ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಪೋಸ್ಟ್‌ಗಳು ಅವಹೇಳನಕಾರಿ ಮತ್ತು ಕೋಮುವಾದಿ !

ದೆಹಲಿ ಹೈಕೋರ್ಟ್‌ನಿಂದ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ

ನವದೆಹಲಿ – 2013 ರಿಂದ 2017 ರ ಅವಧಿಯಲ್ಲಿ ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯವೀರ ಸಾವರ್ಕರ್ ಅವರ ಬಗ್ಗೆ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ‘ಎಕ್ಸ್’ (X) ನಲ್ಲಿ ಪ್ರಕಟಿಸಿದ ಆಕ್ಷೇಪಾರ್ಹ ಬರಹಗಳ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬರಹಗಳ ವಿರುದ್ಧ ಜಂಟಿಯಾಗಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ‘ಎಕ್ಸ್’ ಸಂಸ್ಥೆ, ಕೇಂದ್ರ ಸರಕಾರ ಮತ್ತು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ನ್ಯಾಯಾಲಯವು ರಾಣಾ ಅಯ್ಯೂಬ್, ಎಕ್ಸ್, ಕೇಂದ್ರ ಸರಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಕೇಳಿದೆ. ಇದರ ಮುಂದಿನ ವಿಚಾರಣೆ ಏಪ್ರಿಲ್ 10 ರಂದು ನಡೆಯಲಿದೆ. ನ್ಯಾಯಾಲಯದ ಆದೇಶದ ಮೇರೆಗೆ ಈಗಾಗಲೇ ರಾಣಾ ಅಯ್ಯೂಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

1. ನ್ಯಾಯಮೂರ್ತಿಗಳ ಪುರುಷೇಂದ್ರ ಕುಮಾರ್ ಇವರು, ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿನ ಈ ಬರಹಗಳು ಅತ್ಯಂತ ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಮತಾಂಧ ಸ್ವರೂಪದ್ದಾಗಿವೆ ಎಂದು ಹೇಳಿದ್ದಾರೆ.

2. ವಕೀಲೆ ಅಮಿತಾ ಸಚ್‌ದೇವ್ ಸಲ್ಲಿಸಿದ ಅರ್ಜಿಯ ಮೇರೆಗೆ ಈ ವಿಚಾರಣೆ ನಡೆಯುತ್ತಿದೆ. ಅವರು ಈ ಹಿಂದೆ ಸಾಕೇತ್ ನ್ಯಾಯಾಲಯದಲ್ಲಿ ರಾಣಾ ಅಯ್ಯೂಬ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಒತ್ತಾಯಿಸಿದ್ದರು. ಅವರ ದೂರಿನ ಆಧಾರದ ಮೇಲೆ, ವಿಚಾರಣಾ ನ್ಯಾಯಾಲಯವು ಅಯ್ಯೂಬ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮತ್ತು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿತ್ತು. ಸಂಬಂಧಪಟ್ಟ ಬರಹಗಳು ಪ್ರಸ್ತುತ ‘ಎಕ್ಸ್’ ನಲ್ಲಿ ಲಭ್ಯವಿಲ್ಲ ಎಂದು ದೆಹಲಿ ಪೊಲೀಸರು ನಂತರ ನ್ಯಾಯಾಲಯಕ್ಕೆ ತಿಳಿಸಿದ್ದರು.

ವಿವಾದಾತ್ಮಕ ಬರಹಗಳು ಯಾವುವು?

2013 ರ ತಮ್ಮ ಒಂದು ಬರಹದಲ್ಲಿ ರಾಣಾ ಅಯ್ಯೂಬ್ ಅವರು, “ರಾವಣನು ಎಂದಿಗೂ ಸೀತೆಯನ್ನು ಸ್ಪರ್ಶಿಸಲಿಲ್ಲ. ಅವನು ಹಾಗೆ ಮಾಡಬಹುದಿತ್ತು. ರಾಮನು ಎಂದಿಗೂ ಸೀತೆಗಾಗಿ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ. ಅವನು ಹಾಗೆ ಮಾಡಬಹುದಿತ್ತು” ಎಂದು ಹೇಳಿದ್ದರು. ಈ ರೀತಿ ಬರೆಯುವ ಮೂಲಕ ಅವರು ಒಂದು ಅರ್ಥದಲ್ಲಿ ರಾವಣನನ್ನು ವೈಭವೀಕರಿಸಿ ರಾಮನನ್ನು ಕೀಳಾಗಿ ತೋರಿಸುವ ಪ್ರಯತ್ನ ಮಾಡಿದ್ದರು.

2015 ರಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಲಾಗಿತ್ತು. ಹಾಗೆಯೇ, 2016 ರಲ್ಲಿ ಗಾಯಗೊಂಡ ಮಗುವಿನ ಚಿತ್ರವನ್ನು ಪ್ರಕಟಿಸುವ ಮೂಲಕ ಭಾರತೀಯ ಸೇನೆಯನ್ನು ಟೀಕಿಸಲಾಗಿತ್ತು.