ಭಗವಾನ್ ಪರಶುರಾಮನು ಶ್ರೀವಿಷ್ಣುವಿನ ದಶಾವತಾರಗಳಲ್ಲಿ ಆರನೆಯ ಅವತಾರ. ವೈಶಾಖ ಶುಕ್ಲ ತೃತೀಯಾ (೨೯.೪.೨೦೨೫) ಈ ದಿನ ಪರಶುರಾಮ ಜಯಂತಿ. ಆ ನಿಮಿತ್ತ ನಾವು ಪರಶುರಾಮರ ಚರಣಗಳಿಗೆ ನಮಸ್ಕರಿಸಿ ಅವರಿಗೆ ಭಾವಪೂರ್ಣವಾಗಿ ವಂದಿಸೋಣ !
ಪರಶುರಾಮನು ಯುಗಾನುಯುಗಗಳಿಂದ ಪ್ರತ್ಯಕ್ಷನಾದ ಸಾಕ್ಷಿಯಾಗಿದ್ದಾನೆ. ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿಯೂ ಅವನು ಇದ್ದನು. ‘ಕೌರವ ಪಾಂಡವರ ಗುರು ಆಚಾರ್ಯ ದ್ರೋಣ ಮತ್ತು ಅವರ ಗುರು ಪರಶುರಾಮ. ಸಮರ್ಥ ರಾಮದಾಸ ಸ್ವಾಮಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರಿಗೂ ಅವನ ದರ್ಶನವಾಗಿತ್ತು ಎಂಬ ಐತಿಹ್ಯಗಳಿವೆ.’
– ಗುರುದೇವ ಡಾ. ಕಾಟೆಸ್ವಾಮೀಜಿ (ಘನಗರ್ಜಿತ, ಮೇ ೨೦೦೫)

ಭಗವಾನ್ ಪರಶುರಾಮನ ಕ್ಷೇತ್ರಗಳು !
‘ಪಿತೃಗಳ ಆದೇಶದಂತೆ ಪರಶುರಾಮನು ಅಶ್ವಮೇಧ ಮಹಾಯಾಗವನ್ನು ಮಾಡಿದನು. ಯಜ್ಞದ ಪುರೋಹಿತ ಕಶ್ಯಪ ಋಷಿಗಳಿಗೆ ಸಂಪೂರ್ಣ ಭೂಮಿಯನ್ನು ಸಮರ್ಪಿಸಿದನು ಮತ್ತು ಅವನು ಸ್ವತಃ ದಕ್ಷಿಣ ಸಾಗರತೀರಕ್ಕೆ ಹೋದನು. ಪರಶುರಾಮನು ಸಮುದ್ರ ತೀರದ ಸಹ್ಯಾದ್ರಿ ಪರ್ವತದಿಂದ ತನ್ನ ಕೊಡಲಿಯನ್ನು ವೇಗವಾಗಿ ಸಮುದ್ರಕ್ಕೆ ಎಸೆದನು ಮತ್ತು ಭರೂಚ್ನಿಂದ ಕನ್ಯಾಕುಮಾರಿಯ ವರೆಗಿನ ಎಲ್ಲಾ ಸಾಗರ ಪ್ರದೇಶವನ್ನು ಸಾಗರದಿಂದ ಪಡೆದುಕೊಂಡನು. ಪರಶುರಾಮನು ಸಂಪೂರ್ಣ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದ ಕಾರಣ ಅವನು ಸಾಗರದಿಂದ ಈ ಹೊಸ ಸಮುದ್ರದೊಳಗಿನ ಪ್ರದೇಶವನ್ನು ಪಡೆದನು. ಅದೇ ಪರಶುರಾಮ ಭೂಮಿ.’
