ಅಪ್ರಾಪ್ತ ಹುಡುಗನು ಸನ್ಯಾಸವನ್ನು ಸ್ವೀಕರಿಸುವುದು ಕಾನೂನುಬದ್ಧವಾಗಿದೆ ! – ಕರ್ನಾಟಕ ಉಚ್ಚ ನ್ಯಾಯಾಲಯ

ಬಾಲಕರು ಸಂನ್ಯಾಸ ತೆಗೆದುಕೊಳ್ಳಲು ಸಂವಿಧಾನದಲ್ಲಿ ಯಾವುದೇ ನಿರ್ಬಂಧವಿಲ್ಲ ! – ನ್ಯಾಯಾಲಯದ ಸ್ಪಷ್ಟನೆ

ಉಡುಪಿ ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ ನೇಮಕ ಎತ್ತಿ ಹಿಡಿದ ಕರ್ನಾಟಕ ಉಚ್ಚ ನ್ಯಾಯಾಲಯ!

ಅನಿರುದ್ಧ ಸರಳತ್ತಾಯ ಶಿರೂರು ಮಠದ ಮಠಾಧಿಪತಿ

ಬೆಂಗಳೂರು – ಅಪ್ರಾಪ್ತ ಹುಡುಗನು ಬಾಲ ಸಂನ್ಯಾಸಿಯಾಗಬಹುದು. ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕದ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಮುಖ್ಯ ನ್ಯಾಯಾಧೀಶರಾದ ಸತೀಶ ಚಂದ್ರ ಶರ್ಮ ಮತ್ತು ನ್ಯಾಯಾಧೀಶ ಸಚಿನ ಶಂಕರ ಮಕದುಮ ಇವರ ವಿಭಾಗಿಯ ಪೀಠವು ಈ ಆದೇಶವನ್ನು ನೀಡಿದೆ. ೧೬ ವರ್ಷದ ಅನಿರುದ್ಧ ಸರಳತ್ತಾಯ (ಈಗಿನ ವೇದವರ್ಧನ ತೀರ್ಥ) ಇವರನ್ನು ಉಡುಪಿಯಲ್ಲಿನ ಶಿರೂರು ಮಠದ ಮಠಾಧಿಪತಿಯನ್ನಾಗಿ ನೇಮಕದ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿತ್ತು. ನ್ಯಾಯಾಲಯವು ಮೇಲಿನ ತೀರ್ಪನ್ನು ನೀಡಿ ಅರ್ಜಿಯನ್ನು ವಜಾಗೊಳಿಸಿದೆ.

೧. ನ್ಯಾಯಾಲಯವು ’ಇತರ ಧರ್ಮಗಳಲ್ಲಿ ಅಂದರೆ ಉದಾಹರಣೆಗೆ ಬೌದ್ಧರಲ್ಲಿ ಚಿಕ್ಕ ಮಕ್ಕಳು ಭಿಕ್ಷುಗಳಾಗುತ್ತಾರೆ, ಅದೇ ರೀತಿ ಸನ್ಯಾಸಿಯೂ ಆಗಬಹುದು. ಇಂತಹ ವಯಸ್ಸಿನ ವ್ಯಕ್ತಿಯೇ ಸನ್ಯಾಸವನ್ನು ಸ್ವೀಕರಿಸಬೇಕು ಅಥವಾ ದೀಕ್ಷೆಯನ್ನು ಪಡೆಯಬೇಕು ಎಂಬ ಯಾವುದೇ ನಿಯಮವಿಲ್ಲ. ೧೮ ವರ್ಷಕ್ಕಿಂತ ಕೆಳಗಿನ ವ್ಯಕ್ತಿಗೆ ಸನ್ಯಾಸ ನೀಡಲಾಗುತ್ತಿದ್ದಲ್ಲಿ ಅದನ್ನು ತಡೆಯಬೇಕು ಎಂಬ ಯಾವುದೇ ಕಾನೂನು ಇಲ್ಲ. ಧರ್ಮಗ್ರಂಥದಲ್ಲಿನ ಮಾಹಿತಿಯ ಅನುಸಾರ ಧರ್ಮವು ಯಾವುದೇ ವ್ಯಕ್ತಿಗೆ ೧೮ ವರ್ಷದ ವಯಸ್ಸಿನ ಮೊದಲೇ ಸನ್ಯಾಸವನ್ನು ಸ್ವೀಕರಿಸುವ ಅನುಮತಿಯನ್ನು ನೀಡುತ್ತದೆ. ಈ ರೂಢಿಯು ಕಳೆದ ೮೦೦ ವರ್ಷಗಳಿಂದ ನಡೆಯುತ್ತ ಬಂದಿದೆ’ ಎಂದು ಹೇಳಿದೆ.

೨. ಬಾಲಸನ್ಯಾಸದ ವಿರುದ್ಧ ಹೂಡಲಾದ ಅರ್ಜಿಯಲ್ಲಿ ’ಅಪ್ರಾಪ್ತ ಹುಡುಗನನ್ನು ಭೌತಿಕ ಜೀವನ ತ್ಯಜಿಸಲು ಬಾಧ್ಯನಾಗಿಸುವುದು ಸಂವಿಧಾನದ ೨೧ನೇ ಅನುಚ್ಛೇದದ ಉಲ್ಲಂಘನೆಯಾಗಿದೆ. ೨೧ನೇ ಅನುಚ್ಛೇದದಲ್ಲಿ ಭಾರತೀಯ ನಾಗರಿಕನಿಗೆ ವೈಯಕ್ತಿಕ ಸ್ವಾತಂತ್ರ್ಯದ ಅಧಿಕಾರ ನೀಡಲಾಗಿದೆ’ ಎಂದು ಹೇಳಲಾಗಿದೆ.

೩. ನ್ಯಾಯಾಲಯವು ಈ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿಗಳಾದ ಎಸ್.ಎಸ್. ನಾಗಾನಂದರವರನ್ನು ’ನ್ಯಾಯ ಮಿತ್ರ’ (ನ್ಯಾಯಾಲಯಕ್ಕೆ ಸಹಾಯ ಮಾಡುವವರು) ಎಂದು ನೇಮಿಸಲಾಗಿತ್ತು.