ನೀವು ದೇಶದ ಮುಖ್ಯ ಅರ್ಚಕರಾ? – ಸುಪ್ರೀಂ ಕೋರ್ಟ್

ಶಬರಿಮಲೈ ಪ್ರಕರಣ; ಅರ್ಜಿದಾರ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ನವದೆಹಲಿ – ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಅರ್ಜಿದಾರರಾದ ‘ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್’ ಅನ್ನು ಕಟು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿತು. 2006ರಲ್ಲಿ ದಾಖಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಬಣ್ಣಿಸಿದ ನ್ಯಾಯಾಲಯ, “ನೀವು ಈ ಅರ್ಜಿಯನ್ನು ಯಾಕೆ ಸಲ್ಲಿಸಿದ್ದೀರಿ? ನೀವು ದೇಶದ ಮುಖ್ಯ ಅರ್ಚಕರಾ?” ಎಂದು ಪ್ರಶ್ನಿಸಿತು.

೧. ನ್ಯಾಯಮೂರ್ತಿ ನಾಗರತ್ನ ಅವರು ಮಾತನಾಡುತ್ತಾ, “ಯಾವುದೇ ಕಾನೂನುಬದ್ಧ ಸಂಸ್ಥೆಯು ವೈಯಕ್ತಿಕ ನಂಬಿಕೆಯ ಕುರಿತು ದಾವೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿಗೆ ಯಾರ ಮೇಲಾದರೂ ನಂಬಿಕೆ ಇರಬಹುದು, ಆದರೆ ಸಂಸ್ಥೆಗೆ ಅಂತಹ ನಂಬಿಕೆ ಇರಲು ಸಾಧ್ಯವಿಲ್ಲ. ನಿಮಗೆ ಆತ್ಮಸಾಕ್ಷಿ ಎಂಬುದು ಇಲ್ಲವೇ?” ಎಂದು ಅವರು ಪ್ರಶ್ನಿಸಿದರು.

೨. ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಕೂಡ ಸಂಸ್ಥೆಯನ್ನು ಪ್ರಶ್ನಿಸಿ, “ಈ ಅರ್ಜಿ ಸಲ್ಲಿಸಲು ಯಾವುದಾದರೂ ಅಧಿಕೃತ ಪ್ರಸ್ತಾವನೆ ಅಂಗೀಕರಿಸಲಾಗಿದೆಯೇ? ಮತ್ತು ಸಂಸ್ಥೆಯ ಅಧ್ಯಕ್ಷರು ಇದಕ್ಕೆ ಸಮ್ಮತಿ ನೀಡಿದ್ದಾರೆಯೇ?” ಎಂದು ಕೇಳಿದರು.

೩. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, “ಇಂತಹ ಅರ್ಜಿಗಳನ್ನು ಸಲ್ಲಿಸುವ ಬದಲು ಯುವ ವಕೀಲರ ಹಿತಾಸಕ್ತಿಗಾಗಿ ಸಂಸ್ಥೆ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.

೪. ಗ್ರಾಮೀಣ ಭಾಗಗಳಿಂದ ಬರುವ ಪ್ರತಿಭಾವಂತ ಯುವ ವಕೀಲರಿಗೆ ಸಹಕಾರ ನೀಡುವುದು ಮತ್ತು ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ಹೆಚ್ಚು ಮುಖ್ಯವಾಗಿದೆ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.

೫. ಸಂಸ್ಥೆಯ ಪರ ವಕೀಲರು ವಾದ ಮಂಡಿಸಿ, “ಸಂಸ್ಥೆಯ ಉದ್ದೇಶವು ಅಯ್ಯಪ್ಪ ಸ್ವಾಮಿಯ ಭಕ್ತರ ನಂಬಿಕೆಯನ್ನು ಪ್ರಶ್ನಿಸುವುದಲ್ಲ, ಬದಲಾಗಿ ಅದನ್ನು ಕಾಪಾಡುವುದಾಗಿದೆ. ದೇವಸ್ಥಾನದ ಮುಖ್ಯ ಅರ್ಚಕರು ಈ ಹಿಂದೆ ಅಲ್ಪ ವಯಸ್ಸಿನ ಮಹಿಳೆಯರ ಪ್ರವೇಶವು ದೇವರ ಇಚ್ಛೆಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು” ಎಂದು ವಾದಿಸಿದರು.