ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ

(ಸದ್ಗುರು) ಡಾ. ಮುಕುಲ ಗಾಡಗೀಳ

‘ಬಹಳ ವರ್ಷಗಳ ಕಾಲ ಸಾಧನೆ ಮಾಡಿಯೂ ಪ್ರಗತಿಯಾಗದ ಕೆಲವು ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಸತ್ಸಂಗ ಲಭಿಸಿತು. ಅವರು ಆ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಅಡಚಣೆಗಳನ್ನು ತಿಳಿದುಕೊಂಡು ಅವರಿಗೆ ಮಾರ್ಗದರ್ಶನ ಮಾಡಿದರು. ಆ ಮಾರ್ಗದರ್ಶನದಲ್ಲಿನ ಅಂಶಗಳನ್ನು ಇಲ್ಲಿ ನೀಡಿದ್ದೇವೆ.

(ಭಾಗ ೧)

೧. ಮನಮುಕ್ತತೆಯಿಂದ ವರ್ತಿಸುವುದರ ಮಹತ್ವ

೧ ಅ. ಮನಸ್ಸು ಖಾಲಿ ಇದ್ದಷ್ಟು ದೇವರೊಂದಿಗೆ ಹೆಚ್ಚು ಅನುಸಂಧಾನ ಇರುತ್ತದೆ : ನಮ್ಮಲ್ಲಿರುವ ‘ಅಪೇಕ್ಷೆ, ಪರಿಸ್ಥಿತಿಯನ್ನು ಸ್ವೀಕರಿಸದಿರುವುದು, ನಿಷ್ಕರ್ಷ ತೆಗೆಯುವುದು’ ಇತ್ಯಾದಿ ದೋಷಗಳಿಂದಾಗಿ ನಮಗೆ ಬಹಳಷ್ಟು ಬಾರಿ ಯಾವುದಾದರೊಂದು ಪ್ರಸಂಗದಿಂದ ಹೊರಬರಲು ಸಮಯ ತಗಲುತ್ತದೆ. ಆ ಪ್ರಸಂಗದ ಬಗ್ಗೆ ಬಹಳ ವಿಚಾರ ಮಾಡುತ್ತೇವೆ. ಮನಸ್ಸಿನಲ್ಲಿಯೇ ವಿಚಾರಗಳ ಸಂಘರ್ಷ ನಡೆಯುತ್ತದೆ. ಇಂತಹ ಪ್ರಸಂಗದಲ್ಲಿ ಯಾರೊಂದಿಗಾದರೂ ಮಾತನಾಡಿ ಅಥವಾ ದೇವರಲ್ಲಿ ಆತ್ಮನಿವೇದನೆ ಮಾಡಿ ಮನಸ್ಸನ್ನು ಖಾಲಿ ಮಾಡಬೇಕು. ಮನಸ್ಸು ಎಷ್ಟು ಖಾಲಿ ಇರುತ್ತದೆಯೋ, ದೇವರೊಂದಿಗೆ ಅಷ್ಟು ಹೆಚ್ಚು ಅನುಸಂಧಾನವಿರುತ್ತದೆ. ‘ನಮ್ಮ ಮನಸ್ಸು ಯಾವಾಗಲೂ ದೇವರ ವಿಚಾರಗಳಲ್ಲಿ ಹೇಗೆ ಇರಬಹುದು ?’, ಎಂಬುದರ ಕಡೆಗೆ ನಾವು ಗಮನ ನೀಡಬೇಕು ಮತ್ತು ಬಾಹ್ಯ ವಿಷಯಗಳನ್ನು ದುರ್ಲಕ್ಷಿಸಬೇಕು. ದೇವರ ಪ್ರವಾಹದಲ್ಲಿ ನಾವು ಹರಿಯುತ್ತಿರಬೇಕು. ಎಷ್ಟೇ ಅಡಚಣೆಗಳು ಬಂದರೂ, ಜಿಗುಟುತನದಿಂದ ಮಾರ್ಗಕ್ರಮಣ ಮಾಡುತ್ತಿರಬೇಕು.

