ಭಾರತದಿಂದ 24 ಅಥವಾ 36 ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು ! – ಪಾಕಿಸ್ತಾನದ ಸಚಿವ

ಪಾಕಿಸ್ತಾನದ ಸಚಿವರು ರಾತ್ರಿ ಒಂದೂವರೆ ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು

ಇಸ್ಲಾಮಾಬಾದ (ಪಾಕಿಸ್ತಾನ) – ಪಹಲಗಾಮದಲ್ಲಿನ ದಾಳಿಯ ಘಟನೆಯನ್ನು ನೆಪವಾಗಿಟ್ಟುಕೊಂಡು ಭಾರತವು ಬರುವ 24 ಅಥವಾ 36 ಗಂಟೆಗಳಲ್ಲಿ ಆಕ್ರಮಣ ಮಾಡಬಹುದು ಎಂಬ ವಿಶ್ವಾಸಾರ್ಹ ಗುಪ್ತ ಮಾಹಿತಿಯು ಬೆಳಕಿಗೆ ಬಂದಿದೆ. ಭಾರತವು ಈ ರೀತಿಯಲ್ಲಿ ಕ್ರಮ ಕೈಗೊಂಡರೆ, ನಾವು ಆ ಕ್ರಮಕ್ಕೆ ಆಕ್ರಮಕವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತಾವುಲ್ಲಾಹ ತರಾರರವರು ಏಪ್ರಿಲ್ 29 ರ ನಡುರಾತ್ರಿ 1:30ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಬೆದರಿಕೆ ಹಾಕಿದ್ದಾರೆ. ಏಪ್ರಿಲ್ 29 ರ ಸಂಜೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೂರೂ ಸೇನಾ ಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ವಿದೇಶಾಂಗ ಸಚಿವರು, ರಕ್ಷಣಾ ಸಚಿವರು ಮುಂತಾದವರ ಸಭೆ ನಡೆಸಿದರು. ಈ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯಾವಾಗ ಮತ್ತು ಎಲ್ಲಿ ಆಕ್ರಮಣ ಮಾಡಬೇಕು ಎಂಬುದನ್ನು ಸೈನ್ಯವೇ ನಿರ್ಧರಿಸಬೇಕು ಎಂದು ಮೋದಿಯವರು ಹೇಳಿದ್ದಾರೆ ಎನ್ನಲಾಗಿದೆ. ಇದರ ನಂತರ ತರಾರರವರು ರಾತ್ರಿ ಮೇಲಿನಂತೆ ಬೆದರಿಕೆ ನೀಡಿದ್ದಾರೆ.

ಸಚಿವ ತರಾರರವರು ಮುಂದುವರೆದು, ಪಾಕಿಸ್ತಾನವು ಸ್ವತಃ ಭಯೋತ್ಪಾದನೆಯ ಬಲಿಪಶುವಾಗಿದೆ. ಈ ಸಂಕಟದ ನೋವು ನಮಗೆ ಚೆನ್ನಾಗಿ ತಿಳಿದಿದೆ. ಜಗತ್ತಿನಲ್ಲಿ ನಾವು ಯಾವಾಗಲೂ ಇದನ್ನು ಖಂಡಿಸಿದ್ದೇವೆ. ಸತ್ಯವನ್ನು ಕಂಡುಹಿಡಿಯಲು ತಜ್ಞರ ಒಂದು ನಿಷ್ಪಕ್ಷಪಾತ ಆಯೋಗದಿಂದ ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸ್ವತಂತ್ರ ತನಿಖೆ ನಡೆಸುವ ಸಿದ್ಧತೆಯನ್ನು ಪಾಕಿಸ್ತಾನವು ದರ್ಶಿಸಿದೆ. ಪಾಕಿಸ್ತಾನದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವ ಸಂಕಲ್ಪವನ್ನು ನಾನು ಇಲ್ಲಿ ಪುನರುಚ್ಚರಿಸುತ್ತೇನೆ. ಹಾಗೂ ಯಾವುದೇ ಆಕ್ರಮಣಕಾರಿ ಕ್ರಮಕ್ಕೆ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವುದು ಬಹುತೇಕ ಖಚಿತವಾಗಿದೆ; ಆದರೆ ಈ ಆಕ್ರಮಣವು ಪಾಕಿಸ್ತಾನಕ್ಕೆ ಸಂಪೂರ್ಣ ಪಾಠ ಕಲಿಸುತ್ತದೆಯೇ ಅಥವಾ ಹಿಂದಿನಂತೆ ಸಣ್ಣ ಕಾರ್ಯಾಚರಣೆಯಾಗಿರುತ್ತದೆಯೇ ಎಂಬುದು ಘಟನೆಯು ಘಟಿಸಿದ ನಂತರವೇ ತಿಳಿಯುತ್ತದೆ; ಆದರೆ ಅದಕ್ಕೂ ಮುನ್ನವೇ ಪಾಕಿಸ್ತಾನವು ಭಯದಿಂದ ತತ್ತರಿಸಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !