ಅಧಿಕಾರಿಗಳು ಕಾನೂನಿಗೆ ನಿರ್ಲಕ್ಷ್ಯ ತೋರುವುದು ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿ – ಉಚ್ಚ ನ್ಯಾಯಾಲಯ

ತಮಿಳುನಾಡು: ಕಾರ್ತಿಗೈ ದೀಪಂ ಕಾರ್ಯಕ್ರಮ; ಉಚ್ಚ ನ್ಯಾಯಾಲಯ ಆದೇಶದ ಉಲ್ಲಂಘನೆ ಮಾಡಿದ ಸರಕಾರ

ಮಧುರೈ (ತಮಿಳುನಾಡು) – ಹಿಂದೂಗಳಿಗೆ ಕಾರ್ತಿಗೈ ದೀಪಂ ಉತ್ಸವವನ್ನು ಆಚರಿಸಲು ಮತ್ತು ದೀಪವನ್ನು ಬೆಳಗಿಸಲು ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು. ಕೋರ್ಟ್ ನ ಈ ಆದೇಶಗಳನ್ನು ಉಲ್ಲಂಘಿಸಿದ ದಿಂಡಿಗಲ್ ಮತ್ತು ಮಧುರೈ ಆಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ಮದ್ರಾಸ್ ಉಚ್ಚ ನ್ಯಾಯಾಲಯ‌ನ ಮಧುರೈ ಪೀಠವು ಕಠಿಣ ನಿಲುವು ತೆಗೆದುಕೊಂಡಿತು. ನ್ಯಾಯಾಲಯವು ಎರಡೂ ಪ್ರಕರಣಗಳಲ್ಲಿ ನಿಂದನೆ ಅರ್ಜಿಗಳನ್ನು ಅಂಗೀಕರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ವಿಚಾರಣೆಯಲ್ಲಿ, “ನಾನು ಏಕ ಸದಸ್ಯ ಪೀಠದ ಆದೇಶವನ್ನು ನೀಡಿದ್ದೆ. ಅದನ್ನು ವಿಭಾಗೀಯ ಪೀಠ ಅಥವಾ ಸುಪ್ರೀಂ ಕೋರ್ಟ್ ತಡೆ ನೀಡುವವರೆಗೆ ಸಂಪೂರ್ಣವಾಗಿ ಪಾಲಿಸಬೇಕು. ಜಿಲ್ಲಾಧಿಕಾರಿಗಳು ನನ್ನ ಮೇಲೆ ಮೇಲ್ಮನವಿ ಅಧಿಕಾರವನ್ನು ಹೊಂದಿಲ್ಲ. ನನ್ನ ಆದೇಶವನ್ನು ರದ್ದುಗೊಳಿಸುವ ಆದೇಶವನ್ನು ನೀಡಲು ಅವರು ಹೇಗೆ ಧೈರ್ಯ ಮಾಡಿದರು? ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ನಾಗರಿಕರಿಗೆ ಸಿಗಬೇಕಾದ ನ್ಯಾಯಯುತ ಹಕ್ಕುಗಳನ್ನು ನಿರಾಕರಿಸುವುದು ಸರಕಾರದ ವೈಫಲ್ಯವಾಗಿದೆ. ಪೊಲೀಸರ ಕೆಲಸ ಹಕ್ಕುಗಳನ್ನು ರಕ್ಷಿಸುವುದೇ ಹೊರತು, ಕಿತ್ತುಕೊಳ್ಳುವುದಲ್ಲ. ಗ್ರಾಮದ ಹಿಂದೂಗಳು ಪೂಜೆ ಮತ್ತು ಉತ್ಸವಗಳನ್ನು ಆಚರಿಸುವುದು ಸಂವಿಧಾನದ ಕಲಂ ೨೫ ರ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಜಿಲ್ಲಾಧಿಕಾರಿಗಳು ಸಾಮಾನ್ಯ ಧಾರ್ಮಿಕ ಉತ್ಸವದ ಮೇಲೆಯೂ ನಿಷೇಧ ಹೇರಿದ್ದಾರೆ. ಇದು ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ.”

ನ್ಯಾಯಾಲಯವು ಜಿಲ್ಲಾಧಿಕಾರಿ ಶರವಣನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಅವರಿಗೆ ವೈಯಕ್ತಿಕವಾಗಿ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಿತು. ಅವರ ಉತ್ತರದ ಆಧಾರದ ಮೇಲೆ ನ್ಯಾಯಾಂಗ ನಿಂದನೆ ನಡೆದಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.

ಏನಿದು ಪ್ರಕರಣ?

