ಇದು ನಿಮ್ಮಿಬ್ಬರ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ! – ಚೀನಾದ ಸಲಹೆ

ಚೀನಾಕ್ಕೆ ನೇಪಾಳದ ಪ್ರಶ್ನೆ

ಬೀಜಿಂಗ್ (ಚೀನಾ) – ನೇಪಾಳದ ವಿದೇಶಾಂಗ ಸಚಿವರಾದ ಶಿಶಿರ ಖನಾಲ ರವರು ಇಲ್ಲಿ ಚೀನಾದ ವಿದೇಶಾಂಗ ಸಚಿವರಾದ ವಾಂಗ್ ಯಿ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಖನಾಲ ರವರು ಕಾಲಾಪಾಣಿ, ಲಿಂಪಿಯಾಧುರಾ ಮತ್ತು ಲಿಪುಲೇಖಗಳ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲದೆ, ಭಾರತ ಮತ್ತು ಚೀನಾದ ನಡುವಿನ ಲಿಪುಲೇಖ ಕಣಿವೆಯ ಬಳಕೆಯ ಕುರಿತಾದ ಒಪ್ಪಂದವನ್ನು ಪ್ರಶ್ನಿಸುತ್ತಾ, ‘ಈ ವ್ಯವಸ್ಥೆಯನ್ನು ಯಾವ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ ಮತ್ತು ಅದರ ಸ್ವರೂಪವೇನು?’ ಎಂದು ಕೇಳಿದರು. ಇದಕ್ಕೆ ಉತ್ತರಿಸುತ್ತಾ ವಾಂಗ್ ಯಿ ರವರು, ಇದು ಮೂಲತಃ ಭಾರತ ಮತ್ತು ನೇಪಾಳ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕವೇ ಇದರ ಪರಿಹಾರವಾಗಲಿದೆ ಎಂದು ಹೇಳಿದರು. ಇಂತಹ ವಿಷಯಗಳನ್ನು ಸಂಬಂಧಪಟ್ಟ ದೇಶಗಳು ರಾಜತಾಂತ್ರಿಕ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರು.

ಭಾರತ ಮತ್ತು ಚೀನಾ 2020 ರ ವರ್ಷದಲ್ಲಿ ಲಿಪುಲೇಖ ಕಣಿವೆಯ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆ ಮತ್ತು ಗಡಿಯಾಚೆಗಿನ ವ್ಯಾಪಾರವನ್ನು ಪುನರಾರಂಭಿಸಲು ಸಮ್ಮತಿ ಸೂಚಿಸಿದ್ದವು. ಇದರ ಅನ್ವಯ ಉಭಯ ದೇಶಗಳು ಈ ಮಾರ್ಗವನ್ನು ತೀರ್ಥಯಾತ್ರೆ ಮತ್ತು ವ್ಯಾಪಾರಕ್ಕಾಗಿ ಬಳಸಲು ನಿರ್ಧರಿಸಿದ್ದವು. ಆಗ ನೇಪಾಳವು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಲಿಪುಲೇಖ, ಕಾಲಾಪಾಣಿ ಮತ್ತು ಲಿಂಪಿಯಾಧುರಾ ತನ್ನ ಕ್ಷೇತ್ರದ ಭಾಗಗಳಾಗಿವೆ; ಆದ್ದರಿಂದ ತನ್ನೊಂದಿಗೆ ಸಮಾಲೋಚನೆ ನಡೆಸದೆ ಈ ಮಾರ್ಗದ ಕುರಿತು ಯಾವುದೇ ಒಪ್ಪಂದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬುದು ಅದರ ವಾದವಾಗಿತ್ತು. ಇದರ ನಂತರ ನೇಪಾಳವು ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ರಾಜತಾಂತ್ರಿಕ ವಿರೋಧವನ್ನು ವ್ಯಕ್ತಪಡಿಸಿತ್ತು.
ವಿಶೇಷವೆಂದರೆ, ಶಿಶಿರ ಖನಾಲ ರವರು ಇತ್ತೀಚಿನ ಭಾರತ ಪ್ರವಾಸದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ. ಆಗ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಇತರ ವಿಷಯಗಳ ಕುರಿತು ಚರ್ಚಿಸಿದ್ದರು.

ಸಂಪಾದಕೀಯ ನಿಲುವು

  • ಚೀನಾ ಭಾರತದೊಂದಿಗೆ ಲಿಪುಲೇಖ ಕಣಿವೆಯ ಬಳಕೆಯ ಕುರಿತಾದ ಒಪ್ಪಂದವನ್ನು ಯಾವ ಆಧಾರದ ಮೇಲೆ ಮಾಡಿತು?
  • ನೇಪಾಳಕ್ಕೆ ಚೀನಾ ಯಾವುದೇ ಬೆಲೆ ಕೊಟ್ಟಿಲ್ಲ, ಎಂಬುದನ್ನು ನೇಪಾಳವು ಯೋಚಿಸಬೇಕು ! ಇದರಿಂದ ಈ ಜಾಗದ ಮೇಲಿನ ನೇಪಾಳದ ಹಕ್ಕು ಸುಳ್ಳು ಎಂಬುದನ್ನು ಚೀನಾ ಒಪ್ಪಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ !