ಧಾರ್ಮಿಕ ಚಟುವಟಿಕೆಗಳ ಹೆಸರಿನಲ್ಲಿ ರಸ್ತೆ ತಡೆ (ಬಂದ್) ಮಾಡುವಂತಿಲ್ಲ! – ಸುಪ್ರೀಂ ಕೋರ್ಟ್ ಅಭಿಪ್ರಾಯ

  • ಸುಪ್ರೀಂ ಕೋರ್ಟ್ ನಲ್ಲಿ ಶಬರಿಮಲೈ ದೇವಸ್ಥಾನ ಸಾಂಪ್ರದಯದ ಪ್ರಕರಣ;

  • ಕ್ರಮ ಕೈಗೊಳ್ಳಲು ಸರಕಾರಕ್ಕೆ ಅಧಿಕಾರವಿದೆ ಎಂದು ನ್ಯಾಯಾಲಯದ ಅಭಿಪ್ರಾಯ

ನವದೆಹಲಿ – ಧಾರ್ಮಿಕ ಚಟುವಟಿಕೆಗಳ ಹೆಸರಿನಲ್ಲಿ ಸಾರ್ವಜನಿಕ ರಸ್ತೆಗಳನ್ನು ತಡೆಯುವಂತಿಲ್ಲ. ಯಾವುದೇ ಧಾರ್ಮಿಕ ಸಮುದಾಯಕ್ಕೆ ತನ್ನದೇ ಆದ ಆರಾಧನಾ ಪದ್ಧತಿಯನ್ನು ನಿರ್ಧರಿಸುವ ಪೂರ್ಣ ಸ್ವಾತಂತ್ರ್ಯವಿದ್ದರೂ ಮತ್ತು ನ್ಯಾಯಾಲಯವು ಅವರ ಆಂತರಿಕ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲದಿದ್ದರೂ, ಇಂತಹ ಧಾರ್ಮಿಕ ಚಟುವಟಿಕೆಗಳಿಂದ ಯಾವುದೇ ‘ಜಾತ್ಯತೀತ’ (Secular) ಕಾರ್ಯಗಳಿಗೆ ಅಡ್ಡಿಯುಂಟಾದರೆ, ಸಾರ್ವಜನಿಕರ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರಕಾರಕ್ಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಕೇರಳದ ಪ್ರಸಿದ್ಧ ಶಬರಿಮಲೈ ದೇವಸ್ಥಾನದ ಸಂಪ್ರದಾಯಗಳ ಮೇಲಿನ ಅರ್ಜಿಗಳ ಕುರಿತು ಪ್ರಸ್ತುತ 9 ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ನ್ಯಾಯಾಲಯ ಈ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಹಿಂದೂಗಳ ಪರವಾಗಿ ವಾದ!

1. ವಿಚಾರಣೆಯ ಒಂಬತ್ತನೇ ದಿನದಂದು, ‘ಹಿಂದೂ ಧರ್ಮ ಆಚಾರ್ಯ ಸಭಾ’ವನ್ನು ಪ್ರತಿನಿಧಿಸುವ ವಕೀಲ ಅಕ್ಷಯ್ ನಾಗರಾಜನ್ ಅವರು, ಸಂವಿಧಾನದ 25(2)(ಎ) ವಿಧಿಯ ಆಧಾರದ ಮೇಲೆ ಸರಕಾರವು ಯಾವುದೇ ಧಾರ್ಮಿಕ ಪಂಥದ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದರು.

2. ಸಂವಿಧಾನದ 25(2)(ಎ) ವಿಧಿಯ ಅನ್ವಯ, ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಯಾವುದೇ ಆರ್ಥಿಕ, ಹಣಕಾಸು, ರಾಜಕೀಯದಂತಹ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿಯಂತ್ರಿಸುವ ಅಥವಾ ಅವುಗಳ ಮೇಲೆ ನಿರ್ಬಂಧ ಹೇರುವ ಅಧಿಕಾರವನ್ನು ರಾಜ್ಯಕ್ಕೆ (ಸರಕಾರಕ್ಕೆ) ನೀಡಲಾಗಿದೆ.

