ಮಧ್ಯಪ್ರಾಚ್ಯದ ಸಂಘರ್ಷವನ್ನು ಪರಿಹರಿಸುವುದಕ್ಕಾಗಿ ಸಂಭಾಷಣೆ ಮತ್ತು ರಾಜತಾಂತ್ರಿಕತೆಗೆ ಪರ್ಯಾಯವಿಲ್ಲ!

ಇರಾನ್-ಇಸ್ರೇಲ್ ಇವರಲ್ಲಿನ ಕದನವಿರಾಮದ ಬಗ್ಗೆ ಭಾರತದ ಹೇಳಿಕೆ

ನವದೆಹಲಿ – ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮಕ್ಕೆ ಪ್ರತಿಕ್ರಿಯಿಸಿದ ಭಾರತ, ಮಧ್ಯಪ್ರಾಚ್ಯದ ಅನೇಕ ಸಂಘರ್ಷಗಳನ್ನು ಪರಿಹರಿಸಲು ಸಂಭಾಷಣೆ ಮತ್ತು ರಾಜತಾಂತ್ರಿಕತೆಗೆ ಪರ್ಯಾಯವಿಲ್ಲ ಎಂದು ಹೇಳಿದೆ.

ಭಾರತದ ವಿದೇಶಾಂಗ ಸಚಿವಾಲಯವು ಒಂದು ಅಧೀಕೃತ ಹೇಳಿಕೆಯಲ್ಲಿ, “ನಾವು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಸಂಪೂರ್ಣ ಬೆಳವಣಿಗೆಯ ನಂತರ ಭವಿಷ್ಯದ ಬಗ್ಗೆ ಹಾಗೂ ಒಟ್ಟಾರೆ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ಬಗ್ಗೆ ನಾವು ಆತಂಕಿತರಾಗಿದ್ದೇವೆ. ಇರಾನ್ ಮತ್ತು ಇಸ್ರೇಲ್ ನಡುವೆ ಕದನವಿರಾಮದ ವರದಿಯನ್ನು ಮತ್ತು ಅದನ್ನು ಸಾಧ್ಯವಾಗಿಸಲು ಅಮೆರಿಕಾ ಹಾಗೂ ಕತಾರ್ ವಹಿಸಿದ ಪಾತ್ರವನ್ನು ನಾವು ಸ್ವಾಗತಿಸುತ್ತೇವೆ” ಎಂದು ತಿಳಿಸಿದೆ.