ಇರಾನ್ ಅಣು ಯೋಜನೆ ಮೇಲೆ ದಾಳಿ

ವಿಕಿರಣದ ಅಪಾಯದಿಂದಾಗಿ ದೊಡ್ಡ ನಗರಗಳನ್ನು ತೆರವುಗೊಳಿಸುವ ಪರಿಸ್ಥಿತಿ

ತಹರಾನ್ (ಇರಾನ್) – ಯಾವ ಉದ್ದೇಶಕ್ಕಾಗಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದವೋ, ಅದರಲ್ಲಿ ಒಂದು ಉದ್ದೇಶ ಪೂರ್ಣಗೊಂಡಿರುವಂತೆ ಕಾಣುತ್ತಿದೆ. ಈ ದಾಳಿಯಲ್ಲಿ ಇರಾನ್‌ನ ನತಾಂಜ್ ಅಣು ಯೋಜನೆಗೆ ಭಾರಿ ಹಾನಿಯಾಗಿದೆ ಎಂದು ಇರಾನ್ ತಿಳಿಸಿದೆ. ಇದನ್ನು ಇರಾನ್‌ನಲ್ಲಿರುವ ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (‘ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ’) ರಾಯಭಾರಿಗಳು ಖಚಿತಪಡಿಸಿದ್ದಾರೆ. ಅವರು ಮಾತನಾಡಿ, ‘ಈ ದಾಳಿಯ ಗಂಭೀರ ಪರಿಣಾಮಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ದೊಡ್ಡ ನಗರಗಳನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಪ್ರಸ್ತುತ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ’ ಎಂದು ಹೇಳಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಇಸ್ರೇಲ್ ಮತ್ತು ಅಮೆರಿಕ ಇದೇ ಅಣು ಯೋಜನೆಯ ಮೇಲೆ ದಾಳಿ ಮಾಡಿ ಅದನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದ್ದವು; ಆದರೆ ಭೂಮಿಯಿಂದ 100 ಮೀಟರ್ ಆಳದಲ್ಲಿರುವ ಈ ಯೋಜನೆಗೆ ಯಾವುದೇ ಹಾನಿಯಾಗಿಲ್ಲ ಎಂಬುದು ನಂತರ ಸ್ಪಷ್ಟವಾಗಿತ್ತು. ಹೀಗಾಗಿ ಈಗಿನ ದಾಳಿಯಲ್ಲಿ ಹೆಚ್ಚಿನ ತೀವ್ರತೆಯನ್ನು ಬಳಸಿ ಅದನ್ನು ನಾಶಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಇರಾನ್‌ನ ಪರಮಾಣು ಬಾಂಬ್ ತಯಾರಿಸುವ ಕನಸು ಭಗ್ನಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತೊಂದೆಡೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ಇಲ್ಲಿನ ತೈಲ ಸಾರಿಗೆ ಸ್ಥಗಿತಗೊಂಡಿದೆ. ಈ ಮಾರ್ಗವು ಭಾರತದ ತೈಲ ಸಾಗಣೆಯ ನೌಕೆಗಳಿಗೆ ಬಹಳ ಪ್ರಮುಖವಾಗಿದೆ.

ಪ್ರಮುಖ ಘಟನಾವಳಿಗಳು

  • ಹಮಾಸ್, ಹೂತಿ, ಹಿಜ್ಬುಲ್ಲಾ, ಶಿಯಾ ಮಿಲಿಷಿಯಾ ಮುಂತಾದ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಿಂದ ಅಮೆರಿಕದ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ದಾಳಿ.
  • ಲೆಬನಾನ್‌ನಲ್ಲಿನ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 31 ಜನರ ಸಾವು.
  • ಕುವೈತ್‌ನಲ್ಲಿ ಅಮೆರಿಕದ ಹಲವು ‘F-15’ ಯುದ್ಧ ವಿಮಾನಗಳು ಪತನಗೊಂಡಿವೆ ಎಂಬ ದಾವೆ.
  • ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ.
  • ಸೌದಿ ಅರೇಬಿಯಾದ ಅತಿದೊಡ್ಡ ರಾಸ್ ತನುರಾ (ಅರಾಮ್‌ಕೋ) ತೈಲ ಸಂಸ್ಕರಣಾ ಕೇಂದ್ರದ ಮೇಲೆ ದಾಳಿ.
  • ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯಿಂದ ಬೆಂಕಿ.
  • ಬಹ್ರೇನ್ ರಾಜಧಾನಿ ಮನಾಮಾ, ದುಬೈ (ಯುಎಇ), ದೋಹಾ (ಕತಾರ್) ಮತ್ತು ಕುವೈತ್‌ನಲ್ಲಿ ದಾಳಿಗಳು ಮುಂದುವರಿಕೆ.
  • ಇರಾನ್ ನೌಕಾಪಡೆ ಮುಖ್ಯಸ್ಥ ಶಾಹ್ರಾಮ್ ಇರಾನಿ ಸಾವು.
  • ಇರಾನ್‌ನಲ್ಲಿ ಇದುವರೆಗೆ 555 ಜನರ ಸಾವು.

ಗುರಿ ತಲುಪುವವರೆಗೆ ಇರಾನ್ ಮೇಲೆ ದಾಳಿ ಮುಂದುವರಿಯಲಿದೆ! – ಟ್ರಂಪ್ ಸ್ಪಷ್ಟನೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಗುರಿ ಪೂರ್ಣಗೊಳ್ಳುವವರೆಗೆ ಇರಾನ್ ಮೇಲೆ ದಾಳಿ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ. ಮಾನವ ನಾಗರಿಕತೆಯ ವಿರುದ್ಧ ಯುದ್ಧ ಸಾರಿದ ಶಕ್ತಿಗಳಿಗೆ ಅಮೆರಿಕ ಶಿಕ್ಷೆ ನೀಡಿಯೇ ತೀರುತ್ತದೆ. ‘ರೆವಲ್ಯೂಷನರಿ ಗಾರ್ಡ್ಸ್’ ಮತ್ತು ಸೇನಾ ಪಡೆಗಳು ದಾಳಿಗಳನ್ನು ನಿಲ್ಲಿಸದಿದ್ದರೆ, ಇನ್ನಷ್ಟು ಸಾವುಗಳಿಗೆ ಸಿದ್ಧರಾಗಿ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ 9 ಯುದ್ಧನೌಕೆಗಳನ್ನು ಮುಳುಗಿಸಲಾಗಿದೆ ಟ್ರಂಪ್ ದಾವೆ

ಇರಾನ್ ನೌಕಾಪಡೆಯ 9 ಯುದ್ಧನೌಕೆಗಳು ಮುಳುಗಿವೆ ಎಂದು ಟ್ರಂಪ್ ದಾವೆ ಮಾಡಿದ್ದಾರೆ. ಉಳಿದ ನೌಕೆಗಳ ಹುಡುಕಾಟ ನಡೆಯುತ್ತಿದ್ದು, ಅವುಗಳನ್ನೂ ನಾಶಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಫ್ರಾನ್ಸ್ ಮತ್ತು ಬ್ರಿಟನ್ ನೆಲೆಗಳ ಮೇಲೆ ದಾಳಿ

ಇರಾನ್ ಸೈಪ್ರಸ್ ದೇಶದಲ್ಲಿರುವ ಬ್ರಿಟಿಷ್ ವಾಯುಪಡೆಯ ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿದೆ. ಬ್ರಿಟಿಷ್ ವಾಯುಪಡೆಯ ಅಕ್ರೋಟೀರಿ ನೆಲೆಯ ಮೇಲೆ ‘ಶಾಹಿದ್’ ಡ್ರೋನ್ ಮೂಲಕ ದಾಳಿ ಮಾಡಲಾಗಿದೆ ಎಂದು ಸೈಪ್ರಸ್ ಅಧ್ಯಕ್ಷರು ತಿಳಿಸಿದ್ದಾರೆ. ಇರಾನ್ ಯುಎಇಯ ಅಬುಧಾಬಿಯಲ್ಲಿರುವ ಫ್ರಾನ್ಸ್ ನೌಕಾಪಡೆಯ ನೆಲೆಯ ಮೇಲೂ ದಾಳಿ ನಡೆಸಿದೆ.

ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಅಮೆರಿಕಕ್ಕೆ ಸಹಾಯ ಮಾಡಲಿವೆ

ತಮ್ಮ ನೆಲೆಗಳ ಮೇಲೆ ದಾಳಿಯಾದ ನಂತರ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಇರಾನ್ ಮೇಲಿನ ದಾಳಿಯಲ್ಲಿ ಅಮೆರಿಕಕ್ಕೆ ಸಹಾಯ ಮಾಡುವುದಾಗಿ ಘೋಷಿಸಿವೆ. ಇತ್ತ ‘ನಾಟೋ’ (NATO) ಕೂಡ ಅಮೆರಿಕದ ಪರವಾಗಿ ಯುದ್ಧಕ್ಕೆ ಇಳಿಯುವುದಾಗಿ ತಿಳಿಸಿದೆ.

