ಬಾಂಗ್ಲಾದೇಶ: ದೇವಸ್ಥಾನದ ಅರ್ಚಕನ ಸಂಶಯಾಸ್ಪದ ಸಾವು!

  • ಕಣ್ಮರೆಯಾದ ಮೂರು ದಿನಗಳ ನಂತರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

  • ಹತ್ಯೆ ಮಾಡಿರುವ ಸಂಶಯ

ಕಾಕ್ಸ್ ಬಜಾರ್ (ಬಾಂಗ್ಲಾದೇಶ) – ಇಲ್ಲಿ ೩೫ ವರ್ಷದ ನಯನ ದಾಸ್ ಎಂಬುವರ ಸಂಶಯಾಸ್ಪದ ಸಾವು ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ ೨೨ ರಂದು ಅವರ ಮೃತದೇಹವು ದುರ್ಗಮ ಗುಡ್ಡಗಾಡು ಪ್ರದೇಶದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಯನ ದಾಸ್ ಅವರು ಇಲ್ಲಿನ ನಾಗಪಂಚಮಿ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು.

ಅಜ್ಞಾತ ವ್ಯಕ್ತಿಗಳಿಂದ ಅಪಹರಣ!

ನಯನ ದಾಸ್ ಅವರ ಕುಟುಂಬದ ಸದಸ್ಯರ ಪ್ರಕಾರ, ಒಂದು ದಿನ ರಾತ್ರಿ ಕೆಲವು ಅಪರಿಚಿತ ವ್ಯಕ್ತಿಗಳು ಅವರನ್ನು ಮನೆಯಿಂದ ಹೊರಗೆ ಕರೆದೊಯ್ದರು. ಅದಾದ ನಂತರ ಅವರು ಮರಳಿ ಬರಲೇ ಇಲ್ಲ. ಸಾಕಷ್ಟು ಹುಡುಕಾಟ ನಡೆಸಿದ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಏಪ್ರಿಲ್ ೨೨ ರಂದು ಮಧ್ಯಾಹ್ನ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾಗ ದೇವಸ್ಥಾನದ ಹಿಂಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅವರ ಮೃತದೇಹ ಕಂಡುಬಂದಿದೆ.

ದಾಸ್ ಅವರ ಕುತ್ತಿಗೆಗೆ ಸ್ಕಾರ್ಫ್ ಸುತ್ತಿರುವುದು ಕಂಡುಬಂದಿದ್ದು, ಇದೊಂದು ಹತ್ಯೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಪೊಲೀಸರ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಸ್ತುತ ಪೊಲೀಸರು ಅಂದು ರಾತ್ರಿ ಅವರನ್ನು ಮನೆಯಿಂದ ಕರೆದೊಯ್ದಿದ್ದ ಅಪರಿಚಿತ ವ್ಯಕ್ತಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಕಾಲದಲ್ಲೂ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇದ್ದವು, ಮಹಮ್ಮದ್ ಯೂನಸ್ ಅವರ ಮಧ್ಯಂತರ ಸರಕಾರದ ಅವಧಿಯಲ್ಲೂ ಆ ಸರಣಿ ನಿರಂತರವಾಗಿ ಮುಂದುವರಿದಿತ್ತು ಮತ್ತು ಈಗ ಹೊಸ ಸರಕಾರ ಬಂದ ಬಳಿಕವೂ ಹಿಂದೂಗಳು ಅಸುರಕ್ಷಿತರಾಗಿಯೇ ಇದ್ದಾರೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ!