|

ತೆಹ್ರಾನ್ / ವಾಷಿಂಗ್ಟನ್ / ನವದೆಹಲಿ / ಟೆಲ್ ಅವಿವ್ – ಅಮೆರಿಕವು ಇರಾನ್ನ ಆರ್ಥಿಕ ಬೆನ್ನೆಲುಬಾಗಿರುವ ಖಾರ್ಗ್ ದ್ವೀಪದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ. ದ್ವೀಪದಲ್ಲಿ 15ಕ್ಕೂ ಹೆಚ್ಚು ಸ್ಫೋಟಗಳು ಸಂಭವಿಸಿದ್ದು, ಮಿಲಿಟರಿ ನೆಲೆಗಳು, ಜೋಶನ್ ಸೀ ಬೇಸ್, ವಿಮಾನ ನಿಲ್ದಾಣದ ನಿಯಂತ್ರಣ ಗೋಪುರ ಮತ್ತು ಹೆಲಿಕಾಪ್ಟರ್ ಹ್ಯಾಂಗರ್ಗಳನ್ನು ಗುರಿಯಾಗಿಸಲಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನ್ನ ಖಾತಮ್ ಅಲ್-ಅಂಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರರು ಮಾತನಾಡಿ, “ಅಮೆರಿಕವು ನಮ್ಮ ತೈಲ, ಆರ್ಥಿಕ ಅಥವಾ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿದರೆ, ನಾವು ತಕ್ಷಣ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಅಷ್ಟೇ ಅಲ್ಲದೆ, ಈ ಪ್ರದೇಶದಲ್ಲಿ ಅಮೆರಿಕದೊಂದಿಗೆ ಪಾಲುದಾರಿಕೆ ಹೊಂದಿರುವ ಅಥವಾ ಅಮೆರಿಕವನ್ನು ಬೆಂಬಲಿಸುವ ಸಂಸ್ಥೆಗಳು ಮತ್ತು ಅವರ ಒಡೆತನದ ಆಸ್ತಿಗಳ ಮೇಲೂ ಬೃಹತ್ ಪ್ರಮಾಣದ ದಾಳಿ ನಡೆಸುತ್ತೇವೆ,” ಎಂದು ಎಚ್ಚರಿಸಿದ್ದಾರೆ.
ಅಮೆರಿಕ ಸೇನೆಯು ಮಧ್ಯಪ್ರಾಚ್ಯದಲ್ಲಿ 2 ಸಾವಿರದ 500 ಸೈನಿಕರು ಮತ್ತು ವಿನಾಶಕಾರಿ ಯುದ್ಧನೌಕೆಯೊಂದನ್ನು ನಿಯೋಜಿಸಲು ಆದೇಶಿಸಿದೆ. ಜಗತ್ತಿನಾದ್ಯಂತ ಅನಿಲ ಮತ್ತು ಇಂಧನದ ಕೊರತೆ ಉಂಟಾಗುತ್ತಿರುವುದರಿಂದ ಈಗಾಗಲೇ ಹಲವು ದೇಶಗಳಲ್ಲಿ ಆತಂಕ ಶುರುವಾಗಿದೆ. ಇರಾನ್ ‘ಹೋರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿರುವುದು ಅಮೆರಿಕದ ಮೇಲೆ ತೀವ್ರ ಒತ್ತಡ ಹೇರಿದೆ. “ಈ ಮಾರ್ಗವನ್ನು ಕೂಡಲೇ ಮುಕ್ತಗೊಳಿಸಿ, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ,” ಎಂದು ಅಮೆರಿಕ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಇದೀಗ ಇರಾನ್ ನೀಡಿರುವ ಹೊಸ ಎಚ್ಚರಿಕೆಯು ಯುದ್ಧದ ತೀವ್ರತೆ ಹೆಚ್ಚುತ್ತಿರುವುದರ ಮುನ್ಸೂಚನೆಯಾಗಿದೆ.
ಇರಾನ್ಗೆ ಖಾರ್ಗ್ ದ್ವೀಪದ ಮಹತ್ವವೇನು?
ಇರಾನ್ನ ಒಟ್ಟು ಕಚ್ಚಾ ತೈಲದ ಶೇ. 90ರಷ್ಟು ತೈಲವು ಖಾರ್ಗ್ ದ್ವೀಪದ ಮೂಲಕವೇ ಇತರ ದೇಶಗಳಿಗೆ ರಫ್ತಾಗುತ್ತದೆ. ಇಲ್ಲಿ ಬೃಹತ್ ತೈಲ ಟರ್ಮಿನಲ್, ಪೈಪ್ಲೈನ್ಗಳು, ಸಂಗ್ರಹಣಾ ಟ್ಯಾಂಕ್ಗಳು ಮತ್ತು ಸಾರಿಗೆ ವ್ಯವಸ್ಥೆಗಳಿವೆ. ಈ ದ್ವೀಪದಲ್ಲಿ ಪ್ರತಿದಿನ 70 ಲಕ್ಷ ಬ್ಯಾರೆಲ್ ತೈಲ ಲಭ್ಯವಿರುತ್ತದೆ.
“ಒಂದು ಕಾಲದಲ್ಲಿ ರಷ್ಯಾವನ್ನು ವಿರೋಧಿಸುತ್ತಿದ್ದ ಅಮೆರಿಕ, ಇಂದು ಜಗತ್ತಿಗೆ ರಷ್ಯಾದಿಂದಲೇ ತೈಲ ಖರೀದಿಸಲು ವಿನಂತಿಸುತ್ತಿದೆ!”ಅಮೆರಿಕ ಮತ್ತು ಯುರೋಪ್ ವಿರುದ್ಧ ಇರಾನ್ ವ್ಯಂಗ್ಯ! ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಅಮೆರಿಕ ಹಲವು ತಿಂಗಳುಗಳ ಕಾಲ ಒತ್ತಡ ಹೇರಿತ್ತು. ಆದರೆ ಈಗ ಇರಾನ್ ವಿರುದ್ಧ ಯುದ್ಧ ಆರಂಭವಾಗಿ ಎರಡು ವಾರಗಳು ಕಳೆಯುತ್ತಿದ್ದಂತೆ, ತೈಲ ಬೆಲೆ ಏರಿಕೆಯ ಭೀತಿಯಿಂದಾಗಿ ಅಮೆರಿಕವು, ಭಾರತ ಸೇರಿದಂತೆ ಇಡೀ ಜಗತ್ತಿಗೆ ರಷ್ಯಾದಿಂದ ತೈಲ ಖರೀದಿಸುವಂತೆ ವಿನಂತಿಸುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಘಚಿ ವ್ಯಂಗ್ಯವಾಡಿದ್ದಾರೆ. ರಷ್ಯಾ ವಿರುದ್ಧ ಅಮೆರಿಕದ ಬೆಂಬಲ ಪಡೆಯುವ ಆಸೆಯಿಂದ ಯುರೋಪಿಯನ್ ದೇಶಗಳು ಈಗ ಇರಾನ್ ಮೇಲಿನ ‘ಅಕ್ರಮ ಯುದ್ಧ’ಕ್ಕೆ ಬೆಂಬಲ ನೀಡುತ್ತಿವೆ ಎಂದು ಅರಘಚಿ ಯುರೋಪ್ ಸರಕಾರಗಳನ್ನೂ ಟೀಕಿಸಿದ್ದಾರೆ. “ಇದು ಅತ್ಯಂತ ದಯನೀಯ” ಎಂದಿರುವ ಅವರು, ಎಕ್ಸ್ (Twitter) ಖಾತೆಯಲ್ಲಿ ‘ಫೈನಾನ್ಷಿಯಲ್ ಟೈಮ್ಸ್’ನ ವರದಿಯೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಹೆಚ್ಚುತ್ತಿರುವ ತೈಲ ಬೆಲೆಯಿಂದಾಗಿ ರಷ್ಯಾದ ಆದಾಯದಲ್ಲಿ ಭಾರಿ ಏರಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. |
ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ!
ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲಿನ ಹೆಲಿಪ್ಯಾಡ್ ಮತ್ತು ರಾಡಾರ್ ವ್ಯವಸ್ಥೆಗೆ ಭಾರಿ ಹಾನಿಯಾಗಿದೆ. ಇತ್ತೀಚೆಗಷ್ಟೇ ‘ಇರಾಕಿ ಇಸ್ಲಾಮಿಕ್ ರೆಸಿಸ್ಟೆನ್ಸ್’ ಸಂಘಟನೆಯು ಅಮೆರಿಕದ ಸೇನೆ ಮತ್ತು ಗುಪ್ತಚರ ಸಿಬ್ಬಂದಿಯ ತಲೆಗೆ ಭಾರಿ ಬಹುಮಾನ ಘೋಷಿಸಿತ್ತು ಹಾಗೂ ಅಮೆರಿಕದ ವಿಮಾನವನ್ನು ಹೊಡೆದುರುಳಿಸಿರುವುದಾಗಿಯೂ ದಾವೆ ಮಾಡಿತ್ತು. ಬಾಗ್ದಾದ್ನ ಅತ್ಯಂತ ಸುರಕ್ಷಿತ ರಾಜತಾಂತ್ರಿಕ ಪ್ರದೇಶವೆಂದು ಪರಿಗಣಿಸಲಾದ ಜಾಗದಲ್ಲಿಯೇ ದಾಳಿ ನಡೆದಿರುವುದು ಅಮೆರಿಕಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಎಲ್.ಪಿ.ಜಿ. ನೌಕೆಗಳಿಗೆ ಹೋರ್ಮುಜ್ ಜಲಸಂಧಿಯಲ್ಲಿ ಹಸಿರು ನಿಶಾನೆ!ಜಾಗತಿಕ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದರೂ, ಇರಾನ್ ಎರಡು ಭಾರತೀಯ ಎಲ್.ಪಿ.ಜಿ. (LPG) ನೌಕೆಗಳಿಗೆ ಹೋರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅನುಮತಿ ನೀಡಿದೆ. ಇರಾನ್ನ ಈ ದಿಗ್ಬಂಧನದಲ್ಲಿ ಇದು ಅತ್ಯಂತ ಅಪರೂಪದ ವಿನಾಯಿತಿಯಾಗಿದೆ ಎಂದು ‘ರಾಯಿಟರ್ಸ್’ ವರದಿ ಮಾಡಿದೆ. ಭಾರತೀಯ ಧ್ವಜ ಹೊತ್ತ ‘ಶಿವಾಲಿಕ್’ ನೌಕೆಯು ಭಾರತೀಯ ನೌಕಾಪಡೆಯ ರಕ್ಷಣೆಯಲ್ಲಿ ಈ ಮಾರ್ಗವನ್ನು ದಾಟಿದೆ. ‘ನಂದಾ ದೇವಿ’ ಎಂಬ ಮತ್ತೊಂದು ನೌಕೆ ಕೂಡ ಶೀಘ್ರದಲ್ಲೇ ಅಲ್ಲಿಂದ ಹೊರಬರುವ ನಿರೀಕ್ಷೆ ಇದೆ. |
ಭಾರತದ ಮುತ್ಸದ್ದಿತನ!
ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳಿಗೆ ಯಾವುದೇ ಪೂರೈಕೆಯನ್ನು ಈ ಮಾರ್ಗದ ಮೂಲಕ ಬಿಡುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದ್ದರೂ, ಭಾರತದ ಮನವಿಗೆ ಮನ್ನಣೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದರು. ಭಾರತದ ಬಂದರೊಂದಕ್ಕೆ ಬಂದಿರುವ 183 ಇರಾನಿ ನಾವಿಕರಿಗೆ (ಖಲಾಸಿಗಳಿಗೆ) ಭಾರತ ಸುರಕ್ಷಿತ ಆಶ್ರಯ ಕೂಡ ನೀಡಿದೆ.
ಮೂಲಗಳ ಪ್ರಕಾರ, ಮಾರ್ಚ್ 1 ರ ಸುಮಾರಿಗೆ ಜಲಸಂಧಿಯಿಂದ ಪ್ರಯಾಣ ಬೆಳೆಸಿ ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಹೊತ್ತು ತರುತ್ತಿರುವ ಭಾರತದ ನೌಕೆಯೊಂದು ಶೀಘ್ರದಲ್ಲೇ ಭಾರತ ತಲುಪುವ ಸಾಧ್ಯತೆಯಿದೆ.
ಟ್ರಂಪ್ ಅವರ ಹೇಳಿಕೆಗಳು!
- ಮುಂದಿನ ವಾರ ಇರಾನ್ ಮೇಲೆ ಇನ್ನೂ ಭೀಕರ ದಾಳಿ ನಡೆಸುವ ಯೋಜನೆ ಇದೆ.
- ಇರಾನ್ಗೆ ಬಹುಶಃ ರಷ್ಯಾ ಅಧ್ಯಕ್ಷ ಪುಟಿನ್ ಸಹಾಯ ಮಾಡುತ್ತಿರಬಹುದು. ನಾವು ಉಕ್ರೇನ್ಗೆ ಸಹಾಯ ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ರಷ್ಯಾ ಈ ರೀತಿ ಮಾಡುತ್ತಿರಬಹುದು.
- ಅಗತ್ಯ ಬಿದ್ದರೆ ಅಮೆರಿಕವು ಹೋರ್ಮುಜ್ ಜಲಸಂಧಿಯಿಂದ ನೌಕೆಗಳನ್ನು ಸುರಕ್ಷಿತವಾಗಿ ಹೊರತರುತ್ತದೆ.
- ಅಮೆರಿಕದ ನೇತೃತ್ವದಲ್ಲಿ ಈ ಯುದ್ಧ ಯಶಸ್ವಿಯಾಗಲಿದೆ.
ಇರಾನ್ನಲ್ಲಿ ಆಡಳಿತ ಬದಲಾವಣೆ ಕುರಿತು ಹೇಳಿಕೆ
“ಇರಾನ್ ಬಳಿ ಅಣ್ವಸ್ತ್ರಗಳಿಲ್ಲ ಎಂದು ನನಗನ್ನಿಸುತ್ತಿದೆ. ಇದು ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಅಲ್ಲಿ ಆಡಳಿತ ಬದಲಾವಣೆ ಖಂಡಿತ ನಡೆಯುತ್ತದೆ, ಆದರೆ ತಕ್ಷಣವೇ ಆಗದಿರಬಹುದು,” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ನ ಸರ್ವೋಚ್ಛ ನಾಯಕ ಖಮೇನಿಗೆ ನೆತನ್ಯಾಹು ಎಚ್ಚರಿಕೆ!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. “ಖಮೇನಿ ಅವರಿಗೆ ಯಾವುದೇ ‘ಲೈಫ್ ಇನ್ಶೂರೆನ್ಸ್’ (ಜೀವ ವಿಮೆ) ಇಲ್ಲ. ಭಯೋತ್ಪಾದಕ ಸಂಘಟನೆಗಳ ಯಾವುದೇ ನಾಯಕನ ಜೀವಕ್ಕೆ ನಾನು ಯಾವುದೇ ಗ್ಯಾರಂಟಿ ನೀಡುವುದಿಲ್ಲ,” ಎಂದು ಅವರು ಗುಡುಗಿದ್ದಾರೆ.
ಇಂಡಿಗೋ ವಿಮಾನ ಪ್ರಯಾಣ ದರದಲ್ಲಿ 425 ರೂ. ಹೆಚ್ಚಳ!
ಯುದ್ಧದ ಪರಿಣಾಮವಾಗಿ ವಿಮಾನಯಾನ ಸಂಸ್ಥೆಗಳು ಇಂಧನ ಶುಲ್ಕವನ್ನು ಹೆಚ್ಚಿಸಿವೆ. ಭಾರತದ ಅತಿದೊಡ್ಡ ವಿಮಾನಯಾನ ಕಂಪನಿ ‘ಇಂಡಿಗೋ’, ಟಿಕೆಟ್ ಬೆಲೆಯ ಮೇಲೆ ಹೊಸ ಇಂಧನ ಶುಲ್ಕ (Fuel Surcharge) ವಿಧಿಸಲು ನಿರ್ಧರಿಸಿದೆ. ಮಾರ್ಚ್ 14 ರಿಂದ ಇಂಡಿಗೋ ಸಂಸ್ಥೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಟಿಕೆಟ್ಗಳ ಮೇಲೆ ಕನಿಷ್ಠ 425 ರೂ.ಗಳಿಂದ ಗರಿಷ್ಠ 2,300 ರೂ.ವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಿದೆ.
ದೇಶೀಯ ವಿಮಾನಗಳು: 425 ರೂ. ಹೆಚ್ಚಳ.
ಮಧ್ಯಪ್ರಾಚ್ಯ ವಿಮಾನಗಳು: 900 ರೂ. ಹೆಚ್ಚಳ.
ಆಗ್ನೇಯ ಏಷ್ಯಾ, ಚೀನಾ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ವಿಮಾನಗಳು: 1,800 ರೂ. ಹೆಚ್ಚಳ.
ಯುರೋಪ್ ವಿಮಾನಗಳು: 2,300 ರೂ. ಹೆಚ್ಚಳ.
ಶುಲ್ಕ ಹೆಚ್ಚಳಕ್ಕೆ ಕಾರಣ!
‘ಏವಿಯೇಷನ್ ಟರ್ಬೈನ್ ಫ್ಯೂಯೆಲ್’ (ATF) ಅಂದರೆ ಜೆಟ್ ಇಂಧನವು ವಿಮಾನಯಾನದ ಅತಿದೊಡ್ಡ ಖರ್ಚಾಗಿದೆ. ಒಟ್ಟು ಪ್ರಯಾಣದ ವೆಚ್ಚದಲ್ಲಿ ಶೇ. 40ರಷ್ಟು ಪಾಲು ಇದರದ್ದೇ ಆಗಿರುತ್ತದೆ. ಯುದ್ಧದಿಂದಾಗಿ ಕಚ್ಚಾ ತೈಲ ಮತ್ತು ಜೆಟ್ ಇಂಧನದ ಬೆಲೆ ಏರಿಕೆಯಾಗಿದೆ. ಆದ್ದರಿಂದ ಇಂಡಿಗೋ ಪ್ರಯಾಣದ ದರವನ್ನು ದಿಢೀರ್ ಹೆಚ್ಚಳ ಮಾಡಿದೆ. ಈ ಹಿಂದೆ ಮಾರ್ಚ್ 10 ರಂದು ‘ಏರ್ ಇಂಡಿಯಾ’ ಮತ್ತು ‘ಏರ್ ಇಂಡಿಯಾ ಎಕ್ಸ್ಪ್ರೆಸ್’ ಕಂಪನಿಗಳು ಕೂಡ ‘ಫ್ಯೂಯೆಲ್ ಸರ್ಚಾರ್ಜ್’ ಜಾರಿಗೊಳಿಸಿದ್ದವು.
ನೆರೆಹೊರೆ ದೇಶಗಳನ್ನು ಇರಾನ್ ಗುರಿಯಾಗಿಸಬಾರದು! – ಹಮಾಸ್
ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಪ್ರತ್ಯುತ್ತರ ನೀಡುವ ಹಕ್ಕು ಇರಾನ್ಗೆ ಇದೆ. ಆದರೆ ತನ್ನ ನೆರೆಹೊರೆಯ ದೇಶಗಳನ್ನು ಗುರಿಯಾಗಿಸಬಾರದು. ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಗಾಝಾದ ಉಗ್ರಗಾಮಿ ಸಂಘಟನೆ ‘ಹಮಾಸ್’ ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