ಗಡಿಯಾಚೆ ಇನ್ನೂ 8 ಭಯೋತ್ಪಾದಕ ತರಬೇತಿ ಶಿಬಿರಗಳು ಸಕ್ರಿಯ! – ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ – 8 Terror Camps Active Across Border

ನವದೆಹಲಿ – ಗಡಿಯಾಚೆ ಇನ್ನೂ 8 ಭಯೋತ್ಪಾದಕ ಶಿಬಿರಗಳು ಸಕ್ರಿಯವಾಗಿವೆ. ಈ 8 ಶಿಬಿರಗಳ ಪೈಕಿ 6 ಶಿಬಿರಗಳು ನಿಯಂತ್ರಣ ರೇಖೆಯ (LoC) ಆಚೆ ಮತ್ತು 2 ಶಿಬಿರಗಳು ಅಂತರಾಷ್ಟ್ರೀಯ ಗಡಿಯಾಚೆ ಇವೆ. ಗುಪ್ತಚರ ಮಾಹಿತಿಯ ಪ್ರಕಾರ, ಈ ಶಿಬಿರಗಳಲ್ಲಿ ಇನ್ನೂ ಭಯೋತ್ಪಾದಕರು ಉಪಸ್ಥಿತರಿದ್ದು ಅವರ ತರಬೇತಿ ನಡೆಯುತ್ತಿದೆ. ಆದ್ದರಿಂದ ಭಾರತೀಯ ಸೇನೆಯು ಈ ಎಲ್ಲಾ ಸ್ಥಳಗಳ ಮೇಲೆ ನಿರಂತರ ನಿಗಾ ಇರಿಸಿದೆ. ಪಾಕಿಸ್ತಾನದಿಂದ ಮತ್ತೆ ಯಾವುದೇ ಅತಿಕ್ರಮಣ ನಡೆದರೆ ಭಾರತ ತನ್ನ ನಿರ್ಧಾರಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಕೆ ನೀಡಿದ್ದಾರೆ.

ಜನರಲ್ ದ್ವಿವೇದಿಯವರು ‘ಆಪರೇಷನ್ ಸಿಂಧೂರ್’ ಇನ್ನೂ ಮುಂದುವರಿಯುತ್ತಿದೆ ಎಂದು ಪುನರುಚ್ಚರಿಸಿದ್ದಾರೆ. ಹೀಗಾಗಿ ಭಾರತೀಯ ಸೇನೆಯು ಸನ್ನದ್ಧವಾಗಿದೆ. ಮುಂದಿನ ಎಲ್ಲಾ ಸಂಭಾವ್ಯ ಕ್ರಮಗಳಿಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪರಿಸ್ಥಿತಿ ಹದಗೆಟ್ಟರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಭಾರತೀಯ ಸೇನೆಯು ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನು ನಿಯೋಜಿಸಿತ್ತು. ಅದರ ಸ್ವರೂಪ ಗೌಪ್ಯವಾಗಿದ್ದರೂ, ಪಾಕಿಸ್ತಾನದಿಂದ ಸಣ್ಣ ತಪ್ಪು ನಡೆದಿದ್ದರೂ ಸಹ ಭಾರತವು ಪೂರ್ಣ ಶಕ್ತಿಯೊಂದಿಗೆ ಭೂಮಿಯ ಮೇಲಿಂದ ದಾಳಿ ಆರಂಭಿಸಲು ಸಜ್ಜಾಗಿತ್ತು. ಈ ಅವಧಿಯಲ್ಲಿ ಸುಮಾರು 100 ಪಾಕಿಸ್ತಾನಿ ಸೈನಿಕರು ಮತ್ತು ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು.

ಪಾಕ್ ನಾಯಕರು ಮತ್ತು ಸ್ಥಳೀಯ ಜನರಿಂದ ಅಣ್ವಸ್ತ್ರದ ಬೆದರಿಕೆ!

ಪಾಕಿಸ್ತಾನದಿಂದ ನೀಡಲಾಗುತ್ತಿರುವ ಅಣ್ವಸ್ತ್ರ ಬೆದರಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ ಜನರಲ್ ದ್ವಿವೇದಿ, ಇಂತಹ ಹೇಳಿಕೆಗಳನ್ನು ಪಾಕಿಸ್ತಾನದ ನಾಯಕರು ಅಥವಾ ಸ್ಥಳೀಯ ಜನರು ನೀಡುತ್ತಿದ್ದಾರೆಯೇ ಹೊರತು ಪಾಕಿಸ್ತಾನಿ ಸೇನೆಯಲ್ಲ ಎಂದು ಹೇಳಿದರು. ಈ ಸಮಯದಲ್ಲಿ ಭಾರತವು ಸಾಂಪ್ರದಾಯಿಕ ಮಿಲಿಟರಿ ಕಾರ್ಯಾಚರಣೆಯ ಸಾಮರ್ಥ್ಯ ಮುಗಿದಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಮತ್ತು ಅದನ್ನು ಇನ್ನಷ್ಟು ವಿಸ್ತರಿಸಿದೆ.

ಸಂಪಾದಕೀಯ ನಿಲುವು

ಈ ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡುವ ಮುನ್ನವೇ ಭಾರತ ಈ ಶಿಬಿರಗಳನ್ನು ನಾಶಪಡಿಸಬೇಕು. ಅಮೆರಿಕ ಮತ್ತು ಇಸ್ರೇಲ್‌ನಿಂದ ಭಾರತ ಇದನ್ನು ಕಲಿಯಬೇಕು! ಭಯೋತ್ಪಾದಕರು ದಾಳಿ ಮಾಡಿದ ನಂತರ ಪ್ರತಿಕ್ರಿಯಿಸುವುದಕ್ಕಿಂತ, ಮೊದಲೇ ದಾಳಿ ಮಾಡಿ ಶತ್ರುಗಳನ್ನು ನಾಶಪಡಿಸುವುದೇ ನಿಜವಾದ ರಕ್ಷಣೆ!