ಭಾರತೀಯರನ್ನು ಸುರಕ್ಷಿತವಾಗಿ ಕರೆತರುತ್ತೇವೆ! – ಪ್ರಧಾನಿ ಮೋದಿ

ಕೊಲ್ಲಿ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ, ಭಾರತ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾವು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಪರವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ನೆತನ್ಯಾಹು ದೂರವಾಣಿ ಸಂಭಾಷಣೆ

ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಭಾರತದ ಕಳಕಳಿಯನ್ನು ವ್ಯಕ್ತಪಡಿಸಿದ್ದು, ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಮತ್ತು ಸಂಘರ್ಷವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಿ ಹೇಳಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಧ್ಯಕ್ಷರೊಂದಿಗೆ ಸಂಪರ್ಕ

ಪ್ರಧಾನಿ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಸಂವಾದ ನಡೆಸಿದರು. ‘ಎಕ್ಸ್’ (X) ನಲ್ಲಿ ಮಾಹಿತಿ ನೀಡಿದ ಪ್ರಧಾನಿ ಮೋದಿ ಅವರು, ಈ ಸಂಭಾಷಣೆಯಲ್ಲಿ ಯುಎಇ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾಗಿ ಮತ್ತು ಈ ದಾಳಿಯಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ. ಈ ಕಠಿಣ ಸಮಯದಲ್ಲಿ ಭಾರತವು ಯುಎಇ ಪರವಾಗಿ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.

ವಿದೇಶಾಂಗ ಸಚಿವ ಜೈಶಂಕರ್ ಅವರಿಂದ 4 ದೇಶಗಳ ವಿದೇಶಾಂಗ ಸಚಿವರೊಂದಿಗೆ ಚರ್ಚೆ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಇರಾನ್ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಪುನರುಚ್ಚರಿಸಿದರು. ಇದಾದ ನಂತರ, ಮಾರ್ಚ್ 1 ರಂದು ಜೈಶಂಕರ್ ಅವರು ಯುಎಇ, ಕತಾರ್, ಕುವೈತ್ ಮತ್ತು ಬಹ್ರೇನ್ ವಿದೇಶಾಂಗ ಸಚಿವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಈ ಪ್ರದೇಶದಲ್ಲಿ ವಾಸಿಸುವ ಭಾರತೀಯ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ವಿಷಯಕ್ಕೆ ಜೈಶಂಕರ್ ಈ ಸಂದರ್ಭದಲ್ಲಿ ಒತ್ತು ನೀಡಿದರು.

ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ 90 ಲಕ್ಷ ಭಾರತೀಯರು!

ಇರಾನ್‌ನಲ್ಲಿ 10 ಸಾವಿರ ಭಾರತೀಯ ನಾಗರಿಕರು ವಾಸಿಸುತ್ತಿದ್ದಾರೆ. ಇಸ್ರೇಲ್‌ನಲ್ಲಿ 40 ಸಾವಿರ ಹಾಗೂ ಕೊಲ್ಲಿ ರಾಷ್ಟ್ರಗಳು ಮತ್ತು ಪಶ್ಚಿಮ ಏಷ್ಯಾದಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ಸುಮಾರು 90 ಲಕ್ಷದಷ್ಟಿದೆ. ಭಾರತವು ಈ ಹಿಂದೆ ಯುದ್ಧದ ಸಮಯದಲ್ಲಿ ಪಶ್ಚಿಮ ಏಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಹೊರತಂದಿದೆ. ಪ್ರಸ್ತುತ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಭಾರತೀಯ ನಾಗರಿಕರೊಂದಿಗೆ ಸಂಪರ್ಕದಲ್ಲಿದೆ.

ತೈಲ ಬೆಲೆಯಲ್ಲಿ 10% ಏರಿಕೆ

ಯುದ್ಧದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 79 ಡಾಲರ್ ತಲುಪಿದೆ. ಉದ್ವಿಗ್ನತೆ ಹೆಚ್ಚಾದರೆ ಇದು 120 ಡಾಲರ್ ವರೆಗೆ ಏರಬಹುದು. ಇದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ದೆಹಲಿಯಲ್ಲಿ ಪೆಟ್ರೊಲ್ ಪ್ರತಿ ಲೀಟರ್‍ಗೆ 95 ರೂಪಾಯಿಯಿಂದ 100 ರೂಪಾಯಿ ವರೆಗೆ ಹೆಚ್ಚಾಗಬಹುದು. ಡಿಜೆಲ್ 88 ರೂಪಾಯಿಯಿಂದ 92 ರೂಪಾಯಿ ವರೆಗೆ ಹೆಚ್ಚಾಗಬಹುದು. ಇದೇ ರೀತಿ ಇತರ ನಗರಗಳ್ಲಲಿಯೂ ಹೆಚ್ಚಾಗುವ ಸಾಧ್ಯತೆ ಇದೆ.