ನೇಪಾಳ: ಕಳೆದ ೩ ದಶಕಗಳಿಂದ ಅಧಿಕಾರದಲ್ಲಿರುವ ನಾಯಕರ ಆಸ್ತಿ ತನಿಖೆ !

ಕಾಠಮಂಡು (ನೇಪಾಳ) – ನೇಪಾಳದಲ್ಲಿ ಬಾಲೆನ್ ಶಾ ಅವರ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜಕೀಯದಲ್ಲಿ ಸಂಚಲನ ಮೂಡಿದೆ. ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಬಂಧನದ ನಂತರ, ಇದೀಗ ೧೯೯೦ ರಿಂದ ೨೦೨೬ ರ ಅವಧಿಯಲ್ಲಿ ಸಾರ್ವಜನಿಕ ಹುದ್ದೆಗಳಲ್ಲಿದ್ದ ನಾಯಕರು ಮತ್ತು ಅಧಿಕಾರಿಗಳ ಆಸ್ತಿಯನ್ನು ತನಿಖೆ ಮಾಡುವುದಾಗಿ ಸರಕಾರವು ಘೋಷಿಸಿದೆ. ನೂತನವಾಗಿ ಚುನಾಯಿತವಾದ ಸರಕಾರವು ಮಾರ್ಚ್ ೨೮ ರಂದು ೧೦೦ ಅಂಶಗಳ ‘ಸುಶಾಸನ’ (ಉತ್ತಮ ಆಡಳಿತ) ಕಾರ್ಯಸೂಚಿಯನ್ನು ಪ್ರಕಟಿಸಿದ್ದು, ಮುಂದಿನ ೧೫ ದಿನಗಳಲ್ಲಿ ಸಮರ್ಥ ಸಮಿತಿಯನ್ನು ರಚಿಸುವ ಸುಳಿವು ನೀಡಿದೆ.

ಆಸ್ತಿ ತನಿಖೆಯ ಸಂಪೂರ್ಣ ಪ್ರಕ್ರಿಯೆಯನ್ನು ಬಲಪಡಿಸಲು, ೧೦೦ ದಿನಗಳ ಒಳಗಾಗಿ ಡಿಜಿಟಲ್ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಸಿದ್ಧಪಡಿಸುವಂತೆ ನೇಪಾಳ ಸರಕಾರ ಬ್ಯಾಂಕ್ ಗೆ ನಿರ್ದೇಶನ ನೀಡಿದೆ. ಅನುಮಾನಾಸ್ಪದ ವ್ಯವಹಾರಗಳನ್ನು ಪತ್ತೆಹಚ್ಚಿ ತನಿಖಾ ಸಂಸ್ಥೆಗಳಿಗೆ ಸ್ವಯಂಚಾಲಿತವಾಗಿ ಸೂಚನೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಓಲಿ ಅವರ ಪಕ್ಷವು ಈ ಕ್ರಮವನ್ನು ಸೇಡಿನ ರಾಜಕಾರಣ ಎಂದು ಕರೆದರೆ, ಸರಕಾರವು ಈ ನಿರ್ಧಾರವು ಕಾನೂನಿನ ಚೌಕಟ್ಟಿನಲ್ಲಿ ಕೈಗೊಂಡ ಕ್ರಮವೆಂದು ಹೇಳಿದೆ.

ಕಾಲೇಜುಗಳಲ್ಲಿ ರಾಜಕೀಯ ನಿಷೇಧ

ಬಾಲೆನ್ ಶಾ ಅವರ ಸರಕಾರವು ವಿದ್ಯಾರ್ಥಿ ರಾಜಕೀಯವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇನ್ಮುಂದೆ ಶಾಲಾ-ಕಾಲೇಜುಗಳು ರಾಜಕೀಯದ ಅಡ್ಡೆಗಳಾಗುವುದಿಲ್ಲ, ಬದಲಾಗಿ ಕೇವಲ ಅಧ್ಯಯನಕ್ಕಾಗಿ ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದ ವಿದ್ಯಾರ್ಥಿ ಸಂಘಟನೆಗಳು 60 ದಿನಗಳ ಒಳಗೆ ಕಾಲೇಜು ಆವರಣದಿಂದ ತಮ್ಮ ಕಚೇರಿಗಳನ್ನು ತೆರವುಗೊಳಿಸಬೇಕಾಗುತ್ತದೆ. ಅವುಗಳ ಸ್ಥಾನದಲ್ಲಿ, ಸರಕಾರವು 90 ದಿನಗಳ ಒಳಗೆ ‘ಸ್ಟೂಡೆಂಟ್ ಕೌನ್ಸಿಲ್’ (ವಿದ್ಯಾರ್ಥಿ ಮಂಡಳಿ) ಅಥವಾ ‘ವಾಯ್ಸ್ ಆಫ್ ಸ್ಟೂಡೆಂಟ್ಸ್’ (ವಿದ್ಯಾರ್ಥಿಗಳ ಧ್ವನಿ) ನಂತಹ ಹೊಸ ವೇದಿಕೆಗಳನ್ನು ಪ್ರಾರಂಭಿಸಲಿದೆ. ಇವು ಸಂಪೂರ್ಣವಾಗಿ ರಾಜಕೀಯೇತರವಾಗಿರುತ್ತವೆ ಮತ್ತು ಕೇವಲ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ.

ಶಾಲಾ-ಕಾಲೇಜುಗಳ ವಿದೇಶಿ ಹೆಸರುಗಳನ್ನು ಬದಲಾಯಿಸಲು ಆದೇಶ!

‘ಆಕ್ಸ್‌ಫರ್ಡ್’, ‘ಪೆಂಟಗನ್’ ಅಥವಾ ‘ಸೇಂಟ್ ಕ್ಸೇವಿಯರ್ಸ್’ ಮುಂತಾದ ಶಾಲಾ-ಕಾಲೇಜುಗಳ ವಿದೇಶಿ ಹೆಸರುಗಳನ್ನು ಬದಲಾಯಿಸಿ, ಅವುಗಳಿಗೆ ನೇಪಾಳಿ ಹೆಸರುಗಳನ್ನೇ ಇಡುವಂತೆಯೂ ಬಾಲೆನ್ ಶಾ ಸರಕಾರ ಆದೇಶಿಸಿದೆ.

ಭಾರತವು ಕಳೆದ 78 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ಈಗ ನೇಪಾಳ ಮಾಡುತ್ತಿದೆ, ಇದು ಅಭಿನಂದನೀಯ! ಭಾರತವೂ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಜನರು ಸರಕಾರದ ಮೇಲೆ ಒತ್ತಡ ಹೇರಬೇಕು!

ಸರಕಾರ ಕೈಗೊಂಡ ಇತರ ನಿರ್ಧಾರಗಳು

  • 5ನೇ ತರಗತಿಯವರೆಗಿನ ಮಕ್ಕಳಿಗೆ ಸಾಂಪ್ರದಾಯಿಕ ಪರೀಕ್ಷೆಗಳು ರದ್ದು.
  • ಪದವಿಯವರೆಗಿನ ಶಿಕ್ಷಣ ಪಡೆಯಲು ನೇಪಾಳಿ ಪೌರತ್ವ ಕಡ್ಡಾಯವಲ್ಲ.
  • ವಿಶ್ವವಿದ್ಯಾಲಯಗಳು ನಿಗದಿತ ಸಮಯದೊಳಗೆ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸುವುದು ಕಡ್ಡಾಯ.

ಸಂಪಾದಕೀಯ ನಿಲುವು

ಭಾರತದಲ್ಲೂ ಇಂತಹ ಬೇಡಿಕೆ ಕೇಳಿಬಂದಲ್ಲಿ ಆಶ್ಚರ್ಯಪಡಬೇಕಿಲ್ಲ !