ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation

ಬಾಂಗ್ಲಾದೇಶಿ ನುಸುಳುಕೋರರನ್ನು ಮರಳಿ ಕರೆದೊಯ್ಯುವ ವಿಷಯದಲ್ಲಿ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ

ಢಾಕಾ (ಬಾಂಗ್ಲಾದೇಶ) – ಬಂಗಾಳದಲ್ಲಿ ಭಾಜಪ ಸರಕಾರ ರಚನೆಯಾದ ನಂತರ ಬಾಂಗ್ಲಾದೇಶಿ ನುಸುಳುಕೋರರು ಈಗ ಮತ್ತೆ ಗಡಿಯತ್ತ ಹೋಗುತ್ತಿದ್ದಾರೆ. ಗಡಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನುಸುಳುಕೋರರನ್ನು ನೋಡಿ ಬಾಂಗ್ಲಾದೇಶ ಕೆರಳಿದೆ. ಈಗ ಅವರು, ಭಾರತವು ಕಾನೂನುಬಾಹಿರ ವಲಸಿಗರನ್ನು ಬಲವಂತವಾಗಿ ಬಾಂಗ್ಲಾದೇಶದ ಗಡಿಯೊಳಗೆ ತಳ್ಳುತ್ತಿದೆ (‘ಪುಶ್-ಇನ್’ ಮಾಡುತ್ತಿದೆ) ಎಂದು ಆರೋಪಿಸುತ್ತಿದ್ದಾರೆ. ಕಾನೂನುಬಾಹಿರ ವಲಸಿಗರ ವಿನಿಮಯದ ವಿಷಯವಾಗಿ ಮತ್ತೊಮ್ಮೆ ಗಂಭೀರ ರಾಜತಾಂತ್ರಿಕ ಮತ್ತು ಸೈನಿಕ ಉದ್ವಿಗ್ನತೆ ನಿರ್ಮಾಣವಾಗಿದೆ. ‘ಭಾರತೀಯ ಭದ್ರತಾ ಪಡೆಗಳು ಕಳೆದ 24 ಗಂಟೆಗಳಲ್ಲಿ ಹಲವು ಬಾರಿ ನುಸುಳುಕೋರರನ್ನು ಬಲವಂತವಾಗಿ ಬಾಂಗ್ಲಾದೇಶದ ಗಡಿಯೊಳಗೆ ತಳ್ಳಲು ಯತ್ನಿಸಿವೆ’ ಎಂದು ಬಾಂಗ್ಲಾದೇಶ ಆರೋಪಿಸಿದೆ. ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ವು, ಭಾರತೀಯ ಅಧಿಕಾರಿಗಳಿಂದ ಗಡಿಯ ವಿವಿಧ ಭಾಗಗಳಿಂದ ಜನರನ್ನು ಕಾನೂನುಬಾಹಿರವಾಗಿ ಗಡಿ ದಾಟಿಸಿ ಕಳುಹಿಸುವ ಕನಿಷ್ಠ 10 ಪ್ರಯತ್ನಗಳನ್ನು ತಾವು ವಿಫಲಗೊಳಿಸಿರುವುದಾಗಿ ದಾವೆ ಮಾಡಿದೆ.

ಬಾರ್ಡರ್ ಗಾರ್ಡ್ ಬಾಂಗ್ಲಾದೇಶವು, ಯಾವುದೇ ಪರಿಸ್ಥಿತಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಕಾನೂನುಬಾಹಿರವಾಗಿ ಬಾಂಗ್ಲಾದೇಶದ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಎಚ್ಚರಿಸಿದೆ. ಅಂತರರಾಷ್ಟ್ರೀಯ ಗಡಿ ನಿರ್ವಹಣೆಯ ಸ್ಥಾಪಿತ ನಿಯಮಗಳು, ಶಿಷ್ಟಾಚಾರ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನವನ್ನು ಸಂಪೂರ್ಣ ಶಕ್ತಿಯಿಂದ ಹಾಗೂ ಕಟ್ಟುನಿಟ್ಟಾಗಿ ವಿರೋಧಿಸಲಾಗುವುದು.

ಬಾಂಗ್ಲಾದೇಶದ ಈ ಆರೋಪದಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಉಭಯ ನೆರೆಹೊರೆಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಲು ನಡೆಯುತ್ತಿದ್ದ ರಾಜತಾಂತ್ರಿಕ ಪ್ರಯತ್ನಗಳ ಮೇಲೆ ನೀರು ಬಿದ್ದಂತಾಗಿದೆ. ಬಾಂಗ್ಲಾದೇಶದ ಈ ತೀವ್ರ ಆರೋಪಗಳ ಕುರಿತು ಸದ್ಯಕ್ಕೆ ಭಾರತದ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಭಾರತದ ಗಡಿ ಭದ್ರತಾ ಪಡೆ ಮತ್ತು ವಿದೇಶಾಂಗ ಸಚಿವಾಲಯವು ಈ ಸಂಪೂರ್ಣ ವಿಷಯದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಮತ್ತು ಟಿಪ್ಪಣಿಯ ವಿನಂತಿಗಳಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗಡಿಯಲ್ಲಿ 24 ಗಂಟೆ ನಿಗಾ ಇಡುವುದು ಕಷ್ಟಕರ

ಭಾರತ ಮತ್ತು ಬಾಂಗ್ಲಾದೇಶ ನಡುವೆ 4 ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಅಂತರರಾಷ್ಟ್ರೀಯ ಗಡಿಯಿದೆ, ಇದು ವಿಶ್ವದ ಅತ್ಯಂತ ಉದ್ದದ ಗಡಿಗಳಲ್ಲಿ ಒಂದಾಗಿದೆ. ನದಿ, ಪರ್ವತ ಮತ್ತು ದಟ್ಟವಾದ ಅರಣ್ಯಗಳಂತಹ ಅತ್ಯಂತ ಸಂಕೀರ್ಣ ಭೌಗೋಳಿಕ ಪ್ರದೇಶಗಳ ಮೂಲಕ ಗಡಿಯು ಹಾದುಹೋಗುವುದರಿಂದ ಈ ಸಂಪೂರ್ಣ ಗಡಿಯ ನಿಖರವಾದ ದಿಗ್ಬಂಧನ ಮಾಡುವುದು ಅಥವಾ 24 ಗಂಟೆ ನಿಗಾ ಇಡುವುದು, ಉಭಯ ದೇಶಗಳ ಭದ್ರತಾ ಪಡೆಗಳಿಗೆ ಯಾವಾಗಲೂ ಒಂದು ದೊಡ್ಡ ಸವಾಲಾಗಿ ಉಳಿದಿದೆ.

ಅನೌಪಚಾರಿಕ ಮಾರ್ಗಗಳ ಕುರಿತು ಢಾಕಾದ ಆಕ್ಷೇಪ

ಬಾಂಗ್ಲಾದೇಶದ ಸರಕಾರ ಮತ್ತು ರಾಜತಾಂತ್ರಿಕ ಅಧಿಕಾರಿಗಳು, ಕಾನೂನುಬಾಹಿರ ವಲಸಿಗರನ್ನು ಗುರುತಿಸಲು ಹಾಗೂ ಅವರನ್ನು ಮರಳಿ ಕಳುಹಿಸಲು ಒಂದು ನಿರ್ದಿಷ್ಟ ಕಾನೂನು ಮತ್ತು ರಾಜತಾಂತ್ರಿಕ ಚೌಕಟ್ಟು ಅಸ್ತಿತ್ವದಲ್ಲಿದೆ ಎಂಬುದನ್ನು ಒತ್ತಿಹೇಳಿದ್ದಾರೆ. ಭಾರತದಲ್ಲಿ ಯಾವುದೇ ವ್ಯಕ್ತಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದರೆ ಮತ್ತು ಅವನು ನಿಜವಾಗಿಯೂ ಬಾಂಗ್ಲಾದೇಶದ ಪ್ರಜೆ ಎಂದು ಸಾಬೀತಾದರೆ, ಅವನನ್ನು ಸ್ಥಾಪಿತ ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ಹಾಗೂ ಔಪಚಾರಿಕ ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಮರಳಿ ಕಳುಹಿಸಬೇಕು ಎಂಬುದು ಅವರ ವಾದವಾಗಿದೆ.

ಈ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಉಭಯ ದೇಶಗಳ ನಡುವಿನ ಈ ಬಿಕ್ಕಟ್ಟನ್ನು ಪರಿಹರಿಸಲು ಈಗ ಸೈನಿಕ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶಕ್ಕೆ ಭಾರತವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಹೇಳುವುದು ಈಗ ಅನಿವಾರ್ಯವಾಗಿದೆ !
  • ಬಾಂಗ್ಲಾದೇಶಿ ನುಸುಳುವಿಕೆಗೆ ಸಕಾಲದಲ್ಲಿ ಕಡಿವಾಣ ಹಾಕುವುದು ಏಕೆ ಅಗತ್ಯವಾಗಿತ್ತು ಎಂಬುದು ಇಂತಹ ವಿರೋಧದಿಂದ ತಿಳಿಯುುತ್ತದೆ. ಈಗ ಈ ಬಾಂಗ್ಲಾದೇಶಿಗರ ಸಂಖ್ಯೆ ಕೋಟಿಗಳಲ್ಲಿದೆ. ಇದಕ್ಕೆ ಜವಾಬ್ದಾರರಾಗಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ ಮುಂತಾದವರನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ನ್ಯಾಯಾಲಯದ ಕ್ರಮ ಕೈಗೊಳ್ಳಬೇಕು !