‘ಸನ್‌ಬರ್ನ್ ಫೆಸ್ಟಿವಲ್’ನಲ್ಲಿ ೪೦,೦೦೦ ಜನರಿಗೆ ಮದ್ಯಪಾನಕ್ಕೆ ಅನುಮತಿ ನೀಡಿದ್ದು ಹೇಗೆ? – ಮುಂಬಯಿ ಉಚ್ಚ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಪ್ರಶ್ನೆ

ಮದ್ಯ ನೀತಿಯ ಬಗ್ಗೆ ಮರುಪರಿಶೀಲನೆಯ ಅಗತ್ಯವಿದೆ ಎಂದ ನ್ಯಾಯಾಲಯ

ಮುಂಬಯಿ – ಶಿವಡಿಯಲ್ಲಿ ನಡೆಯುತ್ತಿರುವ ‘ಸನ್‌ಬರ್ನ್ ಮ್ಯೂಸಿಕ್ ಫೆಸ್ಟಿವಲ್’ನಲ್ಲಿ ೪೦,೦೦೦ ಜನರಿಗಾಗಿ ಮುಕ್ತ ಪ್ರದೇಶದಲ್ಲಿ ಮದ್ಯಪಾನ ಮಾಡಲು ಅನುಮತಿ ನೀಡಿದ್ದು ಹೇಗೆ? ಎಂದು ಮುಂಬಯಿ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರವನ್ನು ಪ್ರಶ್ನಿಸಿದೆ. ‘ರಾಜ್ಯ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಲ್ಲದು’ ಎಂದು ಹಿರಿಯ ವಕೀಲರಾದ ಮಿಲಿಂದ್ ಸಾಠೆ ಅವರು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಖಂಡ್ ಅವರ ನ್ಯಾಯಪೀಠಕ್ಕೆ ತಿಳಿಸಿದರು. ‘ಒಂದು ವೇಳೆ ೧,೦೦೦ ಜನರು ಮದ್ಯದ ಅಮಲಿನಲ್ಲಿದ್ದರೆ, ಕೇವಲ ೨೦೦ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಕಾಪಾಡಲು ಸಾಧ್ಯ? ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಘಟನೆ ನಡೆದ ನಂತರ ಪರಿಹಾರ ಹುಡುಕಬಾರದು. ಏನು ಬೇಕಾದರೂ ನಡೆಯಬಹುದು. ಜನರು ಮದ್ಯದ ಅಮಲಿನಲ್ಲಿ ಬಹಿರಂಗವಾಗಿ ಓಡಾಡಲು ಸಾಧ್ಯವಿಲ್ಲ. ಅವರಿಗಾಗಿ ಪ್ರತ್ಯೇಕ ಕಾನೂನು ಇರಬೇಕೇ? ರಾಜ್ಯದ ಮದ್ಯ ನೀತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ನ್ಯಾಯಾಲಯ ಹೇಳಿದೆ.

೧. ‘ಈ ಅರ್ಜಿಯನ್ನು ನಾವು ಈಗಲೇ ವಿಲೇವಾರಿ ಮಾಡುವುದಿಲ್ಲ. ಇಂತಹ ಇನ್ನೊಂದು ಅರ್ಜಿ ಯಾವಾಗ ಸಲ್ಲಿಕೆಯಾಗುತ್ತದೆ ಎಂಬುದು ತಿಳಿದಿಲ್ಲ. ಆದ್ದರಿಂದ ಇದೊಂದು ಅವಕಾಶವಾಗಿದೆ. ನಾವು ಕಾನೂನನ್ನು ಸ್ಪಷ್ಟಪಡಿಸುತ್ತೇವೆ. ನೀವು ಈ ರೀತಿಯಲ್ಲಿ ಮದ್ಯದ ಪರವಾನಗಿ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತು.

೨. ‘ಈ ಸನ್ ಬರ್ನ್ ಕಾರ್ಯಕ್ರಮವು ಮುಕ್ತ ಪ್ರದೇಶದಲ್ಲಿ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ನೀವು ಹೇಗೆ ಖಚಿತಪಡಿಸುತ್ತೀರಿ? ಒಬ್ಬ ವ್ಯಕ್ತಿಯು ಮದ್ಯದ ಅಮಲಿನಲ್ಲಿದ್ದಾನೆಯೇ ಅಥವಾ ಇಲ್ಲವೇ ಎಂದು ಹೇಗೆ ಗುರುತಿಸುವಿರಿ? ಎಂದು ನ್ಯಾಯಾಲಯ ಆಯೋಜಕರಿಗೆ ಪ್ರಶ್ನೆ ಕೇಳಿತು.

ಕಾರ್ಯಕ್ರಮದ ಸಿದ್ಧತೆಗಳ ಮಾಹಿತಿ ನೀಡಿದ ಆಯೋಜಕರು!

ಆಯೋಜಕರ ಪರವಾಗಿ ವಕೀಲ ಕಾರ್ಲ್ ತಾಂಬೋಲಿ ಮತ್ತು ಮುಸ್ತಫಾ ಕಾಚವಾಲಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಫೆಸ್ಟಿವಲ್ ಸಿದ್ಧತೆಗಾಗಿ ಎಲ್ಲಾ ಅನುಮತಿಗಳನ್ನು ಪಡೆಯಲಾಗಿದೆ. ೨೫೦ ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ೫೦೦ ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಸಮವಸ್ತ್ರಧಾರಿ ಮತ್ತು ಸಮವಸ್ತ್ರವಿಲ್ಲದ ಪೊಲೀಸರು, ೭ ಆಂಬ್ಯುಲೆನ್ಸ್ ಮತ್ತು ೭೦ ವೈದ್ಯಕೀಯ ಸಿಬ್ಬಂದಿಯನ್ನು ಕಾರ್ಯಕ್ರಮದ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.