ವಿಶ್ವಸಂಸ್ಥೆ ಇನ್ನೂ ಪುರಾತನ ಕಾಲದಲ್ಲೇ ಸಿಲುಕಿಕೊಂಡಿದೆ!

ವಿಶ್ವಸಂಸ್ಥೆಯನ್ನು ಟೀಕಿಸಿದ ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ – ವಿಶ್ವಸಂಸ್ಥೆಯು ಇನ್ನೂ ೧೯೪೫ರ ಕಾಲದ ಪ್ರತಿಬಿಂಬವನ್ನು ತೋರಿಸುತ್ತಿದೆ. ಅಭಿವೃದ್ಧಿಶೀಲ ದೇಶಗಳ ಧ್ವನಿಯನ್ನು ಉನ್ನತೀಕರಿಸುವುದು, ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯ ನಿಜವಾದ ಅಳತೆಗೋಲಾಗಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇಲ್ಲಿ ಮಾತನಾಡುವಾಗ ಸ್ಪಷ್ಟಪಡಿಸಿದರು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗಾಗಿ ಸೈನಿಕರನ್ನು ಕಳುಹಿಸುವ ದೇಶಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ವಿಶ್ವಸಂಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರುವಂತೆ ವಿದೇಶಾಂಗ ಸಚಿವರು ಮತ್ತೊಮ್ಮೆ ಆಗ್ರಹಿಸಿದರು.

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾತನಾಡಿ,

೧. ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ತರಲು ಸಾಧ್ಯವಾಗದ ಸಂಸ್ಥೆಗಳು ಅಳಿದು ಹೋಗುವ ಅಪಾಯವಿರುತ್ತದೆ. ವಿಶ್ವಸಂಸ್ಥೆ ಪರಿಣಾಮಕಾರಿ ಆಗಬೇಕಾದರೆ, ಅದರಲ್ಲಿ ಸುಧಾರಣೆಗಳನ್ನು ಮಾಡಬೇಕಾಗುವುದು. ವಿಶ್ವಸಂಸ್ಥೆಯನ್ನು ಹೆಚ್ಚು ಅಂತರ್ಗತ, ಪ್ರಜಾಪ್ರಭುತ್ವದ ಮತ್ತು ಇಂದಿನ ಜಗತ್ತನ್ನು ಪ್ರತಿನಿಧಿಸುವಂತೆ ಮಾಡಬೇಕಾಗಿದೆ.

೨. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಹ ಬದಲಾವಣೆಯನ್ನು ನಿರೀಕ್ಷಿಸುತ್ತಿವೆ. ಭದ್ರತಾ ಮಂಡಳಿಯ ವಿಸ್ತರಣೆ ಆಗುವುದು ಸಹ ಅತ್ಯಗತ್ಯವಾಗಿದೆ.

೩. ನಮ್ಮ ಶಾಂತಿಪಾಲಕ ಪಡೆ ಬಲಿಷ್ಠ ಪಡೆಯಾಗಿದೆ. ಮಾನವೀಯ ನೆರವು ನೀಡಲು ಈ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇಂದು ನಾನು ಆ ೪ ಸಾವಿರಕ್ಕೂ ಹೆಚ್ಚು ಶಾಂತಿಪಾಲಕ ಸೈನಿಕರನ್ನು ಸ್ಮರಿಸುತ್ತೇನೆ, ಅವರು ಅತ್ಯುನ್ನತ ತ್ಯಾಗವನ್ನು ಮಾಡಿದ್ದಾರೆ ಎಂದರು.