ಮೊದಲ ಪ್ರಕರಣವು ದಿಂಡಿಗಲ್ ಜಿಲ್ಲೆಯ ಪೆರುಮಾಳ್ ಕೋವಿಲ್‌ಪಟ್ಟಿ ಗ್ರಾಮದ ಮಂಡು ಕೋವಿಲ್ ದೇವಸ್ಥಾನಕ್ಕೆ ಸಂಬಂಧಿಸಿದೆ. ಇಲ್ಲಿನ ಹಿಂದೂ ಸಮುದಾಯದ ಉತ್ಸವಕ್ಕೆ ಅನುಮತಿ ಸಿಕ್ಕಿದ್ದರೂ, ಸ್ಥಳೀಯ ಪೊಲೀಸರು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಕಾರ್ಯಕ್ರಮವನ್ನು ತಡೆಯಿತು. ಎರಡನೇ ಪ್ರಕರಣ ಮಧುರೈನಲ್ಲಿರುವ ತಿರುಪ್ಪರನ್ಕುಂದ್ರಂ ಬೆಟ್ಟಕ್ಕೆ ಸಂಬಂಧಿಸಿದೆ. ಇಲ್ಲಿನ ದೀಪಸ್ತಂಭದ ಮೇಲೆ ದೀಪ ಬೆಳಗಿಸುವ ಆದೇಶವಿದ್ದರೂ, ಸರಕಾರ ಅದನ್ನು ಒಪ್ಪಿಕೊಳ್ಳಲಿಲ್ಲ.

ಪೆರುಮಾಳ್ ಕೋವಿಲ್‌ಪಟ್ಟಿ ಗ್ರಾಮದ ಮಂಡು ಕೋವಿಲ್‌ನಲ್ಲಿ ಹಿಂದೂ ಸಮುದಾಯವು ಕಾರ್ತಿಗೈ ದೀಪಂ ಉತ್ಸವವನ್ನು ಆಚರಿಸಲು ಬಯಸಿತ್ತು. ಈ ಗ್ರಾಮದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಿದ್ದು, ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಡಿಸೆಂಬರ್ ೨, ೨೦೨೫ ರಂದು ನ್ಯಾಯಾಲಯವು ಅರ್ಜಿಯನ್ನು ಅಂಗೀಕರಿಸಿ ಡಿಸೆಂಬರ್ ೩ ಮತ್ತು ೪ ರಂದು ಕೆಲವು ಗಂಟೆಗಳ ಕಾಲ ದೀಪ ಬೆಳಗಿಸಲು ಮತ್ತು ಆವರಣದಲ್ಲಿರುವ ಪೊದೆಗಳನ್ನು ತೆಗೆದುಹಾಕಲು ಅನುಮತಿ ನೀಡಿತ್ತು. ಈ ಕಾರ್ಯಕ್ರಮದ ವೇಳೆ ಯಾವುದೇ ಶಾಶ್ವತ ನಿರ್ಮಾಣ ಮಾಡುವುದಿಲ್ಲ ಮತ್ತು ಕ್ರಿಶ್ಚಿಯನ್ ಸಮುದಾಯದ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಆದರೆ, ದಿಂಡಿಗಲ್‌ನ ಜಿಲ್ಲಾಧಿಕಾರಿ ಎ. ಶರವಣನ್ ಅವರು ಭಾರತೀಯ ನಾಗರಿಕ ಸಂಹಿತೆಯ ಕಲಂ ೧೬೩ ರ ಅಡಿಯಲ್ಲಿ ಆದೇಶ ಹೊರಡಿಸಿ, ಗ್ರಾಮದಲ್ಲಿ ೫ ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ಮತ್ತು ಹೊರಗಿನವರ ಪ್ರವೇಶವನ್ನು ನಿಷೇಧಿಸಿದರು. ಇದರಿಂದಾಗಿ ನ್ಯಾಯಾಲಯ ನೀಡಿದ ಅನುಮತಿಯ ಉಲ್ಲಂಘನೆಯಾಯಿತು. ನ್ಯಾಯಾಲಯವು ಇದನ್ನು ಬಹಿರಂಗ ನಿಂದನೆ ಮತ್ತು ಹಿಂದೂಗಳ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಟೀಕಿಸಿದೆ.(ದ್ರಮುಕ ಸರಕಾರದ ಆಡಳಿತದ ಹಿಂದೂ ವಿರೋಧಿ ಧೋರಣೆ!)

 

ಸಂಪಾದಕೀಯ ನಿಲುವು

ತಮಿಳುನಾಡಿನಲ್ಲಿ ಹಿಂದೂ ವಿರೋಧಿ ದ್ರಮುಕ (ದ್ರಾವಿಡ ಮುನ್ನೇತ್ರ ಕಳಗಂ – ದ್ರಾವಿಡ ಪ್ರಗತಿಪರ ಒಕ್ಕೂಟ) ಸರಕಾರವಿರುವುದರಿಂದ, ನ್ಯಾಯಾಲಯದ ಆದೇಶವನ್ನೂ ಸಹ ಬಹಿರಂಗವಾಗಿ ಉಲ್ಲಂಘಿಸಲು ಹಿಂಜರಿಯುವುದಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ! ಇಂತಹ ಸರಕಾರವನ್ನು ನ್ಯಾಯಾಲಯವು ಕೇವಲ ತರಾಟೆಗೆ ತೆಗೆದುಕೊಂಡರೆ ಸಾಲದು, ಬದಲಾಗಿ ಸಂವಿಧಾನವನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರವನ್ನು ವಿಸರ್ಜಿಸಲು ಆದೇಶ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ!