ವಾರಂಗಳ (ತೆಲಂಗಾಣ) ಶಾಲೆಗಾಗಿ 800 ವರ್ಷಗಳ ಹಳೆಯ ಶಿವ ದೇವಸ್ಥಾನ ಧ್ವಂಸ

ನೆಲಸಮಗೊಳಿಸಲಾದ ಶಿವ ದೇವಾಲಯ

ವಾರಂಗಳ – ವಾರಂಗಲ್ ಜಿಲ್ಲೆಯಲ್ಲಿ ಸರಕಾರಿ ಶಾಲೆಯ ನಿರ್ಮಾಣಕ್ಕಾಗಿ ಕಾಕತೀಯ ಕಾಲದ 800 ವರ್ಷಗಳ ಹಳೆಯ ಶಿವ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಖಾನಾಪುರದ ಅಶೋಕನಗರದಲ್ಲಿರುವ ಈ ದೇವಸ್ಥಾನವು 13ನೇ ಶತಮಾನದ ಕಾಕತೀಯ ರಾಜ ಗಣಪತಿದೇವನ ಕಾಲದ್ದಾಗಿತ್ತು. ಈ ದೇವಸ್ಥಾನದಲ್ಲಿದ್ದ ಶಾಸನವೊಂದರಲ್ಲಿ ರಾಜನನ್ನು ‘ಮಹಾರಾಜ’ ಮತ್ತು ‘ರಾಜಾಧಿರಾಜುಲು’ ಎಂದು ಸಂಬೋಧಿಸುವ ಅಪರೂಪದ 7 ತೆಲುಗು ಸಾಲುಗಳಿದ್ದವು. 1965 ರಲ್ಲಿ ಪಾರಂಪರಿಕ ಇಲಾಖೆಯು ಈ ದೇವಸ್ಥಾನವನ್ನು ನೋಂದಾಯಿಸಿತ್ತು. ಈ ದೇವಸ್ಥಾನವು ಪ್ರಾಚೀನ ಕೋಟೆಗಳಿಗೆ ಪ್ರಸಿದ್ಧವಾದ ಐತಿಹಾಸಿಕ ‘ಕೋಟಾ ಕಟ್ಟಾ’ ಎಂಬ ಮಣ್ಣಿನ ಕೋಟೆಯ ಪರಿಸರದಲ್ಲಿತ್ತು. ‘ಈ ಪಾರಂಪರಿಕ ತಾಣವನ್ನು ಸುಲಭವಾಗಿ ಸಂರಕ್ಷಿಸಬಹುದಿತ್ತು ಅಥವಾ ಸ್ಥಳಾಂತರಿಸಬಹುದಿತ್ತು’, ಎಂಬುದು ಪುರಾತತ್ವಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.

ದೇವಸ್ಥಾನ ಧ್ವಂಸ ಪ್ರಕರಣದ ಕುರಿತು ದೂರು ದಾಖಲು

ದೇವಸ್ಥಾನ ಧ್ವಂಸಕ್ಕೆ ಸಂಬಂಧಿಸಿದಂತೆ ತೆಲಂಗಾಣದ ನ್ಯಾಯವಾದಿ ರಾಮರಾವ್ ಇಮ್ಮನೇನಿ ಅವರು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಮತ್ತು ಪುರಾತತ್ವ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದೆ. ರಾಜ್ಯ ಸರಕಾರವು ಕಡ್ಡಾಯವಾಗಿ ರಚಿಸಬೇಕಾದ ಪಾರಂಪರಿಕ ಸಂರಕ್ಷಣಾ ಸಮಿತಿಯನ್ನು ಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪುರಾತತ್ವ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದರೂ, ಅನುಮತಿ ಪಡೆಯದೆ ದೇವಸ್ಥಾನವನ್ನು ಕೆಡವಲು ಆದೇಶ ನೀಡಿದವರ ವಿರುದ್ಧ ತೆಲಂಗಾಣ ಪಾರಂಪರಿಕ ಕಾಯ್ದೆಯ ಸೆಕ್ಷನ್ 30 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರ ಭೇಟಿ

ದೇವಸ್ಥಾನವನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಲಾಗಿದೆ ಎಂಬ ಆರೋಪವನ್ನು ವಾರಂಗಳ ಜಿಲ್ಲಾಡಳಿತವು ತಳ್ಳಿಹಾಕಿದೆ. 30 ಎಕರೆ ಜಾಗದಲ್ಲಿದ್ದ ದಟ್ಟ ಪೊದೆಗಳನ್ನು ಸ್ವಚ್ಛಗೊಳಿಸುವಾಗ ಕೇವಲ ಹಳೆಯ ಶಿಥಿಲಗೊಂಡ ಅವಶೇಷಗಳು ಮಾತ್ರ ಪತ್ತೆಯಾಗಿವೆ. ಇದು ಅಧಿಕೃತವಾಗಿ ಸಂರಕ್ಷಿತ ಸ್ಮಾರಕ ಎಂದು ನೋಂದಣಿಯಾಗಿಲ್ಲ ಎಂದು ಅಧಿಕಾರಿಗಳು ವಾದಿಸಿದ್ದಾರೆ. ದೇವಸ್ಥಾನ ಧ್ವಂಸದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕರ ಹೆಚ್ಚುತ್ತಿರುವ ಆಕ್ರೋಶವನ್ನು ಕಂಡು ವಾರಂಗಳ ಜಿಲ್ಲಾಧಿಕಾರಿ ಡಾ. ಸತ್ಯ ಶಾರದಾ ಮತ್ತು ನರಸಂಪೇಟೆಯ ಶಾಸಕ ದೊಂತಿ ಮಾಧವ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಅದೇ ಸ್ಥಳದಲ್ಲಿ ದೇವಸ್ಥಾನವನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡುವ ಭರವಸೆ ನೀಡಿದರು. ಈ ಸಂಬಂಧ ಇತಿಹಾಸಕಾರರು, ಸಾಂಪ್ರದಾಯಿಕ ವಾಸ್ತುಶಿಲ್ಪಿಗಳು ಮತ್ತು ಪುರಾತತ್ವ ಇಲಾಖೆಯೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’, ಎಂದು ಭರವಸೆ ನೀಡಲಾಗಿದೆ.

ಸಂಪಾದಕೀಯ ನಿಲುವು

  • ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಇದಕ್ಕಿಂತ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ?
  • ಶಾಲೆಯ ಉದ್ದೇಶಕ್ಕಾಗಿ ಮಸೀದಿ ಅಥವಾ ಚರ್ಚ್ ಅನ್ನು ಕೆಡವುವ ಧೈರ್ಯವನ್ನು ತೆಲಂಗಾಣ ಆಡಳಿತವು ಮಾಡುತ್ತಿತ್ತೇ?