ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ

  • ಜಪಾನಿನ ಮಾಜಿ ಸಚಿವರ ಗಂಭೀರ ಆರೋಪ

  • ಭಾರತೀಯ ತಂಡವು ತನ್ನ ಅನುಕೂಲಕ್ಕೆ ತಕ್ಕಂತೆ ಷರತ್ತುಗಳನ್ನು ಬದಲಾಯಿಸಿತು

  • ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ

ಟೋಕಿಯೋ (ಜಪಾನ) – ಭಾರತ-ಜಪಾನ ಬುಲೆಟ್ ಟ್ರೇನ ಯೋಜನೆಗೆ ಸಂಬಂಧಿಸಿದಂತೆ ಜಪಾನಿ‌ನ ಮಾಜಿ ಕಾನೂನು ಸಚಿವರಾದ ಹಿದೇಕಿ ಮಾಕಿಹಾರಾ ರವರು ‘ಎಕ್ಸ್’ (ಟ್ವಿಟರ್) ಸಾಮಾಜಿಕ ಮಾಧ್ಯಮದಲ್ಲಿ ಬರೆಯುವ ಮೂಲಕ ಭಾರತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ‘ಈ ಯೋಜನೆಯಲ್ಲಿ ವಿಳಂಬವಾಗಲು ಅತಿ ದೊಡ್ಡ ಕಾರಣ ಭಾರತೀಯ ಸಚಿವರ ನಡವಳಿಕೆಯಾಗಿದೆ’ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಮಾಕಿಹಾರಾ ರವರು,

1. ನಾನು ಸ್ವತಃ ಈ ಯೋಜನೆಗೆ ಸಂಬಂಧಪಟ್ಟಿದ್ದೆನು ಮತ್ತು ಜಪಾನಿ ತಂಡವು ಈ ಯೋಜನೆಗಾಗಿ ಸಾಕಷ್ಟು ಶ್ರಮವಹಿಸಿತ್ತು; ಆದರೆ ನಿರೀಕ್ಷಿತ ಫಲಿತಾಂಶಗಳು ಸಿಗಲಿಲ್ಲ.

2. ಈ ಯೋಜನೆಗಾಗಿ ಕೆಲಸ ಮಾಡುತ್ತಿದ್ದ ಭಾರತದ ತಂಡವು ಹಲವು ಬಾರಿ ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಒಪ್ಪಂದಗಳನ್ನು ಮಾಡಿಕೊಂಡರೂ, ನಂತರ ಅವುಗಳಿಂದ ಹಿಂದೆ ಸರಿದರು. ಭಾರತೀಯ ತಂಡವು ಕೊನೆಯ ಕ್ಷಣದವರೆಗೂ ತನ್ನ ಅನುಕೂಲಕ್ಕೆ ತಕ್ಕಂತೆ ಷರತ್ತುಗಳನ್ನು ಬದಲಾಯಿಸುತ್ತಲೇ ಇತ್ತು. ಇದೇ ಕಾರಣದಿಂದಾಗಿ ಬುಲೆಟ್ ರೈಲು ಯೋಜನೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ.

3. ಜಪಾನಿನ ಪ್ರಧಾನಿ ಸಾನೆ ತಾಕಾಯಿಚಿ ಅವರು ಜುಲೈ 1 ರಿಂದ 3 ರ ಅವಧಿಯಲ್ಲಿ ಭಾರತದ ಪ್ರವಾಸದಲ್ಲಿದ್ದರು; ಆದರೆ ಅವರ ಪ್ರವಾಸದಿಂದಲೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಪ್ರವಾಸದ ಸಂದರ್ಭದಲ್ಲಿ ಎರಡೂ ದೇಶಗಳು 129 ಒಪ್ಪಂದಗಳನ್ನು ಘೋಷಿಸಿದ್ದವು. ಹೂಡಿಕೆ, ಉದ್ಯಮ, ಉತ್ಪಾದನೆ, ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಪೂರೈಕೆ ಸರಪಳಿ ಸಹಕಾರವನ್ನು ಬಲಪಡಿಸುವುದು ಈ ಒಪ್ಪಂದಗಳ ಉದ್ದೇಶವಾಗಿತ್ತು.

4. ಈ ಯೋಜನೆಯು ಮುಂದೆ ಹೋಗದಿರಲು ಭಾರತವೇ ಕಾರಣ ಎಂಬುದರ ಖಾತ್ರಿ ನನಗೆ ಶೇ. 100% ರಷ್ಟಿದೆ.

ಭಾರತದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಇಲ್ಲ!

ಮಾಕಿಹಾರಾರವರು ಭಾರತ ಸರಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ನಂತರವೂ, ಕೇಂದ್ರ ಸರಕಾರ ಅಥವಾ ಮುಂಬಯಿ-ಅಹಮದಾಬಾದ್ ಬುಲೆಟ್ ಟ್ರೇನ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.

2017 ರಲ್ಲಿ ಆರಂಭವಾಗಿದ್ದ ಯೋಜನೆ

ದೇಶದ ಮೊದಲ ಬುಲೆಟ್ ರೈಲು ಮುಂಬಯಿ ಮತ್ತು ಅಹಮದಾಬಾದ ನಡುವೆ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ ಮಾಜಿ ಪ್ರಧಾನಿ ಶಿಂಜೊ ಆಬೆಯವರು ಸೆಪ್ಟೆಂಬರ್ 14, 2017 ರಂದು ಕರ್ಣಾವತಿಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು. ಎರಡೂ ನಗರಗಳ ನಡುವಿನ ಅಂತರವು 508 ಕಿಮೀ ಇದೆ. ಸಾಮಾನ್ಯ ರೈಲಿನಲ್ಲಿ ಈ ದೂರವನ್ನು ಕ್ರಮಿಸಲು ಸುಮಾರು 7-8 ಗಂಟೆಗಳು ಬೇಕಾಗುತ್ತವೆ. ಆದರೆ ಬುಲೆಟ್ ಟ್ರೇನಿನ ಮೂಲಕ ಈ ದೂರವನ್ನು ಕೇವಲ 3 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ.

ಸಂಪಾದಕೀಯ ನಿಲುವು

ಸಾಮಾನ್ಯವಾಗಿ ಭಾರತೀಯರಿಗೆ ಸರಕಾರಿ ವ್ಯವಸ್ಥೆಗಳಿಂದ ಉಂಟಾಗುವ ಅನುಭವವೇ ವಿದೇಶಿ ವ್ಯಕ್ತಿಗೂ ಬರುವುದು ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ!