ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಷಯವಾಗಿ ಪಾಕಿಸ್ತಾನಕ್ಕೆ ಭಾರತದ ತಿರುಗೇಟು

ಭಾರತದ ರಾಯಭಾರಿ ಪಿ. ಹರೀಶ್

ನ್ಯೂಯಾರ್ಕ್ (ಅಮೆರಿಕ): ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ ಎಂದು ಭಾರತದ ರಾಯಭಾರಿ ಪಿ. ಹರೀಶ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಷಯವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು. ಪರಸ್ಪರ ನಂಬಿಕೆ ಮತ್ತು ಸದ್ಭಾವನೆ ಇಲ್ಲದೆ ಸಿಂಧೂ ಒಪ್ಪಂದದಡಿಯಲ್ಲಿ ಸಹಕಾರ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

​ಪಿ. ಹರೀಶ್ ಅವರು ಮಾತನಾಡುತ್ತಾ, ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ಸುಳ್ಳು ವರದಿಗಳನ್ನು ಹರಡಲು ಬಳಸಿಕೊಂಡಿದೆ. ಸಿಂಧೂ ನೀರು ಹಂಚಿಕೆ ಒಪ್ಪಂದದ ಕುರಿತು ಭಾರತದ ನಿಲುವು ಸ್ಪಷ್ಟವಾಗಿದೆ ಮತ್ತು ಸ್ಥಿರವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಸರಕಾರದ ನೀತಿಯ ಸಾಧನವಾಗಿ ಬಳಸಿಕೊಳ್ಳುತ್ತಿರುವಾಗ, ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯ ಆಧಾರದ ಮೇಲೆ ಸಹಕಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು- ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಆಗಿದೆ ಮತ್ತು ಎಂದೆಂದಿಗೂ ಭಾರತದ ಭಾಗವಾಗಿರಲಿದೆ. ಪಾಕಿಸ್ತಾನವು ಈ ಸಾಂವಿಧಾನಿಕ ಮತ್ತು ಕಾನೂನಾತ್ಮಕ ವಾಸ್ತವವನ್ನು ಬೇಕೂಂತ ನಿರ್ಲಕ್ಷಿಸುತ್ತಿದೆ ಎಂದು ಹೇಳಿದರು.

ಮಾನವೀಯತೆಯ ಆಧಾರದ ಮೇಲೆ ಪಾಕಿಸ್ತಾನಕ್ಕೆ ಪ್ರವಾಹದ ಮುನ್ನೆಚ್ಚರಿಕೆ ನೀಡುತ್ತಲೇ  ಇರುತ್ತೇವೆ! – ಭಾರತ

​ನಾವು ಮಾನವೀಯತೆಯ ಆಧಾರದ ಮೇಲೆ ಪಾಕಿಸ್ತಾನಕ್ಕೆ ಪ್ರವಾಹದ ಮುನ್ನೆಚ್ಚರಿಕೆಗಳನ್ನು  ನೀಡುತ್ತಲೇ ಇರುತ್ತೇವೆ, ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತದ ಪಾಲಿನ ಜಲಸಂಪನ್ಮೂಲಗಳ ಉತ್ತಮ ಬಳಕೆಗಾಗಿ ಭಾರತದ ಕಡೆಯಿಂದ ಜಲವಿದ್ಯುತ್ ಯೋಜನೆಗಳನ್ನು ತ್ವರಿತಗೊಳಿಸಲಾಗುವುದು ಎಂದು ಭಾರತ ತಿಳಿಸಿದೆ.