೨೦೨೦ರ ದೆಹಲಿ ಗಲಭೆ: ಸರಕಾರವನ್ನು ಉರುಳಿಸಲು ರೂಪಿಸಿದ ಯೋಜಿತ ಪಿತೂರಿ!

  • ಸುಪ್ರೀಂ ಕೋರ್ಟ್‌ನಲ್ಲಿ ಪೊಲೀಸರ ೧೭೭ ಪುಟಗಳ ಅಫಿಡವಿಟ್

  • ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳಿಗೆ ವಿರೋಧ

ನವದೆಹಲಿ – ೨೦೨೦ ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ೧೭೭ ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ. ಇದರಲ್ಲಿ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಇತರ ಆರೋಪಿಗಳ ಜಾಮೀನು ಅರ್ಜಿಗಳನ್ನು ವಿರೋಧಿಸಲಾಗಿದೆ. ಈ ಗಲಭೆಗಳನ್ನು ‘ದಿಢೀರ್ ಆದ ಪ್ರತಿಭಟನೆಯ ಪರಿಣಾಮ’ ಎಂದು ಹೇಳುವ ಬದಲು, ಪೊಲೀಸರು ಇದನ್ನು ‘ಒಂದು ಸುಸಂಘಟಿತ ಅಧಿಕಾರ ಬದಲಾವಣೆ ಪಿತೂರಿ’ ಎಂದು ಕರೆದಿದ್ದಾರೆ. ಪೊಲೀಸರ ಪ್ರಕಾರ, ಈ ಹಿಂಸಾಚಾರವು ಭಾರತದ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡಲು ಮತ್ತು ದೇಶದ ಅಂತಾರಾಷ್ಟ್ರೀಯ ವರ್ಚಸ್ಸಿಗೆ ಮಸಿ ಬಳಿಯಲು ಉದ್ದೇಶಪೂರ್ವಕವಾಗಿ ರೂಪಿಸಲ್ಪಟ್ಟಿದೆ.

ಟ್ರಂಪ್ ಅವರ ಭಾರತ ಭೇಟಿಗೆ ಸಂಬಂಧಿಸಿದ ಪಿತೂರಿ

ಇದರಲ್ಲಿ ಅಮೆರಿಕಾದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಈ ಹಿಂಸಾಚಾರವನ್ನು ನಡೆಸಲಾಯಿತು ಎಂದು ಹೇಳಲಾಗಿದೆ. ಇದರ ಹಿಂದಿನ ಉದ್ದೇಶವು ಅಂತರರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯುವುದು ಮತ್ತು ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸುವುದಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧದ ಪ್ರತಿಭಟನೆಯನ್ನು ‘ಭಯೋತ್ಪಾದಕ ವಿಚಾರಗಳನ್ನು ಪ್ರೋತ್ಸಾಹಿಸುವ ಸಾಧನ’ವನ್ನಾಗಿ ಬಳಸಲಾಯಿತು.