೧ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಒಂದೇ ಶಬ್ದವನ್ನು ೩ ದಿನ ಪುನಃ ಪುನಃ ಕೇಳುವುದು ಮತ್ತು ಇದರಿಂದ ಪರಿಪೂರ್ಣ ಸೇವೆಯನ್ನು ಮಾಡಲು ‘ನಾನು ಪುನಃ ಹೇಗೆ ಕೇಳಲಿ ?’, ಎಂಬ ಸಂಕೋಚವನ್ನು ಇಟ್ಟುಕೊಳ್ಳದಿರಲು ಅವರು ಕಲಿಸುವುದು : ಒಮ್ಮೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯರು ನನ್ನ (ಸದ್ಗುರು ಡಾ. ಮುಕುಲ ಗಾಡಗೀಳ ಇವರ) ಪಕ್ಕದಲ್ಲಿ ಕುಳಿತುಕೊಂಡಿದ್ದರು ಮತ್ತು ಅವರು ನನಗೆ ‘ಒಂದು ಶಬ್ದವನ್ನು ಹೇಗೆ ಬರೆಯಬೇಕು ?’, ಎಂದು ಕೇಳಿದರು. ನಾನು ಅವರಿಗೆ ಆ ಶಬ್ದವನ್ನು ಹೇಳಿದೆನು. ಮರುದಿನ ಮತ್ತು ಮೂರನೇ ದಿನವೂ ಅವರು ನನಗೆ ಅದೇ ಶಬ್ದವನ್ನು ಕೇಳಿದರು ಮತ್ತು ನಂತರ, ”ನಾನು ನಿಮಗೆ ಪುನಃ ಪುನಃ ಕೇಳುತ್ತಿರುವೆನಲ್ಲವೇ !”, ಎಂದು ಹೇಳಿದರು. ಇದರಿಂದ ‘ಯಾವುದಾದರೊಂದು ಅಂಶವು ತಿಳಿಯದಿದ್ದರೆ, ಪುನಃ ಪುನಃ ಮನಸ್ಸು ಬಿಚ್ಚಿ ಕೇಳಬೇಕು’, ಎಂದು ಅವರು ಕಲಿಸುತ್ತಿದ್ದರು. ‘ನಾನು ಪುನಃ ಪುನಃ ಹೇಗೆ ಕೇಳಲಿ ?’, ಎಂಬ ಸಂಕೋಚವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಸ್ವತಃದ ಪ್ರತಿಷ್ಠೆಯನ್ನು ಕಾಪಾಡಬಾರದು. ನಮಗೆ ಸರಿಯಾಗಿ ತಿಳಿಯದಿದ್ದರೆ, ನಮ್ಮಿಂದ ಸೇವೆಯಲ್ಲಿ ತಪ್ಪುಗಳಾಗುತ್ತವೆ. ಸೇವೆಯನ್ನು ಮಾಡುವಾಗ ಸಹಸಾಧಕರಲ್ಲಿಯೂ ಕೇಳಬೇಕು; ಏಕೆಂದರೆ ಎಲ್ಲರ ಬುದ್ಧಿ ಮತ್ತು ವಿಚಾರ ಮಾಡುವ ಪದ್ಧತಿ ಬೇರೆ ಬೇರೆಯಾಗಿರುತ್ತದೆ. ಎಲ್ಲರೂ ಸೇರಿ ಮಾಡಿದರೆ, ಸೇವೆಯಿಂದ ಉತ್ತಮ ಫಲಶೃತಿ ಸಿಗುತ್ತದೆ.

೧ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕೃತಿಯನ್ನು ಮಾಡುವಾಗ ಇತರರ ಬಳಿ ಕೇಳುತ್ತಾರೆ; ಏಕೆಂದರೆ ಮನಮುಕ್ತತೆಯಿಂದ ಪರಿಪೂರ್ಣ ಸೇವೆಯಾಗುವುದರ ಜೊತೆಗೆ ಅಹಂ ಸಹ ಕಡಿಮೆಯಾಗುತ್ತದೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕೃತಿಯನ್ನು ಮಾಡುವಾಗ ಇತರರಲ್ಲಿ ವಿಚಾರಿಸುತ್ತಾರೆ. ಇತರರಿಂದ ನಮಗೆ ಆ ಕೃತಿಯ ಬಗ್ಗೆ ಇನ್ನಷ್ಟು ತಿಳಿಯುತ್ತದೆ. ಅದರಿಂದ ಪರಿಪೂರ್ಣ ಸೇವೆಯಾಗುತ್ತದೆ, ಹಾಗೆಯೇ ಅದರಿಂದ ಅಹಂ ಸಹ ಕಡಿಮೆಯಾಗುತ್ತದೆ. ಒಂದು ವೇಳೆ ಅವರೇ ಈ ರೀತಿ ಕೇಳಿ ಮಾಡುತ್ತಿದ್ದಾರೆ ಎಂದಾದರೆ, ನಾವೇಕೆ ಕೇಳಬಾರದು ? ಒಮ್ಮೆ ಅವರು ನನಗೆ ಒಂದೇ ಶಬ್ದವನ್ನು ಮೂರು ಸಲ ಕೇಳಿದರು. ಅಷ್ಟು ಮುಕ್ತವಾಗಿ ಅವರು ಕೇಳುತ್ತಾರೆ. ನಾವೂ ಮುಕ್ತ ಮನಸ್ಸಿನವರಾಗಿರಬೇಕು.

೧ ಈ. ಮುಕ್ತವಾಗಿ ಮಾತನಾಡುವ ಕೃತಿಯಾಗಲು ಮನಸ್ಸಿನಲ್ಲಿ ಸಂಸ್ಕಾರವಾಗುವುದು ಆವಶ್ಯಕ ಮತ್ತು ಸ್ವಯಂಸೂಚನೆಯನ್ನು ನೀಡಿದರೆ ಅಂತರ್ಮನಕ್ಕೆ ಅದರ ಅರಿವಾಗುವುದು

ಪ್ರಶ್ನೆ : ಮುಕ್ತವಾಗಿ ಮಾತನಾಡುವುದರ ಮಹತ್ವ ಗೊತ್ತಿದೆ. ಮುಕ್ತವಾಗಿ ಮಾತನಾಡದಿದ್ದರೆ ಆಗುವ ಹಾನಿಯನ್ನೂ ನಾವು ಅನುಭವಿಸಿದ್ದೇವೆ. ಯಾರಾದರೂ ಮುಕ್ತವಾಗಿ ಮಾತನಾಡಲು ಹೇಳಿದರೆ, ‘ನಾವು ಈಗ ಮುಕ್ತವಾಗಿ ಮಾತನಾಡಬೇಕು’ ಎಂದು ಅನಿಸುತ್ತದೆ; ಆದರೆ ಕೃತಿಯಾಗುವುದಿಲ್ಲ.

