ಮುಜಫರ್‌ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!

ತನಿಖೆ ನಡೆಸಲು ಮುಖ್ಯ ವೈದ್ಯಾಧಿಕಾರಿಗಳ ಆದೇಶ

ಮುಜಫರ್‌ನಗರ (ಉತ್ತರ ಪ್ರದೇಶ): 14 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿಯ ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಬಾಕಿ ಹಣ ಸಿಗದಿದ್ದಕ್ಕಾಗಿ ವೈದ್ಯರು ಆಕೆಯ ಮೊಣಕಾಲನ್ನು ಬಲವಂತವಾಗಿ ಮಡಚಿ ಮೂಳೆಯನ್ನು ಮತ್ತೆ ಮುರಿದಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಮುಖ್ಯ ವೈದ್ಯಾಧಿಕಾರಿಗಳು ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ಬಾಲಕಿಯ ತಾಯಿ ಈ ಬಗ್ಗೆ ಮಾತನಾಡಿ, “ಒಂದೂವರೆ ತಿಂಗಳ ಹಿಂದೆ ಸರಕಾರಿ ಆಸ್ಪತ್ರೆಯಲ್ಲಿ ನನ್ನ ಮಗಳ ಬಲಗಾಲಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಈ ಶಸ್ತ್ರಚಿಕಿತ್ಸೆಗಾಗಿ 25,೦೦೦ ರೂಪಾಯಿ ಬೇಕೆಂದು ವೈದ್ಯರು ನನಗೆ ಡಿಮ್ಯಾಂಡ್ ಮಾಡಿದ್ದರು. ನಾನು ವಿಧವೆಯಾಗಿದ್ದು, ಅಷ್ಟೊಂದು ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿಸಿದೆ. ಆದರೆ ವೈದ್ಯರು ಮಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಗಳ ಮೊರೆ ಹೋದೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಆಸ್ಪತ್ರೆಗೆ ಬಾಲಕಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದರು. ಆದರೂ ಅಲ್ಲಿದ್ದ ವೈದ್ಯರು ನನ್ನಿಂದ 8,೦೦೦ ರೂಪಾಯಿ ಪಡೆದು ಮಗಳ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದರು ಮತ್ತು ‘ಬಾಕಿ ಹಣವನ್ನು ನಂತರ ನೀಡಬೇಕು’ ಎಂದು ಹೇಳಿದರು. ಅಲ್ಲದೆ ಕೆಲವು ದಿನಗಳ ನಂತರ ಮಗಳನ್ನು ತಪಾಸಣೆಗೆ ಮತ್ತೆ ಕರೆದುಕೊಂಡು ಬರುವಂತೆ ತಿಳಿಸಿದರು.

ಅದರಂತೆ ಕೆಲವು ದಿನಗಳ ನಂತರ ನಾನು ಮಗಳನ್ನು ಕರೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿದ ಡಾ. ಚತುರ್ವೇದಿ ಅವರ ಬಳಿಗೆ ಹೋದಾಗ, ಅವರು ಮಗಳ ಮೊಣಕಾಲನ್ನು ಬಲವಂತವಾಗಿ ಮಡಚಿದರು. ಆಗ ಮಗಳು ನೋವಿನಿಂದ ಜೋರಾಗಿ ಕಿರುಚಿದಳು. ಇದರ ನಂತರ ಆಕೆಯ ಕಾಲಿನ ಎಕ್ಸ್-ರೇ ತೆಗೆಸಿದಾಗ ಅದರಲ್ಲಿ ಕಾಲಿನ ಮೂಳೆ ಮುರಿದಿರುವುದು ಕಂಡುಬಂದಿದೆ. ಈ ಬಗ್ಗೆ ನಾನು ಹಿರಿಯ ವೈದ್ಯರಿಗೆ ದೂರು ನೀಡಿದೆ; ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ” ಎಂದು ಹೇಳಿದ್ದಾರೆ.

ಗಂಭೀರವಾಗಿ ತನಿಖೆ ನಡೆಸಲಾಗುವುದು! – ಮುಖ್ಯ ವೈದ್ಯಾಧಿಕಾರಿ

ಈ ಕುರಿತು ಪ್ರತಿಕ್ರಿಯಿಸಿದ ಮುಜಫರ್‌ನಗರದ ಮುಖ್ಯ ವೈದ್ಯಾಧಿಕಾರಿ ಸುನಿಲ್ ತೇವಟಿಯಾ, “ಈ ಪ್ರಕರಣದಲ್ಲಿ ಎರಡೂ ಕಡೆಯ (ವೈದ್ಯರು ಮತ್ತು ರೋಗಿ) ವಾದಗಳನ್ನು ಕೇಳದೆ ಏನನ್ನೂ ಹೇಳಲು ಸಾಧ್ಯವಿಲ್ಲ. ಆದಾಗ್ಯೂ, ಈ ಇಡೀ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಲಾಗುವುದು. ತನಿಖೆಯಲ್ಲಿ ಸಂಬಂಧಪಟ್ಟ ಆಸ್ಪತ್ರೆಯ ವೈದ್ಯರು ಅಥವಾ ಸಿಬ್ಬಂದಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅವರ ವಿರುದ್ಧ ಕಠಿಣ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

'ಇಂತಹ ವೈದ್ಯರನ್ನು ವೈದ್ಯರೆನ್ನಬೇಕೋ ಅಥವಾ ಕಟುಕರೆನ್ನಬೇಕೋ? ಸರಕಾರವು ಇದರ ತನಿಖೆ ನಡೆಸಿ, ಇಂತಹವರ ವೈದ್ಯಕೀಯ ಪ್ರಮಾಣಪತ್ರವನ್ನು ರದ್ದುಗೊಳಿಸಿ ಜೈಲಿಗೆ ಹಾಕಬೇಕು!'