ಶರದ್ ಪವಾರ್ ಬಣದ ನಾಯಕ ಮತ್ತು ದೇವಸ್ಥಾನ ಸಂಸ್ಥಾನದ ವಿಶ್ವಸ್ತ ಸೇರಿದಂತೆ ಇಬ್ಬರ ಬಂಧನ !

  • ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ದರ್ಶನದ ಕಾಳಸಂತೆ !

  • ಆರೋಪಿಗಳಿಗೆ ೭ ದಿನಗಳ ಪೊಲೀಸ ಕಸ್ಟಡಿ !

ನಾಶಿಕ್ – ತ್ರ್ಯಂಬಕೇಶ್ವರದ ಜ್ಯೋತಿರ್ಲಿಂಗ ದೇವಸ್ಥಾನ ಸಂಸ್ಥಾನದಲ್ಲಿ ಭಕ್ತರನ್ನು ಆರ್ಥಿಕವಾಗಿ ಲೂಟಿ ಮಾಡಿದ ಆರೋಪದ ಮೇಲೆ ಶರದ್ ಪವಾರ್ ಬಣದ ಪ್ರದೇಶ ಯುವ ಘಟಕದ ಕಾರ್ಯಾಧ್ಯಕ್ಷ ಮತ್ತು ದೇವಸ್ಥಾನ ಸಂಸ್ಥಾನದ ವಿಶ್ವಸ್ತ ಪುರುಷೋತ್ತಮ ಕಡಲಗ ಸೇರಿದಂತೆ ಗೋಟಿರಾಮ ಮನಾಜಿ ಪೆಹರೆ ಮತ್ತು ಅಭಿಷೇಕ ಕಡಲಗ (ಪುರುಷೋತ್ತಮ ಕಡಲಗ ಅವರ ಸೋದರಳಿಯ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. (ಎಲ್ಲಿಯವರೆಗೆ ದೇವಸ್ಥಾನಗಳ ವ್ಯವಸ್ಥಾಪನೆಯು ಸಾಧನೆ ಮಾಡುವ ಹಿಂದೂಗಳು ಮತ್ತು ಧರ್ಮಾಭಿಮಾನಿ ಭಕ್ತರ ಕೈಗೆ ಬರುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದಿಲ್ಲ. ಪೊಲೀಸರು ಈ ಘಟನೆಯ ಹಿಂದಿನ ಸಂಪೂರ್ಣ ಜಾಲವನ್ನು ಭೇದಿಸಲು ಪ್ರಯತ್ನಿಸಬೇಕು ! ದೇವರ ದರ್ಬಾರಿನಲ್ಲಿ ಎಲ್ಲರಿಗೂ ಸಮಾನ ನ್ಯಾಯ ಸಿಗಲಿ ಎಂಬುದೇ ನಿರೀಕ್ಷೆ ! – ಸಂಪಾದಕರು) ಪುರುಷೋತ್ತಮ ಕಡಲಗ ಹಾಗೂ ಗೋಟಿರಾಮ ಪೆಹರೆ ಅವರಿಗೆ ನ್ಯಾಯಾಲಯವು ೭ ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ನ್ಯಾಯಮೂರ್ತಿ ಎ.ಜಿ. ಬೆಹರೆ ಅವರ ಮುಂದೆ ಈ ವಿಚಾರಣೆ ನಡೆಯಿತು. ಅಭಿಷೇಕ ಕಡಲಗ ಸದ್ಯ ತಲೆಮರೆಸಿಕೊಂಡಿದ್ದಾನೆ.

ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಗಣ್ಯರ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಯಮಗಳಿವೆ. ಭದ್ರತಾ ಸಿಬ್ಬಂದಿಗಳು ಯಾರನ್ನೂ ನೇರವಾಗಿ ಒಳಗೆ ಬಿಡುವುದಿಲ್ಲ. ಅದಕ್ಕಾಗಿ ವಿಶ್ವಸ್ತರ ಅನುಮತಿ ಅಥವಾ ದೂರವಾಣಿ ಕರೆ ಅಗತ್ಯವಿರುತ್ತದೆ. ನೋಂದಣಿ ಪುಸ್ತಕದಲ್ಲಿ ಭಕ್ತರ ಹೆಸರು, ಯಾರ ಶಿಫಾರಸ್ಸಿನ ಮೇಲೆ ಪ್ರವೇಶ ನೀಡಲಾಗಿದೆ ಎಂಬ ವಿವರಗಳನ್ನು ದಾಖಲಿಸುವುದು ಕಡ್ಡಾಯವಾಗಿದೆ. ‘ಹೀಗಿರುವಾಗ ಹೊರಗಿನ ವ್ಯಕ್ತಿ, ಭಕ್ತರನ್ನು ನೇರವಾಗಿ ದೇವಸ್ಥಾನಕ್ಕೆ ಹೇಗೆ ಕರೆದುಕೊಂಡು ಹೋಗಲು ಸಾಧ್ಯ?’ ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

ಹಣದ ಮೊತ್ತಕ್ಕಿಂತ ಇತರ ಜನರ ಪಾಲ್ಗೊಳ್ಳುವಿಕೆಯ ಬಗ್ಗೆ ತನಿಖೆ ಅಗತ್ಯ ! – ಸರಕಾರಿ ಅಭಿಯೋಜಕರು

ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕರು ವಾದ ಮಂಡಿಸುತ್ತಾ, ಈ ದೇವಸ್ಥಾನವು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ದೇವರ ದರ್ಶನಕ್ಕಾಗಿ ವಿಶ್ವಸ್ತರು ನಕಲಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿ ಮಾಡಿ ಮುಗ್ಧ ಭಕ್ತರನ್ನು ವಂಚಿಸುತ್ತಿದ್ದಾರೆ. ಸಂಬಂಧಿಕರ ಹೆಸರಿನಲ್ಲಿ ಈ ಗ್ಯಾಂಗ್ ನಡೆಸಲಾಗುತ್ತಿದೆ. ಈ ಜಾಲದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ತನಿಖೆ ನಡೆಯಬೇಕಿದೆ. ಜಗತ್ತಿನಾದ್ಯಂತ ತ್ರ್ಯಂಬಕೇಶ್ವರ ದೇವಾಲಯ ಹೆಸರುವಾಸಿಯಾಗಿದ್ದು, ಕೆಲವು ವಿಧಿ-ವಿಧಾನಗಳನ್ನು ಕೇವಲ ಈ ದೇವಸ್ಥಾನದಲ್ಲಿ ಮಾತ್ರ ಮಾಡಲಾಗುತ್ತದೆ. ಈಗಾಗಲೇ ನಾಶಿಕ್‌ ನ ಹೆಸರು ಹಾಳಾಗುತ್ತಿದ್ದು, ಇಂತಹ ಘಟನೆಗಳು ನಗರಕ್ಕೆ ಮತ್ತಷ್ಟು ಕಳಂಕ ತರುತ್ತಿವೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ನಡೆದಿದ್ದೇನು?

ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ ೧೧ ರಂದು ಪಂಚವಟಿಯ ಭಕ್ತರಾದ ಅನಂತಾ ಮೆಹಂದಳೆ ಮತ್ತು ಅವರ ಸ್ನೇಹಿತರು ದರ್ಶನಕ್ಕಾಗಿ ಹೋಗಿದ್ದರು. ೧೦ ನಿಮಿಷಗಳಲ್ಲಿ ದರ್ಶನ ಮಾಡಿಸುವ ಆಮಿಷವೊಡ್ಡಿ ಆರೋಪಿಗಳು ಅವರಿಂದ ೩,೦೦೦ ಹಣ ಪಡೆದಿದ್ದರು. ೨೦೦ ರೂಪಾಯಿಯ ಅಧಿಕೃತ ಪಾಸ್ ಲಭ್ಯವಿದ್ದರೂ, ಭಕ್ತರಿಂದ ೩ ಸಾವಿರದಿಂದ ೧೨ ಸಾವಿರ ರೂಪಾಯಿಗಳವರೆಗೆ ಹಣದ ಬೇಡಿಕೆ ಮಾಡಲಾಗುತ್ತದೆ. ದೇವಸ್ಥಾನದ ಟ್ರಸ್ಟ್ ನಿಂದ ಯಾವುದೇ ಅಧಿಕೃತ ‘ಪೇಯ್ಡ್ ದರ್ಶನ’ ಸೌಲಭ್ಯವಿಲ್ಲದಿದ್ದರೂ ಸಹ ಭಕ್ತರನ್ನು ಈ ರೀತಿ ವಂಚಿಸಲಾಗುತ್ತಿದೆ. ಈ ಕುರಿತು ಅನಂತಾ ಮೆಹಂದಳೆ ಅವರು ದೂರು ನೀಡಿದ್ದರು.

