್. ಶ್ರೀಧರ್, ಆಯುಕ್ತರು, ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಆಡಳಿತ ವಿಭಾಗ ಹಾಗೂ ಸಿ.ಬಿ. ಆದಿತ್ಯ ಸೆಂಥಿಲ್ಕುಮಾರ್, ಜಿಲ್ಲಾಧಿಕಾರಿ, ಕಡಲೂರು ಈ ಅಧಿಕಾರಿಗಳ ಹೆಸರುಗಳಾಗಿವೆ. ಇದರ ಜೊತೆಗೆ ಮಾನವ ಸಂಪನ್ಮೂಲ ಮತ್ತು ಸಿಇ ವಿಭಾಗದ 2 ಜಂಟಿ ಆಯುಕ್ತರ ಹೆಸರುಗಳೂ ಇದರಲ್ಲಿವೆ. ಉಚ್ಚ ನ್ಯಾಯಾಲಯವು ಈ ಎಲ್ಲ ಅಧಿಕಾರಿಗಳಿಗೆ ಜುಲೈ 10 ರಂದು ನಡೆಯಲಿರುವ ಮುಂದಿನ ವಿಚಾರಣೆಯಲ್ಲಿ ಖುದ್ದು ಹಾಜರಿರುವಂತೆ ಸೂಚಿಸಿದೆ.

1. ಈ ಅರ್ಜಿಯನ್ನು ಭಾಜಪದ ಆಧ್ಯಾತ್ಮಿಕ ಮತ್ತು ದೇವಾಲಯ ಅಭಿವೃದ್ಧಿ ಶಾಖೆಯ ರಾಜ್ಯ ಕಾರ್ಯದರ್ಶಿ ಎಸ್. ವಿನೋದ ರಾಘವೇಂದ್ರನ್ ಅವರು ಸಲ್ಲಿಸಿದ್ದರು. ಇದರಲ್ಲಿ ಅರ್ಜಿದಾರರು ಮದ್ರಾಸ್ ಉಚ್ಚ ನ್ಯಾಯಾಲಯದ ಏಪ್ರಿಲ್ 2024 ರ ಆದೇಶವನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದರು. ಏಪ್ರಿಲ್ 2024 ರಲ್ಲಿ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಿ ಅಧಿಕಾರಿಗಳಿಗೆ ಸೇಂಟ್ ಜೋಸೆಫ್ ಶಾಲೆಗಾಗಿ ಪರ್ಯಾಯ ಭೂಮಿಯನ್ನು ಹುಡುಕುವಂತೆ ಸೂಚಿಸಿತ್ತು.

2. ಎಸ್. ವಿನೋದ ರಾಘವೇಂದ್ರನ್ ಅವರು ತಮ್ಮ ಅರ್ಜಿಯಲ್ಲಿ, ಕಡಲೂರಿನಲ್ಲಿ ಸೇಂಟ್ ಜೋಸೆಫ್ ಮೆಟ್ರಿಕ್ಯುಲೇಶನ್ ಮತ್ತು ಉಚ್ಚ ಮಾಧ್ಯಮಿಕ ಶಾಲೆ ನಡೆಯುತ್ತಿರುವ ಭೂಮಿ ಹಿಂದೂ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂದು ಹೇಳಿದ್ದರು. ಅದನ್ನು ತೆರವುಗೊಳಿಸಲು ಹಲವು ಪ್ರಯತ್ನಗಳು ನಡೆದಿದ್ದರೂ, ಅತಿಕ್ರಮಣವನ್ನು ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ.

3. ಶಾಲೆಯು 2009 ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಸರಕಾರಕ್ಕೆ 6 ತಿಂಗಳಲ್ಲಿ ಶಾಲೆಗೆ 4.5 ಎಕರೆ ಭೂಮಿಯನ್ನು ನೀಡುವಂತೆ ಆದೇಶಿಸಿತ್ತು. ರಾಜ್ಯ ಸರಕಾರಿ ನ್ಯಾಯವಾದಿಗಳು ನ್ಯಾಯಾಲಯಕ್ಕೆ, ರಾಜ್ಯ ಸರಕಾರವು ಇನ್ನೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ತಿಳಿಸಿದ್ದರು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಶಾಲೆಯು ಒತ್ತಾಯಿಸುತ್ತಿದೆ.

4. ಇದರ ನಂತರ ಏಪ್ರಿಲ್ 2024 ರಲ್ಲಿ ನ್ಯಾಯಾಲಯವು ರಾಜ್ಯಕ್ಕೆ ಶಾಲೆಗೆ ಪರ್ಯಾಯ ಭೂಮಿ ನೀಡಲು ಇನ್ನಷ್ಟು 6 ತಿಂಗಳುಗಳ ಕಾಲಾವಕಾಶ ನೀಡಿತು; ಆದರೆ ರಾಜ್ಯ ಸರಕಾರವು ಇಲ್ಲಿಯವರೆಗೆ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ.

5. ಅರ್ಜಿದಾರ ಎಸ್. ವಿನೋದ್ ಅವರು ಉಚ್ಚ ನ್ಯಾಯಾಲಯಕ್ಕೆ, ಶಾಲೆಯನ್ನು ಎಲ್ಲಿ ಸ್ಥಾಪಿಸಬೇಕು ಎನ್ನುವ ಬಗ್ಗೆ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಶಾಲೆಯ ಭೂಮಿಯ ಮೇಲಿನ ಅಕ್ರಮ ನಿಯಂತ್ರಣವನ್ನು ಯಾವಾಗ ತೆಗೆದುಹಾಕಬೇಕು ಎಂಬುದನ್ನೂ ನಿರ್ಧರಿಸಿರುವುದಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳು ಜನರ ಮಾತನ್ನು ಕೇಳುವರೇ?