ಸದ್ಗುರು ಡಾ. ಗಾಡಗೀಳ : ಮುಕ್ತವಾಗಿ ಮಾತನಾಡುವ ಸಂಸ್ಕಾರ ಮನಸ್ಸಿನಲ್ಲಾಗಲು ನಿರಂತರವಾಗಿ ಪ್ರಯತ್ನವನ್ನೇ ಮಾಡಬೇಕು. ‘ಮುಕ್ತವಾಗಿ ಮಾತನಾಡಬೇಕು’, ಎಂದು ಬುದ್ಧಿಗೆ ತಿಳಿದಿರುತ್ತದೆ; ಆದರೆ ಅಂತರ್ಮನದಲ್ಲಿ ಅದರ ಸಂಸ್ಕಾರವಾಗದ ಕಾರಣ ಕೃತಿಯಾಗುವುದಿಲ್ಲ. ಅದಕ್ಕಾಗಿ ಅಂತರ್ಮನಕ್ಕೆ ಸ್ವಯಂ ಸೂಚನೆಯನ್ನು ನೀಡಬೇಕು. ಆಂತರಿಕ ಪ್ರಗತಿಯಾಗಬೇಕು.

೨. ಭಾವವನ್ನು ಹೇಗೆ ಹೆಚ್ಚಿಸಬೇಕು ?

ಅ. ಯಾವುದೇ ಕೃತಿ ಅಥವಾ ಸೇವೆಯನ್ನು ಮಾಡುವಾಗ ‘ದೇವರು ಸೂಚಿಸುತ್ತಾನೆ’, ಎಂಬ ಭಾವವನ್ನು ಇಟ್ಟುಕೊಳ್ಳಬೇಕು.

ಆ. ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ಅದನ್ನು ದೇವರೊಂದಿಗೆ ಹೇಗೆ ಜೋಡಿಸಬಹುದು ?’, ಎಂದು ನೋಡಬೇಕು.

ಇ. ದೇವರೊಂದಿಗೆ ಆತ್ಮೀಯತೆ ಬೇಕು. ಇದಕ್ಕಾಗಿ ಪ್ರತಿಯೊಂದು ಸೇವೆಯನ್ನು ಮಾಡುವಾಗ ಅವನನ್ನು ಕರೆಯಬೇಕು. ಅವನಿಗೆ ಹೇಳಿ ಪ್ರತಿಯೊಂದು ಕೃತಿಯನ್ನು ಮಾಡಬೇಕು.

ಈ. ಮಹಾಪ್ರಸಾದವನ್ನು ಸೇವಿಸುವಾಗ ಪ್ರತಿಯೊಂದು ತುತ್ತಿನೊಂದಿಗೆ ಪ್ರಾರ್ಥನೆ ಮಾಡಲು ಪ್ರಯತ್ನಿಸಬೇಕು, ಅಂದರೆ ಅನುಸಂಧಾನ ಹೆಚ್ಚಾಗುತ್ತದೆ.

ಉ. ಸತತವಾಗಿ ಪ್ರಾರ್ಥಿಸುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮಹತ್ವದ್ದಾಗಿದೆ. ಅದರಿಂದ ಭಾವಜಾಗೃತಿಯಾಗುತ್ತದೆ.

ಊ. ‘ದೇವರೇ ಎಲ್ಲವನ್ನೂ ಮಾಡಿದನು’, ಎಂಬ ಭಾವವನ್ನು ಯಾವಾಗಲೂ ಇಟ್ಟುಕೊಳ್ಳಬೇಕು.

ಎ. ನಮ್ಮಲ್ಲಿ ಶರಣಾಗತಭಾವವನ್ನು ಜಾಗೃತಗೊಳಿಸಲು ಪ್ರಯತ್ನಿಸಬೇಕು.

ಏ. ಮನಸ್ಸನ್ನು ಖಾಲಿ ಇಡದೇ ಭಾವದಲ್ಲಿ ರಮಿಸಸಬೇಕು. ಪ್ರತಿ ೩೦ ನಿಮಿಷಗಳಿಗೊಮ್ಮೆ ಮಾಡಿದ ಕೃತಿಗಳ ವರದಿಯನ್ನು ತೆಗೆದುಕೊಳ್ಳಬೇಕು.

೩. ಆಂತರಿಕ ಸಾಧನೆಯನ್ನು ಹೆಚ್ಚಿಸಲು ಮಾಡಬೇಕಾದ ಪ್ರಯತ್ನಗಳ ಬಗೆಗಿನ ಅಂಶಗಳು

೩ ಅ. ಕರ್ತೃತ್ವವನ್ನು ಕಡಿಮೆ ಮಾಡಲು ಮಾಡಬೇಕಾದ ಪ್ರಯತ್ನಗಳು

೧. ‘ದೇವರು ನನಗೆ ಎಷ್ಟು ಸಹಾಯ ಮಾಡುತ್ತಾನೆ. ಅವನೇ ಎಲ್ಲವನ್ನೂ ಮಾಡಿಸಿಕೊಳ್ಳುತ್ತಾನೆ’, ಎಂಬ ಕೃತಜ್ಞತಾಭಾವ ಇರಬೇಕು.

