ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!

ಬಾಂಗ್ಲಾದೇಶದಲ್ಲಿ 8 ವರ್ಷದ ಹಿಂದೂ ಹುಡುಗಿಯ ಅಪಹರಣ ಮತ್ತು ಕೊಲೆ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಟಾಂಗೈಲ್ ಜಿಲ್ಲೆಯ ಸಖೀಪುರದಿಂದ 2 ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಸೆಜುತಿ ಎಂಬ 8 ವರ್ಷದ ಮುಗ್ಧ ಹಿಂದೂ ಹುಡುಗಿಯ ಕೊಲೆ ಮಾಡಲಾಗಿದೆ. ಜೂನ್ 22 ರಂದು ಬೆಳಿಗ್ಗೆ ಪೊಲೀಸರು ಆಕೆಯ ಮೃತದೇಹವನ್ನು ಸಖೀಪುರ ಮುನ್ಸಿಪಾಲಿಟಿಯ ಕೆರೆಯಿಂದ ಹೊರತೆಗೆದಿದ್ದಾರೆ. ಮೃತ ಹುಡುಗಿಯ ಕುಟುಂಬಸ್ಥರು ಜೂನ್ 21 ರ ರಾತ್ರಿ ಅಪಹರಣಕಾರರು ದೂರವಾಣಿಯ ಮೂಲಕ ಆಕೆಯ ಬಿಡುಗಡೆಗೆ ಪ್ರತಿಯಾಗಿ 3 ಲಕ್ಷ ಟಾಕಾ (2 ಲಕ್ಷದ 31 ಸಾವಿರ ರೂಪಾಯಿ) ಕಪ್ಪಕಾಣಿಕೆ ಕೇಳಿದ್ದರು ಎಂದು ಆರೋಪಿಸಿದ್ದಾರೆ. ಕಪ್ಪಕಾಣಿಕೆಯ ಹಣ ಸಿಗದ ಕಾರಣ ದುಷ್ಕರ್ಮಿಗಳು ಹುಡುಗಿಯ ಜೀವ ತೆಗೆದಿದ್ದಾರೆ.

1. ಜೂನ್ 20 ರಂದು ಸಖೀಪುರದ ಮಂದಿರಪಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು 2 ನೇ ತರಗತಿಯಲ್ಲಿ ಓದುತ್ತಿದ್ದ ಸೆಜುತಿ ಸಾಯಂಕಾಲ ಇದ್ದಕ್ಕಿದ್ದಂತೆ ಮನೆಯ ಹೊರಗಿನಿಂದ ನಾಪತ್ತೆಯಾಗಿದ್ದಾಳೆ.

2. ಕುಟುಂಬಸ್ಥರು ಆಕೆಗಾಗಿ ಎಲ್ಲೆಡೆ ಹುಡುಕಾಟ ನಡೆಸಿದರು; ಆದರೆ ಯಾವುದೇ ಸುಳಿವು ಸಿಗಲಿಲ್ಲ. ತದನಂತರ ಹುಡುಗಿಯ ತಂದೆ ಫಾಲು ಚಂದ್ರ ಮಾಲು ರವರು ಸಖೀಪುರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

3. ಜೂನ್ 21 ರಂದು ಈ ಅಪಹರಣದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಅದೇ ರಾತ್ರಿ ಕಪ್ಪಕಾಣಿಕೆಗಾಗಿ ದೂರವಾಣಿ ಕರೆ ಬಂದಿತ್ತು. ಕಪ್ಪಕಾಣಿಕೆಯ ಕರೆ ಬಂದ ಕೆಲವೇ ಗಂಟೆಗಳ ನಂತರ, ಜೂನ್ 22 ರ ಬೆಳಿಗ್ಗೆ ಹುಡುಗಿಯ ಮೃತದೇಹ ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

4. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.