ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !

ಮತಾಂತರವಾಗಿ ಜಿಹಾದಿ ಉಗ್ರನೊಂದಿಗೆ ಆನ್‌ಲೈನ್ ಮದುವೆ; ಪಾಕಿಸ್ತಾನಕ್ಕೆ ಹೋಗಲು ಯತ್ನ

ಬಬಿತಾ ಧಕಡ್

ಜೈಪುರ (ರಾಜಸ್ಥಾನ) – ರಾಜಸ್ಥಾನದ ಭಯೋತ್ಪಾದನಾ ನಿರೋಧಕ ದಳ (ATS) ಮತ್ತು ಗುಪ್ತಚರ ಸಂಸ್ಥೆಗಳು ‘ಜೈಶ್-ಎ-ಮೊಹಮ್ಮದ್’ ಭಯೋತ್ಪಾದಕ ಸಂಘಟನೆಯ ಮಹಿಳಾ ‘ಸ್ಲೀಪರ್ ಸೆಲ್’ (ಭಯೋತ್ಪಾದಕರಿಗೆ ರಹಸ್ಯವಾಗಿ ಸಹಾಯ ಮಾಡುವ ಸ್ಥಳೀಯ ಮತಾಂಧ ಮುಸ್ಲಿಮರ ಗುಂಪು) ಬಬಿತಾ ಧಾಕಡ್ ಎಂಬಾಕೆಯನ್ನು ಬಂಧಿಸಿದೆ. ಬಬಿತಾಳ ಬಂಧನದಿಂದ ಒಂದು ದೊಡ್ಡ ಜಾಲದ ಮಾಹಿತಿ ಬೆಳಕಿಗೆ ಬಂದಿದೆ. ಈ ಜಾಲದ ಮೂಲಕ ಮಹಿಳೆಯರ ಬ್ರೇನ್‌ವಾಶ್ (ಬುದ್ಧಿಭ್ರಮಣೆ) ಮಾಡಿ ಗುರಿಯಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಭಾರತದಲ್ಲಿ ಮಹಿಳಾ ಉಗ್ರರನ್ನು ಸಿದ್ಧಪಡಿಸಲು ‘ಜಮಾತ್-ಉಲ್-ಮುಮಿನಾತ್’ ಹೆಸರಿನ ಮಹಿಳಾ ವಿಭಾಗವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನಿ ಭಯೋತ್ಪಾದಕ ಹ್ಯಾಂಡ್ಲರ್‌ಗಳು (ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವವರು) ಸಾಮಾಜಿಕ ಮಾಧ್ಯಮಗಳ (Social Media) ಮೂಲಕ ಬಬಿತಾಳನ್ನು ಸಂಪರ್ಕಿಸಿದ್ದರು. ನಂತರ, ಆಕೆಗೆ ನಿರಂತರವಾಗಿ ಭಾರತ ವಿರೋಧಿ ಮತ್ತು ಕಟ್ಟರಪಂಥೀಯ ಸಾಹಿತ್ಯ ಹಾಗೂ ವಿಡಿಯೋಗಳನ್ನು ತೋರಿಸಿ ಆಕೆಯ ಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಲಾಯಿತು. ಈ ಜಾಲದಲ್ಲಿ ಸಿಲುಕಿದ ಬಬಿತಾ ಆನ್‌ಲೈನ್‌ನಲ್ಲೇ ‘ಕಲ್ಮಾ’ ಪಠಣ ಮಾಡಲು ಪ್ರಾರಂಭಿಸಿದಳು. ಅಲ್ಲದೆ ತನ್ನ ಹೆಸರನ್ನು ‘ಖದೀಜಾ’ ಎಂದು ಬದಲಾಯಿಸಿಕೊಂಡಳು. ಆಕೆ ದೇಶ ವಿರೋಧಿ ಕೆಲಸ ಮಾಡಲು ಸಿದ್ಧತೆ ನಡೆಸುತ್ತಿದ್ದಳು ಮತ್ತು ಪಾಕಿಸ್ತಾನಕ್ಕೆ ಹೋಗಲು ಬಯಸಿದ್ದಳು ಎಂಬುದು ಕೂಡ ತನಿಖೆಯಿಂದ ತಿಳಿದುಬಂದಿದೆ.

* ಉಗ್ರ ಅಬು ಉಬೈದಾ ಜೊತೆ ಮದುವೆಯಾಗಬೇಕಿತ್ತು

ಅಬು ಉಬೈದಾ ಎಂಬ ಭಯೋತ್ಪಾದಕನ ಸಂಪರ್ಕದಲ್ಲಿದ್ದಳು ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಈ ಉಬೈದಾ ಜೊತೆ ಬಬಿತಾ ಆನ್‌ಲೈನ್‌ನಲ್ಲಿ ವಿವಾಹವಾಗಿದ್ದಳು ಮತ್ತು ಮತಾಂತರ ಕೂಡ ಆಗಿದ್ದಳು ಎಂದು ಹೇಳಲಾಗುತ್ತಿದೆ. ಮದುವೆಯ ನಂತರ ಆಕೆಗೆ ಪಾಕಿಸ್ತಾನಕ್ಕೆ ಹೋಗಬೇಕಿತ್ತು. ಅದಕ್ಕಾಗಿ ಆಕೆ ಪಾಸ್‌ಪೋರ್ಟ್ ಮಾಡಲು ಕೂಡ ಪ್ರಯತ್ನಿಸಿದ್ದಳು. ಬಬಿತಾಳನ್ನು ನೇಪಾಳ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಗಳ ಮಾರ್ಗವಾಗಿ ಪಾಕಿಸ್ತಾನಕ್ಕೆ ಕಳುಹಿಸುವ ಪ್ರಯತ್ನ ನಡೆದಿತ್ತು. ಅಬು ಉಬೈದಾ ಪ್ರೇಮಜಾಲದಲ್ಲಿ ಸಿಲುಕಿದ್ದ ಬಬಿತಾಳ ಹೆಸರಿನಲ್ಲಿ ಒಂದು ‘ಕ್ರಿಪ್ಟೋಕರೆನ್ಸಿ’ (ವರ್ಚುವಲ್ ಕರೆನ್ಸಿ) ಖಾತೆ ಕೂಡ ಇದೆ. ಬಬಿತಾಳನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳುವ ಉದ್ದೇಶಕ್ಕಾಗಿಯೇ ಈ ಖಾತೆ ತೆರೆಯಲಾಗಿತ್ತು ಎಂದು ಹೇಳಲಾಗುತ್ತಿದೆ.

* ಪತಿಯೊಂದಿಗಿನ ವಿವಾದ; ಜೈಪುರದಲ್ಲಿ ತಂದೆಯೊಂದಿಗೆ ವಾಸ

ಬಬಿತಾ ಮೂಲತಃ ಗಂಗಾಪುರ ಸಿಟಿಯ ನಿವಾಸಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಬಿತಾಳ ತಂದೆ ಖಾದಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬಬಿತಾಳ ಮದುವೆ ಹಿಂಡೌನ್ ನಲ್ಲಿ ನಡೆದಿತ್ತು; ಆದರೆ ಕಳೆದ ಕೆಲವು ದಿನಗಳಿಂದ ಪತಿಯೊಂದಿಗಿನ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನ ಪ್ರಕರಣ ನಡೆಯುತ್ತಿದ್ದರಿಂದ ಆಕೆ ಜೈಪುರದಲ್ಲಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಒಂಟಿತನ ಮತ್ತು ಕೌಟುಂಬಿಕ ವಿವಾದಗಳ ಕಾರಣದಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯಳಾದಾಗ ಆಕೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದಳು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮ ಶಿಕ್ಷಣ ಇಲ್ಲದಿರುವುದು, ಧರ್ಮಾಭಿಮಾನ ಹಾಗೂ ರಾಷ್ಟ್ರಾಭಿಮಾನದ ಕೊರತೆಯಿರುವುದರಿಂದ ಇಂತಹ ಜಾಲಗಳಲ್ಲಿ ಸಿಲುಕುತ್ತಾರೆ ಮತ್ತು ದೇಶ-ಧರ್ಮಕ್ಕೆ ದ್ರೋಹ ಬಗೆಯುತ್ತಾರೆ!