ವಿಶ್ವಜನನಿ ಜಗದಂಬಾ ಮತ್ತು ನವರಾತ್ರಿಯ ವೈಶಿಷ್ಟ್ಯ !

ಸನಾತನ ಧರ್ಮವು ಯಾವಾಗಲೂ ಶಕ್ತಿ ಉಪಾಸಕವೇ ಆಗಿದೆ. ವೈದಿಕ ಸಾಹಿತ್ಯ, ಯಜುರ್ವೇದ ಮತ್ತು ಅಥರ್ವವೇದ ಇವುಗಳಲ್ಲಿ ಶಕ್ತಿಪೂಜೆಯ ಉಲ್ಲೇಖವಿದೆ. ದೇವಿಯು ಕರುಣಾಮಯಿ ಆಗಿರುವುದರಿಂದ ದೇವರು ಕೂಡ ದೇವಿಯ ಉಪಾಸನೆ ಮಾಡುತ್ತಾರೆ. ಅವಳು ಲೀಲೆಯನ್ನು ತೋರಿಸಲು ದೇಹಧಾರಣೆ ಮಾಡುತ್ತಾಳೆ. ಅವಳು ಭಕ್ತರಿಗೆ ಆನಂದವನ್ನು ನೀಡುತ್ತಾಳೆ ಹಾಗೂ ಪ್ರಸನ್ನಚಿತ್ತಳಾಗಿರುತ್ತಾಳೆ. ದೇವಿಯೆಂದರೆ ಮಾತೆ, ಆದಿಮಾತೆ, ಆದಿಶಕ್ತಿ, ಚೈತನ್ಯಶಕ್ತಿ, ಮೂಲಶಕ್ತಿ ಅನಾದಿಕಾಲದಿಂದಲೂ ದೇವಿ ಈ ರೀತಿಯ ಮನ್ನಣೆ ಪಡೆದಿದ್ದಾಳೆ. ಶಕ್ತಿಯು ಮೂಲತತ್ತ್ವದ ಅಂದರೆ, ಸತ್ತ್ವ, ರಜ, ತಮ ಈ ಮೂರು ಗುಣಗಳಿಗನುಸಾರ ಮಹಾಸರಸ್ವತಿ, ಮಹಾಲಕ್ಷ್ಮಿ, ಮಹಾಕಾಳಿ ಹೀಗೆ ಅವಳ ರೂಪಗಳಿವೆ.

ದೇವಿ ಭಾಗವತದಲ್ಲಿನ ಉಲ್ಲೇಖಕ್ಕನುಸಾರ ಸಾಕ್ಷಾತ್ ದೇವಿಯೇ ಭಕ್ತರಿಗೆ ನವರಾತ್ರ್ಯುತ್ಸವ ಮಾಡಲು ಹೇಳಿದ್ದಾಳೆ.ಎಲ್ಲ ದೇವರಲ್ಲಿರುವ ಶಕ್ತಿಯೇ ಆದಿಮಾಯೆ, ಜಗದಂಬೆ ಹೀಗೆ ಅನೇಕ ಹೆಸರಿನಲ್ಲಿ ಗೌರವಿಸಲ್ಪಟ್ಟಿದ್ದಾಳೆ. ದೇವಿಯ ಉಗ್ರ ಹಾಗೂ ಸೌಮ್ಯ ಹೀಗೆ ಎರಡು ರೂಪಗಳಿವೆ. ಉಮಾ, ಗೌರಿ, ಪಾರ್ವತಿ, ಇವು ಸೌಮ್ಯ ರೂಪಗಳಾಗಿದ್ದು ಹಾಗೂ ಕಾಳಿ, ದುರ್ಗೆ, ಚಂಡಿ ಇವು ಉಗ್ರ ರೂಪಗಳಾಗಿವೆ. ಚೈತ್ರ ತಿಂಗಳಿನಲ್ಲಿ ಆಚರಿಸುವ ನವರಾತ್ರಿಗೆ ‘ಚೈತ್ರ ನವರಾತ್ರಿ, ‘ವಸಂತ ನವರಾತ್ರಿ; ಆಷಾಢ ಮತ್ತು ಪುಷ್ಯ ತಿಂಗಳಿನಲ್ಲಿ ಬರುವ ನವರಾತ್ರಿಗೆ ‘ಗುಪ್ತ ನವರಾತ್ರಿ ಹಾಗೂ ಆಶ್ವಯುಜ ತಿಂಗಳ ನವರಾತ್ರಿಗೆ ‘ಶರದ ನವರಾತ್ರಿ ಎಂದು ಹೇಳುತ್ತಾರೆ.

ಶ್ರೀ ಮಹಾಸರಸ್ವತಿ

೧. ದುರ್ಗೆಯ ೩ ಪ್ರಮುಖ ರೂಪಗಳು

ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಹೀಗೆ ದುರ್ಗೆಯ ೩ ಪ್ರಮುಖ ರೂಪಗಳಿವೆ. ಮಹಾಕಾಳಿಯು ತಮೋ ಗುಣಿ, ಮಹಾಲಕ್ಷ್ಮೀಯು ರಜೋಗುಣಿ ಮತ್ತು ಮಹಾಸರಸ್ವತಿಯು ಸತ್ತ್ವಗುಣಿ ಆಗಿದ್ದಾಳೆ.

೨. ನವರಾತ್ರಿಯ ೯ ರಹಸ್ಯಗಳು

ಅ. ಮೊದಲ ರಹಸ್ಯ : ನವರಾತ್ರಿಯೆಂದರೆ ೩೬ ರಾತ್ರಿ ನವರಾತ್ರಿ (ಚೈತ್ರ, ಆಷಾಢ, ಪುಷ್ಯ ಮತ್ತು ಆಶ್ವಯುಜ ಈ ೪ ತಿಂಗಳಲ್ಲಿ ಬರುವ ೯ ನವರಾತ್ರಿಗಳ ಒಟ್ಟು ೩೬ ರಾತ್ರಿಗಳು).

ಆ. ಎರಡನೆಯ ರಹಸ್ಯ : ನಮ್ಮ ಶರೀರದಲ್ಲಿ ೯ ಛಿದ್ರ (ರಂಧ್ರ)ಗಳಿವೆ. ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗಿನ ಎರಡು ಹೊಳ್ಳೆಗಳು, ಎರಡು ಗುಪ್ತಾಂಗಗಳು ಮತ್ತು ಒಂದು ಬಾಯಿ ಈ ೯ ಅಂಗಗಳನ್ನು ಪವಿತ್ರ ಶುದ್ಧಗೊಳಿಸಿದಾಗ ಮನಸ್ಸು ನಿರ್ಮಲವಾಗುತ್ತದೆ. ನಿದ್ರೆಯಲ್ಲಿ ಎಲ್ಲ ಇಂದ್ರಿಯಗಳು ಲುಪ್ತವಾಗುತ್ತವೆ ಹಾಗೂ ಮನಸ್ಸು ಜಾಗೃತವಾಗಿರುತ್ತದೆ. ಉಪವಾಸ ಮಾಡುವುದರಿಂದ ಅಂಗ-ಪ್ರತ್ಯಾಂಗಗಳ  ಶುದ್ಧೀಕರಣವಾಗುತ್ತದೆ.

ಇ. ಮೂರನೇ ರಹಸ್ಯ : ಈ ೯ ದಿನಗಳಲ್ಲಿ ಮದ್ಯಪಾನ, ಮಾಂಸ ಸೇವನೆ, ಸ್ತ್ರೀಸಂಗ ವರ್ಜಿತವೆಂದು ಪರಿಗಣಿಸಲಾಗಿದೆ. ೯ ದಿನಗಳ ಸಾಧನೆಯಿಂದ ಮನೋಕಾಮನೆ ಪೂರ್ಣವಾಗುತ್ತದೆ.

ಈ. ನಾಲ್ಕನೆ ರಹಸ್ಯ :  ಈ ಪವಿತ್ರ ರಾತ್ರಿಗಳಲ್ಲಿ ವಿಶೇಷ ಶಕ್ತಿಗಳ ಬೋಧವಾಗುತ್ತದೆ. ನವರಾತ್ರಿಯ ರಾತ್ರಿಯಲ್ಲಿ ಮಾಡಿದ ಶುಭ ಸಂಕಲ್ಪಗಳು ಸಿದ್ಧವಾಗುತ್ತವೆ.

ಉ. ಐದನೆ ರಹಸ್ಯ : ೯ ದೇವಿಯರ ಪೂಜೆಯನ್ನು ವಿವಿಧಾಂಗಗಳಿಂದ ಮಾಡುತ್ತಾರೆ. ಕಾತ್ಯಾಯಿನಿದೇವಿಯು ಮಹಿಷಾಸುರನನ್ನು ವಧಿಸಿದುದರಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನುತ್ತಾರೆ.

ಊ. ಆರನೆ ರಹಸ್ಯ : ಶೈಲಪುತ್ರಿ-ಅಳಲೆಕಾಯಿ, ಬ್ರಹ್ಮಚಾರಿಣಿ-ಬ್ರಾಹ್ಮೀ; ಚಂದ್ರಘಂಟಾ-ಚವಳಿಕಾಯಿ, ಕೂಷ್ಮಾಂಡಾ-ಬೂದು ಕುಂಬಳಕಾಯಿ, ಸ್ಕಂದಮಾತಾ-ಅಕ್ಕಿ, ಅಗಸೆಬೀಜ; ಕಾತ್ಯಾಯನಿ-ಹಸಿರು ತರಕಾರಿ, ಕಾಲರಾತ್ರಿ-ಕರಿಮೆಣಸು, ತುಳಸಿ; ಸಿದ್ಧಿದಾತ್ರಿ-ನೆಲ್ಲಿ, ಶತಾವರಿ, ಇವು ವನಸ್ಪತಿಗಳಾಗಿವೆ.

ಎ. ಏಳನೆ ರಹಸ್ಯ : ಆದಿಶಕ್ತಿ ಅಂಬಿಕೆಯು ಸರ್ವೋಚ್ಚಳಾಗಿದ್ದು ಎಲ್ಲ ರೂಪಗಳು ಅವಳದ್ದೇ ಆಗಿವೆ.

ಏ. ಎಂಟನೆ ರಹಸ್ಯ : ದಶಮಹಾವಿದ್ಯೆ-ನವದುರ್ಗೆಯಲ್ಲಿ ದಶಮಹಾವಿದ್ಯೆಗಳ ಪೂಜೆಯಾಗುತ್ತದೆ. ಕಾಳಿ, ತಾರಾ, ಛಿನ್ನಮಸ್ತಾ, ಭೈರವಿ, ಭುವನೇಶ್ವರಿ, ತ್ರಿಪುರಾಸುಂದರಿ, ಧೂಮಾವತಿ, ಬಗಲಾಮುಖಿ, ಮಾತಂಗಿ, ಕಮಲಾ ಇವು ದಶಮಹಾವಿದ್ಯೆಗಳಾಗಿವೆ.

ಒ. ಒಂಭತ್ತನೆ ರಹಸ್ಯ : ದೇವಿಯನ್ನು ಅವಳ ಪ್ರತಿಯೊಂದು ವಾಹನ, ಭುಜಗಳು ಮತ್ತು ಶಸ್ತ್ರಗಳಿಂದ ಗುರುತಿಸಲಾಗುತ್ತದೆ.

ಶ್ರೀ ಮಹಾಕಾಳಿ

೩. ಭಗವತಿಯ ಪ್ರಸಿದ್ಧ ಸ್ಥಾನಗಳು

ಕೊಲ್ಹಾಪುರದ ಅಂಬಾಬಾಯಿ, ತುಳಜಾಪುರದ ತುಳಜಾ ಭವಾನಿ, ವಣೀಯ ಸಪ್ತಶೃಂಗೀ ಇವು ಮಹಾರಾಷ್ಟ್ರದ ಪ್ರಸಿದ್ಧ ಸ್ಥಾನಗಳಾಗಿವೆ. ವಣೀಯ ಸಪ್ತಶೃಂಗೀ ಇದು ಮೂರುವರೆ ಪೀಠಗಳಲ್ಲಿ ಮಾಹೂರದ ಮೂಲಪೀಠವಾಗಿದೆ. ದೇವಿಯ ೫೧ ಪೀಠಗಳು ಶ್ರೇಷ್ಠವಾಗಿವೆ. ‘ಸತಿಯ ಶರೀರದ ಅವಯವಗಳು ಎಲ್ಲೆಲ್ಲಿ ಬಿದ್ದವೋ, ಅಲ್ಲಲ್ಲಿ ಶಕ್ತಿಪೀಠಗಳು ನಿರ್ಮಾಣವಾದವು.

