Farsa Wale Baba Murder : ಗೋವುಗಳ ಕಳ್ಳಸಾಗಾಣಿಕೆದಾರರನ್ನು ಬೆನ್ನಟ್ಟುತ್ತಿದ್ದ ಗೋರಕ್ಷಕ ಫರ್ಸಾ ವಾಲೆ ಬಾಬಾ ಅವರ ಮೇಲೆ ಟ್ರಕ್ ಹರಿಸಿ ಹತ್ಯೆ

  • ಮಥುರಾ (ಉತ್ತರಪ್ರದೇಶ) ಇಲ್ಲಿನ ಘಟನೆ

  • ಬೆಂಬಲಿಗರಿಂದ ಹೆದ್ದಾರಿಯಲ್ಲಿ ಕಲ್ಲುತೂರಾಟ, ಪೊಲೀಸರ ವಾಹನಗಳ ಜಖಂ

ಮಥುರಾ (ಉತ್ತರಪ್ರದೇಶ) – ಇಲ್ಲಿ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ ಎಂದೇ ಪ್ರಖ್ಯಾತರಾಗಿದ್ದ ಗೋರಕ್ಷಕರ ಮೇಲೆ ಟ್ರಕ್‌ ಹರಿಸಿದ್ದರಿಂದ ಅವರು ಮೃತಪಟ್ಟಿದ್ದಾರೆ. ಗೋರಕ್ಷಕ ಬಾಬಾ ಅವರು ಮುಂಜಾನೆ ೪ ಗಂಟೆಯ ಸುಮಾರಿಗೆ ಮಥುರಾ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಂಟೇನರ್ ಅನ್ನು ತಡೆದಿದ್ದರು. ಇದರಲ್ಲಿ ಗೋವುಗಳ ಕಳ್ಳಸಾಗಾಟ ನಡೆಯುತ್ತಿದೆ ಎಂಬ ಸಂಶಯವಿತ್ತು. ‘ಈ ಸಮಯದಲ್ಲಿ ಕಂಟೇನರ್‌ ನ ಹಿಂದಿನಿಂದ ಬಂದ ಟ್ರಕ್ ಬಾಬಾ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ; ಆದರೆ ಬಾಬಾ ಅವರ ಬೆಂಬಲಿಗರು ಇದನ್ನು ಗೋಕಳ್ಳಸಾಗಾಣಿಕೆದಾರರು ಮಾಡಿದ ಹತ್ಯೆ ಎಂದು ಆರೋಪಿಸಿ ಇಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ಬೆಂಬಲಿಗರು ರಸ್ತೆ ತಡೆ ನಡೆಸಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಿಂದ ಇಲ್ಲಿ ಅನೇಕ ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಹಿಂಸಾಚಾರದಲ್ಲಿ ಪೊಲೀಸರ ೫ – ೬ ವಾಹನಗಳನ್ನು ಜಖಂಗೊಳಿಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಲಠಿ ಪ್ರಹಾರ ನಡೆಸಿದರು ಮತ್ತು ಅಶ್ರುವಾಯು ಸಿಡಿಸಿದರು.

ಏನಾಯಿತು ?

ಬರಸಾನಾದ ಅಜಾನೌಖ್ ಗ್ರಾಮದಲ್ಲಿ ಗೋಶಾಲೆ ನಡೆಸುತ್ತಿದ್ದ ಫರ್ಸಾ ವಾಲೆ ಬಾಬಾ ಅವರಿಗೆ ಕೋಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದರಲ್ಲಿ ಜಾನುವಾರುಗಳ ಅಕ್ರಮ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಬಾ ಅವರು ಇಬ್ಬರು ಯುವಕರೊಂದಿಗೆ ಗೋಶಾಲೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟರು. ಅವರು ಹೆದ್ದಾರಿಯ ಬಾಥನ್ ಗೇಟ್ ಪ್ರದೇಶಕ್ಕೆ ತಲುಪಿದಾಗ, ಹಸುಗಳನ್ನು ಸಾಗಿಸುತ್ತಿದ್ದ ಒಂದು ಟ್ರಕ್ ಕಂಡುಬಂದಿತು. ಬಾಬಾ ಅವರು ಟ್ರಕ್ ನಿಲ್ಲಿಸಲು ಪ್ರಯತ್ನಿಸಿದಾಗ, ಗೋಕಳ್ಳಸಾಗಾಣಿಕೆದಾರರು ವೇಗವನ್ನು ಹೆಚ್ಚಿಸಿದರು. ಸುಮಾರು ೭ ಕಿಲೋಮೀಟರ್ ಬೆನ್ನಟ್ಟಿದ ನಂತರ, ಬಾಬಾ ಅವರು ಕೊತ್ವಾನ್ ಚೌಕಿ ವ್ಯಾಪ್ತಿಯ ನವಪುರ ಗ್ರಾಮಕ್ಕೆ ತಲುಪಿದರು. ಅವರು ಟ್ರಕ್‌ ನ ಮುಂದೆ ಬಂದು ಅದನ್ನು ತಡೆದರು. ಅವರು ದ್ವಿಚಕ್ರ ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಟ್ರಕ್ ಚಾಲಕನು ಟ್ರಕ್ ಚಲಾಯಿಸಿ ಬಾಬಾ ಅವರ ಮೇಲೆ ಹರಿಸಿದ್ದಾನೆ ಎಂದು ಅವರ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಬಾಬಾ ಅವರ ಸಾವು ನಿಖರವಾಗಿ ಹೇಗೆ ಸಂಭವಿಸಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಸಂದರ್ಭದಲ್ಲಿ ಒಬ್ಬ ಗೋಕಳ್ಳಸಾಗಾಣಿಕೆದಾರನನ್ನು ಬಂಧಿಸಲಾಗಿದ್ದು, ಆತನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ. ಫರ್ಸಾ ಬಾಬಾ ಅವರು ಗೋರಕ್ಷಕರೆಂದು ಪ್ರಸಿದ್ಧರಾಗಿದ್ದರು. ಅವರು ಯಾವಾಗಲೂ ಕೈಯಲ್ಲಿ ಕೊಡಲಿಯನ್ನು (ಫರ್ಸಾ) ಹಿಡಿದಿರುತ್ತಿದ್ದರು, ಆದ್ದರಿಂದ ಅವರಿಗೆ ‘ಫರ್ಸಾ ವಾಲೆ ಬಾಬಾ’ ಎಂಬ ಅನ್ವರ್ಥ ನಾಮ ಬಂದಿತ್ತು.

ಸಂಪಾದಕೀಯ ನಿಲುವು

  • ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ; ಆದರೆ ಪೊಲೀಸ್ ಮತ್ತು ಆಡಳಿತವು ನಿಷ್ಕ್ರಿಯ ಹಾಗೂ ಭ್ರಷ್ಟವಾಗಿರುವುದರಿಂದ ಗೋಹತ್ಯೆಗಳು ನಿಂತಿಲ್ಲ. ಅದರಲ್ಲೂ ಗೋರಕ್ಷಕರು ಇಂದಿಗೂ ಗೋಹತ್ಯೆ ತಡೆಯಲು ಬೀದಿಗಿಳಿದು ರಾತ್ರಿ-ಹಗಲು ಕೆಲಸ ಮಾಡಬೇಕಾಗುತ್ತಿದೆ ಮತ್ತು ಅಂತಹ ಸಮಯದಲ್ಲಿ ಇಂತಹ ಹತ್ಯೆಗಳು ನಡೆಯುತ್ತಿವೆ. ಪೊಲೀಸ್ ಮತ್ತು ಆಡಳಿತಕ್ಕೆ ಇದು ನಾಚಿಕೆಗೇಡಿನ ಸಂಗತಿ !
  • ಕೇವಲ ಕಾಯ್ದೆಗಳನ್ನು ರೂಪಿಸುವುದರಿಂದ ಅಪರಾಧಗಳು ನಿಲ್ಲುವುದಿಲ್ಲ, ಬದಲಿಗೆ ಅವುಗಳ ಕಟ್ಟುನಿಟ್ಟಾದ ಅನುಷ್ಠಾನ ಅಗತ್ಯವಿರುತ್ತದೆ. ಗೋಹತ್ಯೆ, ಮತಾಂತರ ವಿರೋಧಿ ಕಾಯ್ದೆಗಳನ್ನು ಮಾಡಿದರೂ ಅವುಗಳ ಕಟ್ಟುನಿಟ್ಟಾದ ಜಾರಿ ಆಗದಿದ್ದರೆ ಅವುಗಳಿಂದ ಏನು ಪ್ರಯೋಜನ ?