– ಗುರುದೇವ ಡಾ. ಕಾಟೇ ಸ್ವಾಮೀಜಿ (ಘನಗರ್ಜಿತ, ಮೇ ೨೦೦೫)
ಪರಶುರಾಮನ ತ್ರಿಪುರ ಕ್ಷೇತ್ರ
‘ತ್ರಿಪುರ’ ಕೇರಳದ ಅತ್ಯಂತ ಪ್ರಾಚೀನ ಕ್ಷೇತ್ರ. ಭಗವಾನ್ ಪರಶುರಾಮನು ಕೇರಳದ ತ್ರಿಪುರದಲ್ಲಿ ಸಾಗರ ತೀರದಲ್ಲಿ ಅತಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು ಮತ್ತು ಜನರಿಗೆ ಅಲ್ಲಿಯೇ ಅವನ ಕೊನೆಯ ದರ್ಶನವಾಯಿತು. ಆದಿ ಶಂಕರಾಚಾರ್ಯರ ತಂದೆ ತಾಯಂದಿರು ಸಂತಾನಪ್ರಾಪ್ತಿಗಾಗಿ ಇಲ್ಲಿಯೇ ಅನುಷ್ಠಾನ ಮಾಡಿದ್ದರು.
– ಗುರುದೇವ ಡಾ. ಕಾಟೆಸ್ವಾಮೀಜಿ (ಘನಗರ್ಜಿತ, ಅಕ್ಟೋಬರ್ ೨೦೧೦)
ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿರುವುದುಬಲಿರಾಜ, ಭಗವಾನ್ ಪರಶುರಾಮ, ಮಾರುತಿ, ವಿಭೀಷಣ, ಮಹರ್ಷಿ ವ್ಯಾಸ, ಕೃಪಾಚಾರ್ಯ ಮತ್ತು ಅಶ್ವತ್ಥಾಮ ಇವರು ಸಪ್ತಚಿರಂಜೀವಿಗಳು. ಪರಶುರಾಮನು ಕಾಲದ ಮೇಲೆ ವಿಜಯವನ್ನು ಸಾಧಿಸಿದ್ದಾನೆ. ಆದ್ದರಿಂದ ಅವನು ಸಪ್ತ ಚಿರಂಜೀವಿಗಳಲ್ಲಿ ಒಬ್ಬನು. – ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ |
‘ಅಗ್ರತಃ ಚತುರೋವೇದಾಃ ಪೃಷ್ಠತಃ
ಸಶರಂ ಧನುಃ | ಇದಂ ಬ್ರಾಹ್ಮಂ
ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ’
ಅರ್ಥ : ನನ್ನ (ಪರಶುರಾಮನ) ಬಾಯಿಯಲ್ಲಿ ನಾಲ್ಕು ವೇದಗಳ ಜ್ಞಾನವಿದೆ. ನನ್ನ ಬೆನ್ನ ಮೇಲೆ ಬಾಣದ ಬತ್ತಳಿಕೆ ಮತ್ತು ಬಿಲ್ಲು ಇದೆ. ಸಂದರ್ಭ ಬಂದಾಗ ನಾನು ಬ್ರಾಹ್ಮಶಕ್ತಿಯಿಂದ ಶಾಪವಿಟ್ಟು ಸುಡುತ್ತೇನೆ ಮತ್ತು ಕ್ಷಾತ್ರಸಾಮರ್ಥ್ಯದಿಂದ ಸಂಹರಿಸುತ್ತೇನೆ.
(ಆಧಾರ: ಘನಗರ್ಜಿತ, ಮೇ ೨೦೦೫)
ಸದಾ ಕೊಡಲಿ ಹೊತ್ತ ಪರಶುರಾಮ !