೨. ಯಾವುದಾದರೊಂದು ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಆ ಬಗ್ಗೆ ದೇವರಿಗೆ ಕೇಳಬೇಕು. ಆ ಸಮಯದಲ್ಲಿ ಬಂದ ಮೊದಲ ಉತ್ತರ, ಸರಿಯಾಗಿರುತ್ತದೆ. ದೇವರಿಗೆ ಶ್ರದ್ಧೆಯಿಂದ ಪ್ರಶ್ನೆಯನ್ನು ಕೇಳಿದರೆ, ಅವನು ಖಂಡಿತವಾಗಿಯೂ ಉತ್ತರವನ್ನು ನೀಡುತ್ತಾನೆ. ಒಂದು ವೇಳೆ ದೇವರು ಉತ್ತರವನ್ನು ನೀಡದಿದ್ದರೆ, ಜೊತೆಗಿರುವ ಸಾಧಕರಲ್ಲಿ ಕೇಳಬೇಕು. ಅವರಲ್ಲಿಯೂ ದೇವರಿದ್ದಾನೆ.

೩ ಆ. ಮನಸ್ಸಿನ ತ್ಯಾಗವಾಗುತ್ತಿದೆಯೇ ? ಎಂಬುದರ ಕಡೆಗೆ ಗಮನವಿಡಬೇಕು : ‘ಸೇವೆಯನ್ನು ಮಾಡುವಾಗ ಮನಸ್ಸಿನ ತ್ಯಾಗವಾಗುತ್ತಿದೆಯೇ ?’, ಎಂಬುದರ ಕಡೆಗೆ ಗಮನವಿರ ಬೇಕು. ನಾವು ಮಾತನಾಡುವಾಗ, ಹಾಗೆಯೇ ಯಾವುದೇ ಕೃತಿಯನ್ನು ಮಾಡುವಾಗ ಯಾವಾಗಲೂ ನಮ್ಮ ಮೇಲೆ ಗಮನವಿಡಬೇಕು. ಮನಸ್ಸಿನಲ್ಲಿ ಮೂಡುವ ಪ್ರತಿಕ್ರಿಯೆ ಮತ್ತು ಅಪೇಕ್ಷೆ ಇವುಗಳನ್ನು ಬರೆದಿಡಬೇಕು ಮತ್ತು ಅವುಗಳು ಉಮ್ಮಳಿಸದಂತೆ ಪ್ರಯತ್ನಿಸಬೇಕು. ಅದರಿಂದ ಕ್ರಮೇಣ ಮನಸ್ಸು ಶುದ್ಧವಾಗುತ್ತಾ ಹೋಗುತ್ತದೆ.

೩ ಇ. ಮನಸ್ಸು ಚಂಚಲವಾಗಿರುವುದರಿಂದ ಸಾಧನೆಗಾಗಿ ಪದೇಪದೇ ಪ್ರಯತ್ನಿಸಬೇಕಾಗುವುದು ಮತ್ತು ಪ್ರಯತ್ನಿಸುವಾಗ ದೇವರು ಸಹಾಯ ಮಾಡುವುದು : ನಮಗೆ ಸಾಧನೆ ಮಾಡಲಿಕ್ಕಿದೆ; ಆದರೆ ಮನಸ್ಸು ಚಂಚಲವಾಗಿರುವುದರಿಂದ ಸುಲಭವಾಗಿ ಸಾಧನೆಯು ಆಗುವುದಿಲ್ಲ. ಅದಕ್ಕಾಗಿ ಪ್ರಯತ್ನವನ್ನೇ ಮಾಡಬೇಕು. ನಾನು ೨೦೦೫ ರಲ್ಲಿ ಶ್ವಾಸಕ್ಕೆ ನಾಮಜಪವನ್ನು ಜೋಡಿಸುವ ಪ್ರಯತ್ನಗಳನ್ನು ಆರಂಭಿಸಿದೆನು. ನಾನು ದೇವರಿಗೆ, ‘ನನಗೆ ಶ್ವಾಸದೊಂದಿಗೆ ನಾಮವನ್ನು ಜೋಡಿಸಲು ಸಾಧ್ಯವಾಗಲಿ’, ಎಂದು ಪುನಃ ಪುನಃ ಪ್ರಾರ್ಥಿಸುತ್ತಿದ್ದೆನು. ನನಗೆ ನಾನು ಚಿವುಟಿಕೊಳ್ಳುತ್ತಿದ್ದೆನು. ಅದು ಸಾಧ್ಯವಾಗಲು ನನಗೆ ೧ ವರ್ಷ ಬೇಕಾಯಿತು.

೩ ಈ. ಭಾವದ ಸ್ಥಿತಿ ಸತತವಾಗಿರಲು ಕೃತಜ್ಞತಾಭಾವವನ್ನು ಹೆಚ್ಚಿಸಿದರೆ ಸತತ ಅನುಸಂಧಾನದಲ್ಲಿರಲು ಸಾಧ್ಯವಾಗಿ ಆಂತರಿಕ ಸಾಧನೆಯಾಗುವುದು

ಪ್ರಶ್ನೆ : ಸೇವೆಯನ್ನು ಆರಂಭಿಸುವ ಮೊದಲು ಅಥವಾ ಸೇವೆಯ ಮೊದಲ ಹಂತದಲ್ಲಿ ನನಗೆ ಭಾವವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದರೆ ಒಂದು ಸಲ ಬುದ್ಧಿಯಿಂದ ತಪ್ಪುರಹಿತ ಸೇವೆಯನ್ನು ಮಾಡುವ ವಿಚಾರ ಬಂದರೆ, ನಂತರ ಬುದ್ಧಿಯು ಕಾರ್ಯನಿರತವಾಗುತ್ತದೆ ಮತ್ತು ಅನುಸಂಧಾನ ಉಳಿಯುವುದಿಲ್ಲ. ಇದಕ್ಕಾಗಿ ಏನು ಮಾಡಬೇಕು ?

ಸದ್ಗುರು ಡಾ. ಗಾಡಗೀಳ : ಸೇವೆಯನ್ನು ಮಾಡುವಾಗಲೂ ಭಾವದ ಸ್ಥಿತಿಯನ್ನು ಉಳಿಸಿಡಲು ಆಗುತ್ತದೆ. ನೀವು ದೇವರೊಂದಿಗೆ ಅನುಸಂಧಾನವನ್ನು ಉಳಿಸಿಡಬೇಕೆಂದರೆ ಕೃತಜ್ಞತಾಭಾವವನ್ನು ಹೆಚ್ಚಿಸಬೇಕು. ದೇವರ ಸಹಾಯ ಪಡೆಯಬೇಕು. ‘ದೇವರೇ ನಮಗೆ ಪ್ರತಿಯೊಂದು ವಿಚಾರವನ್ನು ಕೊಡುತ್ತಿರುತ್ತಾನೆ’, ಎಂದು ಗಮನದಲ್ಲಿಟ್ಟು ಪ್ರತಿಯೊಂದು ವಿಷಯವನ್ನು ಸಾಧನೆಯೆಂದು ಮಾಡಿರಿ. ಸೇವೆಯನ್ನು ಮಾಡುವಾಗ ನಮಗೆ ಏನಾದರೂ ಹೊಳೆದರೆ, ‘ಅದು ಯೋಗ್ಯವಾಗಿದೆಯೇ ?’, ಎಂದು ದೇವರಲ್ಲಿಯೇ ಕೇಳಿ. ‘ಸೇವೆಯನ್ನು ಇನ್ನೂ ಚೆನ್ನಾಗಿ ಮಾಡಲು ಏನು ಮಾಡಲಿ ?’, ಎಂದು ದೇವರ ಬಳಿ ಸತತವಾಗಿ ಕೇಳಿ. ಸೇವೆಯನ್ನು ಮಾಡುತ್ತಿರುವಾಗ ಬರುವ ಅನುಭೂತಿಯನ್ನು ಪಡೆಯಿರಿ, ಹಾಗೆಯೇ ಕಲಿಯುವ ಆನಂದವನ್ನು ಪಡೆಯಿರಿ. ಸೇವೆಯನ್ನು ಮಾಡುವಾಗ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ಇತರರಿಗೂ ಹೇಳಬೇಕು, ಅಂದರೆ ವ್ಯಾಪಕತೆಯು ಹೆಚ್ಚಾಗುತ್ತದೆ. ಇದರಿಂದ ಆಂತರಿಕ ಸಾಧನೆಯಾಗುತ್ತದೆ.

೪.  ಪರಿಪೂರ್ಣ ಗುರುಸೇವೆಯಾಗಲು ಏನು ಮಾಡಬೇಕು ?

೪ ಅ. ಸೇವೆಯು ಯಾಂತ್ರಿಕವಾಗದಂತೆ ಮಾಡಬೇಕಾದ ಪ್ರಯತ್ನ : ‘ಬಹಳ ವರ್ಷ ಸಾಧನೆಯನ್ನು ಮಾಡುತ್ತಿರುವ; ಆದರೆ ಪ್ರಗತಿಯಾಗದ ಅನೇಕ ಸಾಧಕರು ಬಹಳ ಸಲ, ‘ನಮ್ಮ ಸೇವೆ ಯಾಂತ್ರಿಕವಾಗಿ ಆಗುತ್ತದೆ’, ಎಂದು ಹೇಳುತ್ತಾರೆ. ಇದಕ್ಕೆ ಉಪಾಯವೆಂದರೆ ‘ಸೇವೆ ಮಾಡುವಾಗ ದೇವರು ಏನು ಕಲಿಸುತ್ತಿದ್ದಾನೆ ? ಅಕ್ಕಪಕ್ಕದ ಸಾಧಕರ ಸಹಾಯ ಹೇಗೆ ಪಡೆಯಬೇಕು ? ಸೇವೆಯು ಎಂದಿನಂತಿರುವುದರಿಂದ ಸೇವೆಯಲ್ಲಿ ಬರುವ ‘ನಿರಂತರತೆ’ಯನ್ನು ಹೇಗೆ ದೂರ ಮಾಡಬೇಕು ?’, ಎಂಬುದನ್ನು ನೋಡಬೇಕು. ಇದಕ್ಕೆ ಸಂಬಂಧಿಸಿದ ಅಂಶಗಳನ್ನು ಮುಂದೆ ಕೊಟ್ಟಿದೆ.

