ನಸರಾಪುರ (ಮಹಾರಾಷ್ಟ್ರ): 4 ವರ್ಷದ ಬಾಲಕಿಯ ಮೇಲೆ 65 ವರ್ಷದ ಕಾಮುಕನಿಂದ ಅತ್ಯಾಚಾರ-ಕೊಲೆ!

  • ಆರೋಪಿಯನ್ನು ಒಂದೂವರೆ ಗಂಟೆಯೊಳಗೆ ಬಂಧಿಸಿದ ಪೊಲೀಸರು

  • ಆಕ್ರೋಶಗೊಂಡ ಗ್ರಾಮಸ್ಥರಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ

  • ಫಾಸ್ಟ್‌ ಟ್ರ್ಯಾಕ್ ಕೋರ್ಟ್ ಮೂಲಕ ಆರೋಪಿಗೆ ಗಲ್ಲು ಶಿಕ್ಷೆಗಾಗಿ ಆಗ್ರಹ

ಪುಣೆ – ಭೋರ್ ತಾಲ್ಲೂಕಿನ ನಸರಾಪುರ (ಮಹಾರಾಷ್ಟ್ರ) ಪರಿಸರದಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ಮೇ 1 ರಂದು ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 65 ವರ್ಷದ ಭೀಮಾಜಿ ಕಾಂಬಳೆ ಎಂಬ ಆರೋಪಿಯನ್ನು ಪೊಲೀಸರು ಒಂದೂವರೆ ಗಂಟೆಯೊಳಗೆ ಬಂಧಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಪುಣೆ-ಬೆಂಗಳೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ ಬಳಿಕ ಹೆದ್ದಾರಿ ತಡೆ ಹಿಂಪಡೆಯಲಾಯಿತು.

1. ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಮೇ 2 ರಂದು ಗ್ರಾಮ ಬಂದ್‌ಗೆ ಕರೆ ನೀಡಿದ್ದರು. “ಈ ನರರಾಕ್ಷಸನಿಗೆ ಗಲ್ಲು ಶಿಕ್ಷೆ ನೀಡಿ, ಇಲ್ಲವೇ ನಮ್ಮ ಕೈಗೆ ಒಪ್ಪಿಸಿ; ಏನು ಮಾಡಬೇಕೆಂದು ನಮಗೆ ಗೊತ್ತಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

2. ಬಾಲಕಿಯು ಶಾಲಾ ರಜೆಯ ಹಿನ್ನೆಲೆಯಲ್ಲಿ ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ಮನೆಯ ಮುಂದೆ ಆಟವಾಡುತ್ತಿದ್ದ ಆಕೆ ಬಹಳ ಸಮಯ ಕಾಣಿಸದಿದ್ದಾಗ ಹುಡುಕಾಟ ಆರಂಭಿಸಲಾಯಿತು.

3. ಹುಡುಕಾಟದ ವೇಳೆ ಗೋಶಾಲೆಯೊಂದರಲ್ಲಿ ಬಾಲಕಿಯ ಮೃತದೇಹ ಅನುಮಾನಾಸ್ಪದವಾಗಿ ಬಿದ್ದಿರುವುದು ಪತ್ತೆಯಾಯಿತು. ಈ ಸುದ್ದಿ ಹರಡುತ್ತಿದ್ದಂತೆಯೇ ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು.

4.“ಕರು ತೋರಿಸುತ್ತೇನೆ” ಎಂದು ನಂಬಿಸಿ ಆರೋಪಿಯು ಬಾಲಕಿಯನ್ನು ಗೋಶಾಲೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಕಲ್ಲಿನಿಂದ ಜಜ್ಜಿ ಆಕೆಯನ್ನು ಕೊಲೆ ಮಾಡಿ, ಮೃತದೇಹವನ್ನು ಸಗಣಿಯ ರಾಶಿಯ ಅಡಿಯಲ್ಲಿ ಬಚ್ಚಿಟ್ಟಿದ್ದನು. ಗ್ರಾಮದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯು ಬಾಲಕಿಯನ್ನು ಕರೆದೊಯ್ಯುತ್ತಿರುವ ದೃಶ್ಯಗಳು ಸೆರೆಯಾಗಿವೆ.

5. ಆರೋಪಿ ಭೀಮಾಜಿ ಕಾಂಬಳೆ ಈ ಹಿಂದೆ ಕೂಡ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದು, ಮತ್ತು ಶಿಕ್ಷೆ ಕೂಡ ಅನುಭವಿಸಿದ್ದನು. ಈತನ ವಿರುದ್ಧ ರಾಜಗಢ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಗಂಭೀರ ಪ್ರಕರಣಗಳು ದಾಖಲಾಗಿವೆ. “ಆರೋಪಿಯು ತಾನೇ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿರುವಾಗ ಇನ್ನು ವಿಚಾರಣೆಯ ಅಗತ್ಯವೇನಿದೆ?” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

6. ಘಟನೆಯ ನಂತರ ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಪುಣೆ ಗ್ರಾಮಾಂತರ ಪೊಲೀಸರ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸುತ್ತೇವೆ! – ಮುಖ್ಯಮಂತ್ರಿ

ಪುಣೆ ಜಿಲ್ಲೆಯ ನಸರಾಪುರ (ಮಹಾರಾಷ್ಟ್ರ)ದ ಘಟನೆಯು ಅತ್ಯಂತ ಖಂಡನೀಯ ಮತ್ತು ಆಘಾತಕಾರಿಯಾಗಿದೆ. ಆರೋಪಿಯ ವಿರುದ್ಧ ಈ ಹಿಂದಿನ ಕ್ರಿಮಿನಲ್ ದಾಖಲೆಗಳಿವೆ. ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು. ಇದಕ್ಕಾಗಿ ‘ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ’ ಸ್ಥಾಪಿಸುವಂತೆ ಹೈಕೋರ್ಟ್‌ಗೆ ವಿನಂತಿಸಲಾಗುವುದು. ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸಿ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದ್ದಾರೆ.

ಮೇ 2 ರಂದು ಕೂಡ ಗ್ರಾಮಸ್ಥರಿಂದ ಹೆದ್ದಾರಿ ತಡೆ!

ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮೇ 2 ರಂದು ಬೆಳಗ್ಗಿನಿಂದಲೇ ಗ್ರಾಮಸ್ಥರು ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಧರಣಿ ನಡೆಸಿದರು. ಪ್ರತಿಭಟನಾಕಾರರು ಹೆದ್ದಾರಿ ತಡೆದಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಈ ಸಂದರ್ಭದಲ್ಲಿ ಕೆಲವು ಪೊಲೀಸರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಮಹಿಳೆಯರು ಆರೋಪಿಸಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.