ಪೊಲೀಸರಿಂದ ನಡೆದ ‘ಸ್ಟಿಂಗ್ ಆಪರೇಷನ್’ !(ರಹಸ್ಯ ಕಾರ್ಯಾಚರಣೆ)

ನಾಶಿಕ್ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಬಾಲಾಸಾಹೇಬ ಪಾಟೀಲ ಈ ಬಗ್ಗೆ ಮಾತನಾಡಿ, ತ್ರ್ಯಂಬಕೇಶ್ವರದಲ್ಲಿ ವಿಶೇಷ ದರ್ಶನಕ್ಕೆ ೨೦೦ ರೂಪಾಯಿ ಶುಲ್ಕವಿದೆ. ಆದರೆ ತುರ್ತು ದರ್ಶನ ಕೊಡಿಸಲು ಕೆಲವು ದಲ್ಲಾಳಿಗಳು ಕೆಲಸ ಮಾಡುತ್ತಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ನ್ಯಾಯಾಧೀಶರಿಂದ ಕ್ರಮ ಕೈಗೊಳ್ಳಲು ಆದೇಶ ಬಂದಿತ್ತು. ಭಕ್ತರನ್ನು ಹೇಗೆ ಲೂಟಿ ಮಾಡಲಾಗುತ್ತದೆ ಎಂಬುದನ್ನು ಪತ್ತೆಹಚ್ಚಲು ನಾವು ‘ಸ್ಟಿಂಗ್ ಆಪರೇಷನ್’ ಮಾಡಿದೆವು. ಟ್ರಸ್ಟ್ ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪೂರ್ವ ದ್ವಾರದಿಂದ ಹಣ ನೀಡಿದ ಭಕ್ತರನ್ನು ಬಿಡಲಾಗುತ್ತಿತ್ತು. ೩,೦೦೦ ರೂ. ಪಡೆದು ೧೦೦ ರಿಂದ ೧೫೦ ಜನರನ್ನು ಬಿಡಲಾಗುತ್ತಿತ್ತು. ಯಾರು ವಿಶ್ವಸ್ತ ಹುದ್ದೆಯ ದುರುಪಯೋಗಪಡಿಸಿಕೊಂಡಿದ್ದಾರೋ ಅವರ ವಿಚಾರಣೆ ನಡೆಸಲಾಗುವುದು. ಎಲ್ಲಾ ಪುರಾವೆಗಳನ್ನು ನ್ಯಾಯಾಲಯದ ಮುಂದಿಡಲಾಗುವುದು ಎಂದು ಬಾಲಾಸಾಹೇಬ ಅವರು ವಿವರಿಸಿದರು.

ಸಂಪಾದಕೀಯ ನಿಲುವು

  • ದೇವಸ್ಥಾನಗಳು ಸರಕಾರ ಅಥವಾ ರಾಜಕೀಯ ನೇಮಕಾತಿ ಹೊಂದಿರುವ ಸಮಿತಿಗಳ ವಶಕ್ಕೆ ಹೋದಾಗ, ಅಲ್ಲಿ ಭಕ್ತಿಯ ಬದಲು ವ್ಯಾಪಾರಿ ಮನೋಭಾವವು ಕಾಣಿಸುತ್ತದೆ. ತ್ರ್ಯಂಬಕೇಶ್ವರದ ಈ ಘಟನೆಯು ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮಗಳನ್ನೇ ಎತ್ತಿ ತೋರಿಸುತ್ತದೆ !
  • ದೇವಸ್ಥಾನದಲ್ಲಿ ನಡೆದಿರುವ ಈ ಪ್ರಕರಣ ಕೇವಲ ಆರ್ಥಿಕ ಹಗರಣವಲ್ಲ, ಹಿಂದೂಗಳ ಅಸ್ಮಿತೆಯ ಮೇಲಿನ ದಾಳಿಯಾಗಿದೆ. ‘ಅತಿಥಿ ದೇವೋ ಭವ |’ ಎಂದು ನಂಬುವ ಈ ಭೂಮಿಯಲ್ಲಿ ಭಕ್ತರ ಸುಲಿಗೆ ಮಾಡಲು ವಿಶ್ವಸ್ತರೇ ಇಂತಹ ಜಾಲವನ್ನು ನಡೆಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ !
  • ಇಂತಹ ಅಪರಾಧಿಗಳಿಗೆ ಯಾವುದೇ ಧಾರ್ಮಿಕ ಟ್ರಸ್ಟ್ ಗಳಲ್ಲಿ ಕೆಲಸ ಮಾಡದಂತೆ ಆಜನ್ಮ ನಿಷೇಧ ಹೇರಬೇಕು !