ಕಾಶ್ಮೀರ: ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ಬಂಧನ: ೧೬ ವರ್ಷಗಳಿಂದ ಪರಾರಿಯಾಗಿದ್ದ ಉಗ್ರನ ಸೆರೆ

ಶ್ರೀನಗರ – ಜಮ್ಮು-ಕಾಶ್ಮೀರ ಪೊಲೀಸರು ಲಷ್ಕರ್-ಎ-ತೊಯ್ಬಾದ ‘ಭಯೋತ್ಪಾದಕ ಮಾಡ್ಯೂಲ್’ಗೆ (ಭಯೋತ್ಪಾದಕ ಕೃತ್ಯಗಳ ಯೋಜನೆಗಾಗಿ ಕಾರ್ಯನಿರ್ವಹಿಸುವ ಗುಂಪು) ಸಂಬಂಧಿಸಿದ ಒಟ್ಟು ೫ ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಾಗಿದ್ದರೆ, ಉಳಿದ ಮೂವರು ಅವರಿಗೆ ಸಹಾಯ ಮಾಡುತ್ತಿದ್ದವರಾಗಿದ್ದಾರೆ. ಒಬ್ಬ ಭಯೋತ್ಪಾದಕನನ್ನು ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಎಂದು ಗುರುತಿಸಲಾಗಿದೆ. ಅಬ್ದುಲ್ಲಾ ಕಳೆದ ೧೬ ವರ್ಷಗಳಿಂದ ತಲೆಮರೆಸಿಕೊಂಡಿದ್ದನು, ಇನ್ನೊಬ್ಬ ಪಾಕಿಸ್ತಾನಿ ಭಯೋತ್ಪಾದಕ ಉಸ್ಮಾನ್ ಅಲಿಯಾಸ್ ಖುಬೈಬ್ ಎಂದು ಗುರುತಿಸಲಾಗಿದೆ.

​೧. ಜಮ್ಮು-ಕಾಶ್ಮೀರ ಪೊಲೀಸರೊಂದಿಗೆ ಕೇಂದ್ರ ಭದ್ರತಾ ಸಂಸ್ಥೆಗಳೂ ಸೇರಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಜಮ್ಮು-ಕಾಶ್ಮೀರ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಒಟ್ಟು ೧೯ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.

​೨. ಈ ಸಮಯದಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಜಾಲದ ಕಾರ್ಯ ಚಟುವಟಿಕೆಗಳು ಬೆಳಕಿಗೆ ಬಂದಿವೆ. ಇದರಲ್ಲಿ ಭಾಗಿಯಾಗಿರುವ ಜನರು ಭಯೋತ್ಪಾದಕರಿಗೆ ಆರ್ಥಿಕ ಮತ್ತು ಇತರ ಸಹಾಯಗಳನ್ನು ಮಾಡುತ್ತಿದ್ದರು.

​೩. ಬಂಧಿತ ೫ ಜನರಲ್ಲಿ ಶ್ರೀನಗರದ ೩ ವ್ಯಕ್ತಿಗಳಿದ್ದಾರೆ. ಮೊಹಮ್ಮದ್ ನಕೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮೀರ್ ಅಲಿಯಾಸ್ ಮಾಮಾ, ಇವರನ್ನು ಭಯೋತ್ಪಾದಕರಿಗೆ ಆಶ್ರಯ ಮತ್ತು ಆಹಾರ ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

​೪. ಈ ಭಯೋತ್ಪಾದಕರು ಸುಮಾರು ೧೬ ವರ್ಷಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಬಂದಿದ್ದರು. ಈ ಉಗ್ರರು ಕಾಶ್ಮೀರ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದರು ಹಾಗೂ ಸುಮಾರು ೪೦ ಭಯೋತ್ಪಾದಕರ ನೇತೃತ್ವ ವಹಿಸಿದ್ದರು. ಇವರಲ್ಲಿ ಹೆಚ್ಚಿನವರನ್ನು ಭದ್ರತಾ ಪಡೆಗಳು ನಂತರ ಹತ್ಯೆಗೈದಿವೆ.

​೫. ಲಷ್ಕರ್-ಎ-ತೊಯ್ಬಾದ ಜಾಲವು ಇತರ ರಾಜ್ಯಗಳಿಗೂ ಹರಡಿರುವ ಕಾರಣ, ಒಬ್ಬ ಭಯೋತ್ಪಾದಕ ನಕಲಿ ದಾಖಲೆಗಳನ್ನು ಬಳಸಿಕೊಂಡು ದೇಶದಿಂದ ಹೊರಗೆ ಪಲಾಯನಗೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.