೪. ಘಟಸ್ಥಾಪನೆ

ನವರಾತ್ರಿಯ ಸ್ಥಾಪನೆಗೆ ಘಟಸ್ಥಾಪನೆ (ಇದಕ್ಕೆ ದೇವರು ಕುಳಿತುಕೊಳ್ಳುವುದು) ಎನ್ನಲಾಗುತ್ತದೆ. ಘಟವನ್ನು ಸ್ಥಾಪಿಸಿದ ನಂತರ ಪ್ರತಿದಿನ ಹೊಸ ಮಾಲೆಯನ್ನು ಕಟ್ಟಬೇಕು. ಪ್ರತಿದಿನ ದೇವರ ನೈವೇದ್ಯಕ್ಕೆ ಸಿಹಿ ಪದಾರ್ಥವನ್ನು ತಯಾರಿಸಬೇಕು. ಕೆಲವರಲ್ಲಿ ಉಪವಾಸದ ನೈವೇದ್ಯ ಇರುತ್ತದೆ. ಎಲ್ಲರೂ ಒಟ್ಟಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಆರತಿ ಮಾಡಬೇಕು. ಸಂಪೂರ್ಣ ನವರಾತ್ರಿಯಲ್ಲಿ ಅಖಂಡ ನಂದಾದೀಪವನ್ನು ಹಚ್ಚಬೇಕು. ಕಾಲುದೀಪಕ್ಕೆ ಗಂಧ, ಅಕ್ಷತೆ, ಹೂವು, ಅರಶಿನ-ಕುಂಕುಮ ಅರ್ಪಿಸಿ ನಮಸ್ಕಾರ ಮಾಡಬೇಕು. ಮುತ್ತೈದೆಯರು, ಕುಮಾರಿಯರು, ಬ್ರಾಹ್ಮಣರನ್ನು ಭೋಜನಕ್ಕಾಗಿ ಕರೆಯಬೇಕು. ನವರಾತ್ರಿಯಲ್ಲಿ ಅಷ್ಟಮಿಯಂದು ಕೆಲವೆಡೆ ದೇವಿಯ ಹೆಸರಿನಲ್ಲಿ ಭಿಕ್ಷೆ ಬೇಡುವ (ಜೋಗವಾ ಬೇಡುವ) ರೂಢಿಯಿರುತ್ತದೆ. ಆಶ್ವಯುಜ ಶುಕ್ಲ ಅಷ್ಟಮಿ ಮತ್ತು ನವಮಿಗೆ ‘ಮಹಾತೀರ್ಥ ಎನ್ನುತ್ತಾರೆ.

೫. ಲಲಿತಾ ಪಂಚಮಿ

ಇದಕ್ಕೆ ಉಪಾಂಗ ಲಲಿತೆಯ ವ್ರತ ಎನ್ನುತ್ತಾರೆ. ೪೮ ಗರಿಕೆಗಳ (ದುರ್ವಾ) ಒಂದು ಕಟ್ಟು, ಹೀಗೆ ೪೮ ಗರಿಕೆಗಳ ಕಟ್ಟುಗಳನ್ನು ಅರ್ಪಿಸಬೇಕು. ನೈವೇದ್ಯವನ್ನು ತೋರಿಸಿ ಮುತ್ತೈದೆಗೆ, ಬ್ರಾಹ್ಮಣರನ್ನು ಊಟಕ್ಕೆ ಕರೆಯುತ್ತಾರೆ. ಸಾಯಂಕಾಲ ಅರಶಿನ-ಕುಂಕುಮ ಇಟ್ಟುಕೊಳ್ಳುತ್ತಾರೆ. ಈ ದಿನ ಕುಮಾರಿಯನ್ನು ಊಟಕ್ಕೆ ಕರೆಯಬೇಕು ಹಾಗೂ ಅವಳ ಉಡಿ ತುಂಬಬೇಕು.

