ಭಾರತವು ಅಮೇರಿಕಾದಿಂದ ಆಮದಾಗುವ ಬೇಳೆಕಾಳುಗಳ ಮೇಲೆ ಶೇ. ೩೦ ರಷ್ಟು ಆಮದು ಸುಂಕ ಹೇರಿಕೆ !

ಭಾರತದಿಂದ ಆಮದು ಸುಂಕವನ್ನು ರದ್ದುಗೊಳಿಸಲು ಒತ್ತಾಯಿಸಿ ! – ಅಮೇರಿಕಾದ ಇಬ್ಬರು ಸಂಸದರಿಂದ ಟ್ರಂಪ್ ಅವರಿಗೆ ಪತ್ರ ಬರೆದು ಕೋರಿಕೆ

ವಾಷಿಂಗ್ಟನ್ ಡಿ.ಸಿ. (ಅಮೇರಿಕಾ) – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. ೫೦ ರಷ್ಟು ಆಮದು ಸುಂಕವನ್ನು ಹೇರಿದ್ದಾರೆ. ರಷ್ಯಾದೊಂದಿಗೆ ಭಾರತ ನಡೆಸುತ್ತಿರುವ ತೈಲ ವ್ಯಾಪಾರವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ. ಹೀಗಿರುವಾಗ, ಈಗ ಭಾರತವು ಅಮೇರಿಕಾದ ಮೇಲೆ ಹೇರಿರುವ ಶೇ. ೩೦ ರಷ್ಟು ಆಮದು ಸುಂಕದ ಕುರಿತು ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ.

ಭಾರತವು ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಗುವ ಬೇಳೆಕಾಳುಗಳ ಮೇಲೆ ಈ ಸುಂಕವನ್ನು ವಿಧಿಸಿದೆ. ಈ ಸುಂಕವು ಅಕ್ಟೋಬರ್ ೩೦, ೨೦೨೫ ರಿಂದ ಜಾರಿಗೆ ಬಂದಿದೆ. ಈ ಆಮದು ಸುಂಕವನ್ನು ರದ್ದುಗೊಳಿಸುವಂತೆ ಅಮೇರಿಕಾದ ಇಬ್ಬರು ಸಂಸದರು ನೇರವಾಗಿ ಟ್ರಂಪ್ ಅವರಲ್ಲಿ ವಿನಂತಿಸಿದ್ದಾರೆ.

೧. ಅಮೇರಿಕಾದ ನಾರ್ತ್ ಡಕೋಟಾದ ಸಂಸದ ಕೆವಿನ್ ಕ್ರೇಮರ್ ಮತ್ತು ಮೊಂಟಾನಾದ ಸಂಸದ ಸ್ಟೀವ್ ಡೇನ್ಸ್ ಎಂಬುವವರು ಟ್ರಂಪ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ‘ಭಾರತವು ಅಮೇರಿಕಾದ ಮೇಲೆ ಹೇರಿರುವ ಈ ಆಮದು ಸುಂಕವನ್ನು ತೆಗೆದುಹಾಕುವಂತೆ ಅಮೇರಿಕಾವು ಭಾರತದ ಮೇಲೆ ಒತ್ತಡ ಹೇರಬೇಕು’, ಎಂದು ಹೇಳಲಾಗಿದೆ.

೨. ಈ ಪತ್ರದಲ್ಲಿ ಭಾರತವು ಜಾರಿಗೆ ತಂದಿರುವ ಈ ಆಮದು ಸುಂಕದಿಂದಾಗಿ ಅಮೇರಿಕಾದ ಬೇಳೆಕಾಳು ಬೆಳೆಯುವ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟವಾಗುತ್ತಿದೆ. ಅಮೇರಿಕಾದಿಂದ ಕಡಲೆ ಬೇಳೆ, ಮಸೂರ ಬೇಳೆ ಮತ್ತು ಬಟಾಣಿಗಳನ್ನು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಭಾರತವು ಬೇಳೆಕಾಳುಗಳ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ವಿವರಿಸಲಾಗಿದೆ.