Bengaluru Stampede Case : ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನಲ್ಲಿ ಕಾಲ್ತುಳಿತದ ಪ್ರಕರಣ

ಬೆಂಗಳೂರು – ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಜೂನ್ 4ರ ಸಂಜೆ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣಾ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ಕ್ರಿಕೆಟ್ ಬೋರ್ಡ್ ವಿರುದ್ಧ ದೂರಿನಲ್ಲಿ ನಿರ್ಲಕ್ಷ್ಯದ ಆರೋಪ ಮಾಡಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸ್ಪರ್ಧೆಯಲ್ಲಿ ವಿಜೇತ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಸನ್ಮಾನ ಸಮಾರಂಭವನ್ನು ಈ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಕ್ರೀಡಾಂಗಣದ ಸಾಮರ್ಥ್ಯ ಕೇವಲ 32 ಸಾವಿರ ಜನರಾಗಿದ್ದರೂ, ಕ್ರೀಡಾಂಗಣದ ಹೊರಗೆ 3 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಅವರಿಗೆ ಕ್ರೀಡಾಂಗಣಕ್ಕೆ ಪ್ರವೇಶ ಬೇಕಿತ್ತು. ಆ ವೇಳೆ ಪ್ರವೇಶ ದ್ವಾರದಲ್ಲಿ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಇಲ್ಲಿಯವರೆಗೆ 11 ಜನರು ಸಾವನ್ನಪ್ಪಿದ್ದು, 33 ಜನರು ಗಾಯಗೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್ ಕೂಡ ಸ್ವಯಂಪ್ರೇರಿತವಾಗಿ ಈ ಘಟನೆಯನ್ನು ಗಮನಿಸಿ ವಿಚಾರಣೆ ನಡೆಸಿದೆ.

ದಂಡಾಧಿಕಾರಿಗಳಿಂದ ಅಪಘಾತದ ತನಿಖೆ!

ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಘಟನೆಯ ಕುರಿತು ಮಾತನಾಡಿ, ಅಪಘಾತದ ಬಗ್ಗೆ ದಂಡಾಧಿಕಾರಿಗಳಿಂದ ತನಿಖೆ ನಡೆಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಹೇಳಿದರು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಅಥವಾ ‘ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್’ಗೆ ನಾವು ಈ ಕಾರ್ಯಕ್ರಮವನ್ನು ಆಯೋಜಿಸಲು ಹೇಳಿರಲಿಲ್ಲ. ಅವರು ಸ್ವತಃ ಈ ಕಾರ್ಯಕ್ರಮವನ್ನು ಆಯೋಜಿಸಿ ತಂಡವನ್ನು ಕರ್ಣಾವತಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ, ಎಂದು ಹೇಳಿದರು.

‘ದೇಶದಲ್ಲಿ ಈ ಹಿಂದೆ ಅನೇಕ ದೊಡ್ಡ ಅಪಘಾತಗಳು, ಉದಾ. ಮಹಾಕುಂಭಮೇಳದಲ್ಲಿ ಅಪಘಾತಗಳು ಸಂಭವಿಸಿವೆ!’ -ಮುಖ್ಯಮಂತ್ರಿ ಸಿದ್ದರಾಮಯ್ಯ

ಜೂನ್ 4ರ ಸಂಜೆ ನಡೆದ ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ, ಉತ್ಸವಕ್ಕಾಗಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಜನರು ಸೇರಿದ್ದರು, ಸರಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ ಸರಕಾರ ಉಚಿತ ಚಿಕಿತ್ಸೆ ನೀಡಲಿದೆ. ಎಲ್ಲಾ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ನಾನು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ; ಆದರೆ ದೇಶದಲ್ಲಿ ಈ ಹಿಂದೆ ಅನೇಕ ದೊಡ್ಡ ಅಪಘಾತಗಳು ಸಂಭವಿಸಿವೆ, ಉದಾಹರಣೆಗೆ ಮಹಾಕುಂಭಮೇಳದಲ್ಲಿ 50 ರಿಂದ 60 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ, ಇದರರ್ಥ ನಾವು ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುತ್ತಿದ್ದೇವೆ ಎಂದಲ್ಲ. ಭಾಜಪ ರಾಜಕೀಯ ಮಾಡುತ್ತಿದೆ, ನನಗೆ ರಾಜಕೀಯ ಮಾಡಲು ಇಷ್ಟವಿಲ್ಲ. ಕ್ರೀಡಾಂಗಣದಲ್ಲಿ ಒಂದು ಸಣ್ಣ ಪ್ರವೇಶ ದ್ವಾರವಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು; ಅವರು ಆ ಪ್ರವೇಶ ದ್ವಾರವನ್ನು ಮುರಿದು, ಕಾಲ್ತುಳಿತಕ್ಕೆ ಕಾರಣವಾಯಿತು. ರಾಜ್ಯ ಸರಕಾರದ ಜವಾಬ್ದಾರಿ ಭದ್ರತೆ ಒದಗಿಸುವುದಾಗಿತ್ತು, ಉಳಿದದ್ದನ್ನು ಕ್ರಿಕೆಟ್ ಅಸೋಸಿಯೇಷನ್ ನಿರ್ವಹಿಸಬೇಕಾಗಿತ್ತು.

ಸಂಪಾದಕೀಯ ನಿಲುವು

ಈ ಅಪಘಾತಕ್ಕೆ ರಾಜ್ಯ ಸರಕಾರ, ಪೊಲೀಸ್, ಕರ್ನಾಟಕ ಕ್ರಿಕೆಟ್ ಮಂಡಳಿ ಹೊಣೆಗಾರರಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಸಂಬಂಧಪಟ್ಟವರನ್ನು ಜೈಲಿಗೆ ಹಾಕುವ ಅವಶ್ಯಕತೆಯಿದೆ. ಸರಕಾರ ಸ್ವತಃ ಕ್ರಮ ಕೈಗೊಳ್ಳದ ಕಾರಣ ಕೇಂದ್ರ ಸರಕಾರ ಅಥವಾ ನ್ಯಾಯಾಲಯವೇ ಇದನ್ನು ಗಮನಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ!

ಸರಕಾರ ಸರಿಯಾದ ಸಿದ್ಧತೆ ಮಾಡಿಕೊಂಡಿದ್ದರೆ, ಈ ದುರಂತವನ್ನು ತಪ್ಪಿಸಬಹುದಿತ್ತು! – ಭಾಜಪ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಘಟನೆಯ ಕುರಿತು ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ ಸರಕಾರಕ್ಕೆ ರಾಜೀನಾಮೆ ನೀಡುವಂತೆ ಹೇಳಿದರು. ಸರಕಾರ ಸರಿಯಾದ ಸಿದ್ಧತೆ ಮಾಡಿಕೊಂಡಿದ್ದರೆ, ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಅವರು ಹೇಳಿದರು. ಕರ್ಣಾವತಿಯಲ್ಲಿ ಅಂತಿಮ ಪಂದ್ಯದ ವೇಳೆ ಒಂದೂವರೆ ಲಕ್ಷ ಜನರು ಸೇರಿದ್ದರು; ಆದರೆ ಯಾವುದೇ ಅಪಘಾತ ಸಂಭವಿಸಲಿಲ್ಲ. ಬೆಂಗಳೂರಿನಲ್ಲಿ ಇಷ್ಟು ಬೇಗ ಕಾರ್ಯಕ್ರಮವನ್ನು ಏಕೆ ಆಯೋಜಿಸಲಾಯಿತು ಮತ್ತು ಸಂಪೂರ್ಣ ಸಿದ್ಧತೆಯಿಲ್ಲದೆ ಇದಕ್ಕೆ ಏಕೆ ಅನುಮತಿ ನೀಡಲಾಯಿತು? ವಿಧಾನಸಭೆಯ ಮುಂದೆ ಉತ್ಸವ ಆಚರಿಸುವ ಅವಶ್ಯಕತೆ ಏನಿದೆ ಮತ್ತು ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಯೋಜಿಸಿದ್ದಾರೆಯೇ ಎಂಬುದಕ್ಕೆ ಅವರು ಉತ್ತರ ನೀಡಬೇಕು, ಎಂದು ಹೇಳಿದರು.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡ ನಷ್ಟಪರಿಹಾರ ನೀಡಬೇಕು! – ಕಾಂಗ್ರೆಸ್

ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು, ಇದು ಅತ್ಯಂತ ದುಃಖದ ಮತ್ತು ನೋವಿನ ದುರಂತವಾಗಿದೆ, ನಾನು ಮೃತರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಮತ್ತು ಗಾಯಾಳುಗಳಿಗಾಗಿ ಪ್ರಾರ್ಥಿಸುತ್ತೇನೆ. ಈ ದುರಂತಕ್ಕೆ ಕರ್ನಾಟಕ ಸರಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತದೆ; ಆದರೆ ಈ ಕಾರ್ಯಕ್ರಮ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಡಿಯಲ್ಲಿ ಬರುತ್ತದೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದಲ್ಲಿ ಒಂದು ವಿದೇಶಿ ಸಂಸ್ಥೆಯ ದೊಡ್ಡ ಪಾಲು ಇದೆ ಮತ್ತು ಅವರು ಈ ಸ್ಪರ್ಧೆಯಿಂದ 400 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿದ್ದಾರೆ. ಅವರು 11 ಮೃತರಿಗೆ ತಲಾ 22 ಕೋಟಿ ರೂಪಾಯಿ ಮತ್ತು ಗಾಯಾಳುಗಳಿಗೆ 25 ರಿಂದ 50 ಲಕ್ಷ ರೂಪಾಯಿ ನೀಡಿದರೆ, ಅದು ಸರಿಯಾಗಿರುತ್ತದೆ. ಅಂಗವಿಕಲರಾದವರಿಗೆ ಹೆಚ್ಚು ಹಣ ಸಿಗಬೇಕು. ಭವಿಷ್ಯದಲ್ಲಿ ಇಂತಹ ದುರಂತ ಮತ್ತೆ ಸಂಭವಿಸಬಾರದು; ಆದ್ದರಿಂದ ಈ ಪ್ರಕರಣದ ಸರಿಯಾದ ತನಿಖೆ ನಡೆಸಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರು ಧೈರ್ಯ ಮಾಡುವುದಿಲ್ಲ ಎಂಬುದನ್ನು ಗಮನಿಸಿ! ರಾಜ್ಯದ ಜನತೆ ಸರಕಾರದ ವಿರುದ್ಧ ಧ್ವನಿ ಎತ್ತುತ್ತಾರೆಯೇ?