ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ

ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನ, ತೀರ್ಥಹಳ್ಳಿ, ಕರ್ನಾಟಕ

ತೀರ್ಥಹಳ್ಳಿ – ಹಣಗೆರೆಯ ಹಜರತ್ ಸೈಯದ್ ಸಾದತ್ ದರ್ಗಾ, ಮೃಗವಧೆಯ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಹುಂಡಿ ಹಣವನ್ನು ಕಾಂಗ್ರೆಸ್ ನಾಯಕರು ಲೂಟಿ ಮಾಡುತ್ತಿದ್ದಾರೆ. ರಾಜ್ಯದ ದೇವಾಲಯಗಳ ಉಸ್ತುವಾರಿ ವಹಿಸುವ ಸರಕಾರದ ಮುಜರಾಯಿ ಇಲಾಖೆಯ ಖಾತೆಯಿಂದ 18 ಲಕ್ಷ ರೂಪಾಯಿಗಳನ್ನು ಪಡೆಯಲು ಅವರು ನಾಟಕಗಳನ್ನು ಆಡಿದ್ದಾರೆ ಎಂದು ಭಾಜಪ ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ

ಶಾಸಕ ಜ್ಞಾನೇಂದ್ರ ಮಾಡಿರುವ ಗಂಭೀರ ಆರೋಪಗಳು!

1. ಹಣಗೆರೆ ಮತ್ತು ಮೃಗವಧೆಯ ದರ್ಗಾ-ದೇವಸ್ಥಾನಗಳಿಗೆ ತಲಾ 7 ರಂತೆ ಮತ್ತು ರಾಮೇಶ್ವರ ದೇವಸ್ಥಾನಕ್ಕೆ 3 ಎತ್ತರದ ದೀಪಗಳನ್ನು ಅಳವಡಿಸಲಾಗಿದೆ. ‘ಸರಕಾರದ ಮೂಲಕ ಇದಕ್ಕೆ ಅನುದಾನ ಮಂಜೂರು ಮಾಡಿಸಿ ತರುತ್ತೇವೆ’ ಎಂದು ಹೇಳಿ ಕಾಂಗ್ರೆಸ್ ನಾಯಕರು ದೇವಸ್ಥಾನದ ಮುಜರಾಯಿ ಇಲಾಖೆಯ ಖಾತೆಯಿಂದ ಹಣ ಪಡೆದಿದ್ದಾರೆ. 1 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ದೀಪಗಳಿಗೆ ನಾಲ್ಕೂವರೆ ಲಕ್ಷ ರೂಪಾಯಿಗಳ ಬಿಲ್ ಮಾಡಿಸಿಕೊಂಡಿದ್ದಾರೆ.

2. ಮುಜರಾಯಿ ಇಲಾಖೆಯಿಂದ ಇದುವರೆಗೆ ಯಾವುದೇ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅಥವಾ ಮುಜರಾಯಿ ಲಿಪಿಕ ಸಂಬಳ ಪಡೆದಿರಲಿಲ್ಲ. ಆದರೆ ಈಗ ಬಂದಿರುವ ಅಧಿಕಾರಿಗಳು ಮಾತ್ರ ಸಂಬಳದ ಹೆಸರಿನಲ್ಲಿ ಹಣ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಭಾಜಪ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಹೆದ್ದೂರು, ನಾಯಕರಾದ ನಾಗರಾಜ ಶೆಟ್ಟಿ, ಸಂದೇಶ ಜವಳಿ, ರಕ್ಷಿತ ಮೇಗರವಳ್ಳಿ, ಚಂದವಳ್ಳಿ ಸೋಮಶೇಖರ, ಕಾನುಕೊಪ್ಪ ಶಿವಕುಮಾರ, ಸಂತೋಷ ದೇವಾಡಿಗ, ಅಭಿ ಕೊಂಡ್ಲೂರು, ಸುದರ್ಶನ್ ಬಾಳೇಕೊಪ್ಪ, ಕಾಸರವಳ್ಳಿ ಶ್ರೀನಿವಾಸ್, ಅಭಿಲಾಷ್ ಕೈಮರ್, ಚೇತನ್ ಇಂಗಳಾದಿ ಮುಂತಾದವರು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ದೇವಸ್ಥಾನದ ನಿಧಿಯನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಈಗ ಗಲ್ಲಿಗೇರಿಸುವ ಕಾನೂನು ರೂಪಿಸಬೇಕು!