‘ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸಂಘಟನೆಗಳು ಶೇಖ್ ಹಸೀನಾ ಅವರ ಸಾಕಿದ ನಾಯಿಗಳಂತೆ ’ – Bangladesh Shafiqul Alam

ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ ಯೂನಸ್ ಅವರ ಮಾಧ್ಯಮ ಕಾರ್ಯದರ್ಶಿ ಶಫೀಕುಲ್ ಆಲಂ ಅವರ ಆರೋಪ

ಢಾಕಾ (ಬಾಂಗ್ಲಾದೇಶ) – ‘ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರೈಸ್ತ ಐಕ್ಯ ಪರಿಷತ್ತು’ ಸಂಘಟನೆ ಮತ್ತು ಅದರ ಸದಸ್ಯರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸಾಕಿದ ನಾಯಿಗಳಂತೆ ಇದ್ದಾರೆ, ಎಂಬ ಉದ್ಧಟತನದ ಹೇಳಿಕೆಯನ್ನು ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ ಯೂನಸ್ ಅವರ ಮುಖ್ಯ ಸಲಹೆಗಾರ ಮತ್ತು ಮಾಧ್ಯಮ ಕಾರ್ಯದರ್ಶಿ ಶಫೀಕುಲ್ ಆಲಂ ಅವರು ಸಂದರ್ಶನವೊಂದರಲ್ಲಿ ನೀಡಿದ್ದಾರೆ.

‘ಧಾರ್ಮಿಕ ದ್ವೇಷದಿಂದ ಹಿಂದೂಗಳ ಕೇವಲ ಒಂದು ಕೊಲೆ ಮಾತ್ರ ನಡೆದಿದೆ ’ (ಅಂತೆ)

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಆಕ್ರಮಣಗಳ ಬಗ್ಗೆ ಮಾತನಾಡಿದ ಆಲಂ ಅವರು, ಕಳೆದ ೧ ವರ್ಷದಲ್ಲಿ ಧಾರ್ಮಿಕ ಮತ್ತು ದ್ವೇಷಪೂರಿತ ಅಪರಾಧಗಳಲ್ಲಿ ಕೇವಲ ೧ ಕೊಲೆ ನಡೆದಿದ್ದು ಅದು ದೀಪು ಚಂದ್ರ ದಾಸ್ ಅವರದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಪ್ರತಿಯೊಬ್ಬ ಹಿಂದೂವಿನ ಕೊಲೆಯನ್ನು ಧಾರ್ಮಿಕ ಹಿಂಸಾಚಾರ ಎಂದು ಬಿಂಬಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಹಿಂದೂ ಅಲ್ಪಸಂಖ್ಯಾತ ಸಮುದಾಯವು ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಮಾಹಿತಿ ನೀಡಿರುವುದರ ಕುರಿತು ಕೇಳಿದಾಗ ಆಲಂ ಅವರು, ‘ಅಂತಹ ಸಂಘಟನೆಗಳ ನಾಯಕರು ಅವಾಮಿ ಲೀಗ್ ಜೊತೆ ಸಂಪರ್ಕ ಹೊಂದಿದ್ದಾರೆ. ನೀಡಿರುವ ಮಾಹಿತಿಯಲ್ಲಿನ ಒಂದೂ ಘಟನೆಯು ಧಾರ್ಮಿಕ ಕೊಲೆಯೆಂದು ಸಾಬೀತಾಗುವುದಿಲ್ಲ. ಹೆಚ್ಚಿನ ಪ್ರಕರಣಗಳು ಲೂಟಿ ಅಥವಾ ವೈಯಕ್ತಿಕ ದ್ವೇಷದಿಂದ ನಡೆದಿವೆ’ ಎಂದು ಹೇಳಿದ್ದಾರೆ.

‘ಭಾರತವು ಬಾಂಗ್ಲಾದೇಶವನ್ನು ಭೂತಾನ ಎಂದು ತಿಳಿಯಬಾರದು !’

ಭಾರತವು ಬಾಂಗ್ಲಾದೇಶವನ್ನು ಭೂತಾನ ಎಂದು ತಿಳಿಯಬಾರದು. (ಭಾರತವು ನಿರ್ಧರಿಸಿದರೆ, ಬಾಂಗ್ಲಾದೇಶವು ಹಸಿವಿನಿಂದ ಕಂಗೆಟ್ಟು ಬದುಕಬೇಕಾಗುತ್ತದೆ ಎಂಬುದನ್ನು ಆಲಂ ಅವರು ನೆನಪಿನಲ್ಲಿಡಬೇಕು! – ಸಂಪಾದಕರು) ಹಸೀನಾ ಅವರ ಕಾಲದಲ್ಲಿ ಚುನಾವಣೆಯಲ್ಲಿ ಬಹಿರಂಗವಾಗಿ ಅಕ್ರಮಗಳು ನಡೆದರೂ, ಯಾವ ದೇಶವು ಅವರಿಗೆ ಬೆಂಬಲ ನೀಡಿತು ಎಂಬುದು ಜನರಿಗೆ ತಿಳಿದಿದೆ. ಶೇಖ್ ಹಸೀನಾ ದೇಶದ ಹೊರಗಿದ್ದುಕೊಂಡು ಬಾಂಗ್ಲಾದೇಶದ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದೂ ಆಲಂ ಅವರು ಆರೋಪಿಸಿದ್ದಾರೆ.

ಉಸ್ಮಾನ್ ಹಾದಿ ಎಂಬುವವರ ಕೊಲೆಯನ್ನು ಶೇಖ್ ಹಸೀನಾ ಅವರ ಪಕ್ಷದ ಬೆಂಬಲಿಗರು ಮಾಡಿದ್ದಾರೆ. ಲಭ್ಯವಿರುವ ವರದಿಗಳ ಪ್ರಕಾರ, ಅವಾಮಿ ಲೀಗ್‌ ನ ಹಿರಿಯ ನಾಯಕರೊಬ್ಬರು ಹಾದಿ ಅವರ ಕೊಲೆಗೆ ಹಣ ನೀಡಿದ್ದಾರೆ ಎಂದು ಆಲಂ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

‘ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಮೆರಿಕದ ಸಾಕಿದ ನಾಯಿಯಂತೆ ವರ್ತಿಸುತ್ತಿದೆ’, ಎಂದು ಭಾರತವು ಹೇಳಿದರೆ ಅದು ತಪ್ಪಾಗಲಾರದು