World Hindu Congress : ಮಾತಾ ಅಮೃತಾನಂದಮಯಿ, RSS ನ ಪ.ಪೂ. ಡಾ. ಮೋಹನಜಿ ಭಾಗವತ, ಯೋಗಿ ಆದಿತ್ಯನಾಥ ಮುಂತಾದ ಗಣ್ಯರು ಬ್ಯಾಂಕಾಕ್ ನಲ್ಲಿ ನಡೆಯಲಿರುವ ‘ವಿಶ್ವ ಹಿಂದೂ ಕಾಂಗ್ರೆಸ್’ನಲ್ಲಿ ಮಾತನಾಡುವವರಿದ್ದಾರೆ

ಎಡಗಡೆಯಿಂದ ಮಾತಾ ಅಮೃತಾನಂದಮಯಿ, ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಮತ್ತು ಯೋಗಿ ಆದಿತ್ಯನಾಥ !

ಬ್ಯಾಂಕಾಕ್ (ಥೈಲ್ಯಾಂಡ್) – ಇಲ್ಲಿ ‘ವಿಶ್ವ ಹಿಂದೂ ಕಾಂಗ್ರೆಸ್ 2023’ ಅನ್ನು ನವೆಂಬರ್ 24 ರಿಂದ 26 ರ ಕಾಲಾವಧಿಯವರೆಗೆ ಆಯೋಜಿಸಲಾಗಿದೆ. ಈ ಮೂರು ದಿನಗಳ ಸೈದ್ಧಾಂತಿಕ ಸಮ್ಮೇಳನಕ್ಕೆ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಿಂದೂಗಳನ್ನು ಆಹ್ವಾನಿಸಲಾಗಿದೆ. 4 ವರ್ಷಕ್ಕೊಮ್ಮೆ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಮಹಾನ್ ಸಂತ ಮಾತಾ ಅಮೃತಾನಂದಮಯಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲಾದವರು ವಿಶ್ವಮಟ್ಟದಿಂದ ಬರುವ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಿಶ್ವ ಹಿಂದೂ ಕಾಂಗ್ರೆಸ್‌ನ ಸಂಘಟಕ ಸ್ವಾಮಿ ವಿಜ್ಞಾನಂದಜಿ ಅವರು ಪ್ರಸಾರ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ …

1. ಈ ಸಮ್ಮೇಳನದ ಧ್ಯೇಯ ವಾಕ್ಯ. ‘ಜಯಸ್ಯ ಆಯತನಮ್ ಧರ್ಮ:’ (ಧರ್ಮವೇ ವಿಜಯದ ನೆಲೆ) ಎಂಬುದಾಗಿದೆ. ಇದರ ಅಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮವು ಬೌದ್ಧಿಕ ವಿಚಾರಗಳ ಒಂದು ದೊಡ್ಡ ಸಮ್ಮೇಳನವಾಗಿದೆ. ಈ ಸಮ್ಮೇಳನದಲ್ಲಿ 60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

2. 2014ರಲ್ಲಿ ದೆಹಲಿ ಮತ್ತು 2018ರಲ್ಲಿ ಚಿಕಾಗೋದಲ್ಲಿ ನಡೆದ ಹಿಂದಿನ ಸಮ್ಮೇಳನಗಳ ಯಶಸ್ಸನ್ನು ಗಣನೆಗೆ ತೆಗೆದುಕೊಂಡು, ಈ ಬಾರಿಯ ‘ವಿಶ್ವ ಹಿಂದೂ ಕಾಂಗ್ರೆಸ್ 2023’ ಆರ್ಥಿಕತೆ, ಶಿಕ್ಷಣ, ಪ್ರಸಾರ ಮಾಧ್ಯಮ, ರಾಜಕೀಯ, ಯುವ ಶಕ್ತಿ, ಮಹಿಳೆಯರು ಮತ್ತು ಸಂಘಟನೆಗಳ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ಹಿಂದೂ ಸಮುದಾಯ ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಲು ಒಂದು ವಿಶಾಲವಾದ ವೇದಿಕೆಯನ್ನು ಒದಗಿಸುವ ಉದ್ದೇಶವನ್ನು ಈ ಸಮ್ಮೇಳನ ಹೊಂದಿದೆ.

