ಇತ್ತೀಚೆಗಷ್ಟೆ ಪ್ರದರ್ಶನವಾದ ‘ಛಾವಾ’ ಹಿಂದಿ ಚಲನಚಿತ್ರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಜೀವನಸಂಘರ್ಷ ಹಾಗೂ ಅವರ ಶೌರ್ಯಗಾಥೆಯನ್ನು ತೋರಿಸಲಾಯಿತು; ಆದರೆ ಅನಂತರದ ಎಲ್ಲಕ್ಕಿಂತ ಮಹತ್ವದ ಅಧ್ಯಾಯ ‘ಔರಂಗಜೇಬನ ಪರಾಭವ’ (ಸೋಲು) ಅಷ್ಟು ಪ್ರಭಾವಪೂರ್ಣವಾಗಿ ಬೆಳಕಿಗೆ ಬರಲಿಲ್ಲ !
‘ಛತ್ರಪತಿ ಸಂಭಾಜಿ ಮಹಾರಾಜರನ್ನು ಹೀನಾಯವಾಗಿ ಹತ್ಯೆ ಮಾಡಿದ ನಂತರ ಮರಾಠರ ಶಕ್ತಿ ಕುಸಿಯ ಬಹುದು’, ಎಂದು ಔರಂಗಜೇಬನಿಗೆ ಅನಿಸಿತ್ತು; ಆದರೆ ನಿಜವಾಗಿ ಆಗಿದ್ದು ಅದರ ವಿರುದ್ಧ ! ಮರಾಠರು ಅವನ ಸೋಲನ್ನೇ ನಿರ್ಧರಿಸಿದರು. ಈ ಇತಿಹಾಸ ಕೇವಲ ಗೆದ್ದುಕೊಂಡಿರುವ ಯುದ್ಧದ್ದಾಗಿರಲಿಲ್ಲ, ಅದು ಒಬ್ಬ ಮಹಾಕಾಯ ಸಾಮ್ರಾಟನ ಸೋಲಿನ ಸವಿಯನ್ನುಣ್ಣುವ ಯೋಧರದ್ದಾಗಿತ್ತು. ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆಯಿಂದ ಮರಾಠರ ರಕ್ತ ಕುದಿಯಿತು ಹಾಗೂ ಅವರ ಮೃತ್ಯುವಿನ ಸೇಡು ತೀರಿಸದೆ ಅವರಿಗೆ ಶಾಂತಿ ಸಿಗುತ್ತಿರಲಿಲ್ಲ.

೧. ಸರದಾರ ಸಂತಾಜಿ ಘೋರಪಡೆ ಮತ್ತು ಧನಾಜಿ ಜಾಧವ ಇವರು ಔರಂಗಜೇಬನ ನಿದ್ರೆ ಕೆಡಿಸಿದರು !
ಛತ್ರಪತಿ ಸಂಭಾಜಿ ಮಹಾರಾಜರಿಗೆ ಅಮಾನವೀಯ ಹಿಂಸೆ ಯನ್ನು ಸಹಿಸಬೇಕಾಯಿತು; ಆದರೆ ಅವರು ಔರಂಗಜೇಬನ ಮುಂದೆ ತಲೆತಗ್ಗಿಸಲು ನಿರಾಕರಿಸಿದರು. ಮರಣದ ನಂತರ ಮೊಗಲರು ರಾಯಗಡವನ್ನು ವಶಪಡಿಸಿಕೊಂಡರು ಹಾಗೂ ಅವರ ಪತ್ನಿ ಯೇಸುಬಾಯಿ ಮತ್ತು ಪುತ್ರ ಶಾಹೂ ಮಹಾರಾಜರನ್ನು ಬಂಧಿಸಿದರು. ಮರಾಠರಿಗೆ ಇದು ದೊಡ್ಡ ಸಂಕಷ್ಟವಾಗಿತ್ತು; ಆದರೆ ಈ ಘಟನೆಯು ಅವರನ್ನು ಒಂದು ಧ್ಯೇಯದೊಂದಿಗೆ ಒಗ್ಗಟ್ಟು ಮಾಡಿತು, ಅದೇ ಔರಂಗಜೇಬನಿಗೆ ಮಣ್ಣು ಮುಕ್ಕಿಸುವ ಧ್ಯೇಯ ! ಆಗ ಮರಾಠರ ಪರಾಕ್ರಮಿ ಸರದಾರ ಸಂತಾಜಿ ಘೋರಪಡೆ ಹಾಗೂ ಧನಾಜಿ ಜಾಧವ ಇವರು ತಮ್ಮ ಪರಾಕ್ರಮದಿಂದ ಔರಂಗಜೇಬನ ನಿದ್ರೆ ಕೆಡಿಸಿದರು.
೨. ಮರಾಠರು ತೀರಿಸಿಕೊಂಡ ಸೇಡು ಹಾಗೂ ಸಂತಾಜಿ ಘೋರಪಡೆ ಮತ್ತು ಧನಾಜಿ ಜಾಧವ ಇವರ ಪರಾಕ್ರಮ !