3. ವಿಧಿ 25 ರ ಅಡಿಯಲ್ಲಿ ನೀಡಲಾದ ರಕ್ಷಣೆಯು ಕೇವಲ ಧಾರ್ಮಿಕ ನಂಬಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ; ಇದು ಆ ನಂಬಿಕೆಯ ಬಾಹ್ಯ ಅಭಿವ್ಯಕ್ತಿಯನ್ನೂ ಒಳಗೊಂಡಿದೆ. ಇದರಲ್ಲಿ ನಿರ್ದಿಷ್ಟ ದೇವತೆಯ ಆರಾಧನೆಗೆ ಸಂಬಂಧಿಸಿದ ವಿಧಿ-ವಿಧಾನಗಳು, ಸಂಪ್ರದಾಯಗಳು, ಸಮಾರಂಭಗಳು ಮತ್ತು ಆಚರಣೆಗಳು ಸೇರಿವೆ ಎಂದು ವಕೀಲ ನಾಗರಾಜನ್ ವಾದಿಸಿದರು.

ಸರ್ವೋಚ್ಚ ನ್ಯಾಯಾಲಯದ ನಿಲುವು!

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ ಅವರು, ಧಾರ್ಮಿಕ ಚಟುವಟಿಕೆಗಳು ಯಾವುದೇ ಜಾತ್ಯತೀತ ಚಟುವಟಿಕೆಯ ಮೇಲೆ ಪರಿಣಾಮ ಬೀರಿದರೆ, ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.
“ಉದಾಹರಣೆಗೆ ಒಂದು ದೇವಸ್ಥಾನದಲ್ಲಿ ವಾರ್ಷಿಕ ರಥಯಾತ್ರೆಯಂತಹ ಉತ್ಸವವನ್ನು ಆಚರಿಸಬೇಕಿದ್ದರೆ, ಅಂತಹ ಸಮಯದಲ್ಲಿ ದೇವಸ್ಥಾನದ ಸುತ್ತ-ಮುತ್ತಲಿನ ಎಲ್ಲಾ ರಸ್ತೆಗಳನ್ನು ನೀವು ಬಂದ್ ಮಾಡುವಂತಿಲ್ಲ. ಇದಕ್ಕೆ ಧರ್ಮದೊಂದಿಗೆ ಸಂಬಂಧವಿಲ್ಲ. ನಿಮ್ಮ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ನಿಮಗೆ ಪೂರ್ಣ ಸ್ವಾತಂತ್ರ್ಯವಿದೆ; ಆದರೆ ಸಾರ್ವಜನಿಕ ರಸ್ತೆಗಳನ್ನು ತಡೆದು ಮಾಡಲು ಅನುಮತಿಯಿಲ್ಲ. ನಿಯಂತ್ರಣದ ಉದ್ದೇಶಕ್ಕಾಗಿ ರಾಜ್ಯ ಸರಕಾರವು ಇದರಲ್ಲಿ ಹಸ್ತಕ್ಷೇಪ ಮಾಡಬಹುದು,” ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕೀಯ ನಿಲುವು

ಈ ತೀರ್ಪು ಸ್ಪಷ್ಟವಾಗಿದ್ದರೂ, ಈದ್ ಅಥವಾ ಶುಕ್ರವಾರದ ನಮಾಜ್ ಸಮಯದಲ್ಲಿ ದೇಶದ ಹಲವು ನಗರಗಳಲ್ಲಿ ರಸ್ತೆಗಳನ್ನು ತಡೆ ಹಿಡಿಯುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ಅಭಿಪ್ರಾಯವನ್ನು ಎಲ್ಲಾ ರಾಜ್ಯ ಸರಕಾರಗಳು ಜಾರಿಗೆ ತರುವ ಧೈರ್ಯ ತೋರಿಸುತ್ತವೆಯೇ ?