ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಗುಂಡಿನ ದಾಳಿಯ ತನಿಖೆ ನಡೆಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ

ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ

ಬೆಂಗಳೂರು : ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ನಿನ್ನೆ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆಸಲಾಗಿದೆ. ನ್ಯಾಯವಾದಿ ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ತಮ್ಮ ಕಾರ್ ನಲ್ಲಿ ಚೆಟ್ಟಳ್ಳಿಯಿಂದ ಮಡಿಕೇರಿಗೆ ಹೊರಡುತ್ತಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆದಿದೆ. ಈ ಹೇಡಿತನದ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ದಾಳಿಯ ಹಿಂದೆ ಪಿ.ಎಫ್.ಐ ಅಥವಾ ನಕ್ಸಲ್ ವಾದಿಗಳ ಕೈವಾಡವಿದೆಯೇ ಎಂದು ಪತ್ತೆ ಮಾಡಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ  ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ನೀಡಲಾಯಿತು. ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಮೃತೇಶ್ ಎನ್.ಪಿ, ನ್ಯಾಯವಾದಿ ಜಿ.ಎಮ್ ನಟರಾಜ್, ನ್ಯಾಯವಾದಿ ಪ್ರಸನ್ನ ಡಿಪಿ, ನ್ಯಾಯವಾದಿ ದಿವ್ಯ ಬಾಳೇಹಿತ್ತಲ, ನ್ಯಾಯವಾದಿ ನವೀನ್ ಬಿ.ಆರ್, ನ್ಯಾಯವಾದಿ ಶಿವು ಮತ್ತಿತರರು ಉಪಸ್ಥಿತರಿದ್ದರು.

(ಎಡದಿಂದ) ನ್ಯಾಯವಾದಿ ದಿವ್ಯ ಬಾಳೇಹಿತ್ತಲ, ನ್ಯಾಯವಾದಿ ನವೀನ್ ಬಿ.ಆರ್, ನ್ಯಾಯವಾದಿ ಪ್ರಸನ್ನ, ನ್ಯಾಯವಾದಿ ರುದ್ರೇಶ್, ಮೋಹನ್ ಗೌಡ, ನ್ಯಾಯವಾದಿ ನಟರಾಜ್

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಮಾತನಾಡಿ, ಈ ದಾಳಿಯ ಹಿಂದೆ ಯಾರ ಕೈವಾಡವಿದೆ, ಈ ದಾಳಿಯಿಂದಾಗಿ ಯಾರಿಗೆ ಲಾಭವಾಗಲಿದೆ, ಈ ದೃಷ್ಟಿಯಿಂದ ಕರ್ನಾಟಕ ಪೊಲೀಸರು ತನಿಖೆ ಮಾಡಿ ಈ ಪ್ರಕರಣದ ದಾಳಿಕೋರರು ಹಾಗೂ ಮಾಸ್ಟರ್ ಮೈಂಡ್ ನ ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ ಹಿಂದೂ ಆರೋಪಿಗಳ ಮುಖ್ಯ ನ್ಯಾಯವಾದಿಗಳ ಮೇಲೆ ಆಕ್ರಮಣವಾಗುವುದು ಅತ್ಯಂತ ಗಂಭೀರ ಮತ್ತು ಅನುಮಾನಾಸ್ಪದವಾಗಿದೆ. ಗೌರಿ ಲಂಕೇಶ್ ಅವರು ನಕ್ಸಲೀಯರ ಸಂಪರ್ಕದಲ್ಲಿದ್ದರು ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಆಕೆಯ ಹತ್ಯೆಯ ನಂತರ ನಕ್ಸಲೀಯರೂ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ವಕೀಲರ ಮೇಲೆ ಒತ್ತಡ ಹೇರಲು ಈ ದಾಳಿ ನಡೆದಿದೆಯೇ ಎಂಬ ಶಂಕೆ ಮೂಡುತ್ತದೆ. ದಾಳಿಯಲ್ಲಿ ನ್ಯಾಯವಾದಿ ಕೃಷ್ಣಮೂರ್ತಿ ಇವರು ಬದುಕುಳಿದಿದ್ದರೂ ಅವರ ಮೇಲೆ ಮತ್ತೊಮ್ಮೆ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಅವರಿಗೆ ಸಶಸ್ತ್ರ ಪೊಲೀಸ್ ರಕ್ಷಣೆಯ ಅಗತ್ಯವಿದೆ. ಈ ಹೇಡಿತನದ ದಾಳಿಯ ಹಿಂದೆ ಪಿಎಫ್‍ಐದಂತಹ ಕಟ್ಟರ್ ವಾದಿ ಜಿಹಾದಿ ಸಂಘಟನೆ ಅಥವಾ ಗೌರಿ ಲಂಕೇಶ್ ಅವರನ್ನು ಬೆಂಬಲಿಸುವ ಅರ್ಬನ್ ನಕ್ಸಲಿಸ್ಟ್ ಗಳು ಇದ್ದಾರೆಯೇ ಎಂಬುದನ್ನು ತನಿಖೆ ಮಾಡುವುದು ಅನಿವಾರ್ಯವಾಗಿದೆ ಎಂದು ಶ್ರೀ. ಮೋಹನ ಗೌಡ ಹೇಳಿದರು.