೬ ಅಷ್ಟಮಿ

ನವರಾತ್ರಿಯಲ್ಲಿ ಅಷ್ಟಮಿಗೆ ವಿಶೇಷ ಮಹತ್ವವಿದೆ. ಈ ದಿನ ಮಹಾಲಕ್ಷ್ಮೀಯ ಪೂಜೆ ಇರುತ್ತದೆ. ಸಾಯಂಕಾಲ ಕೊಡ ಊದುವ ಕಾರ್ಯಕ್ರಮ ನಡೆಯುತ್ತದೆ. ಆಗ ಮಹಾಲಕ್ಷ್ಮೀಯನ್ನು ಸ್ಥಾಪಿಸು ತ್ತಾರೆ. ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ಮಹಾಲಕ್ಷ್ಮೀಯ ಪೂಜೆ ನಡೆಯುತ್ತದೆ. ದೇವಿಯ ತೀರ್ಥಕ್ಷೇತ್ರಗಳಲ್ಲಿ ಅಷ್ಟಮಿಯಂದು ಚಂಡಿಯಾಗ ಮಾಡುತ್ತಾರೆ. ಷಡ್ರಿಪುಗಳ ನಾಶವಾಗಬೇಕೆಂದು ಚಂಡಿಯಾಗದಲ್ಲಿ ಹಾಲುಕುಂಬಳಕಾಯಿ ನೀಡುವ ರೂಢಿಯಿದೆ.

೭. ನವಮಿ

ಈ ತಿಥಿಗೆ ‘ಖಂಡೆನವಮಿ ಎನ್ನುತ್ತಾರೆ. ಮಹಿಷಾಸುರನೊಂದಿಗಿನ ಯುದ್ಧದಲ್ಲಿ ಇದೇ ದಿನ ದೇವಿಗೆ ವಿಜಯ ಸಿಕ್ಕಿತ್ತು.

೮. ದಸರಾ (ವಿಜಯದಶಮಿ)

ಮೂರುವರೆ ಮುಹೂರ್ತಗಳಲ್ಲಿನ ಒಂದು ಶುಭ ದಿನ. ಈ ದಿನ ಶುಭಕಾರ್ಯ ಮಾಡಲು ಮುಹೂರ್ತ ನೋಡುವ ಆವಶ್ಯಕತೆ ಇರುವುದಿಲ್ಲ. ಈ ದಿನ ಶಮೀ ಮತ್ತು ಬನ್ನಿಯ ವೃಕ್ಷಗಳಿಗೆ ಪೂಜೆಯನ್ನು ಮಾಡುತ್ತಾರೆ. ಶಸ್ತ್ರಪೂಜೆ, ಗ್ರಂಥ, ಪುಸ್ತಕ, ಆಯುಧಗಳು, ರಾಜಚಿಹ್ನೆ ಇವುಗಳ ಪೂಜೆಯನ್ನೂ ಮಾಡುತ್ತಾರೆ. ಸಾಯಂಕಾಲ ಊರಿನ ಗಡಿಯಲ್ಲಿ ಹೋಗಿ ಬನ್ನಿಯ ಎಲೆಗಳನ್ನು ತರುತ್ತಾರೆ. ಅವುಗಳನ್ನು ದೇವರ ಮುಂದೆ ಇಟ್ಟು ದೇವರಿಗೆ ನಮಸ್ಕಾರ ಮಾಡುತ್ತಾರೆ. ಆ ಎಲೆಗಳನ್ನು ಹಿರಿಯರಿಗೆ ಕೊಟ್ಟು ಅವರಿಂದ ಆಶೀರ್ವಾದ ಪಡೆಯುತ್ತಾರೆ. ರಾವಣನ ಪ್ರತಿಮೆಯನ್ನು ಮಾಡಿ ಅದನ್ನು ರಾತ್ರಿ ಸುಡುತ್ತಾರೆ. ಪರಸ್ತ್ರೀಯ ಮೇಲೆ ವಕ್ರದೃಷ್ಟಿ ಹಾಗೂ ಅವಮಾನಿಸಿದ ಕಾರಣ ರಾವಣನ ನಾಶವಾಯಿತು. ಕುಲದೇವತೆಯ ಮೂರ್ತಿಯಲ್ಲಿ ಹೆಚ್ಚೆಚ್ಚು ದೇವತ್ವ ಬರಬೇಕೆಂದು ತಮ್ಮ ಮನೆಗಳಲ್ಲಿ ದೇವಿಯ ಕೃಪಾಶೀರ್ವಾದ ಇರಬೇಕೆಂದು ನವರಾತ್ರಿಯ ಪೂಜೆ ಮಾಡಲಾಗುತ್ತದೆ.

– ಸೌ. ಸುಲಭಾ ಶಿವರಾಮ ಕೊಲ್ಹಟಕರ್, ಮಧ್ಯಪ್ರದೇಶ  (ಆಧಾರ : ಮಾಸಿಕ ‘ಧನುರ್ಧಾರಿ, ಜುಲೈ ೨೦೧೯)