‘ಕಾಶ್ಮೀರವು ಎಂದಿಗೂ ಭಾರತದ ಭಾಗವಾಗಿರಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ’ (ಅಂತೆ)

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಚೀರಾಟ!

ನ್ಯೂಯಾರ್ಕ್ (ಅಮೆರಿಕಾ) – ಇಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರದ ವಿಷಯವಾಗಿ ಭಾರತದ ಮೇಲೆ ಅನೇಕ ಆಧಾರರಹಿತ ಆರೋಪಗಳನ್ನು ಮಾಡಿದೆ. ಒಂದು ದಿನದ ಹಿಂದೆಯಷ್ಟೇ ಭಾರತೀಯ ಪ್ರತಿನಿಧಿಗಳು ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನವನ್ನು ಕಠಿಣ ಶಬ್ದಗಳಿಂದ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಪ್ರತಿನಿಧಿ ಭದ್ರತಾ ಮಂಡಳಿಯಲ್ಲಿ ‘ಕಾಶ್ಮೀರವು ಎಂದಿಗೂ ಭಾರತದ ಭಾಗವಾಗಿರಲಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ’ ಎಂದು ಹೇಳಿಕೆ ನೀಡಿದರು. ‘ಶಾಂತಿಗಾಗಿ ನಾಯಕತ್ವ’ ಎಂಬ ವಿಷಯದ ಕುರಿತಾದ ಮುಕ್ತ ಚರ್ಚೆಯ ಸಮಯದಲ್ಲಿ ಪಾಕಿಸ್ತಾನದ ಸಮನ್ವಯಕಾರ ಗುಲ್ ಕೈಸರ್ ಸರವಾನಿ ಮಾತನಾಡಿ, ‘ಜಮ್ಮು-ಕಾಶ್ಮೀರವು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ಪ್ರದೇಶವಾಗಿದ್ದು, ಇದು ಕೇವಲ ಪಾಕಿಸ್ತಾನದ ನಿಲುವಲ್ಲ, ವಿಶ್ವ ಸಂಸ್ಥೆಯ ಅಧಿಕೃತ ನಿಲುವು ಕೂಡ ಆಗಿದೆ’ ಎಂದು ಹೇಳಿದರು.

೧. ಸರವಾನಿ ಮಾತನಾಡಿ, ಕಾಶ್ಮೀರವು ಭಾರತದ ಭಾಗವಲ್ಲ. ಹಾಗೂ ಅದು ಎಂದಿಗೂ ಭಾರತದ ಭಾಗವಾಗಿರಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ. ಭಾರತವೇ ಈ ವಿಷಯವನ್ನು ಭದ್ರತಾ ಮಂಡಳಿಗೆ ತಂದಿತ್ತು ಮತ್ತು ಜಮ್ಮು-ಕಾಶ್ಮೀರದ ಜನರಿಗೆ ಜನಮತ ಸಂಗ್ರಹದ ಮೂಲಕ ತಮ್ಮ ಭವಿಷ್ಯವನ್ನು ನಿರ್ಧರಿಸುವ ಅವಕಾಶ ನೀಡುವ ಭರವಸೆ ನೀಡಿತ್ತು. ಎಂಟು ದಶಕಗಳಾದರೂ ಆ ಭರವಸೆಯನ್ನು ಈಡೇರಿಸಲಾಗಿಲ್ಲ ಎಂದು ಆರೋಪಿಸಿದರು.

೨. ಸರವಾನಿಯವರು ತಮ್ಮ ಹೇಳಿಕೆಯಲ್ಲಿ ಭಾರತವು ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನು ನಿಯೋಜಿಸಿ ಜನರ ಸ್ವಾತಂತ್ರ್ಯದ ಮೇಲೆ ಪ್ರಹಾರ ಮಾಡುತ್ತಿದೆ. ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಧ್ವನಿಗಳನ್ನು ನಿಗ್ರಹಿಸಲಾಗುತ್ತಿದ್ದು, ಪ್ರದೇಶದ ಭೌಗೋಳಿಕ ರಚನೆಯನ್ನು ಬದಲಾಯಿಸುವ ಉದ್ದೇಶದಿಂದ ಮುಂದಡಿಯಿಡುತ್ತಿದೆ. ಭಾರತವು ‘ಅತಿಕ್ರಮಣಕಾರಿ ಶಕ್ತಿ’ಯಂತೆ ವರ್ತಿಸುತ್ತಿದ್ದು, ಇದು ಅಂತರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿನ ಜವಾಬ್ದಾರಿಗಳ ಗಂಭೀರ ಉಲ್ಲಂಘನೆಯಾಗಿದೆಯೆಂದು ಆರೋಪಿಸಿದರು.

ಭಾರತವು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಪಾಕಿಸ್ತಾನದ ಆರೋಪ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಸರವಾನಿ ಅವರು ಭಾರತವು ‘ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್’, ‘ಫಿತನಾ ಅಲ್-ಖ್ವಾರಿಜ್’, ‘ಬಲೂಚ್ ಲಿಬರೇಶನ್ ಆರ್ಮಿ’ ಹಾಗೂ ‘ಫಿತನಾ ಹಿಂದೂಸ್ತಾನ್’ ಎಂಬ ಭಯೋತ್ಪಾದಕ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ತಮ್ಮ ಬಳಿ ವಿಶ್ವಾಸಾರ್ಹ ಪುರಾವೆಗಳಿವೆ ಮತ್ತು ಈ ಗುಂಪುಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸಿವೆ. ಹಾಗೂ ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಯನ್ನು ಬಹಿರಂಗವಾಗಿ ಪ್ರೋತ್ಸಾಹಿಸುವುದರ ಜೊತೆಗೆ, ಭಾರತವು ಪದೇ ಪದೇ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದೆಯೆಂದು ಆರೋಪಿಸಿದರು. ಇದು ಅಂತರಾಷ್ಟ್ರೀಯ ಕಾನೂನುಗಳು ಮತ್ತು ಸಂಯುಕ್ತ ರಾಷ್ಟ್ರಗಳ ನಿಯಮಾವಳಿಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದರು. (ಕಳ್ಳನಿಗೊಂದು ಪಿಳ್ಳೆ ನೆವ ! – ಸಂಪಾದಕರು)

ಸಂಪಾದಕೀಯ ನಿಲುವು

ಪಾಕಿಸ್ತಾನವು ಎಷ್ಟೇ ಕೂಗಾಡಿದರೂ ಸತ್ಯವು ಎಂದಿಗೂ ಬದಲಾಗುವುದಿಲ್ಲ ಮತ್ತು ಕಾಶ್ಮೀರವು ಎಂದಿಗೂ ಪಾಕಿಸ್ತಾನದ ಭಾಗವಾಗುವುದಿಲ್ಲ. ಬದಲಾಗಿ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಅಸ್ತಿತ್ವವೇ ಇಲ್ಲದಂತಾಗಲಿದೆ ಎಂಬುದನ್ನು ಅದು ಗಮನದಲ್ಲಿಟ್ಟುಕೊಳ್ಳಬೇಕು!