ಭರೂಚ್ (ಗುಜರಾತ್) ನ ಜಾಮಾ ಮಸೀದಿಯ ನೆಲಮಾಳಿಗೆಯಲ್ಲಿ ದೇವತೆಗಳ ಮೂರ್ತಿಗಳು ಪತ್ತೆ!

ಭರೂಚ್ (ಗುಜರಾತ್) – ಇಲ್ಲಿನ 700 ವರ್ಷ ಹಳೆಯದಾದ ಜಾಮಾ ಮಸೀದಿಯ ಮುಚ್ಚಲಾದ (ಸೀಲ್ ಮಾಡಿದ) ನೆಲಗೃಹದಲ್ಲಿ ಹಿಂದೂ ದೇವತೆಗಳ ಪ್ರಾಚೀನ ಮೂರ್ತಿಗಳು ಮತ್ತು ಜೈನ ತೀರ್ಥಂಕರರಿಗೆ ಸಂಬಂಧಿಸಿದ ಮೂರ್ತಿಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ವಿಡಿಯೋವೊಂದು ಹರಿದಾಡುತ್ತಿತ್ತು. ಇದರಲ್ಲಿ ಮಸೀದಿಯ ನೆಲಗೃಹದಲ್ಲಿ ಹಿಂದೂ ದೇವತೆಗಳ ಹಲವು ಪ್ರಾಚೀನ ಮೂರ್ತಿಗಳು ಹಾಗೂ ಭಗವಾನ್ ಮಲ್ಲಿನಾಥರ (ಜೈನ ಧರ್ಮದ 19 ನೇ ತೀರ್ಥಂಕರ) ಮೂರ್ತಿ ಇರುವುದಾಗಿ ದಾವೆ ಮಾಡಲಾಗಿತ್ತು. ಈ ವಿಡಿಯೋ ವ್ಯಾಪಕವಾಗಿ ಹರಡಿದ ನಂತರ ವಿವಿಧ ಹಿಂದೂ ಮತ್ತು ಜೈನ ಸಂಘಟನೆಗಳು ಈ ವಿಷಯದ ಕುರಿತು ತನಿಖೆಗೆ ಒತ್ತಾಯಿಸಿವೆ.

ಪುರಾತತ್ವ ಇಲಾಖೆಯಿಂದ ಮಸೀದಿಯ ಪರಿಶೀಲನೆ!

ಇದರ ನಂತರ ಪುರಾತತ್ವ ಇಲಾಖೆಯ ತಂಡವು ಕಟ್ಟುನಿಟ್ಟಿನ ಭದ್ರತೆಯಲ್ಲಿ ಮಸೀದಿಯ ಆವರಣವನ್ನು ಪರಿಶೀಲಿಸಿತು. ಪರಿಶೀಲನೆಯ ಸಮಯದಲ್ಲಿ ನೆಲಗೃಹದ ವಿಡಿಯೋ ಚಿತ್ರೀಕರಣವನ್ನು ಮಾಡಲಾಯಿತು. ಅಲ್ಲಿ ‘ಸಂವತ್ 1213’ ಎಂದು ಕೆತ್ತಲಾದ ಪ್ರಾಚೀನ ಮೂರ್ತಿ ಮತ್ತು ಹಲವಾರು ಕಂಬಗಳ ಮೇಲೆ ಸಾಂಪ್ರದಾಯಿಕ ಕೆತ್ತನೆ ಕೆಲಸದ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ದಾವೆಗಳಿಗೆ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಆದ್ದರಿಂದ ಪುರಾತತ್ವ ಇಲಾಖೆಯ ಅಂತಿಮ ಅಧಿಕೃತ ವರದಿಯ ಆಧಾರದ ಮೇಲೆಯೇ ಭವಿಷ್ಯದಲ್ಲಿ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು ಎಂದು ನಂಬಲಾಗಿದೆ.

ಜಮಾ ಮಸೀದಿ ಟ್ರಸ್ಟ್‌ನಿಂದ ದಾವೆಗಳ ನಿರಾಕರಣೆ!

ಜಾಮಾ ಮಸೀದಿ ಟ್ರಸ್ಟ್‌ನ ಪದಾಧಿಕಾರಿಗಳು ಈ ಎಲ್ಲಾ ಹಕ್ಕುಗಳನ್ನು ತಳ್ಳಿಹಾಕಿದ್ದಾರೆ. ಸರಕಾರಿ ದಾಖಲೆಗಳು, 1907 ರ ‘ಗೆಜೆಟಿಯರ್’ ಮತ್ತು ವಕ್ಫ್ ಮಂಡಳಿಯ ದಾಖಲೆಗಳಲ್ಲಿ ಮಸೀದಿಯ ಇತಿಹಾಸವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಅನಗತ್ಯ ವಿವಾದಗಳನ್ನು ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪರಿಶೀಲಿಸುತ್ತಿರುವುದಾಗಿ ಟ್ರಸ್ಟ್ ತಿಳಿಸಿದೆ.

ಪುರಾತತ್ವ ಇಲಾಖೆಯು ಅಕ್ರಮ ವಜುಖಾನಾವನ್ನು (ನಮಾಜ್‌ಗೆ ಮುನ್ನ ಕೈಕಾಲು ತೊಳೆಯುವ ಸ್ಥಳ) ತೆರವುಗೊಳಿಸಿದೆ!

ಇದೇ ಅವಧಿಯಲ್ಲಿ ಪುರಾತತ್ವ ಇಲಾಖೆಯು ಮಸೀದಿಯ ಆವರಣದಲ್ಲಿ ಅನುಮತಿಯಿಲ್ಲದೆ ನಿರ್ಮಿಸಲಾಗಿದ್ದ ಹೆಚ್ಚುವರಿ ‘ವಜುಖಾನಾ’ವನ್ನು ತೆರವುಗೊಳಿಸಿದೆ. ಅಲ್ಲದೆ, ಒಂದು ವಿವಾದಿತ ಪ್ರವೇಶದ್ವಾರವನ್ನು ಮುಚ್ಚಲಾಗಿದೆ (ಸೀಲ್ ಮಾಡಲಾಗಿದೆ). ಸಂರಕ್ಷಿತ ಸ್ಮಾರಕಗಳಿಗೆ ಸಂಬಂಧಿಸಿದ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇದು ಶ್ರೀ ಚಕ್ರಧರ ಸ್ವಾಮಿಗಳ ಜನ್ಮಸ್ಥಳ! – ಮಹಂತ್ ಮುಕ್ತಾನಂದ ಸ್ವಾಮಿ

ಈ ವಿಷಯದ ಕುರಿತು ಶಂಕರಾಚಾರ್ಯ ಮಠದ ಮಹಂತ್ ಮುಕ್ತಾನಂದ ಸ್ವಾಮಿಗಳು ಮಾತನಾಡಿ, ಈ ಶೋಧದಿಂದ ನಾನು ಹಿಂದೆ ಮಾಡಿದ್ದ ವಾದಗಳಿಗೆ ಬಲ ಬಂದಿದೆ. ಈ ಸ್ಥಳವನ್ನು ಒಂದು ಕಾಲದಲ್ಲಿ ಜೈನ ಧರ್ಮದ ‘ಜೈನ ಸಮರಿ ವಿಹಾರ’ ಎಂದು ಕರೆಯಲಾಗುತ್ತಿತ್ತು ಮತ್ತು ಇದು ಶ್ರೀ ಚಕ್ರಧರ ಸ್ವಾಮಿಗಳ ಜನ್ಮಸ್ಥಳ ಎಂದೂ ನಂಬಲಾಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೆ ಮುಸ್ಲಿಂ ಆಕ್ರಮಣಕಾರರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿದ ಅಸಂಖ್ಯಾತ ಘಟನೆಗಳು ನಡೆದುಹೋಗಿವೆ. ಆ ದೃಷ್ಟಿಯಿಂದ ಈ ಮಸೀದಿಯ ಸಮೀಕ್ಷೆಯೂ ನಡೆದು ಸತ್ಯವು ಸಾರ್ವಜನಿಕರ ಮುಂದೆ ಬರಬೇಕು!
  • ಪ್ರತಿಯೊಂದು ದೇವಸ್ಥಾನಕ್ಕಾಗಿ ಹಿಂದೂಗಳು ಹೋರಾಟ ನಡೆಸಬೇಕಾಗಿರುವುದನ್ನು ನೋಡಿದರೆ, ಸಾರ್ವಜನಿಕರ ಮುಂದೆ ಸತ್ಯವನ್ನು ಇಡಲು ಸರ್ಕಾರವು ಒಂದೇ ಬಾರಿಗೆ ಇಂತಹ ಕಟ್ಟಡಗಳ ಸಮೀಕ್ಷೆಯನ್ನು ಏಕೆ ಮಾಡಬಾರದು?