ಜಾತಕದ ಮೂಲಕ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ನೀಡಬಹುದು ! – ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

  • ‘ಜಾತಕ – ಜೀವಾತ್ಮದ ಪ್ರಯಾಣವನ್ನು ತೋರಿಸುವ ಮಾರ್ಗದರ್ಶಿ !’ – ಸಂಶೋಧನಾ ಮಾರ್ಗದರ್ಶಕರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಹಾಗೂ ಲೇಖಕರು ಶ್ರೀ. ರಾಜ ಕರ್ವೆ

  • ಪಣಜಿ: ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆ ಪ್ರಸ್ತುತ.

ಎಡಗಡೆಯಿಂದ ಜ್ಯೋತಿಷಿ ಶ್ರೀ. ದತ್ತಪ್ರಸಾದ ಚವ್ಹಾಣ, ಜ್ಯೋತಿಷ್ಯ ವಿಶಾರದ ಶ್ರೀ. ರಾಜ ಕರ್ವೆ ಅವರಿಗೆ ಸನ್ಮಾನ ಚಿಹ್ನೆ ನೀಡುತ್ತಿರುವ ಜ್ಯೋತಿಷಿ ಶ್ರೀ. ಕೈಲಾಸ ಕೆಂಜಳೆ ಮತ್ತು ಜ್ಯೋತಿಷಿ ಶ್ರೀ. ಪ್ರದೀಪ ಪಂಡಿತ

ಪಣಜಿ – ಯಾವ ರೀತಿ ಜ್ಯೋತಿಷ್ಯಶಾಸ್ತ್ರದ ಮೂಲಕ ವ್ಯಕ್ತಿಯ ಶಿಕ್ಷಣ, ವೃತ್ತಿ, ವಿವಾಹ, ಸಂತಾನ ಮುಂತಾದ ವ್ಯಾವಹಾರಿಕ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲು ಸಾಧ್ಯವೋ, ಅದೇ ರೀತಿಯಲ್ಲಿ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗೂ ಜಾತಕದ ಮೂಲಕ ಮಾರ್ಗದರ್ಶನ ನೀಡಬಹುದೆಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಶಾರದ ಶ್ರೀ. ರಾಜ ಕರ್ವೆ ಅವರು ಮಾಹಿತಿ ನೀಡಿದರು. ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಪಣಜಿಯಲ್ಲಿ ನಡೆದ ‘ಜಯಸಿಂಗರಾವ ಚವ್ಹಾಣ 11 ನೇ ಅಂತರರಾಷ್ಟ್ರೀಯ ಜ್ಯೋತಿಷ್ಯ ಅಧಿವೇಶನ’ ಪರಿಷತ್ತಿನಲ್ಲಿ ಶ್ರೀ. ರಾಜ ಕರ್ವೆ ಅವರು ಮಾತನಾಡುತ್ತಿದ್ದರು. ಅವರು ಈ ಅಧಿವೇಶನದಲ್ಲಿ ‘ಜಾತಕ – ಜೀವಾತ್ಮದ ಪ್ರಯಾಣವನ್ನು ತೋರಿಸುವ ಮಾರ್ಗದರ್ಶಿ !’, ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಈ ಸಂಶೋಧನಾ ಪ್ರಬಂಧದ ಮಾರ್ಗದರ್ಶಕರಾಗಿದ್ದು, ಶ್ರೀ. ರಾಜ ಕರ್ವೆ ಅವರು ಲೇಖಕರಾಗಿದ್ದಾರೆ.

ಅಧಿವೇಶನವನ್ನು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರು ಉದ್ಘಾಟಿಸಿದರು. ಈ ಅಧಿವೇಶನದಲ್ಲಿ 300 ಕ್ಕಿಂತ ಹೆಚ್ಚು ಜ್ಯೋತಿಷ್ಯ ಅಭ್ಯಾಸಕರು ಮತ್ತು ಜ್ಯೋತಿಷ್ಯ ಆಸಕ್ತರು ಉಪಸ್ಥಿತರಿದ್ದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ತಂಡದ ಸದಸ್ಯರಾದ ಶ್ರೀ. ಶಾನ್ ಕ್ಲಾರ್ಕ್, ಸೌ. ಶ್ವೇತಾ ಕ್ಲಾರ್ಕ್, ಮಿಲ್ಕಿ ಅಗರವಾಲ್ ಮತ್ತು ಶ್ರೀ. ಸತ್ಯಕಾಮ ಕಣಗಲೆಕರ ಅವರು ಕೂಡ ಅಧಿವೇಶನದಲ್ಲಿ ಉಪಸ್ಥಿತರಿದ್ದರು. ಅಧಿವೇಶನದಲ್ಲಿ ವಿವಿಧ ಜ್ಯೋತಿಷ್ಯ ಅಭ್ಯಾಸಕರು ತಮ್ಮ ಸಂಶೋಧನೆಯನ್ನು ಮಂಡಿಸಿದರು.

