ತ್ರಯಂಬಕೇಶ್ವರ ನಗರಸಭೆಯಿಂದ ಶುಲ್ಕ ವಸೂಲಿ ಮಾಡುತ್ತಿದ್ದ ಗುತ್ತಿಗೆದಾರನಿಗೆ ‘ಕಾರಣ ನೀಡಿ’ ನೋಟಿಸ್!

  • ನಾಸಿಕನಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ

  • 3 ಆರೋಪಿಗಳ ಬಂಧನ

  • ಗುತ್ತಿಗೆದಾರ ಸ್ಪಷ್ಟೀಕರಣ ನೀಡದಿದ್ದರೆ ಒಪ್ಪಂದ ರದ್ದು

ತ್ರಯಂಬಕೇಶ್ವರ – ಇಲ್ಲಿ ಪತ್ರಕರ್ತರ ಮೇಲೆ ನಡೆದ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ನಗರಸಭೆಯಿಂದ ವಾಹನ ಶುಲ್ಕ ವಸೂಲಿ ಮಾಡುವ ಗುತ್ತಿಗೆದಾರನಿಗೆ ‘ಕಾರಣ ನೀಡಿ’ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ ಉತ್ತರಿಸಲು 48 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ತ್ರಯಂಬಕೇಶ್ವರ ಪೊಲೀಸರು ಪ್ರಶಾಂತ ರಾಜು ಸೋನಾವಣೆ, ಶಿವರಾಜ ಅಹೇರ ಮತ್ತು ಹೃಷಿಕೇಶ ಗಾಂಗುರ್ಡೆ ಎಂಬುವವರನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇಲ್ಲಿ ವಾಹನ ಶುಲ್ಕ ವಸೂಲಿಯ ಗುತ್ತಿಗೆಯನ್ನು ಹೊಂದಿರುವ ಅನಿಲ ಶುಕ್ಲಾ ಎಂಬ ಗುತ್ತಿಗೆದಾರನು ಇಬ್ಬರು ಸ್ಥಳೀಯ ಅಧಿಕಾರಿಗಳ ಮೂಲಕ ಈ ಕೆಲಸ ನಿರ್ವಹಿಸುತ್ತಿದ್ದನು. ಈ ಅಧಿಕಾರಿಗಳು ಹೊರಗಿನ ಯುವಕರನ್ನು ವಸೂಲಿಗಾಗಿ ನೇಮಿಸಿದ್ದರು. ಇದೇ ಯುವಕರು ಪತ್ರಕರ್ತರ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆಯಿಂದ ನಗರಸಭೆಯ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಗುತ್ತಿಗೆದಾರನು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾನೆ. 48 ಗಂಟೆಗಳೊಳಗೆ ಸ್ಪಷ್ಟೀಕರಣ ನೀಡದಿದ್ದರೆ ಒಪ್ಪಂದವನ್ನು ರದ್ದುಪಡಿಸಲಾಗುವುದು ಎಂದು ತಿಳಿಸಲಾಗಿದೆ.

ಯಾವ ಪ್ರಕರಣ?