೪ ಅ ೧. ದೇವರು ಸೇವೆಯಲ್ಲಿನ ಎಲ್ಲ ವಿಷಯಗಳನ್ನು ಒಂದೇ ಸಲ ಸೂಚಿಸದೇ ಸ್ವಲ್ಪ ಸ್ವಲ್ಪವಾಗಿ ಸೂಚಿಸುತ್ತಿರುವುದರಿಂದ ಅವನು ಸೂಚಿಸಿದಂತೆ ಸೇವೆಯಲ್ಲಿ ಮಾರ್ಗಕ್ರಮಿಸುತ್ತಾ ಹೋದರೆ ಸೇವೆಯು ಸಹಜವಾಗಿ ಪೂರ್ಣಗೊಳ್ಳುವುದು : ಯಾವುದೇ ಹೊಸ ಸೇವೆಯನ್ನು ಮಾಡುವುದಿದ್ದರೆ, ಆ ಬಗ್ಗೆ ಅನುಭವವಿಲ್ಲದ ಕಾರಣ ‘ಗುರುಸೇವೆಯಲ್ಲಿ ಮುಂದೆ ಹೇಗೆ ಹೋಗಬೇಕು ?’, ಎಂಬ ಪ್ರಶ್ನೆ ಬಹಳ ಜನರಿಗೆ ಮೂಡುತ್ತದೆ. ಆದುದರಿಂದ ಸೇವೆಯು ಕಠಿಣವೆನಿಸುತ್ತದೆ; ಆದರೆ ‘ದೇವರು ನಮಗೆ ಸೂಚಿಸುತ್ತಿರುತ್ತಾನೆ’, ಎಂದು ಗಮನ ದಲ್ಲಿಟ್ಟರೆ, ಆನಂದ ಸಿಗುತ್ತದೆ. ಸೇವೆಯನ್ನು ಮಾಡುವಾಗ ಈ ದೃಷ್ಟಿಕೋನ ಇಟ್ಟುಕೊಳ್ಳಬೇಕು. ದೇವರು ಎಲ್ಲ ವಿಷಯಗಳನ್ನು ಒಂದೇ ಸಲಕ್ಕೆ ಸೂಚಿಸುವುದಿಲ್ಲ. ಅವನು ಸ್ವಲ್ಪಸ್ವಲ್ಪವಾಗಿ ಸೂಚಿಸುತ್ತಾನೆ. ದೇವರು ಸೂಚಿಸಿದಂತೆ ಕೃತಿ ಮಾಡಿದರೆ, ದೇವರು ಇನ್ನೂ ಮುಂದಿನದನ್ನು ಸೂಚಿಸುತ್ತಾನೆ. ಈ ರೀತಿ ನಮಗೆ ಸೇವೆಯಲ್ಲಿನ ಮುಂದು ಮುಂದಿನ ಮಾರ್ಗವು ಸಿಗುತ್ತಾ ಹೋಗುತ್ತದೆ ಮತ್ತು ಸೇವೆಯು ಸಹಜವಾಗಿ ಪೂರ್ಣಗೊಳ್ಳುತ್ತದೆ. ಇದಕ್ಕಾಗಿ ದೇವರ ಮೇಲೆ ಶ್ರದ್ಧೆಯನ್ನಿಡ ಬೇಕು ಮತ್ತು ಅವನ ಆಜ್ಞಾಪಾಲನೆ ಮಾಡಬೇಕು.

೪ ಅ ೨. ಸೇವೆಯಲ್ಲಿ ಕಲಿಯುವ ದೃಷ್ಟಿ ಇದ್ದರೆ ಆನಂದ ದೊರಕಿ ಉತ್ಸಾಹ ಹೆಚ್ಚಾಗುವುದರಿಂದ ಸೇವೆಯಲ್ಲಿ ನಿರಂತರತೆ ಉಳಿಯುವುದಿಲ್ಲ : ಸೇವೆಯನ್ನು ಮಾಡುವಾಗ ಕಲಿಯುವ ದೃಷ್ಟಿಯನ್ನಿಟ್ಟುಕೊಂಡರೆ, ಆನಂದ ಸಿಗುತ್ತದೆ. ಆನಂದ ದೊರಕಿದರೆ, ಉತ್ಸಾಹ ಬರುತ್ತದೆ. ಆದುದರಿಂದ ಪ್ರತಿದಿನ ಅದೇ ಸೇವೆ ಇದ್ದರೂ ‘ಆ ಸೇವೆಯಿಂದ ಏನು ಕಲಿಯಲು ಸಿಗುತ್ತದೆ ?’, ಎಂಬ ಕುತೂಹಲ ಇರಬೇಕು.

೪ ಅ ೩. ಸೇವೆಯನ್ನು ಮಾಡುವಾಗ ಮುಂದು ಮುಂದಿನದನ್ನು ಸೂಚಿಸುವಂತೆ ದೇವರಲ್ಲಿ ಶರಣಾಗತಭಾವದಿಂದ ಕೇಳುವುದು ಆವಶ್ಯಕವಾಗಿರುವುದು ಮತ್ತು ನಮಗೆ ಕಲಿಯಲು ಸಿಕ್ಕಿದ್ದನ್ನುಇತರರಿಗೆ ಹೇಳಿದರೆ ನಮ್ಮ ಆನಂದ ದುಪ್ಪಟ್ಟಾಗುವುದು : ನಮಗೆ ಎಷ್ಟು ಹೊಳೆಯಿತೋ ಅಷ್ಟಕ್ಕೇ ಅಲ್ಪಸಂತುಷ್ಟರಾಗಬಾರದು. ದೇವರಿಗೆ ಸತತವಾಗಿ ಕೇಳುತ್ತಿರಬೇಕು ಮತ್ತು ಕಲಿಯುತ್ತಿರ ಬೇಕು. ನಾವೇನು ಕಲಿತೆವೋ, ಅದನ್ನು ಇತರರಿಗೆ ಹೇಳಿದರೆ, ನಮ್ಮ ಆನಂದ ದುಪ್ಪಟ್ಟಾಗುತ್ತದೆ. ಸೇವೆಯನ್ನು ಮಾಡುವಾಗ ಪ್ರತಿಸಲ ಕೂಡಲೇ ಹೊಳೆಯುತ್ತದೆ ಎಂದೇನಿಲ್ಲ. ಇದಕ್ಕಾಗಿ ಶರಣಾಗತಿ ಬೇಕು. ಹೀಗೆ ಮಾಡಿದರೆ, ಪರಿಪೂರ್ಣ ಸೇವೆಯ ತಳಮಳ ಹೆಚ್ಚಾಗುತ್ತದೆ.

೪ ಅ ೪. ಪ್ರಮುಖ ಸಾಧಕರು ವಿವಿಧ ಬದಲಾವಣೆ ಏಕೆ ಹೇಳಿದರು ? ಎಂದು ತಿಳಿದುಕೊಂಡರೆ ಅದರಿಂದ ಪರಿಪೂರ್ಣ ಸೇವೆಯ ತಳಮಳವುಂಟಾಗಿ ಈಶ್ವರನ ಸಹಾಯ ಲಭಿಸುವುದು : ‘ಪ್ರಮುಖ ಸಾಧಕರು ಒಂದೇ ಸೇವೆಯ ಬಗ್ಗೆ ಯಾವುದಾದರೊಂದು ದಿನ ಒಂದು ಹೇಳುತ್ತಾರೆ ಮತ್ತು ಇನ್ನೊಂದು ದಿನ ಬೇರೆ ಹೇಳುತ್ತಾರೆ. ‘ಸೇವೆಯಲ್ಲಿನ ದೃಷ್ಟಿಕೋನವು ಈ ರೀತಿ ಏಕೆ ಬದಲಾಗುತ್ತದೆ ?’, ಎಂಬುದರ ಅಧ್ಯಯನ ಮಾಡಬೇಕು. ಈ ಬಗ್ಗೆ ತಿಳಿಯದಿದ್ದರೆ, ಕೇಳಿ ತಿಳಿದುಕೊಳ್ಳಬೇಕು. ಮನಸ್ಸಿನಲ್ಲಿ ಯಾವುದೇ ಸಂದೇಹ ಬೇಡ. ಇದರಿಂದ ಪರಿಪೂರ್ಣ ಸೇವೆಯ ತಳಮಳವುಂಟಾಗುತ್ತದೆ ಮತ್ತು ತಳಮಳವುಂಟಾದರೆ, ಈಶ್ವರನ ಸಹಾಯ ಸಿಗುತ್ತದೆ. ಸೇವೆಯನ್ನು ಮಾಡುವಾಗ ಭಾವಜಾಗೃತಿ, ಆಂತರಿಕ ಸಾಧನೆಯಾಗುವುದು, ತಳಮಳ ಹೆಚ್ಚುವುದು ಮತ್ತು ಅಹಂ ಕಡಿಮೆ ಮಾಡುವುದು ಇವುಗಳ ಕಡೆಗೆ ಗಮನವಿಡಬೇಕು.

೪ ಆ. ಪರಸ್ಪರರ ಸಹಾಯದಿಂದ ಸೇವೆಯನ್ನು ಪರಿಪೂರ್ಣಗೊಳಿಸಲು ಪ್ರಯತ್ನಿಸುವುದು : ಸೇವೆಯನ್ನು ಮಾಡುವಾಗ ಯಾವುದು ಸಾಧ್ಯವಾಗುವುದಿಲ್ಲವೋ, ಆ ಬಗ್ಗೆ ಇತರರಲ್ಲಿ ಕೇಳಬೇಕು. ‘ಯಾವುದಾದರೊಂದು ಕೃತಿ ಅಥವಾ ಸೇವೆ ಕೇವಲ ನನಗಷ್ಟೇ ತಿಳಿಯುತ್ತದೆ’, ಎಂಬ ವಿಚಾರ ಮಾಡದೇ ಇತರರಲ್ಲಿ ಕೇಳಿ ಅದನ್ನು ಪೂರ್ಣಗೊಳಿಸಬೇಕು. ಪರಸ್ಪರರ ಸಹಾಯದಿಂದ ಸೇವೆಯನ್ನು ಪರಿಪೂರ್ಣ ಮಾಡಲು ಪ್ರಯತ್ನಿಸಬೇಕು.

೪ ಇ. ಸೇವೆಯನ್ನು ಮಾಡುವಾಗ ಸಹಸಾಧಕರೊಂದಿಗೆ ಭಿನ್ನಾಭಿಪ್ರಾಯವಾದರೆ ಏನು ಮಾಡಬೇಕು ? : ‘ಕೆಲವೊಮ್ಮೆ ಸೇವೆಗೆ ಸಂಬಂಧಿಸಿದಂತೆ ನಮ್ಮದೊಂದು ವಿಚಾರ ಮತ್ತು ಸಹಸಾಧಕರದ್ದು ಇನ್ನೊಂದು ವಿಚಾರವಿರುತ್ತದೆ. ಇಂತಹ ಸಮಯದಲ್ಲಿ ನಾವು ಹಿಂದೆ ಸರಿಯುತ್ತೇವೆ ಮತ್ತು ಸಹಸಾಧಕರ ಇಚ್ಛೆಗನುಸಾರ ನಡೆದುಕೊಳ್ಳುತ್ತೇವೆ; ಆದರೆ ಕೆಲವೊಮ್ಮೆ ನಮ್ಮ ವಿಚಾರ ಹೆಚ್ಚು ಯೋಗ್ಯವೆನಿಸಿ ಮನಸ್ಸಿನಲ್ಲಿ ಅಸಮಾಧಾನವಿರುತ್ತದೆ. ಇಂತಹ ಸಮಯದಲ್ಲಿ ದೇವರ ಬಳಿ ಪ್ರಾರ್ಥನೆ ಮಾಡಿ ‘ಹೆಚ್ಚು ಯೋಗ್ಯ ಯಾವುದು ?’, ಎಂದು ಕೇಳಬೇಕು ಮತ್ತು ನಮ್ಮ ವಿಚಾರ ಯೋಗ್ಯವೆನಿಸಿದರೆ ಅದನ್ನು ಸಹಸಾಧಕನಿಗೆ ಕಾರಣಸಹಿತ ತಿಳಿಸಿಹೇಳಬೇಕು. ಅದರಿಂದ ಭಿನ್ನಾಭಿಪ್ರಾಯ ದೂರವಾಗುತ್ತದೆ. ಅನಂತರವೂ ಎದುರಿರುವ ಸಾಧಕನಿಗೆ ಮನವರಿಕೆಯಾಗದಿದ್ದರೆ ಮೂರನೇ ಸಾಧಕನ ಅಭಿಪ್ರಾಯ ಕೇಳಬೇಕು; ಆದರೆ ಯಾವುದೇ ಸ್ಥಿತಿಯಲ್ಲಿ ಅಂಶವನ್ನು ಅರ್ಧಕ್ಕೆ ಬಿಟ್ಟುಕೊಡಬಾರದು. ಇಲ್ಲವಾದರೆ ಆ ವಿಚಾರ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಮತ್ತು ನಮ್ಮ ಮನಸ್ಸು ಮುಂದಿನ ಸೇವೆಯಲ್ಲಿ ತೊಡಗುವುದಿಲ್ಲ.

೪ ಈ. ಪ್ರತಿಯೊಂದು ಕೃತಿಯನ್ನು ‘ಸತ್ಯಮ್, ಶಿವಮ್‌ ಮತ್ತು ಸುಂದರಮ್’ ಮಾಡಲು ಪ್ರಯತ್ನಿಸುವುದು : ನಮ್ಮಿಂದ ಸೇವೆಯಾಗದೇ ಕೆಲಸವಾಗುತ್ತಿದ್ದರೆ, ಅದನ್ನು ಸೇವೆಯಲ್ಲಿ ರೂಪಾಂತರಿಸಲು ಸತತ ಪ್ರಯತ್ನಿಸಬೇಕು. ಪ್ರತಿಯೊಂದು ಕೃತಿಯನ್ನು ‘ಸತ್ಯಮ್,  ಶಿವಮ್‌  ಮತ್ತು ಸುಂದರಮ್’ ಮಾಡಲು ಪ್ರಯತ್ನಿಸಬೇಕು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಪ್ರತಿಯೊಂದು ಕೃತಿ ‘ಸತ್ಯಮ್, ಶಿವಮ್‌ ಮತ್ತು ಸುಂದರಮ್’ ಆಗಿರುತ್ತದೆ. ನಾವು ಯಾವುದೇ ಕೃತಿಯನ್ನು ಆರಂಭಿಸಿದರೆ, ‘ಅವರು ಈ ಕೃತಿಯನ್ನು ಹೇಗೆ ಮಾಡಿರಬಹುದು ?’,ಎಂಬ ವಿಚಾರ ಮಾಡಿ ಆ ಕೃತಿ ಮಾಡಬೇಕು.

– ಸದ್ಗುರು ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೦.೨೦೨೩) (ಮುಂದುವರಿಯುವುದು)