ಶ್ರೀ. ರಾಜ ಕರ್ವೆ ಅವರು ಮಂಡಿಸಿದ ಪ್ರಮುಖ ಅಂಶಗಳು:

ಅಧಿವೇಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸುತ್ತಿರುವ ಶ್ರೀ. ರಾಜ ಕರ್ವೆ

1. ಶಿಕ್ಷಣ, ವೃತ್ತಿ, ವಿವಾಹ, ಸಂತಾನ ಮುಂತಾದವುಗಳು ವ್ಯಕ್ತಿಯ ವ್ಯಾವಹಾರಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿವೆ; ಆದರೆ ‘ನನ್ನ ಜೀವನದ ಸಾರ್ಥಕತೆ ಯಾವುದರಲ್ಲಿ ಇದೆ? ನನ್ನ ಕರ್ಮ ಯಾವುದು? ನನ್ನಲ್ಲಿರುವ ಮೂಲಭೂತ ಸಾಮರ್ಥ್ಯಗಳಾವುವು? ಆಧ್ಯಾತ್ಮಿಕ ಉನ್ನತಿ ಸಾಧಿಸಲು ನನ್ನ ಮಾರ್ಗ ಯಾವುದು?’, ಮುಂತಾದ ಪ್ರಶ್ನೆಗಳು ಮನುಷ್ಯನ ಆಂತರಿಕ ಜೀವನಕ್ಕೆ ಸಂಬಂಧಿಸಿವೆ. ಈ ಪ್ರಶ್ನೆಗಳಿಗೆ ಸಿಗುವ ಉತ್ತರಗಳು ಮನುಷ್ಯನ ಜೀವನಕ್ಕೆ ಮಾರ್ಗದರ್ಶನವನ್ನು ನೀಡುತ್ತವೆ. ಜ್ಯೋತಿಷ್ಯಶಾಸ್ತ್ರವು ಮಾನವ ಜೀವನಕ್ಕೆ ಸಂಬಂಧಿಸಿದ ಶಾಸ್ತ್ರವಾಗಿರುವುದರಿಂದ, ವ್ಯಾವಹಾರಿಕ ಜೀವನದೊಂದಿಗೆ ಮನುಷ್ಯನ ಆಧ್ಯಾತ್ಮಿಕ ಜೀವನದ ಬಗ್ಗೆಯೂ ಉತ್ತಮವಾಗಿ ಮಾರ್ಗದರ್ಶನ ನೀಡುತ್ತದೆ.

2. ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಸಾಧಿಸುವ ಸಾಮರ್ಥ್ಯ ಮತ್ತು ಮಾರ್ಗವನ್ನು ತೋರಿಸುವುದರಲ್ಲಿ ‘ಗ್ರಹಗಳಲ್ಲಿ ಆಗುವ ಯೋಗಗಳು’ ಅತ್ಯಂತ ಮಹತ್ವದ್ದಾಗಿರುತ್ತವೆ.
ಜಾತಕದಲ್ಲಿ ಚಂದ್ರ, ಬುಧ, ಶುಕ್ರ, ಮಂಗಳ, ರಾಹು ಇವುಗಳಲ್ಲಿ ಪರಸ್ಪರ ಯೋಗಗಳಿದ್ದರೆ, ವ್ಯಕ್ತಿಯು ಬಾಹ್ಯ ವಿಷಯವಸ್ತುಗಳಿಂದ ಸುಖ ಪಡೆಯಲು ಹೆಚ್ಚು ಉತ್ಸುಕನಾಗಿರುತ್ತಾನೆ. ಇದಕ್ಕೆ ವಿರುದ್ಧವಾಗಿ, ಜಾತಕದಲ್ಲಿ ಈ ಗ್ರಹಗಳು ಸೂರ್ಯ, ಗುರು, ಶನಿ, ಕೇತು, ಯುರೆನಸ್, ನೆಪ್ಚೂನ್ ಇವುಗಳೊಂದಿಗೆ ಯೋಗ ಹೊಂದಿದ್ದರೆ, ವ್ಯಕ್ತಿಯು ಆಂತರಿಕ ಆನಂದ, ಸತ್ಯದ ಜ್ಞಾನ ಮತ್ತು ಶಾಂತಿ ಪಡೆಯಲು ಪ್ರೇರಿತನಾಗುತ್ತಾನೆ. ಜೊತೆಗೆ ಸಾಮಾಜಿಕ ಹಿತದ ಕುರಿತು ಚಿಂತಿಸುತ್ತಾನೆ.

3. ಜಾತಕದಲ್ಲಿ ಇರುವ ಗ್ರಹಯೋಗಗಳ ಪ್ರಕಾರ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯ ಮಾರ್ಗವಿರುತ್ತದೆ. ಜಾತಕದಲ್ಲಿ ಚಂದ್ರ, ಶುಕ್ರ, ಗುರುಗಳ ಪರಸ್ಪರ ಯೋಗವು ಭಕ್ತಿಮಾರ್ಗವನ್ನು; ರವಿ, ಗುರು, ಬುಧ, ಯುರೆನಸ್ ಇವುಗಳ ಪರಸ್ಪರ ಯೋಗವು ಜ್ಞಾನಮಾರ್ಗವನ್ನು; ರವಿ, ಮಂಗಳ, ಗುರು, ಶನಿ ಇವುಗಳ ಪರಸ್ಪರ ಯೋಗವು ಕರ್ಮಮಾರ್ಗ ಇತ್ಯಾದಿಯನ್ನು ತೋರಿಸುತ್ತವೆ.
ಪ್ರತಿಯೊಬ್ಬ ವ್ಯಕ್ತಿಯ ಜಾತಕವು ವಿಭಿನ್ನವಾಗಿರುವುದರಿಂದ, ಪ್ರತಿಯೊಬ್ಬ ವ್ಯಕ್ತಿಯ ಪ್ರಕೃತಿ ಮತ್ತು ಸಾಧನಾ ಮಾರ್ಗವು ವಿಭಿನ್ನವಾಗಿರುತ್ತದೆ ಎಂಬುದು ಜಾತಕದಿಂದ ತಿಳಿದುಬರುತ್ತದೆ.

4. ಆಧ್ಯಾತ್ಮಿಕ ಪ್ರಗತಿಯಿಂದ ನಮ್ಮಲ್ಲಿ ವ್ಯಾಪಕತೆ ಬರುತ್ತದೆ. ವ್ಯಾಪಕತೆಯಿಂದ ಜ್ಞಾನ, ಆನಂದ ಮತ್ತು ಶಾಂತಿ ಲಭಿಸುತ್ತದೆ. ಅನೇಕ ಜನರ ಜಾತಕಗಳಲ್ಲಿ ಆಧ್ಯಾತ್ಮಿಕ ಉನ್ನತಿಗೆ ಪೂರಕವಾದ ಗ್ರಹಯೋಗಗಳಿರುತ್ತವೆ, ಅಂದರೆ ಆಧ್ಯಾತ್ಮಿಕ ಉನ್ನತಿ ಸಾಧಿಸುವ ಸಾಮರ್ಥ್ಯ ಅವರಲ್ಲಿರುತ್ತದೆ; ಆದರೆ ಅವರಿಗೆ ಆ ಬಗ್ಗೆ ತಿಳಿದಿರುವುದಿಲ್ಲ. ಆದ್ದರಿಂದ, ಜ್ಯೋತಿಷಿಗಳು ಜನರ ವ್ಯಾವಹಾರಿಕ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡುವುದರೊಂದಿಗೆ, ಆಧ್ಯಾತ್ಮಿಕ ಉನ್ನತಿಗಾಗಿಯೂ ಜನರಿಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ ಎಂದು ಶ್ರೀ. ರಾಜ ಕರ್ವೆ ಅವರು ಕರೆ ನೀಡಿದರು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಅಕ್ಟೋಬರ್ 2016 ರಿಂದ ಅಕ್ಟೋಬರ್ 2025 ರ ಅವಧಿಯಲ್ಲಿ 20 ರಾಷ್ಟ್ರೀಯ ಮತ್ತು 101 ಅಂತರರಾಷ್ಟ್ರೀಯ, ಒಟ್ಟು 121 ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಇವುಗಳಲ್ಲಿ 14 ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಸರ್ವೋತ್ಕೃಷ್ಟ ಪ್ರಸ್ತುತಿ’ ಪ್ರಶಸ್ತಿಗಳು ದೊರೆತಿವೆ.