ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದು ! – ಭಾರತ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆ; ಭಾರತದಿಂದ ಪಾಕಿಸ್ತಾನಕ್ಕೆ ತರಾಟೆ !

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ, ಅದು ವಿಶ್ವಸಂಸ್ಥೆಯಂತಹ ವೇದಿಕೆಯನ್ನು ಬಳಸಿಕೊಂಡು ಭಾರತ ಮತ್ತು ಭಾರತೀಯ ನಾಗರಿಕರಿಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯ ವೇಳೆ ಪಾಕಿಸ್ತಾನವನ್ನು ಭಾರತ ತೀವ್ರವಾಗಿ ಟೀಕಿಸಿತು.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಭಾರತವು ತನ್ನ ಎಲ್ಲಾ ಶಕ್ತಿಯಿಂದ ಎದುರಿಸಲಿದೆ !

ವಿಶ್ವ ಸಂಸ್ಥೆಯ ಭಾರತದ ರಾಯಭಾರಿ ಹರೀಶ ಪರ್ವತನೇನಿ ಅವರು ಮಾತನಾಡಿ, ಭಾರತವು ೬೫ ವರ್ಷಗಳ ಹಿಂದೆ ಸದ್ಭಾವನೆ ಮತ್ತು ಸ್ನೇಹದ ಸಂಕೇತವಾಗಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಮಾನ್ಯತೆ ನೀಡಿತ್ತು; ಆದರೆ ಇದುವರೆಗೆ ಪಾಕಿಸ್ತಾನವು ಭಾರತದ ಮೇಲೆ ಹಲವಾರು ಭಯೋತ್ಪಾದನಾ ದಾಳಿಗಳನ್ನು ನಡೆಸುವ ಮೂಲಕ ಈ ಒಪ್ಪಂದದ ಹಿಂದಿನ ಉದಾತ್ತ ಭಾವನೆಯನ್ನು ಉಲ್ಲಂಘಿಸಿದೆ. ಅಷ್ಟೇ ಅಲ್ಲದೆ, ಕಳೆದ ೪ ದಶಕಗಳಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನಾ ದಾಳಿಗಳಲ್ಲಿ ನೂರಾರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷ ಏಪ್ರಿಲ್ ನಲ್ಲಿ ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ೨೬ ನಾಗರಿಕರು ಸಾವನ್ನಪ್ಪಿದ್ದಾರೆ. ಆದ್ದರಿಂದ, ಭಯೋತ್ಪಾದನೆಯ ಜಾಗತಿಕ ಕೇಂದ್ರವಾಗಿರುವ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ಭಾರತ ಘೋಷಿಸಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಭಾರತವು ತನ್ನ ಸಂಪೂರ್ಣ ಶಕ್ತಿಯಿಂದ ಎದುರಿಸಲಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಹೀಗೆ ಹೇಳುವುದರಿಂದ ಏನು ಪ್ರಯೋಜನ? ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸಿ, ಭಯೋತ್ಪಾದನಾ ತರಬೇತಿ ಕೇಂದ್ರಗಳನ್ನು ನಾಶಪಡಿಸಲು ಭಾರತ ಪ್ರಯತ್ನಿಸಬೇಕು .