ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯರಿಂದ ಥಳಿತ – Chikmagalur Hindu Boy Attacked

  • ಚಿಕ್ಕಮಗಳೂರು : ಕಾನ್ವೆಂಟ್ ಶಾಲೆಯಲ್ಲಿ ನಡೆದ ಘಟನೆ

  • ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ ಮುಖ್ಯೋಪಾಧ್ಯಾಯರಿಂದ ಕ್ಷಮೆಯಾಚನೆ

ಚಿಕ್ಕಮಗಳೂರು – ಇಲ್ಲಿನ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದಿದ್ದ ೭ನೇ ತರಗತಿಯ ಹಿಂದೂ ಬಾಲಕನಿಗೆ ಶಾಲೆಯ ಮುಖ್ಯೋಪಾಧ್ಯಾಯರು ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಸಂಘಟನೆಗಳ ತೀವ್ರ ವಿರೋಧದ ನಂತರ ಮುಖ್ಯೋಪಾಧ್ಯಾಯರು ಕ್ಷಮೆ ಯಾಚಿಸಿದರು. ಸಧ್ಯ ಪರಿಸ್ಥಿತಿ ಶಾಂತವಾಗಿದ್ದರೂ, ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಯ ಬಗ್ಗೆ ತಾರತಮ್ಯ ಮಾಡಬಾರದು ಎಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

೧. ಈ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯರು ‘ಯಾರನ್ನು ಕೇಳಿ ಕೊರಳಿನಲ್ಲಿ ಮಾಲೆ ಧರಿಸಿದ್ದೀಯಾ? ಶರ್ಟ್‌ನ ಒಳಗೆ ಬನಿಯನ್‌ ಏಕೆ ಹಾಕಿಕೊಂಡಿಲ್ಲ? ಶಬರಿಮಲೆ ಯಾತ್ರೆಗೆ ಹೋಗಲು ರಜೆ ನೀಡುವುದಿಲ್ಲ. ಇರುಮುಡಿಯನ್ನು (ಅಯ್ಯಪ್ಪ ಸ್ವಾಮಿಯ ವ್ರತದ ಪವಿತ್ರ ಬುತ್ತಿ) ನಿನ್ನ ಅಪ್ಪನ ಕೈಯಲ್ಲಿ ಶಬರಿಮಲೆಗೆ ಕಳುಹಿಸಿಕೊಡು, ನೀನು ಶಾಲೆಗೇ ಬರಬೇಕು’ ಎಂದು ಹೇಳುತ್ತಾ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆ.

೨. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಹಾಗೂ ಅಯ್ಯಪ್ಪ ಮಾಲೆಧಾರಿಗಳು ಶಾಲೆಯ ಹೊರಗೆ ಜಮಾಯಿಸಿದರು. ‘ಸರಕಾರಿ ಆದೇಶವಿಲ್ಲದಿದ್ದರೂ ಕ್ರಿಸ್‌ಮಸ್‌ಗೆ ೧೫ ದಿನ ರಜೆ ನೀಡುವ ನೀವು, ಸಂಪ್ರದಾಯದಂತೆ ಶಬರಿಮಲೆಗೆ ಹೋಗುವ ಮಗುವಿಗೆ ರಜೆ ನೀಡಲು ಏಕೆ ಹಿಂದೇಟು ಹಾಕುತ್ತೀರಿ? ದಸರಾ ರಜೆ ನೀಡಲು ತೊಂದರೆ ನೀಡುವ ನಿಮಗೆ ಧಾರ್ಮಿಕ ಸ್ವಾತಂತ್ರ್ಯದ ಅರಿವಿಲ್ಲವೇ?’ ಎಂದು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ‘ಮಕ್ಕಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದರೆ ನಾವು ಸುಮ್ಮನಿರುವುದಿಲ್ಲ. ಹಿಜಾಬ್ ವಿಷಯದಲ್ಲಿ ಇರುವಂತೆ ಇಲ್ಲಿಯೂ ಕಾನೂನು ಅನ್ವಯಿಸಿ. ಇಲ್ಲದಿದ್ದರೆ ನಿಮ್ಮ ಸಂಸ್ಥೆಯ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

೩. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಶಾಲೆಯ ಮುಖ್ಯೋಪಾಧ್ಯಾಯರು ಪ್ರತಿಭಟನಾಕಾರರ ಮುಂದೆ ಬಂದು, ‘ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದರು. (ನೇರವಾಗಿ ಅಲ್ಲ, ‘ಆದರೆ-ಒಂದು ವೇಳೆ’ ಎಂದು ಕ್ಷಮೆ ಕೇಳುವುದು ಒಂದು ನಾಟಕವಾಗಿದೆ. ಇಂತಹವರ ಮೇಲೆ ಮೊಕದ್ದಮೆ ಹೂಡಿ ಜೈಲಿಗಟ್ಟಬೇಕು! – ಸಂಪಾದಕರು)


ಅಯ್ಯಪ್ಪ ಮಾಲೆ ಎಂದರೇನು?

ಅಯ್ಯಪ್ಪ ಮಾಲೆಯು ಭಕ್ತರು ಸಾಂಸಾರಿಕ ಸುಖಗಳಿಂದ ದೂರವಿದ್ದು, ಭಗವಾನ್ ಅಯ್ಯಪ್ಪನ ದರ್ಶನಕ್ಕಾಗಿ ತಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಪಡಿಸಿಕೊಳ್ಳಲು ತೆಗೆದುಕೊಳ್ಳುವ ದೀಕ್ಷೆಯ ಸಂಕೇತವಾಗಿದೆ.

 

ಸಂಪಾದಕೀಯ ನಿಲುವು

ಕಾನ್ವೆಂಟ್ ಶಾಲೆಗಳಲ್ಲಿ ಕಳೆದ ಹಲವು ದಶಕಗಳಿಂದ ಹಿಂದೂ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಹಿಂದೂ ಧರ್ಮವನ್ನು ಪಾಲಿಸದಂತೆ ತಡೆಯಲಾಗುತ್ತಿದೆ. ಈಗ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಇದಕ್ಕಾಗಿ ಕೇಂದ್ರ ಸರಕಾರವು ಕಾನೂನು ರೂಪಿಸಬೇಕು!