ಮಹರ್ಷಿ ಭಾರ್ಗವರ ಕುಲದಲ್ಲಿ (ಪರಶು)ರಾಮನು ಜನಿಸಿದನು; ಹಾಗಾಗಿ ಅವನನ್ನು ‘ಭಾರ್ಗವರಾಮ’ ಎನ್ನುತ್ತಾರೆ. ಅವನ ಜನ್ಮನಾಮ ‘ರಾಮ’ ಎಂದಿತ್ತು. ಅವನು ಶಿವನ ಕಠಿಣ ಆರಾಧನೆ ಮಾಡಿ ಶಿವನನ್ನು ಪ್ರಸನ್ನಗೊಳಿಸಿದನು ಮತ್ತು ಶಿವನು ಅವನಿಗೆ ಪಿನಾಕ ಧನುಸ್ಸು ಮತ್ತು ತೇಜಸ್ವಿ ಕೊಡಲಿ ನೀಡಿದನು. ರಾಮನು ಪಿನಾಕ ಧನುಸ್ಸನ್ನು ಅಗತ್ಯಕ್ಕೆ ತಕ್ಕಂತೆ ಧರಿಸುತ್ತಿದ್ದನು; ಆದರೆ ಅವನ ಬಳಿ ಸದಾ ಕೊಡಲಿ ಇರುತ್ತಿತ್ತು. ಆದ್ದರಿಂದ ಎಲ್ಲರೂ ಅವನನ್ನು ‘ಪರಶುರಾಮ’ ಎಂದು ಕರೆಯುತ್ತಾರೆ.
ಪರಶುರಾಮ ಗುಹೆ, ರಾಜಸ್ಥಾನ
ತ್ರೇತಾಯುಗದಲ್ಲಿ ಪರಶುರಾಮ ಅರಾವಳಿ ಪರ್ವತ ಶ್ರೇಣಿಗೆ ಬಂದಿದ್ದನು. ಇಲ್ಲಿಗೆ ಬಂದ ನಂತರ ಪರಶುರಾಮನು ಈ ಸ್ಥಳವನ್ನು ತನ್ನ ತಪಸ್ಸಿಗಾಗಿ ಆರಿಸಿಕೊಂಡನು. ಅಲ್ಲಿನ ಬೆಟ್ಟದಲ್ಲಿ ತನ್ನ ಕೊಡಲಿಯನ್ನು ಜೋರಾಗಿ ಹೊಡೆದನು; ಏಕೆಂದರೆ ಇಲ್ಲಿ ಒಬ್ಬ ಬ್ರಹ್ಮರಾಕ್ಷಸ ವಾಸಿಸುತ್ತಿದ್ದನು. ಅವನನ್ನು ಓಡಿಸಲು ಅವನು ಹಾಗೆ ಮಾಡಿದನು. ಪರಶುರಾಮನು ಬೆಟ್ಟದಲ್ಲಿ ಕೊಡಲಿಯಿಂದ ಹೊಡೆದ ಕಾರಣ ಆ ಸ್ಥಳದಲ್ಲಿ ಬೆಟ್ಟವು ಸೀಳಿತು ಮತ್ತು ಅಲ್ಲಿ ಗುಹೆ ನಿರ್ಮಾಣವಾಯಿತು. ಆ ಗುಹೆಯಲ್ಲಿ ಪರಶುರಾಮನು ಶಿವನ ತಪಸ್ಸಿಗೆ ಕುಳಿತನು. ಅವನು ಶಿವನ ಆರಾಧನೆಯನ್ನು ಪ್ರಾರಂಭಿಸಿದನು. ಆಗ ಶಿವನು ತನ್ನ ಸಂಪೂರ್ಣ ಪರಿವಾರದೊಂದಿಗೆ ಅಲ್ಲಿಗೆ ಬಂದನು ಮತ್ತು ಅವನಿಗೆ ಅಸ್ತ್ರ-ಶಸ್ತ್ರಗಳ ವಿದ್ಯೆಯನ್ನು ನೀಡಿದನು. ಹಾಗೆಯೇ ಆ ಸಮಯದಲ್ಲಿ ಶಿವನು ಪರಶುರಾಮನಿಗೆ ಅಮರತ್ವದ ವರವನ್ನು ಸಹ ನೀಡಿದನು. ಇಲ್ಲಿಯೇ ಶಿವನು ಪರಶುರಾಮನಿಗೆ ದಿವ್ಯಾಸ್ತ್ರವನ್ನು ಸಹ ನೀಡಿದನು. ಇಲ್ಲಿ ಪರಶುರಾಮನು ಕರ್ಣನಿಗೆ ಧನುರ್ವಿದ್ಯೆಯನ್ನು ಕಲಿಸಿದನು. ಪರಶುರಾಮನ ಮುಂದೆ ಸ್ವಯಂಭೂ ಶಿವಲಿಂಗವು ಉತ್ಪತ್ತಿಯಾಗಿದೆ. ಶಿವಲಿಂಗದ ನೇರ ಮೇಲ್ಭಾಗದಲ್ಲಿ ಗುಹೆಯ ಛಾವಣಿಯಲ್ಲಿ ಹಸುವಿನ ಕೆಚ್ಚಲಿನಂತಹ ಆಕಾರವಿದೆ. ಅಲ್ಲಿಂದ ಶಿವಲಿಂಗದ ಮೇಲೆ ನಿರಂತರವಾಗಿ ನೀರು ಜಿನುಗುತ್ತಿರುತ್ತದೆ. ‘ಕಾಮಧೇನು ನಿರಂತರವಾಗಿ ಆ ಲಿಂಗಕ್ಕೆ ಅಭಿಷೇಕ ಮಾಡುತ್ತಿರುತ್ತದೆ’ ಎಂದು ಹೇಳುತ್ತಾರೆ. ಮಹಾಶಿವರಾತ್ರಿಯ ದಿನದಂದು ಈ ಕೆಚ್ಚಲುಗಳಿಂದ ಶಿವಲಿಂಗಕ್ಕೆ ಹಾಲಿನ ಅಭಿಷೇಕವಾಗುತ್ತದೆ. ಪರಶುರಾಮನ ಶಿಲೆಯ ಮೇಲೆ ಗೋಮುಖದಂತಹ ಆಕಾರಗಳು ಸಹ ನಿರ್ಮಾಣವಾಗಿವೆ. ಅದರಿಂದಲೂ ಹನಿ ಹನಿಯಾಗಿ ನೀರು ಬೀಳುತ್ತಿರುತ್ತದೆ. ತ್ರೇತಾಯುಗದಲ್ಲಿ ಭಗವಾನ್ ಪರಶುರಾಮನು ಈ ಸ್ಥಳದಲ್ಲಿ ದಿವ್ಯ ಸ್ವಯಂಭೂ ಶಿವಲಿಂಗವನ್ನು ಸ್ಥಾಪಿಸಿದನು. ಆ ಸಮಯದಲ್ಲಿ ಪ್ರಸನ್ನನಾದ ಭಗವಾನ್ ಶಂಕರನು ತನ್ನ ಪರಿವಾರದೊಂದಿಗೆ ಪರಶುರಾಮನಿಗೆ ವಿಶೇಷ ವರವನ್ನು ನೀಡಿದನು. ಅದರಿಂದಾಗಿ ಧನುರ್ವಿದ್ಯೆ, ಪಾಶುಪತಾಸ್ತ್ರ, ದಿವ್ಯಾಸ್ತ್ರ ಮತ್ತು ಶಿವನ ಅಜೇಯ ಧನುಸ್ಸು ಪರಶುರಾಮನಿಗೆ ಲಭಿಸಿದವು. ಅವನಿಗೆ ವಿಶೇಷ ಆಶೀರ್ವಾದ ಮತ್ತು ಅದರೊಂದಿಗೆ ದೈವಿಕ ಶಕ್ತಿಯೂ ಲಭಿಸಿತು.
– ಶ್ರೀ. ಗೌರವ ಸೇಠಿ, ಪಂಚಕುಲ, ಹರಿಯಾಣ. (೨೪.೪.೨೦೧೭)