ಸಿಂಹಸ್ಥ ಕುಂಭ ಪರ್ವಕ್ಕೆ ಸಂಬಂಧಿಸಿದಂತೆ ತ್ರಯಂಬಕೇಶ್ವರದಲ್ಲಿ ಸಾಧು-ಸಂತರ ಸಭೆ ನಡೆಯುತ್ತಿತ್ತು. ಇದರ ವರದಿ ಮಾಡಲು ನಾಸಿಕನಿಂದ ಕೆಲವು ಪತ್ರಕರ್ತರು ಬಂದಿದ್ದರು. ತ್ರಯಂಬಕೇಶ್ವರದಲ್ಲಿ ದರ್ಶನಕ್ಕೆ ಬರುವ ಭಕ್ತರು ಪ್ರವೇಶ ಶುಲ್ಕ ಪಾವತಿಸಬೇಕು; ಆದರೆ ನಾವು ಪತ್ರಕರ್ತರು ಮತ್ತು ವರದಿ ಮಾಡಲು ಬಂದಿದ್ದೇವೆ ಎಂದು ಪದೇ ಪದೇ ಹೇಳಿದರೂ, ವಾಹನ ಶುಲ್ಕ ವಸೂಲಿ ಕೇಂದ್ರದ ಸಿಬ್ಬಂದಿ ಅದನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಪತ್ರಕರ್ತರು ತಮ್ಮ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದಾಗ, ಶುಲ್ಕ ವಸೂಲಿ ಮಾಡುತ್ತಿದ್ದ ಗೂಂಡಾಗಳು ಪತ್ರಕರ್ತರಿಗೆ ಥಳಿಸಿದರು. ಈ ಘಟನೆಯಲ್ಲಿ ‘ಝೀ-24’ನ ಯೋಗೇಶ ಖರೆ, ‘ಪುಢಾರಿ ನ್ಯೂಸ್’ನ ಕಿರಣ್ ತಾಜಣೆ, ಅಭಿಜಿತ ಸೋನಾವಣೆ ಮತ್ತು ಇತರ ಇಬ್ಬರು ಪತ್ರಕರ್ತರು ಗಾಯಗೊಂಡರು. ಒಬ್ಬ ಪತ್ರಕರ್ತ ತ್ರಯಂಬಕೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಿರಿ, ಇಲ್ಲದಿದ್ದರೆ ರಸ್ತೆಗೆ ಇಳಿಯುತ್ತೇವೆ ! – ಅಖಿಲ ಭಾರತೀಯ ಮರಾಠಿ ಪತ್ರಕರ್ತ ಪರಿಷತ್ತು

ತ್ರಯಂಬಕೇಶ್ವರದಲ್ಲಿ ವಾಹನ ಶುಲ್ಕ ವಸೂಲಿ ಮಾಡುತ್ತಿದ್ದ ಗೂಂಡಾಗಳು ಪತ್ರಕರ್ತರ ಮೇಲೆ ನಡೆಸಿದ ದಾಳಿಯನ್ನು ಅಖಿಲ ಭಾರತೀಯ ಮರಾಠಿ ಪತ್ರಕರ್ತ ಪರಿಷತ್ತು, ಪತ್ರಕರ್ತ ಹಲ್ಲೆ ವಿರೋಧಿ ಕೃತಿ ಸಮಿತಿ ಮತ್ತು ಡಿಜಿಟಲ್ ಮೀಡಿಯಾ ಪರಿಷತ್ತು ತೀವ್ರವಾಗಿ ಖಂಡಿಸಿವೆ. ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ತಿನ ಎಸ್.ಎಂ. ದೇಶಮುಖ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. ದಾಳಿಕೋರರ ಮೇಲೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಪತ್ರಕರ್ತರು ರಸ್ತೆಗೆ ಇಳಿಯಲಿದ್ದಾರೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

1. ಜಿಲ್ಲಾಧಿಕಾರಿಗಳು ದಾಳಿಕೋರರ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ; ಆದರೂ, ಮುಖ್ಯಮಂತ್ರಿಗಳು ಇದರಲ್ಲಿ ಮಧ್ಯಪ್ರವೇಶಿಸಿ, ದಾಳಿಕೋರರಿಗೆ ಬುದ್ಧಿ ಕಲಿಸುವಂತಹ ಕ್ರಮ ಕೈಗೊಳ್ಳಬೇಕು ಎಂದು ದೇಶಮುಖ ಆಗ್ರಹಿಸಿದ್ದಾರೆ.

2. ಪರಿಷತ್ತಿನಿಂದ ಬಿಡುಗಡೆಗೊಂಡ ನಿಷೇಧ ಪತ್ರಕ್ಕೆ ಅಧ್ಯಕ್ಷ ಮಿಲಿಂದ ಅಷ್ಟೀವಕರ, ಕಿರಣ ನಾಯಕ, ಶರದ ಪಾಬಳೆ, ಶಿವರಾಜ ಕಾಟಕರ, ಸುರೇಶ ನಾಯಕವಾಡೆ, ಮನ್ಸೂರ ಭಾಯಿ ಶೇಖ, ಡಿಜಿಟಲ್ ಮೀಡಿಯಾ ಪರಿಷತ್ತಿನ ಅಧ್ಯಕ್ಷ ಅನಿಲ ವಾಘಮಾರೆ ಅವರ ಹಸ್ತಾಕ್ಷರಗಳಿವೆ.