ಯಾರಿಗಾದರೂ ನಾಮಜಪಾದಿ ಉಪಾಯಗಳನ್ನು ಹುಡುಕಿ ಕೊಡುವಾಗ ಆ ವ್ಯಕ್ತಿಯ ತೊಂದರೆ, ಅವನ ಆಧ್ಯಾತ್ಮಿಕ ಮಟ್ಟ, ಅವನ ಮೇಲೆ ಕೆಟ್ಟ ಶಕ್ತಿಗಳು  ಮಾಡುತ್ತಿರುವ ಆಕ್ರಮಣ ಇತ್ಯಾದಿ ಘಟಕಗಳ ಬಗ್ಗೆ ವಿಚಾರ ಮಾಡಬೇಕು !

(ಸದ್ಗುರು) ಡಾ. ಮುಕುಲ ಗಾಡಗೀಳ

ಸನಾತನದ ಕೆಲವು ಸಂತರು, ಹಾಗೆಯೇ ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಕೆಲವು ಸಾಧಕರು ಇತರ ಸಾಧಕರು ಮತ್ತು ಸಂತರಿಗಾಗುವ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ತೊಂದರೆಗಳಿಗಾಗಿ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಕಂಡುಹಿಡಿದು ಹೇಳುತ್ತಾರೆ. ಆ ಸಮಯದಲ್ಲಿ ಅವರು ತೊಂದರೆಗೊಳಗಾದ ಸಾಧಕರು ಅಥವಾ ಸಂತರ ಆಧ್ಯಾತ್ಮಿಕ ಮಟ್ಟ, ಅವರು ಮಾಡುತ್ತಿರುವ ಸಮಷ್ಟಿ ಕಾರ್ಯ, ಅವರಿಗಾಗುವ ಆಧ್ಯಾತ್ಮಿಕ ತೊಂದರೆಗಳು, ಅವರ ಮೇಲೆ ಕೆಟ್ಟ ಶಕ್ತಿಗಳು ಮಾಡುತ್ತಿರುವ ಆಕ್ರಮಣ ಇತ್ಯಾದಿ ಘಟಕಗಳ ವಿಚಾರವನ್ನು ಮಾಡಿ ಅವರಿಗೆ ನಾಮಜಪ, ಬೆರಳುಗಳ ಮುದ್ರೆ ಮತ್ತು ಆ ಮುದ್ರೆಯಿಂದ ಮಾಡಬೇಕಾದ ನ್ಯಾಸವನ್ನು ಕಂಡು ಹಿಡಿದು ಕೊಡಬೇಕು.

೧. ಆಧ್ಯಾತ್ಮಿಕ ಮಟ್ಟ

ತೊಂದರೆಗೊಳಗಾದ ಸಾಧಕ ಅಥವಾ ಸಂತರ ಆಧ್ಯಾತ್ಮಿಕ ಮಟ್ಟ ಎಷ್ಟು ಹೆಚ್ಚಿರುತ್ತದೆಯೋ, ಅಷ್ಟು ಅವರಿಗೆ ಸದ್ಯದ ಆಪತ್ಕಾಲಕ್ಕನುಸಾರ ಆಗುವ ತೊಂದರೆಗಳು ಹೆಚ್ಚಿರುತ್ತವೆ. ಆದುದರಿಂದ ಅವರ ತೊಂದರೆಗಳು ದೂರವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಅವರಿಗೆ ತೊಂದರೆಗಳು ದೂರವಾಗುವವರೆಗೆ ಪ್ರತಿದಿನ ನಾಮಜಪಾದಿ ಉಪಾಯಗಳನ್ನು ಹೇಳುವುದು ಆವಶ್ಯಕವಾಗಿರುತ್ತದೆ. ಇಂತಹ ಸಮಯದಲ್ಲಿ ಆ ಸಾಧಕನ ಅಥವಾ ಸಂತರ ತೊಂದರೆಗಳ ಬಗ್ಗೆ ಪ್ರತಿದಿನ ವಿಚಾರಿಸಿ ವರದಿಯನ್ನು ಪಡೆಯುವುದು ಆವಶ್ಯಕವಾಗಿರುತ್ತದೆ.

೨. ಮಾಡುತ್ತಿರುವ ಸಮಷ್ಟಿ ಕಾರ್ಯ

ತೊಂದರೆಯಾಗುತ್ತಿರುವ ಸಾಧಕರು ಅಥವಾ ಸಂತರು ಈಶ್ವರೀ ರಾಜ್ಯದ ಸ್ಥಾಪನೆಯ ಸಮಷ್ಟಿ ಕಾರ್ಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುತ್ತಿದ್ದರೆ, ಅವರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳೂ ಹೆಚ್ಚು ತೀವ್ರವಾಗಿರುತ್ತವೆ. ಇಂತಹ ಸಮಯದಲ್ಲಿ ಅವರಿಗೆ ಕೇವಲ ನಾಮಜಪದ ಉಪಾಯವನ್ನು ಹೇಳದೇ ‘ಅವರ ಮೇಲಾಗುವ ಕೆಟ್ಟ ಶಕ್ತಿಗಳ ಆಗುವ ಆಕ್ರಮಣಗಳು ಬೇಗನೆ ದೂರವಾಗಲು ಅವರ ದೃಷ್ಟಿಯನ್ನು ತೆಗೆಯಬೇಕೇ ? ತೆಗೆಯುವುದಿದ್ದರೆ ಎಷ್ಟು ದಿನ ತೆಗೆಯಬೇಕು ?’, ಇದರ ಬಗ್ಗೆಯೂ ವಿಚಾರ ಮಾಡಬೇಕು. ದೃಷ್ಟಿಯನ್ನು ತೆಗೆದ ನಂತರ ಅವರಿಗೆ ಮತ್ತೊಮ್ಮೆ ನಾಮಜಪಾದಿ ಉಪಾಯ ಕಂಡು ಹಿಡಿದು ಹೇಳಬೇಕು.

೩. ಅವರಿಗಿರುವ ಆಧ್ಯಾತ್ಮಿಕ ತೊಂದರೆ ಮತ್ತು ಅದರ ತೀವ್ರತೆ

೩ ಅ. ಕುಲದೇವತೆಯ ಕೋಪ : ಯಾವುದಾದರೊಂದು ಕುಟುಂಬದ ಮೇಲೆ ಅವರ ಕುಲದೇವತೆಯು ಕೋಪಗೊಂಡಿದ್ದರೆ, ಆ ಕುಟುಂಬದಲ್ಲಿನ ವ್ಯಕ್ತಿಗಳಿಗೆ ಸತತವಾಗಿ ಶಾರೀರಿಕ ತೊಂದರೆಗಳಾಗುವುದು, ಕುಟುಂಬದಲ್ಲಿ ವಾದವಿವಾದಗಳಾಗುವುದು, ಆರ್ಥಿಕ ಅಡಚಣೆಗಳು ಬರುವುದು ಇಂತಹ ತೊಂದರೆಗಳಾಗುತ್ತವೆ. ಇಂತಹವರಿಗೆ ಕುಲದೇವತೆಯ ದರ್ಶನವನ್ನು ಪಡೆದು ಅವರಿಗೆ ಮನೆಯಲ್ಲಿನ ಎಲ್ಲರ ಸಾಧನೆಯಲ್ಲಿನ ಅಡಚಣೆಗಳು ದೂರವಾಗಲು ಪ್ರಾರ್ಥನೆ ಮಾಡುವುದು, ಕುಲದೇವತೆಯ ದುರ್ಲಕ್ಷವಾಗುತ್ತಿದ್ದಲ್ಲಿ ಅವಳಲ್ಲಿ ಕ್ಷಮೆಯಾಚನೆ ಮಾಡುವುದು, ದೇವರಕೋಣೆಯಲ್ಲಿ ಕಲಶದ ಮೇಲೆ ತೆಂಗಿನಕಾಯಿಯನ್ನು ನೇರವಾಗಿಟ್ಟು ಕುಲದೇವತೆಗೆ ಪ್ರತಿದಿನ ಪ್ರಾರ್ಥನೆ ಮಾಡುವುದು, ಮುಂತಾದ ಉಪಾಯಗಳನ್ನು ಹೇಳಬೇಕು.

೩. ಆ. ಪೂರ್ವಜರ ತೊಂದರೆ : ಕುಟುಂಬದವರಿಗೆ ಪೂರ್ವಜರ ತೊಂದರೆಗಳಿದ್ದರೆ, ಇದಕ್ಕಿಂತಲೂ ಹೆಚ್ಚು ತೀವ್ರ ತೊಂದರೆಗಳಾಗುತ್ತವೆ, ಉದಾ. ಮನೆಯಲ್ಲಿನ ಯಾರಿಗಾದರೂ ಸರಾಯಿ ಕುಡಿಯುವ ವ್ಯಸನ ಇರುವುದು, ಚರ್ಮರೋಗವಿರುವುದು, ಮನೆಯಲ್ಲಿ ಹಣ ಉಳಿಯದಿರುವುದು, ಮನೆಯಲ್ಲಿ ಯಾವಾಗಲೂ ಅಶಾಂತಿ ಇರುವುದು ಇತ್ಯಾದಿ. ಇಂತಹವರಿಗೆ ಮನೆಯಲ್ಲಿ ದಿನವಿಡಿ ದತ್ತನ ನಾಮಜಪದ ಆಡಿಯೋವನ್ನು ಮಂದ ಧ್ವನಿಯಲ್ಲಿ ಹಾಕಿಡುವುದು, ಹುಡುಕಿ ಕೊಟ್ಟಿರುವ ನಾಜಪದೊಂದಿಗೆ ದತ್ತನ ನಾಮಜಪವನ್ನೂ ಸ್ವಲ್ಪ ಸಮಯ ನಿಯಮಿತವಾಗಿ ಮಾಡುವುದು, ಶ್ರಾದ್ಧ ವಿಧಿಯನ್ನು ಮಾಡುವುದು, ಇಂತಹ ಉಪಾಯಗಳನ್ನು ಹೇಳಬೇಕು.

೩ ಇ. ಕೆಟ್ಟ ಶಕ್ತಿಗಳ ತೊಂದರೆ : ಯಾವುದೇ ಕಾರಣವಿಲ್ಲದೇ ಕೋಪಗೊಳ್ಳಬೇಕೆಂದೆನಿಸುವುದು ಮತ್ತು ಕೋಪಿಸಿಕೊಳ್ಳುವುದು (ಮನೆಯಲ್ಲಿನ ವಸ್ತುಗಳನ್ನು ಎಸೆಯುವುದು, ಮುರಿಯುವುದು, ಒಡೆಯುವುದು ಇತ್ಯಾದಿ), ಇತರರಿಗೆ ಕಾರಣವಿಲ್ಲದೇ ಬೈಯ್ಯುವುದು, ಕೂಗಬೇಕೆಂದೆನಿಸುವುದು ಅಥವಾ ಕೂಗಾಡುವುದು, ಕೆಟ್ಟ ಶಕ್ತಿಗಳ ಪ್ರಕಟೀಕರಣವಾಗುವುದು, ಇಂತಹ ತೊಂದರೆಗಳು ಕೆಟ್ಟ ಶಕ್ತಿಗಳ ತೊಂದರೆಗಳಿಂದ ಆಗುತ್ತವೆ. ಇಂತಹವರಿಗೆ ನಾಮಜಪವನ್ನು ಕಂಡು ಹಿಡಿದು ಕೊಟ್ಟು ಅದನ್ನು ನಿಶ್ಚಿತ ಕಾಲಾವಧಿಯವರೆಗೆ ಮಾಡಲು ಹೇಳಬೇಕು ಮತ್ತು ಅನಂತರ ಪುನಃ ನಾಮಜಪವನ್ನು ಕಂಡು ಹಿಡಿದು ಕೊಡಬೇಕು. ಕೆಟ್ಟ ಶಕ್ತಿಗಳ ತೊಂದರೆಯು ಮಂದ, ಮಧ್ಯಮ ಅಥವಾ ತೀವ್ರ ಸ್ವರೂಪದ್ದಾಗಿದೆಯೇ ? ಎಂಬುದನ್ನು ಕಂಡು ಹಿಡಿದು ಅದಕ್ಕನುಸಾರ ನೀಡಿದ ನಾಮಜಪವನ್ನು ಮಾಡುವ ಕಾಲಾವಧಿಯನ್ನು ನಿಶ್ಚಯಿಸಬಹುದು. ತೊಂದರೆಯು ತೀವ್ರ ಸ್ವರೂಪದ್ದಾಗಿದ್ದರೆ ಅದು ದೂರವಾಗಲು ಹೆಚ್ಚು ಸಮಯ ಬೇಕಾಗುವುದರಿಂದ ಒಂದೇ ನಾಮಜಪವನ್ನು ಹೆಚ್ಚು ಕಾಲಾವಧಿಯ ವರೆಗೆ ಮಾಡಲು ಹೇಳಬಹುದು.

೪. ಕೆಟ್ಟ ಶಕ್ತಿಗಳು ಮಾಡುತ್ತಿರುವ ಆಕ್ರಮಣಗಳು

ಒಳ್ಳೆಯ ಆಧ್ಯಾತ್ಮಿಕ ಮಟ್ಟವಿರುವ ಮತ್ತು ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುವ ಸಾಧಕರ ಅಥವಾ ಸಂತರ ಮೇಲೆ ಆಕ್ರಮಣ ಮಾಡಲು ಕೆಟ್ಟ ಶಕ್ತಿಗಳಿಗೆ ಹೆಚ್ಚು ಶಕ್ತಿ ಬೇಕಾಗುತ್ತದೆ. ಇಂತಹ ಕೆಟ್ಟ ಶಕ್ತಿಗಳು ಹೆಚ್ಚಾಗಿ ೫ ನೇ ಅಥವಾ ೬ ನೇ ಪಾತಾಳದ್ದು ಆಗಿರುತ್ತವೆ. ಆದುದರಿಂದ ಅವುಗಳ ಆಕ್ರಮಣಗಳು ಹೆಚ್ಚು ನಿರ್ಗುಣ ಸ್ವರೂಪದ್ದಾಗಿರುವುದರಿಂದ ಅವು ನಮಗೆ ಸಹಜವಾಗಿ ತಿಳಿಯುವುದಿಲ್ಲ. ಇದರ ಕೆಲವು ಉದಾಹರಣೆಗಳೆಂದರೆ ತೊಂದರೆಯ ಲಕ್ಷಣಗಳು ಒಂದು ಚಕ್ರದ ಮೇಲೆ ಅರಿವಾಗುತ್ತವೆ; ಆದರೆ ಕೆಟ್ಟ ಶಕ್ತಿಗಳ ಸ್ಥಾನವು ಬೇರೆಯೇ ಚಕ್ರದ ಮೇಲೆ ಇರುತ್ತದೆ ಅಥವಾ ಕೆಟ್ಟ ಶಕ್ತಿಗಳು ಚಕ್ರದ ಮೇಲೆ ತಂದ ಆವರಣವನ್ನು ಎಷ್ಟು ದೂರ ಮಾಡಿದರೂ (ತೆಗೆದರೂ) ಅದು ಪುನಃ ಪುನಃ ಬರುತ್ತದೆ (ಆಗ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯ ಪ್ರವಾಹವನ್ನು ಮೇಲಿನಿಂದ ಬಿಟ್ಟಿರುತ್ತವೆ) ಅಥವಾ ಕೆಟ್ಟ ಶಕ್ತಿಗಳು ನಮ್ಮೆದುರು ಕಪ್ಪು ಶಕ್ತಿಯ ಪರದೆಯನ್ನು ನಿರ್ಮಿಸಿದುದರಿಂದ ನಮಗೆ ಶರೀರದ ಮೇಲಿನ ಆವರಣದ ಅರಿವಾಗುವುದಿಲ್ಲ; ಆದರೆ ತೊಂದರೆಯಂತೂ ಆಗುತ್ತಿರುತ್ತದೆ ಇತ್ಯಾದಿ. ಆದುದರಿಂದ ಕೆಟ್ಟ ಶಕ್ತಿಗಳ ಇಂತಹ ಆಕ್ರಮಣಗಳನ್ನು ನಿಖರವಾಗಿ ಗುರುತಿಸುವುದು ಆವಶ್ಯಕವಾಗಿರುತ್ತದೆ. ಕೆಟ್ಟ ಶಕ್ತಿಗಳು ಚಕ್ರಗಳ ಮೇಲಿನ ಆಕ್ರಮಣದ ಸ್ಥಾನಗಳನ್ನೂ ಬದಲಾಯಿಸುತ್ತವೆ. ಆದುದರಿಂದ ನಾಮಜಪ, ಮುದ್ರೆ ಮತ್ತು ನ್ಯಾಸಸ್ಥಾನವನ್ನು ಪುನಃ ಪುನಃ ಕಂಡು ಹಿಡಿಯಬೇಕಾಗುತ್ತದೆ.

ಈ ರೀತಿ ಯಾರಿಗಾದರೂ ನಾಮಜಪಾದಿ ಉಪಾಯಗಳನ್ನು ಹೇಳುವಾಗ ನಮ್ಮ ಸೂಕ್ಷ್ಮ ಕ್ಷಮತೆಯ ಪರೀಕ್ಷೆಯೂ ಆಗುತ್ತದೆ, ಹಾಗೆಯೇ ಉಪಾಯವನ್ನು ಕಂಡು ಹಿಡಿಯುವಾಗ ಪ್ರತಿ ಸಲ ಹೊಸ ಹೊಸ ವಿಷಯಗಳು ಕಲಿಯಲು ಸಿಗುತ್ತವೆ. ಕೆಟ್ಟ ಶಕ್ತಿಗಳಿಂದಲೂ ನಮಗೆ ಬಹಳಷ್ಟು ಕಲಿಯಲು ಸಿಗುತ್ತದೆ. ಅವು ಮಿತವ್ಯಯಿಯಾಗಿರುತ್ತವೆ, ಅವು ತಮ್ಮ ಶಕ್ತಿಯನ್ನು ಅನಾವಶ್ಯಕ ಖರ್ಚು ಮಾಡುವುದಿಲ್ಲ. ಯಾವ ಸಾಧಕರ ಅಥವಾ ಸಂತರ ಯಾವ ಚಕ್ರಕ್ಕೆ ಸಂಬಂಧಿಸಿದ ಸೇವೆ ಇರುತ್ತದೆಯೋ, ಆ ಚಕ್ರದ ಮೇಲೆಯೇ ಅವು ಆಕ್ರಮಣ ಮಾಡುತ್ತವೆ, ಉದಾ. ಸಾಧಕ-ನ್ಯಾಯವಾದಿಗೆ (ವಕೀಲನಿಗೆ) ಹೆಚ್ಚು ಮಾತುಕತೆ ಸೇವೆ ಇರುವುದರಿಂದ ಕೆಟ್ಟ ಶಕ್ತಿಗಳು ಅವನ ವಿಶುದ್ಧ ಚಕ್ರದ ಮೇಲೆ ಆಕ್ರಮಣ ಮಾಡುತ್ತವೆ. ಜ್ಞಾನವನ್ನು ಪಡೆಯುವ ಸಾಧಕರ ಆಜ್ಞಾಚಕ್ರದ ಮೇಲೆಯೇ ಕೆಟ್ಟ ಶಕ್ತಿಗಳು ಆಕ್ರಮಣ ಮಾಡುತ್ತವೆ. ಉಪಾಯಗಳನ್ನು ಕಂಡು ಹಿಡಿಯುವಾಗ ಈಶ್ವರನು ಸಹ ಹೊಸ ಹೊಸ ಪದ್ಧತಿಗಳಿಂದ ಉಪಾಯವನ್ನು ಮಾಡಲು ಕಲಿಸುತ್ತಾನೆ. ಬೀಜಮಂತ್ರಗಳ ಉಪಾಯ, ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ಅದರ ಮೂಲಕ ಉಪಾಯ, ಚೈತನ್ಯದ ಪ್ರವಾಹವನ್ನು ಎಲ್ಲ ಚಕ್ರಗಳ ಮೇಲೆ ಬಿಡುವುದು, ಸೂಕ್ಷ್ಮದಿಂದ ದೃಷ್ಟಿಯನ್ನು ತೆಗೆಯುವುದು ಇಂತಹ ಉಪಾಯಗಳಿಂದ ಕೂಡಲೇ ಪರಿಣಾಮವಾಗುತ್ತದೆ. ಆದುದರಿಂದ ‘ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ’  ಮತ್ತು ‘ಜಿಜ್ಞಾಸುತನ ಇದ್ದಲ್ಲಿ ಈಶ್ವರನು ಬಹಳಷ್ಟು ಕಲಿಸುತ್ತಾನೆ’ ಎಂಬ  ಅಂಶಗಳು ಮನಸ್ಸಿನ ಮೇಲೆ ಮೂಡುತ್ತವೆ. ಕೊನೆಗೆ ಇವೆಲ್ಲವನ್ನು ಗುರುಕೃಪೆಯಿಂದಲೇ ಕಲಿಯಬಹುದು. ಗುರುಗಳಿಗೆ ನಮ್ಮ ಕಲಿಯುವ ವೃತ್ತಿ ಇಷ್ಟವಾಗುತ್ತದೆ ಮತ್ತು ಅವರು ನಮ್ಮ ಮೇಲೆ ಬಹಳಷ್ಟು ಕೃಪೆ ಮಾಡುತ್ತಾರೆ !’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೧.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.