3. ಈ ಸಮ್ಮೇಳನದಲ್ಲಿ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ವಿಶ್ವಸ್ಥ ಮತ್ತು ಖಜಾಂಚಿ ಸ್ವಾಮಿ ಗೋವಿಂದ ದೇವಗಿರಿಜಿ ಮಹಾರಾಜ, ‘ಝೋಹೋ ಕಾರ್ಪೊರೇಷನ’ ಸಂಸ್ಥೆಯ ಸಂಸ್ಥಾಪಕ ಶ್ರೀಧರ ವೆಂಬು, ವಿಜ್ಞಾನಿ ಮತ್ತು ಖ್ಯಾತ ಬರಹಗಾರ ಆನಂದ ರಂಗನಾಥನ್, ಇತಿಹಾಸಕಾರ ಮತ್ತು ಸಾವರ್ಕರ ವಿದ್ವಾಂಸ ವಿಕ್ರಮ ಸಂಪತ, ‘ಸ್ಟ್ರಿಂಗ್ ರಿವೀಲ್ಸ್’ ಸಂಘಟನೆಯ ವಿನೋದ, `ಪ್ರಾಚ್ಯಮ್ ಸ್ಟುಡಿಯೋಸ್’ ನ ಪ್ರವೀಣ ಚತುರ್ವೇದಿ ಮುಂತಾದ ಹೆಸರಾಂತ ವಕ್ತಾರರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

4. ಈ ಸಮ್ಮೇಳನದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ನಿರ್ಮಾಪಕ ವಿಪುಲ ಶಾ, ಭಾರತದ ವೈದ್ಯಕೀಯ ಉಪಕರಣ ತಯಾರಿಕಾ ಸಂಸ್ಥೆ ‘ಸ್ಕ್ಯಾನ್‌ರೇ ಟೆಕ್ನಾಲಜೀಸ್’ ಸಂಸ್ಥಾಪಕ ವಿಶ್ವಪ್ರಸಾದ ಆಳ್ವ, ‘ಸ್ಟ್ಯಾನ್‌ಫೋರ್ಡ್ ವಿದ್ಯಾಪೀಠ’ದ ಪ್ರೊ. ಅನುರಾಗ ಮೈರಾಲ, ನೇಪಾಳದ ಬಿಲಿಯನೇರ(ಕೋಟ್ಯಾಧೀಶ?) ಉಪೇಂದ್ರ ಮಹತೋ, ಪಾಕಿಸ್ತಾನಿ ಮಾನವ ಹಕ್ಕುಗಳ ಕಾರ್ಯಕರ್ತ ಫಕೀರ್ ಶಿವ ಕಚಿ, ಪತ್ರಕರ್ತ ಆನಂದ ನರಸಿಂಹನ್, ದಕ್ಷಿಣ ಆಫ್ರಿಕಾದ ಶಿಕ್ಷಣ ತಜ್ಞ ಪ್ರೊ. ಆನಂದ್ ಸಿಂಗ್ ಸೇರಿದಂತೆ 200ಕ್ಕೂ ಹೆಚ್ಚು ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

5. ‘ವಿಶ್ವ ಹಿಂದೂ ಕಾಂಗ್ರೆಸ್’ ಜಾಗತಿಕ ಹಿಂದೂ ಸಮುದಾಯಕ್ಕೆ ಕಲ್ಪನೆಗಳು, ಸೃಜನಶೀಲತೆ ಮತ್ತು ಪ್ರತಿಭೆಗಳ ವಿನಿಮಯವನ್ನು ಉತ್ತೇಜಿಸಲು ಸಾಮೂಹಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಸಮೃದ್ಧ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಾಣ ಮಾಡುವ ಧ್ಯೇಯವನ್ನು ಹೊಂದಿರುವ ಈ ಜಾಗತಿಕ ಕಾರ್ಯಕ್ರಮದಿಂದ ಉದ್ಯಮಿಗಳು, ಹೂಡಿಕೆದಾರರು ಮತ್ತು ಅರ್ಥಶಾಸ್ತ್ರಜ್ಞರಿಗೆ ಪ್ರೋತ್ಸಾಹ ನೀಡಲಾಗುತ್ತದೆ.

6. ಮಾನವಾಧಿಕಾರದ ಉಲ್ಲಂಘನೆ, ತಾರತಮ್ಯ ಮತ್ತು ಸಾಂಸ್ಕೃತಿಕ ಆಕ್ರಮಣಗಳಂತಹ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಮ್ಮೇಳನವು ಚರ್ಚೆಗೆ ಅವಕಾಶಗಳನ್ನು ಒದಗಿಸುತ್ತದೆ ಮತ್ತು, ಸಹಯೋಗದ ಕಾರ್ಯತಂತ್ರಗಳಿಗೆ ಉತ್ತೇಜನ ನೀಡುತ್ತದೆ.

7. ಶೈಕ್ಷಣಿಕ ಕ್ಷೇತ್ರದಲ್ಲಿ, ವಿಶ್ವ ಹಿಂದೂ ಕಾಂಗ್ರೆಸ್ ಸಾಮಾಜಿಕ ಸಿದ್ಧಾಂತಗಳನ್ನು ಪ್ರೇರಣೆ ನೀಡುವ ಮತ್ತು ಸಾಮಾಜಿಕ ಸಿದ್ಧಾಂತಗಳಿಗೆ ಸವಾಲು ಒಡ್ಡುವ ವಿಷಯಗಳ ಮೇಲೆ ಚರ್ಚೆಯನ್ನು ನಡೆಸಲು ಶ್ರಮಿಸುತ್ತದೆ. ವಿಶೇಷವಾಗಿ ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಚರ್ಚೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ವಿಚಾರಸರಣಿ ಮತ್ತು ಕಥಾನಕಗಳಿಗೆ ಆಕಾರ ನೀಡಲು ಮಾಧ್ಯಮದ ಪ್ರಭಾವಶಾಲಿ ನಿಲುವನ್ನು ಗುರುತಿಸಿ, ವಿಶ್ವ ಹಿಂದೂ ಕಾಂಗ್ರೆಸ್ ಸುದ್ದಿ ಮತ್ತು ಮನರಂಜನಾ ಮಾಧ್ಯಮಗಳಲ್ಲಿ ನಿಖರವಾದ ವರದಿ ಮತ್ತು ಚಿತ್ರಣವನ್ನು ನೀಡಲು ಪ್ರೋತ್ಸಾಹಿಸುತ್ತದೆ.

8. ಯಶಸ್ಸನ್ನು ಆಚರಿಸುವ ಮೂಲಕ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಕಾರ್ಯತಂತ್ರ ರೂಪಿಸುವ ಮೂಲಕ, ವಿಶ್ವ ಹಿಂದೂ ಕಾಂಗ್ರೆಸ್ ಹಿಂದೂ ಧರ್ಮದ ಮೂಲಭೂತ ಮೌಲ್ಯಗಳಲ್ಲಿ ಬೇರೂರಿರುವ ಸಮಾನ ದೃಷ್ಟಿಯನ್ನು ಸಶಕ್ತಗೊಳಿಸುತ್ತದೆ. ಬ್ಯಾಂಕಾಕ್‌ನಲ್ಲಿರುವ ‘ವಿಶ್ವ ಹಿಂದೂ ಕಾಂಗ್ರೆಸ್’ ಸಮೃದ್ಧ ಮತ್ತು ಶಾಂತಿಯುತ ಜಗತ್ತಿಗೆ ವಚನಬದ್ಧತೆಯ ಸಂಕೇತವಾಗಿದೆ.

9. ವಿಶ್ವ ಹಿಂದೂ ಕಾಂಗ್ರೆಸ್ 2023 ರ ಸಂಘಟನಾ ಸಮಿತಿಯ ಅಧ್ಯಕ್ಷ ಸುಶೀಲ್ ಸರಾಫ್ ಮಾತನಾಡಿ, ‘ವಿಶ್ವ ಹಿಂದೂ ಕಾಂಗ್ರೆಸ್’ನಲ್ಲಿ ಭಾಗವಹಿಸುವವರಿಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಸೌಲಭ್ಯವನ್ನು ಒದಗಿಸಲಾಗುವುದು. ಇದರಿಂದ, ‘ವಿಶ್ವ ಹಿಂದೂ ಕಾಂಗ್ರೆಸ್ 2023’ ಸಮ್ಮೇಳನವು ಭಾಗವಹಿಸುವವರಿಗೆ ಅವಿಸ್ಮರಣೀಯವಾಗಿರುತ್ತದೆ.