ಭಾರತದ ರಕ್ಷಣೆಗಾಗಿ ಮುಂಬಯಿಯಲ್ಲಿ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಾಗ’!

  • ಸನಾತನ ಸಂಸ್ಥೆಯ ವತಿಯಿಂದ ಮುಂಬಯಿನಲ್ಲಿ ಪತ್ರಿಕಾಗೋಷ್ಠಿ

  • ೫,೦೦೦ ಜನರ ಉಪಸ್ಥಿತಿ!

ಎಡದಿಂದ ಶ್ರೀ.. ಶ್ರೇಯಸ್ ಪಿಸೋಳಕರ್, ಶ್ರೀ.. ಚೇತನ್ ರಾಜಹಂಸ, ಮಾತನಾಡುತ್ತಿರುವ ಶ್ರೀ.. ಅಭಯ ವರ್ತಕ್ ಮತ್ತು ಶ್ರೀ.. ಕೈಲಾಸ ಪಾಟೀಲ

ಮುಂಬಯಿ, ಮೇ ೧೪ (ಸುದ್ದಿ) – ಇಡೀ ವಿಶ್ವದ ಮೇಲೆ ಪ್ರಸ್ತುತ ಮೂರನೇ ಮಹಾಯುದ್ಧದ ಕಪ್ಪು ಮೋಡಗಳು ಆವರಿಸಿರುವಾಗ ಕೇವಲ ರಾಜಕೀಯ ಅಥವಾ ಬೌದ್ಧಿಕ ಸ್ತರದ ಪ್ರಯತ್ನಗಳು ಸಾಕಾಗುವುದಿಲ್ಲ. ರಾಷ್ಟ್ರಕ್ಕೆ ಆಧ್ಯಾತ್ಮಿಕ ಶಕ್ತಿಯ ಹೆಚ್ಚಿನ ಅವಶ್ಯಕತೆಯಿದೆ. ಇದೇ ಉದಾತ್ತ ಉದ್ದೇಶದಿಂದ ಭಾರತಕ್ಕೆ ಅಭೇದ್ಯವಾದ ಆಧ್ಯಾತ್ಮಿಕ ರಕ್ಷಾ ಕವಚ ಲಭಿಸಲಿ ಮತ್ತು ದೇಶದ ಸರ್ವಾಂಗೀಣ ಪ್ರಗತಿಯಾಗಿ ಮತ್ತೊಮ್ಮೆ ‘ರಾಮರಾಜ್ಯ’ದ ಉದಯವಾಗಲಿ ಎಂಬ ಸಂಕಲ್ಪದ ಪೂರ್ತಿಗಾಗಿ ಸನಾತನ ಸಂಸ್ಥೆಯ ವತಿಯಿಂದ ಮುಂಬಯಿಯಲ್ಲಿ ‘ಶ್ರೀ ರಾಜಮಾತಂಗಿ ಮಹಾಯಾಗ’ವನ್ನು ಆಯೋಜಿಸಲಾಗಿದೆ.

ಮೇ ೧೭ ರಂದು ಪ್ರಭಾದೇವಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಹಿಂಭಾಗದಲ್ಲಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ ೩.೩೦ ರಿಂದ ಸಂಜೆ ೭.೩೦ ರವರೆಗೆ ಯಜ್ಞ ಸಮಾರಂಭವು ಅತ್ಯಂತ ಮಂಗಳಮಯ ವಾತಾವರಣದಲ್ಲಿ ನಡೆಯಲಿದೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಅವರು ಮೇ ೧೪ ರಂದು ಮುಂಬಯಿ ಮರಾಠಿ ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ, ಪುರೋಹಿತರು ಮತ್ತು ಜ್ಯೋತಿರ್ವಿದ ಶ್ರೀ. ಶ್ರೇಯಸ್ ಪಿಸೋಳಕರ್ ಹಾಗೂ ಮಹಾರಾಷ್ಟ್ರ ಮಂದಿರ ಮಹಾಸಂಘದ ನವಿ ಮುಂಬಯಿ ಸಮನ್ವಯಕಾರರಾದ ಶ್ರೀ. ಕೈಲಾಸ ಪಾಟೀಲ ಉಪಸ್ಥಿತರಿದ್ದರು. ಈ ಮಹಾಯಾಗವು ಕೇವಲ ಧಾರ್ಮಿಕ ವಿಧಿಯಲ್ಲ, ಇದು ರಾಷ್ಟ್ರರಕ್ಷಣೆಯ ಆಧ್ಯಾತ್ಮಿಕ ಹೋರಾಟವಾಗಿದೆ ಎಂದು ಈ ಸಮಯದಲ್ಲಿ ಒತ್ತಿಹೇಳಲಾಯಿತು. ಸರ್ವ ಧರ್ಮಪ್ರೇಮಿ ಹಿಂದೂಗಳು ತಮ್ಮ ಕುಟುಂಬ ಸಮೇತ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.

ಯಾಗದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸುತ್ತಾ ಶ್ರೀ. ಅಭಯ ವರ್ತಕ ಅವರು ಹೀಗೆಂದರು…

೧. ಆದಿಶಕ್ತಿ ದೇವಿ ಸತಿಯ ಕ್ರೋಧದಿಂದ ಪ್ರಕಟವಾದ ದಶ ಮಹಾವಿದ್ಯೆಗಳಲ್ಲಿ ಶ್ರೀ ರಾಜಮಾತಂಗಿ ದೇವಿಯ ಸ್ಥಾನವು ಅನನ್ಯವಾಗಿದೆ. ಶ್ರೀ ರಾಜಮಾತಂಗಿ ದೇವಿಯನ್ನು ಆದಿಶಕ್ತಿಯ ‘ಪ್ರಧಾನಮಂತ್ರಿ’ ಅಂದರೆ ಪ್ರಮುಖ ಸಲಹೆಗಾರ್ತಿ ಎಂದು ಪರಿಗಣಿಸಲಾಗುತ್ತದೆ. ಶತ್ರುಗಳ ಮೇಲೆ ವಿಜಯ ಮತ್ತು ಪ್ರತಿಕೂಲ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಈ ದೇವಿಯ ಉಪಾಸನೆಯು ಫಲದಾಯಕವಾಗಿದೆ.

೨. ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನ ಅವತಾರದ ಸಮಯದಲ್ಲೂ ಶ್ರೀ ರಾಜಮಾತಂಗಿ ದೇವಿಯ ತತ್ತ್ವವು ಕಾರ್ಯನಿರತವಾಗಿತ್ತು. ಹಾಗಾಗಿ ಆದರ್ಶ ರಾಮರಾಜ್ಯ ಸ್ಥಾಪನೆಯಾಗಲು ಸಾಧ್ಯವಾಯಿತು. ಇಂದಿನ ಕಾಲದಲ್ಲೂ ಅಂತಹುದೇ ದೈವೀ ಶಕ್ತಿಯ ಆಶೀರ್ವಾದದಿಂದ ಭಾರತದ ರಕ್ಷಣೆಯಾಗಲಿ ಎಂಬುದೇ ಈ ಯಜ್ಞದ ಮುಖ್ಯ ಉದ್ದೇಶವಾಗಿದೆ.

೩. ಸನಾತನ ಸಂಸ್ಥೆಯು ಇದುವರೆಗೆ ೭೫೦ ಕ್ಕೂ ಹೆಚ್ಚು ಯಜ್ಞ-ಅನುಷ್ಠಾನಗಳನ್ನು ಮಾಡಿದೆ. ಮುಂಬಯಿಯ ಯಜ್ಞ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಂತ-ಮಹಂತರು, ರಾಜ್ಯ ಸರಕಾರದ ಸಚಿವರು, ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ವಿಚಾರವಂತರು, ನ್ಯಾಯವಾದಿಗಳು ಮತ್ತು ಉದ್ಯಮಿಗಳು ಸೇರಿದಂತೆ ೫,೦೦೦ ಭಕ್ತರು ಪಾಲ್ಗೊಳ್ಳಲಿದ್ದಾರೆ.

೪. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಯಾವ ಮುಂಬಾಪುರಿಯಿಂದ (ಮುಂಬಯಿಯಿಂದ) ಧರ್ಮಕಾರ್ಯದ ಶ್ರೀಗಣೇಶ ಮಾಡಿದ್ದರೋ, ಅದೇ ನಗರಿಯಲ್ಲಿ ನಡೆಯುತ್ತಿರುವ ಈ ಮಹಾಯಜ್ಞವು ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ.

ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ದರ್ಶನ ಲಭ್ಯ! – ಚೇತನ್ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಈ ಮಹಾಯಜ್ಞದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ೧,೦೦೦ ವರ್ಷಗಳ ಹಿಂದೆ ಆಕ್ರಮಣಕಾರಿ ಮಹಮ್ಮದ್ ಘಜನಿಯಿಂದ ಭಗ್ನಗೊಂಡ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ದರ್ಶನ. ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಪವಿತ್ರ ಅವಶೇಷಗಳನ್ನು ಇಲ್ಲಿ ದರ್ಶನಕ್ಕಾಗಿ ಇಡಲಾಗುವುದು. ಭಕ್ತರಿಗೆ ಇದು ಅಪರೂಪದ ಅವಕಾಶವಾಗಲಿದೆ. ‘ಯಾಗದಲ್ಲಿ ಮುಂಬಯಿ, ಠಾಣೆ, ರಾಯಗಢ ಮತ್ತು ಪಾಲಘರ್ ಜಿಲ್ಲೆಗಳ ಅನೇಕ ದೇವಸ್ಥಾನಗಳ ವಿಶ್ವಸ್ತರು ಹಾಗೂ ಅರ್ಚಕರು ಭಾಗವಹಿಸಲಿದ್ದಾರೆ’ ಎಂದು ಶ್ರೀ. ಕೈಲಾಸ ಪಾಟೀಲ ಮಾಹಿತಿ ನೀಡಿದರು.

ಯಜ್ಞದ ಪ್ರಾರಂಭವು ಶ್ರೀ ಗಣೇಶ ಆವಾಹನೆ, ಪುಣ್ಯಾಹವಾಚನ ಮತ್ತು ಮಹಾಸಂಕಲ್ಪದೊಂದಿಗೆ ಆಗಲಿದೆ. ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳ ಜಯಘೋಷದೊಂದಿಗೆ ಆಹುತಿಗಳನ್ನು ಅರ್ಪಿಸಲಾಗುವುದು. ಯಜ್ಞದ ಪೌರೋಹಿತ್ಯವನ್ನು ತಮಿಳುನಾಡಿನ ಈರೋಡ್‌ನ ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ ಶ್ರೀ ಅರುಣ್‌ಕುಮಾರ್ ಗುರುಮೂರ್ತಿ ವಹಿಸಲಿದ್ದಾರೆ ಹಾಗೂ ಶಿವಾಚಾರ್ಯ ಶ್ರೀ ಗುರುಮೂರ್ತಿ ಅವರು ಯಜ್ಞದ ಮುಖ್ಯ ಆಚಾರ್ಯರಾಗಿರುತ್ತಾರೆ ಎಂದು ಪುರೋಹಿತ ಮತ್ತು ಜ್ಯೋತಿಷಿ ಶ್ರೀ ಶ್ರೇಯಸ್ ಪಿಸೋಳ್ಕರ್ ಮಾಹಿತಿ ನೀಡಿದರು.