ಸಂಗಮೇಶ್ವರದ ಯುದ್ಧದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಜೊತೆಗೆ ಹೋರಾಡುವಾಗ ವೀರಗತಿ ಪ್ರಾಪ್ತವಾಗಿರುವ ಮಾಲ್ಹೋಜಿ ಘೋರಪಡೆ ಇವರ ಪುತ್ರ ಸಂತಾಜಿ ಘೋರಪಡೆ ಇವರು ಮರಾಠಾ ಸಾಮ್ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿದರು. ಧನಾಜಿ ಜಾಧವ ಇವರ ಜೊತೆಗೆ ಅವರು ಮರಾಠರಿಗೆ ನವಸಂಜೀವನಿಯನ್ನು ನೀಡುತ್ತಾ ಔರಂಗಜೇಬನ ಸೈನ್ಯದ ಮೇಲೆ ಅಖಂಡ ಆಕ್ರಮಣಗಳನ್ನು ಮಾಡಿದರು.
‘ಛಾವಾ’ ಚಲನಚಿತ್ರದಲ್ಲಿ ಸಂಭಾಜಿ ಮಹಾರಾಜರ ಮೃತ್ಯುವಿನ ವರೆಗಿನ ಘಟನೆಗಳಿಗೆ ಒತ್ತು ಕೊಟ್ಟಿದ್ದರೂ ಅನಂತರ ಮರಾಠರು ತೀರಿಸಿದ ಸೇಡು ಹಾಗೂ ಸಂತಾಜಿ ಘೋರಪಡೆ ಮತ್ತು ಧನಾಜಿ ಜಾಧವ ಇವರ ಪರಾಕ್ರಮವೂ ಅಷ್ಟೇ ಮಹತ್ವದ್ದಾಗಿದೆ.
ಔರಂಗಜೇಬನು ತುಳಜಾಪುರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆಯನ್ನು ಮಾಡಿದನು; ಆದರೆ ಕೆಲವೇ ತಿಂಗಳುಗಳಲ್ಲಿ ಸಂತಾಜಿ ಹಾಗೂ ಧನಾಜಿ ಇವರು ಈ ಸ್ಥಳದಲ್ಲಿ ಅದೇ ಔರಂಗಜೇಬನ ಬಿಡಾರದ ಮೇಲೆ ಭೀಕರ ಹಲ್ಲೆ ಮಾಡಿದರು. ಮರಾಠರ ಕೌಶಲ್ಯದ ಮುಂದೆ ಮೊಗಲರ ಸೈನ್ಯ ಕಕ್ಕಾಬಿಕ್ಕಿಯಾಯಿತು. ರಾತ್ರಿಯ ಸಮಯದಲ್ಲಿ ಮರಾಠರು ಅನಿರೀಕ್ಷಿತವಾಗಿ ಬಿಡಾರದ ಒಳಗೆ ನುಗ್ಗಿ ‘ಹುಜೂರ್, ಮರಾಠರು ಬಂದರು !’, ಎನ್ನುವ ಭಯಹುಟ್ಟಿಸುವ ಧ್ವನಿಯಲ್ಲಿ ಕೋಲಾಹಲವೆಬ್ಬಿಸಿದರು. ಔರಂಗಜೇಬ ತನ್ನ ಜೀವ ಉಳಿಸಿಕೊಳ್ಳಲು ಚಡಪಡಿಸುತ್ತಿದ್ದನು. ಮರಾಠರು ಅವನ ಸೈನ್ಯದ ಮೇಲೆ ಭಯಂಕರ ಆಘಾತ ಮಾಡಿದರು, ಇದರಲ್ಲಿ ಅವನ ಸಾವಿರಾರು ಸೈನಿಕರು ಸಾವನ್ನಪ್ಪಿದರು. ಮರಾಠರು ಅಲ್ಲಿದ್ದ ಬೆಲೆಬಾಳುವ ವಸ್ತು, ಆನೆ, ಕುದುರೆ ಹಾಗೂ ೨ ಚಿನ್ನದ ಕಲಶಗಳನ್ನು ಸಿಂಹಗಡಕ್ಕೆ ಒಯ್ದರು.
೩. ಮರಾಠಾ ಸೈನ್ಯ ರಾಯಗಡವನ್ನು ವಶಪಡಿಸಿಕೊಂಡಿತು ಮತ್ತು ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿದ ಮುಕರ್ರಮ್ ಖಾನನನ್ನು ಕೊಂದಿತು
ಔರಂಗಜೇಬನಿಗೆ ಸತತವಾದ ಮರಾಠರ ಆಕ್ರಮಣದಿಂದ ಮಹಾರಾಷ್ಟ್ರವನ್ನು ಬಿಟ್ಟು ಪಲಾಯನಗೈಯಬೇಕಾಗಬಹುದು ಎಂದು ಅನಿಸುತ್ತಿತ್ತು; ಆದರೆ ಮರಾಠರು ಇಷ್ಟಕ್ಕೆ ನಿಲ್ಲಲಿಲ್ಲ. ಸಂತಾಜಿ ಘೋರಪಡೆ ಇವರು ಮುಂದಿನ ಆಕ್ರಮಣ ರಾಯಗಡದ ಮೇಲೆ ಮಾಡಿದರು. ಜುಲ್ಫೀಕರ ಖಾನನ ನೇತೃತ್ವದಲ್ಲಿನ ಮೊಗಲ ಸೈನ್ಯವು ರಾಯಗಡಕ್ಕೆ ಮುತ್ತಿಗೆ ಹಾಕಿತ್ತು; ಆದರೆ ಮರಾಠರ ಪರಾಕ್ರಮದಿಂದ ಅವರು ಹಿಮ್ಮೆಟ್ಟಬೇಕಾಯಿತು. ರಾಯಗಡ ಪುನಃ ಮರಾಠರ ವಶವಾಯಿತು. ಛತ್ರಪತಿ ಸಂಭಾಜಿ ಮಹಾರಾಜರನ್ನು ಸಂಗಮೇಶ್ವರದಲ್ಲಿ ಬಂಧಿಸಿದ ಮುಕರ್ರಮ ಖಾನನ ಮೇಲೆ ಮರಾಠರಿಗೆ ಸೇಡು ತೀರಿಸಲಿಕ್ಕಿತ್ತು. ೧೬೮೯ ರಲ್ಲಿ ಮುಕರ್ರಮ ಖಾನ ಕೊಲ್ಹಾಪುರ ಮತ್ತು ಕೊಂಕಣ ಪ್ರದೇಶದ ಸುಭೇದಾರನಾದನು; ಆದರೆ ಮರಾಠರು ಅವನಿಗೆ ಶಾಂತಿಯಿಂದಿರಲು ಬಿಡಲಿಲ್ಲ. ಸಂತಾಜಿ ಘೋರಪಡೆ ಮತ್ತು ಧನಾಜಿ ಜಾಧವ ಇವರು ಮುಕರ್ರಮ ಖಾನನ ಸೈನ್ಯದ ಮೇಲೇರಿ ಹೋಗಿ ಅವನನ್ನು ಸಂಪೂರ್ಣ ಸೋಲಿಸಿದರು ಹಾಗೂ ಕೊನೆಗೆ ಅವನ ಹತ್ಯೆ ಮಾಡಿದರು.
೪. ಮರಾಠರು ಔರಂಗಜೇಬನ ಕನಸನ್ನು ನುಚ್ಚುನೂರು ಮಾಡಿದರು !
ಈ ಯುದ್ಧದಿಂದಲೇ ಔರಂಗಜೇಬನ ಕನಸು ನುಚ್ಚುನೂರಾಯಿತು. ಛತ್ರಪತಿ ಸಂಭಾಜಿ ಮಹಾರಾಜರ ಮರಣ ಔರಂಗಜೇಬನ ವಿಜಯವಲ್ಲ, ಅದು ಅವನ ವಿನಾಶದ ಪ್ರಾರಂಭವಾಗಿತ್ತು. ಮರಾಠರು ಮುಂದಿನ ಕೇವಲ ೨೭ ವರ್ಷಗಳಲ್ಲಿ ಔರಂಗಜೇಬನನ್ನು ಸಹ್ಯಾದ್ರಿ ಪರ್ವತದ ಸಾಲಿನಲ್ಲಿ ಬೆನ್ನಟ್ಟುತ್ತಾ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು. ಕೊನೆಗೆ ಈ ಅಸುರ ಮಹಾರಾಷ್ಟ್ರದಲ್ಲಿಯೇ ಒಬ್ಬಂಟಿಯಾಗಿ ಚಡಪಡಿಸುತ್ತಾ ಪ್ರಾಣ ಬಿಟ್ಟನು. ಇತಿಹಾಸ ತೋರಿಸುವ ಔರಂಗಜೇಬನ ಗೆಲುವು ನಿಜವಾಗಿಯೂ ಅವನ ಸೋಲಾಗಿತ್ತು. ಮರಾಠರು ಅವನ ಸಾಮ್ರಾಜ್ಯದ ಬೆನ್ನೆಲುಬನ್ನೇ ಮುರಿದರು; ಕೊನೆಗೆ ಅವನು ಸೋಲನ್ನೇ ನೋಡಬೇಕಾಯಿತು. ‘ಛಾವಾ’ ಚಲನಚಿತ್ರ ಈ ಇತಿಹಾಸವನ್ನು ಎಲ್ಲಿಬಿಟ್ಟಿದೆಯೋ, ಅಲ್ಲಿಂದ ನಿಜವಾದ ಮರಾಠಾ ಶೌರ್ಯ ಆರಂಭವಾಯಿತು ಹಾಗೂ ಮರಾಠರು ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನದ ನಿಜವಾದ ಸೇಡನ್ನು ತೀರಿಸಿದರು.
– ತುಷಾರ ಕಥೋರೆ, ಮುಖ್ಯ ಕಾರ್ಯಕಾರಿ ಅಧಿಕಾರಿ, ಡಬ್ಲ್ಯು.ಈ.ಸಿ.ಟಿ.ಎಸ್., ಮುರಬಾಡ, ಮುಂಬಯಿ.